ದಿನದ ಸುದ್ದಿ

ದೇಶಕ್ಕೆ ಕೊಡುಗೆ ನೀಡುವ ವ್ಯಕ್ತಿತ್ವ ಬೆಳೆಸಿಕೊಳ್ಳಿ : ನಿವೃತ್ತ ಯೋಧ ರವಿಕುಮಾರ್ ಕರೆ

Published

on

ಸುದ್ದಿದಿನ,ದಾವಣಗೆರೆ: ಯಾವುದೇ ಕ್ಷೇತ್ರ ಆಯ್ದುಕೊಂಡರೂ ದೇಶಕ್ಕೆ ಕೊಡುಗೆ ನೀಡುವ ವ್ಯಕ್ತಿತ್ವ ಬೆಳೆಸಿಕೊಳ್ಳಿ ಎಂದು ನಿವೃತ್ತ ಸುಬೇದಾರ್ ಮೇಜರ್ ಹಾನರರಿ ಕ್ಯಾಪ್ಟನ್ ರವಿಕುಮಾರ್ ಎನ್ ಕೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ದಾವಣಗೆರೆ ದಕ್ಷಿಣ ವಲಯ ವ್ಯಾಪ್ತಿಯ ಶಾಮನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಂದು ಶುಕ್ರವಾರ ಬೆಳಿಗ್ಗೆ 8 ಕ್ಕೆ ಹಮ್ಮಿಕೊಳ್ಳಲಾಗಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ವಿಶೇಷ ಅತಿಥಿಯಾಗಿ ಸ್ವಾತಂತ್ರ್ಯೋತ್ಸವ ಸಂದೇಶ ನುಡಿಯಾಡಿದ ಅವರು, ವಿದ್ಯಾರ್ಥಿಗಳು ಪ್ರಾಮಾಣಿಕತೆ, ಸ್ವಂತಿಕೆ ಬೆಳೆಸಿಕೊಳ್ಳಬೇಕು. ಹೆತ್ತವರು – ಹಿರಿಯರಿಗೆ ಗೌರವಿಸುತ್ತಾ, ಸಮಾಜ ಸೇವೆ, ದೇಶ ಸೇವೆಯಂತಹ ಪುನೀತ ಕಾರ್ಯದಲ್ಲಿ ತೊಡಗಬೇಕು ಎಂದರು.

ಶಿಕ್ಷಕ ಚಂದ್ರಪ್ಪ ಬಿ ಆರ್ ಸ್ವಾತಂತ್ರ್ಯೋತ್ಸವದ ಹಿನ್ನೆಲೆ, ಪ್ರಸ್ತುತ ಸ್ಥಿತಿಗತಿ, ಯುವ ಪೀಳಿಗೆಯ ಮುಂದಿನ ಹೆಜ್ಜೆಗಳ ಕುರಿತು ಮಾತನಾಡಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯೋಪಾಧ್ಯಾಯ ಬಸವರಾಜಪ್ಪ ವಿ ಎನ್, ದೇಶ ಸಂಸ್ಕಾರವಂತರು ಮತ್ತು ಸುಸಂಸ್ಕೃತರನ್ನು ಬಯಸುತ್ತದೆ. ಆದ್ದರಿಂದ ನಾವು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಆರಂಭದಲ್ಲಿ ಧ್ವಜಾರೋಹಣ, ಧ್ವಜ ವಂದನೆ, ಧ್ವಜ ಗೀತೆಗಳು ಶಾಲಾ ಆವರಣದಲ್ಲಿ ಮೊಳಗಿದವು. ವಿದ್ಯಾರ್ಥಿಗಳು ಗ್ರಾಮದ ಒಳಗೆ ಪ್ರಭಾತ್ ಪೇರಿ ಹೋಗಿ ಬಂದ ನಂತರ ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯ ದಿನಾಚರಣೆ ಕುರಿತ ಭಾಷಣ ಹಾಗೂ ದೇಶಪ್ರೇಮ, ದೇಶಭಕ್ತಿ ಬಿಂಬಿಸುವ ನೃತ್ಯ ಪ್ರದರ್ಶನ ಏರ್ಪಟ್ಟವು.

ವಿದ್ಯಾರ್ಥಿಗಳು ಧರಿಸಿದ್ದ ಸ್ವತಂತ್ರ ಪೂರ್ವ ರಾಷ್ಟ್ರ ನಾಯಕರ ಛದ್ಮವೇಷ, ಆಂಗ್ಲ ಭಾಷೆಯಲ್ಲಿ ಮನೋಜ್, ಹಿಂದಿಯಲ್ಲಿ ಗೌತಮಿ ದಿಂಡೂರ್ ಮಾಡಿದ ಭಾಷಣ ಗಮನ ಸೆಳೆಯಿತು.

ದೈಹಿಕ ಶಿಕ್ಷಣ ಶಿಕ್ಷಕಿ ವಿಜಯಕುಮಾರಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಶಿಕ್ಷಕರಾದ , ಜೆ ನಾಗಪ್ಪ, ಶಿವಯ್ಯ ಎಸ್, ಶ್ರೀಮತಿ ಸವಿತಾ ಲಕ್ಷ್ಮೀಪತಿ, ಶ್ರೀಮತಿ ಆಶಾ ಪಾಟೀಲ್, ಶ್ರೀಮತಿ ಉಮಾ ಮಹಾದೇವ್, ಅಂಬಿಕಾ, ಗಣೇಶ್ ನಿರ್ವಹಿಸಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರು, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version