ದಿನದ ಸುದ್ದಿ
ಕಟ್ಟಡ ಕಾರ್ಮಿಕರಿಗೆ ಕೋವಿಡ್ ಪರಿಹಾರ ಕಾರ್ಮಿಕರ ಇಲಾಖೆಯಿಂದ ಯಾವುದೇ ದಾಖಲೆ ಕೇಳಿಲ್ಲ
ಸುದ್ದಿದಿನ,ದಾವಣಗೆರೆ : ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕ ವರ್ಗಕ್ಕೆ ರಾಜ್ಯ ಸರ್ಕಾರ ಕೋವಿಡ್-19 ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುತ್ತದೆ.
ರಾಜ್ಯ ಸರ್ಕಾರ ಕಾರ್ಮಿಕರ ಕಲ್ಯಾಣ ಮಂಡಳಿಯಡಿಯಲ್ಲಿ ನೋಂದಾಯಿಸಿದ ಕಟ್ಟಡ ಕಾರ್ಮಿಕರಿಗೆ ರೂ.3000 ಮತ್ತು ಕರ್ನಾಟಕ ರಾಜ್ಯ ಅಸಂಘಟಿತ ಸಾಮಾಜಿಕ ಭದ್ರತಾ ಮಂಡಳಿಯಡಿಯಲ್ಲಿ ನೋಂದಾಯಿಸಿದ ಹಮಾಲರು, ಮನೆಕೆಲಸದವರು, ಚಿಂದಿ ಆಯುವವರು, ಟೈಲರ್ಗಳು, ಮೆಕ್ಯಾನಿಕ್, ಅಕ್ಕಸಾಲಿಗರು, ಅಗಸರು, ಕಮ್ಮಾರರು, ಭಟ್ಟಿ ಕಾರ್ಮಿಕರು ಮತ್ತು ಕ್ಷೌರಿಕರಿಗೆ ರೂ.2000 ಅನ್ನು ಕೋವಿಡ್-19 ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿರುತ್ತದೆ.
ಇದನ್ನೂ ಓದಿ | ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಸಂಸದ ಜಿ.ಎಂ ಸಿದ್ದೇಶ್ವರ ‘ವಿದ್ಯುತ್ ಚಾಲಿತ ಹಬೆ ಯಂತ್ರ’ ವಿತರಣೆ
ಪರಿಹಾರವನ್ನು ಪಡೆಯಲು ಕಾರ್ಮಿಕ ಇಲಾಖೆಯಿಂದ ಯಾವುದೇ ದಾಖಲೆಗಳನ್ನು ಸಂಗ್ರಹಿಸಲು ನಿರ್ದೇಶನ ನೀಡಿರುವುದಿಲ್ಲ. ಕೆಲವು ಮಧ್ಯವರ್ತಿಗಳು, ಸಂಘ ಸಂಸ್ಥೆಯವರು ಕಾರ್ಮಿಕರಿಂದ ಹಣ ಪಡೆದು ಗುರುತಿನ ಚೀಟಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳನ್ನು ಪಡೆಯುತ್ತಿರುವ ಬಗ್ಗೆ ದೂರುಗಳು ಸ್ವೀಕೃತವಾಗುತ್ತಿವೆ. ಆದ್ದರಿಂದ, ಕಾರ್ಮಿಕರು ಯಾವುದೇ ದಾಖಲೆಗಳನ್ನು ಮತ್ತು ಹಣವನ್ನು ಮಧ್ಯವರ್ತಿಗಳಿಗೆ ಅಥವಾ ಕಾರ್ಮಿಕ ಸಂಘಸಂಸ್ಥೆಯವರಿಗೆ ನೀಡಬಾರದೆಂದು ದಾವಣಗೆರೆ ಜಿಲ್ಲಾ ಕಾರ್ಮಿಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243