ದಿನದ ಸುದ್ದಿ
ಈಗಿನ ಪ್ರಮುಖ ಸುದ್ದಿಗಳು
ಈಗಿನ ಪ್ರಮುಖ ಸುದ್ದಿಗಳು
- ಬೀದರ್ನ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವ ಇಂದು ನಡೆಯಲಿದೆ. ಶಿವಮೊಗ್ಗದ ಪಶುವೈದ್ಯಕೀಯ ವಿದ್ಯಾಲಯದ ವಿದ್ಯಾರ್ಥಿನಿ ಕನಿಕಾ ಯಾದವ್13 ಹಾಗೂ ಬೆಂಗಳೂರಿನ ಕಿರಣ್ ದರೂರು 9 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಇಂದು ಪದವಿ ಪ್ರದಾನ ಮಾಡುವರು.
- ರಾಜ್ಯದಲ್ಲಿ ನೀರಿನ ಸಮರ್ಪಕ ಬಳಕೆಗೆ ’ಜಲನೀತಿ’ ರೂಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಿದೆ. ಆ ಹಿನ್ನೆಲೆಯಲ್ಲಿ ನಿನ್ನೆ ಜಲ ಸಂಪನ್ಮೂಲ ಸಚಿವರೂ ಆಗಿರುವ ಸಚಿವ ಸಂಪುಟದ ಉಪಸಮಿತಿ ಅಧ್ಯಕ್ಷ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ಮೊದಲ ಸಭೆ ನಿನ್ನೆ ನಡೆದಿದೆ. ಸರಾಸರಿ ಮಳೆ, ಹರಿಯುವ ನೀರು, ಅಂತರ್ಜಲ ಪ್ರಮಾಣ, ಸಂಗ್ರಹ ಹಾಗೂ ಬಳಕೆ ಸಾಮರ್ಥ್ಯ ಮೊದಲಾದ ಅಂಕಿ-ಅಂಶ ಸಂಗ್ರಹಿಸಲಾಯಿತು.
- ಕನ್ನಡ ಸಾಹಿತ್ಯ ಪರಿಷತ್ ನೀಡುವ ಅಕಲಂಕ ದತ್ತಿನಿಧಿ ಪ್ರಶಸ್ತಿಗೆ ಸಾಹಿತಿ ಎಸ್.ಆರ್. ವಿಜಯಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ.
- ಕೋವಿಡ್ 4ನೇ ಅಲೆಯ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಿ ಸರ್ಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದಿದ್ದವರಿಗೆ ಮೇ 2ರಿಂದ 250 ರೂಪಾಯಿ ದಂಡ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.
- ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಎಲ್ಲ 8 ಈಶಾನ್ಯ ರಾಜ್ಯಗಳಲ್ಲಿ ಇಂದಿನಿಂದ ಈಶಾನ್ಯ ಉತ್ಸವವನ್ನು ಕೇಂದ್ರ ಸರ್ಕಾರ ಆಯೋಜಿಸಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವಾಲಯ 7 ದಿನಗಳ ಈ ಉತ್ಸವದಲ್ಲಿ ಈಶಾನ್ಯ ರಾಜ್ಯಗಳ ಸಾಧನೆಗಳನ್ನು ಬಿಂಬಿಸುವ ’ಹಮ್ ಕಿಸಿಸೆ ಕಮ್ ನಹಿ’ ಎನ್ನುವ ಶಿರ್ಷಿಕೆಯಡಿ ಉತ್ಸವ ನಡೆಯಲಿದೆ.
- ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ಸಚಿವಾಲಯ ಇದೇ ಏಪ್ರಿಲ್ ನಿಂದ ಮುಂದಿನ ವರ್ಷದ ಮಾರ್ಚ್ವರೆಗೆ ರಾಷ್ಟ್ರೀಯ ಉತ್ತಮ ಆಡಳಿತ ಸರಣಿ ವೆಬಿನಾರ್ಗಳನ್ನು ಆಯೋಜಿಸಲಿದೆ. ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ದೆಹಲಿಯಲ್ಲಿಂದು ವೆಬಿನಾರ್ ಸರಣಿಗೆ ಚಾಲನೆ ನೀಡುವರು. ಪ್ರತಿ ತಿಂಗಳು ಗುರ್ತಿಸಲಾದ ಒಂದು ವಲಯ ಅಥವಾ ವಿಷಯದ ಕುರಿತು ವೆಬಿನಾರ್ ನಡೆಯಲಿದೆ. ಇಂದು ಸರಣಿಯ ಮೊದಲ ವೆಬಿನಾರ್ ಸೇವಾ ವಿತರಣೆ ಸುಧಾರಣೆ” ಕುರಿತಂತೆ ನಡೆಯಲಿದೆ.
- ಮನಿಲಾದಲ್ಲಿ ನಡೆಯುತ್ತಿರುವ ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ಪಂದ್ಯಾವಳಿಯ ಆರಂಭಿಕ ಪಂದ್ಯಗಳಲ್ಲಿ ಭಾರತೀಯ ಆಟಗಾರರಾದ ಪಿ.ವಿ.ಸಿಂಧು, ಸೈನಾ ನೆಹ್ವಾಲ್ ಮತ್ತು ಕಿಡಂಬಿ ಶ್ರೀಕಾಂತ್ ಅವರು ಗೆಲುವು ಸಾಧಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243