ದಿನದ ಸುದ್ದಿ
ಜಗಳೂರು | ಹೂವು ಬೆಳೆಗಾರರಿಗೆ ನಷ್ಟ: ಪರಿಹಾರಕ್ಕೆ ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ಕೋವಿಡ್ 19 ನಿಯಂತ್ರಣ ಹಿನ್ನೆಲೆ ವಿಧಿಸಲಾಗಿರುವ ಲಾಕ್ಡೌನ್ನಿಂದ ಜಿಲ್ಲೆಯ ಹೂವಿನ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಪರಿಹಾರ ನೀಡಲು ಅರ್ಹ ಫಲಾನುಭವಿಗಳಿಂದ ತೋಟಗಾರಿಕೆ ಇಲಾಖೆ ಅರ್ಜಿ ಆಹ್ವಾನಿಸಿದೆ.
ಕೋವಿಡ್ 19 ಲಾಕ್ಡೌನ್ ಹಿನ್ನೆಲೆ (ಮಾರ್ಚ್ 24 ರಿಂದ ಮೇ 15 ರವರೆಗೆ) ಎಲ್ಲಾ ಬಗೆಯ ಹೂವು ಬೆಳೆ ಕಟಾವಿಗೆ ಬಂದು ಬೇಡಿಕೆ ಇಲ್ಲದೇ, ಬೆಲೆ ಕುಸಿತದಿಂದ ನಷ್ಟ ಅನುಭವಿಸಿದ ಹೂವು ಬೆಳೆಗಾರರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.
ಪ್ರತಿ ಫಲಾನುಭವಿಗೆ 1 ಹೆಕ್ಟೇರಿಗೆ ರೂ.25000 (ಇಪ್ಪತ್ತೈದು ಸಾವಿರ ಮಾತ್ರ)ರಂತೆ ಗರಿಷ್ಟ ಒಂದು ಹೆಕ್ಟೇರ್ವರೆಗೆ ಪರಿಹಾರ ನೀಡಲಾಗುವುದು. ಮೇ 14 ರಿಂದ 26 ರವರೆಗೆ ಸಂಬಂಧಿಸಿದ ಹೋಬಳಿ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಗಳನ್ನು ಕಚೇರಿ ವೇಳೆಯಲ್ಲಿ ಸಲ್ಲಿಸಬೇಕು. ಮತ್ತು ಮೇ 26 ರ ನಂತರ ಸಲ್ಲಿಕೆಯಾಗುವ ಯಾವುದೇ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಅರ್ಜಿಯೊಂದಿಗೆ ಪಹಣಿ, ಆಧಾರ್ ಕಾರ್ಡ್, ರೈತರ ಬ್ಯಾಂಕ್ ಖಾತೆ ಪುಸ್ತಕದ ಜೆರಾಕ್ಸ್ ಪ್ರತಿ ಮತ್ತು ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕೆಂದು ಜಗಳೂರು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243