ದಿನದ ಸುದ್ದಿ

ಬೆಳಗಿನ ಪ್ರಮುಖ ಸುದ್ದಿಗಳು

Published

on

ಬೆಳಗಿನ ಪ್ರಮುಖ ಸುದ್ದಿಗಳು

  1. ಬೆಂಗಳೂರು ಗ್ರಾಮಾಂತರ ಜಿಯ ಹೊಸಕೋಟೆಗೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದು, ನಗರಸಭೆ ಕಾರ‍್ಯಾಲಯದ ನೂತನ ಕಟ್ಟಡ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ರಸ್ತೆಗಳ ಉದ್ಘಾಟನೆ ನೆರವೇರಿಸಲಿದ್ದಾರೆ.
  2. ಪ್ರಧಾನಮಂತ್ರಿ ಉಜ್ವಲ ಯೋಜನೆ ಅನುಷ್ಠಾನದಲ್ಲಿ ಹಾವೇರಿ ಜಿಲ್ಲೆ ಕರ್ನಾಟಕದಲ್ಲೇ ಮೊದಲ ಸ್ಥಾನ ಗಳಿಸಿದೆ ಎಂದು ಹಾವೇರಿ ಸಂಸದ ಶಿವಕುಮಾರ ಉದಾಸಿ ಹೇಳಿದ್ದಾರೆ.
  3. ಕರ್ನಾಟಕ ವಿಶ್ವವಿದ್ಯಾಲಯದ 72 ನೇ ಘಟಿಕೋತ್ಸವ ಸಮಾರಂಭ ಇಂದು ನಡೆಯಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಯಶಪಾಲ ಕ್ಷೀರಸಾಗರ ಧಾರವಾಡದಲ್ಲಿ ತಿಳಿಸಿದ್ದಾರೆ. ದೆಹಲಿಯ ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜೆನೆಟಿಕ್ ಇಂಜಿನಿಯರಿಂಗ್ ಮತ್ತು ಬಯೋಟೆಕ್ನಾಲಜಿ ನಿರ್ದೇಶಕ ಡಾ.ದಿನಕರ ಎಂ. ಸಾಳುಂಕೆ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
  4. ಎರಡು ದಿನಗಳ ಅಧಿಕೃತ ಭೇಟಿಗಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ಇದೇ 13 ರಂದು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಸೈನಿಕ ಶಾಲೆಯ ಅಮೃತ ಮಹೋತ್ಸವದಲ್ಲಿ ರಾಷ್ಟ್ರಪತಿ ಅವರು ಪಾಲ್ಗೊಳ್ಳಲಿದ್ದಾರೆ. 14 ರಂದು ಕನಕಪುರ ರಸ್ತೆಯ ದೊಡ್ಡ ಕಲ್ಲಸಂದ್ರ ವೈಕುಂಠ ಬೆಟ್ಟದಲ್ಲಿ ತಿರುಪತಿ-ತಿರುಮಲ ದೇವಾಲಯ ಹೋಲುವ ಇಸ್ಕಾನ್ ದೇಗುಲದ ಲೋಕಾರ್ಪಣಾ ಸಮಾರಂಭದಲ್ಲಿ ಭಾಗವಹಿಸಿ ಅಂದೇ ದೆಹಲಿಗೆ ಹಿಂತಿರುಗಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.
  5. ಐಆರ್‌ಸಿಟಿಸಿ ಜಾಲತಾಣ ಮತ್ತು ಅಪ್ಲಿಕೇಶನ್ ಮೂಲಕ ರೈಲು ಪ್ರಯಾಣ ಆನ್‌ಲೈನ್ ಬುಕ್ಕಿಂಗ್ ಟಿಕೆಟ್ ಸಂಖ್ಯೆಯನ್ನು ಭಾರತೀಯ ರೈಲ್ವೆ ಏರಿಕೆ ಮಾಡಿದೆ. ಆಧಾರ್ ಜೋಡಣೆಯಾಗದಿರುವ ಐಡಿ ಮೂಲಕ ಮಾಸಿಕ ಟಿಕೆಟ್ ಬುಕ್ಕಿಂಗ್ ಸಂಖ್ಯೆಯನ್ನು ಗರಿಷ್ಠ 6ರಿಂದ 12 ಟಿಕೆಟ್‌ಗಳಿಗೆ ಏರಿಕೆ ಮಾಡಲಾಗಿದೆ. ಅಲ್ಲದೆ ಆಧಾರ್ ಸಂಖ್ಯೆ ಜೋಡಣೆಯಾಗಿರುವ ಐಡಿ ಮೂಲಕ ಟಿಕೆಟ್ ಬುಕ್ಕಿಂಗ್ ಸಂಖ್ಯೆಯನ್ನು ಗರಿಷ್ಠ 13ರಿಂದ 24 ಕ್ಕೆ ಏರಿಕೆ ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.
  6. ಏಳು ದಿನಗಳ ಸಾಂಪ್ರದಾಯಿಕ ಸೀತಾಳ ಷಷ್ಠಿ ಹಬ್ಬ ನಿನ್ನೆ ಆರಂಭಗೊಂಡಿತು. ಹಿಂದು ಪರಂಪರೆಯಲ್ಲಿ ಪೌರಾಣಿಕವಾಗಿ ಈಶ್ವರ ಮತ್ತು ಪಾರ್ವತಿಯ ವಿವಾಹ ದಿನವಾಗಿ ಜೇಷ್ಠ ಮಾಸದ ಶುಕ್ಲ ಪಕ್ಷದ ೬ನೇ ದಿನದಂದು ದೇಶದ ಉತ್ತರ ಮತ್ತು ಪೂರ್ವ ಭಾಗದಲ್ಲಿ ಈ ಹಬ್ಬವನ್ನು ಹೆಚ್ಚಾಗಿ ಆಚರಿಸಲಾಗುತ್ತದೆ. ಸುಡುವ ಬಿಸಿಲನ್ನು ಈಶ್ವರ ಸಂಕೇತಿಸುತ್ತಿದ್ದು, ಮಾತೆ ಪಾರ್ವತಿ ಮೊದಲ ಮಳೆಯ ಸಂಕೇತ. ಉತ್ತಮ ಮುಂಗಾರು ಆಗಮನಕ್ಕೆ ಈ ಇಬ್ಬರ ವಿವಾಹ ಆಚರಣೆ ಮೂಲಕ ಪ್ರಾರ್ಥಿಸಲಾಗುತ್ತದೆ.
  7. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು, ರಾಷ್ಟ್ರೀಯ ಬುಡಕಟ್ಟು ಸಂಶೋಧನಾ ಸಂಸ್ಥೆಯನ್ನು ದೆಹಲಿಯಲ್ಲಿ ಇಂದು ಲೋಕಾರ್ಪಣೆ ಮಾಡಲಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ್ ಮುಂಡಾ, ಕಾನೂನು ಸಚಿವ ಕಿರಣ್ ರಿಜಿಜು ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.
  8. ಬೆಂಗಳೂರಿನ ಬೈಯಪ್ಪನಹಳ್ಳಿ ರೈಲು ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿನ್ನೆ ಕಾರ್ಯಾರಂಭಗೊಂಡಿದೆ. ಬೆಂಗಳೂರಿನಿಂದ ಎರ್ನಾಕುಲಂಗೆ ತೆರಳುವ ಎಕ್ಸ್‌ಪ್ರೆಸ್ ರೈಲು ನಿನ್ನೆ ಸಂಜೆ 7 ಗಂಟೆಗೆ ಬೈಯಪ್ಪನಹಳ್ಳಿಯಿಂದ ಹೊರಡುವುದರೊಂದಿಗೆ ನೂತನ ಟರ್ಮಿನಲ್ ಕಾರ್ಯಾರಂಭ ಮಾಡಿತು. ಇದರೊಂದಿಗೆ ನೈಋತ್ಯ ರೈಲ್ವೆ ವಲಯದ ಹೆಚ್ಚು ದೂರ ಪ್ರಯಾಣಿಸುವ ಮೂರು ರೈಲುಗಳನ್ನು ಬಾಣಸವಾಡಿ ನಿಲ್ದಾಣದಿಂದ ಬೈಯಪ್ಪನಹಳ್ಳಿ ಟರ್ಮಿನಲ್‌ಗೆ ವರ್ಗಾಯಿಸಲಾಗಿದೆ.
  9. ’ಆಜಾದಿ ಕಾ ಅಮೃತ ಮಹೋತ್ಸವ’ದ ಅಂಗವಾಗಿ ದೆಹಲಿಯಲ್ಲಿ ಆಯೋಜಿಸಿರುವ ಐಕಾನಿಕ್ ಸಪ್ತಾಹದ ಇಂದಿನ ಕಾರ್ಯಕ್ರಮಕ್ಕೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಅವರು ರಾಷ್ಟ್ರೀಯ ಸಿಎಸ್‌ಆರ್ ವಿನಿಮಯ ಪೋರ್ಟಲ್ ಲೋಕಾರ್ಪಣೆ ಮಾಡಲಿದ್ದಾರೆ.
  10. ಬುದ್ಧನ ಕಾಲದಷ್ಟು ಹಿಂದೆಯೇ ಭಾರತದಲ್ಲಿ ಪ್ರಜಾತಂತ್ರ ವ್ಯವಸ್ಥೆ ಜಾರಿಯಲ್ಲಿದ್ದು, ಭಾರತೀಯ ಪ್ರಜಾಪ್ರಭುತ್ವ ಪಾಶ್ಚಾತ್ಯ ಜಗತ್ತಿನಿಂದ ಬಂದದ್ದಲ್ಲ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದಾರೆ. ಲಖನೌದಲ್ಲಿ ನಿನ್ನೆ ಉತ್ತರ ಪ್ರದೇಶ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿ, ಪ್ರಾಚೀನ ಭಾರತದ ಕೌಶಾಂಬಿ ಮತ್ತು ಶ್ರಾವಸ್ತಿಯಲ್ಲಿದ್ದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಹ ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.
  11. ಮಧ್ಯಮ ದೂರಗಾಮಿ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-4 ಪರೀಕ್ಷಾರ್ಥ ಪ್ರಯೋಗ ನಿನ್ನೆ ಯಶಸ್ವಿಯಾಗಿದೆ. ಒಡಿಶಾದ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಕ್ಷಿಪಣಿ ಉಡಾವಣೆ ಮಾಡಲಾಗಿದ್ದು, ಸಕಾಲದಲ್ಲಿ ನಿಗದಿತ ಗುರಿ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version