ನೆಲದನಿ
ನುಡಿಯ ಒಡಲು -17 | ದೇಶಿ ನುಡಿಗಳು ಮತ್ತು ಜ್ಞಾನಮೀಮಾಂಸೆಯ ಸವಾಲುಗಳು
- ಡಾ. ಮೇಟಿ ಮಲ್ಲಿಕಾರ್ಜುನ, ಸಹ ಪ್ರಾಧ್ಯಾಪಕರು, ಭಾಷಾಶಾಸ್ತ್ರ ವಿಭಾಗ, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ
ದೇಶಿ ನುಡಿಗಳು ಎಂದರೇನು? ಎಂಬೀ ಪ್ರಶ್ನೆಯ ಮೂಲಕ ಜ್ಞಾನಮೀಮಾಂಸೆಯ ಸವಾಲುಗಳನ್ನು ಕುರಿತು ಚರ್ಚಿಸಬೇಕಿದೆ. ಈ ಲೋಕದ ಯಾವುದೇ ನುಡಿಯನ್ನು ಕುರಿತು ಯೋಚಿಸುವಾಗಲೂ ನಮಗೆ ಎದುರಾಗುವ ಸವಾಲೇನೆಂದರೆ, ನಾವು ಆಡುವ ನುಡಿಗೂ ನಮ್ಮ ಬದುಕಿನ ಅನುಭವ, ಆಲೋಚನೆ ಹಾಗೂ ನಮಗೆ ಅಗತ್ಯವಾಗಿರುವ ಜ್ಞಾನಶಿಸ್ತುಗಳು ಮೈದಾಳುವ ನುಡಿಗಳು ಬಹುತೇಕವಾಗಿ ಬೇರೆ ಬೇರೆಯಾಗಿರುತ್ತವೆ.
ಈ ಬಿಕ್ಕಟ್ಟುಗಳೇ ಇವತ್ತು ದೇಶಿ ನುಡಿಗಳ ಬಗೆಗೆ ಯೋಚಿಸುವಂತೆ ಮಾಡುತ್ತವೆ. ನುಡಿ ನುಡಿಗಳ ನಡುವಣ ನಂಟಸ್ತಿಕೆ ಅಧಿಕಾರ ಸಂಬಂಧವನ್ನು ರೂಪಿಸುವುದು ಒಂದು ಬಗೆ. ಜ್ಞಾನದ ನುಡಿ ಉದ್ಯೋಗದ ನುಡಿ, ಅನ್ನದ ನುಡಿ, ಶಿಕ್ಷಣ ಮಾಧ್ಯಮ ಮೊದಲಾದ ವಿದ್ಯಮಾನಗಳು ಆಯಾ ನುಡಿಗೆ ತಂದು ಕೊಡುವ ಮಾನ್ಯತೆ ಮತ್ತೊಂದು ಬಗೆಯದು. ಇವೆರಡೂ ಪ್ರಕ್ರಿಯೆಗಳು ಬಹುತೇಕವಾಗಿ ಯಾವುದೇ ಒಂದು ನುಡಿಯನ್ನು ಬಲಪಡಿಸಲು ಒತ್ತಾಸೆಯಾಗುತ್ತವೆ.
ಇವತ್ತಿಗೂ ನುಡಿಯೊಂದು ಸಬಲೀಕರಣಗೊಳ್ಳಲು ಏನೆಲ್ಲ ನುಡಿ ಯೋಜನೆ ಹಾಗೂ ನುಡಿ ನೀತಿಗಳನನ್ನು ಹಮ್ಮಿಕೊಂಡರೂ ಆಯಾ ನುಡಿಗಳ ಕಸುವನ್ನು ಮನ್ನಣೆ ಮಾಡುವ ಬಗೆಗಳಲ್ಲಿ ತಾರತಮ್ಯಗಳು ತಲೆದೊರುತ್ತವೆ. ಅಧಿಕಾರ ನುಡಿಯಾಗುವ ಮತ್ತು ಜ್ಞಾನಮೀಮಾಂಸೆಯ ನುಡಿಯಾಗುವ ಪ್ರಕ್ರಿಯೆಗಳ ಸ್ವರೂಪ ಬೇರೆ ಬೇರೆಯಾದರೂ, ಅವುಗಳ ಮನೋಧರ್ಮ ಮಾತ್ರ ಒಂದೆಯಾಗಿರುತ್ತದೆ. ಕನ್ನಡ ನುಡಿಯನ್ನು ಕುರಿತು ಚಿಂತಿಸುವ ಒಂದೊಂದು ಸನ್ನಿವೇಶವೂ ಸಂಸ್ಕೃತ ಇಲ್ಲವೇ ಇಂಗ್ಲಿಶು ನುಡಿಗಳ ಪ್ರಭಾವ, ಪರಿಣಾಮ ಹಾಗೂ ಯಜಮಾನ್ಯದ ಚೌಕಟ್ಟುಗಳನ್ನು ವಿಶ್ಲೇಷಿಸುವುದಾಗಿದೆ.
ಸಮೂಹಗಳು ತಮ್ಮ ಬದುಕಿನುದ್ದಕ್ಕೂ ನೆಮ್ಮಿಕೊಂಡು ಬಂದಿರುವ ನುಡಿಗಳ ಮೂಲಕ ಜ್ಞಾನ, ಉದ್ಯೋಗ, ಶಿಕ್ಷಣ ಮೊದಲಾದವುಗಳು ಸಿಗದೇ ಹೋದರೆ, ಅಂತಹ ಸಮೂಹಗಳ ಸಾಮಾಜಿಕ, ರಾಜಕೀಯ ಏಳ್ಗೆಯು ಸಾಧ್ಯವಿಲ್ಲ. ಪರನುಡಿಗಳ ಮೂಲಕವೇ ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಏನೆಲ್ಲ ಬಿಕ್ಕಟ್ಟುಗಳ ಎದುರಾಗುತ್ತವೆಂದರೆ, ಯಾವ ನುಡಿಯಲ್ಲಿ ತಮ್ಮ ಬದುಕಗಳ ಅನುಭವ ಸಾಂದ್ರಗೊಳ್ಳುತ್ತದೆಯೋ, ಅಂತಹದೊಂದು ನುಡಿಯೇ ನಿಷ್ಪ್ರಯೋಕವಾಗಿ ಕಂಡರೆ, ಬದುಕುಗಳು ಹೇಗೆತಾನೇ ಸಮಕಾಲೀನ ಸನ್ನಿವೇಶದ ಸವಾಲುಗಳನ್ನು ಈಡೇರಿಸಿಕೊಳ್ಳಲು ಸಾಧ್ಯ? ದಿಟ, ಜ್ಞಾನದ ವಿನ್ಯಾಸಗಳು, ಅನುಭವದ ಬೇರೆ ಬೇರೆ ಮಾದರಿಗಳು ಎಲ್ಲ ನುಡಿಗಳಲ್ಲಿಯೂ ಅಡಕವಾಗಿರುತ್ತವೆ.
ಈ ಮಾತು ಗ್ರೀಕ್, ಸಂಸ್ಕ್ರುತ ಮೊದಲಾದ ನುಡಿಗಳಿಗೂ ಅನ್ವಯವಾಗುತ್ತದೆ. ಯಾವುದೇ ಒಂದು ಕಾಲದಲ್ಲಿ ಜನಬದುಕಿನ ಜ್ಞಾನಮೀಮಾಂಸೆ ಹಾಗೂ ಅನುಭವಗಳೇ ಈ ನುಡಿಗಳಲ್ಲಿ ನೆಲೆಗೊಂಡಿರುತ್ತವೆ. ಹೀಗೆ ನೆಲೆನಿಂತಿರುವ ಜ್ಞಾನ ಹಾಗೂ ಅನುಭವ ಎಲ್ಲ ಕಾಲದ ಎಲ್ಲ ಸಮುದಾಯಗಳ ಬದುಕನ್ನು ನಿಭಾಯಿಸುವುದಕ್ಕೆ ಒತ್ತಾಸೆಯಾಗುತ್ತವೆಯೇ? ಎಂಬ ಪ್ರಶ್ನೆ ಮಹತ್ವವನ್ನು ಪಡೆದುಕೊಳ್ಳುತ್ತದೆ.
ಏಕೆಂದರೆ, ದೇಶಿ ನುಡಿಗಳು ಸ್ವಂತಿಕೆಯ ವಿನ್ಯಾಸಗಳ ಮೂಲಕ ಆಯಾ ಕಾಲದ ಬದುಕಿನ ವಿವಿಧ ಸಂಕಥನಗಳನ್ನು ಇಡೀಯಾಗಿ ನಮ್ಮುಂದೆ ಮಂಡಿಸುತ್ತವೆ. ಈ ಸಂಕಥನಗಳಿಗೆ ಪ್ರಾಬಲ್ಯ ಹಾಗೂ ಪ್ರತಿರೋಧದ ಎರಡೂ ಆಯಾಮಗಳಿರುತ್ತವೆ. ಸಮುದಾವೊಂದು ತನ್ನ ಒಡಲೊಳಗೆ ಏರ್ಪಟ್ಟಿರುವ ಸಾಮಾಜಿಕ-ರಾಜಕೀಯ ಪರಿಣಾಮಗಳನ್ನು ಅರಿಯಬೇಕೆಂದರೆ ಅದಕ್ಕಿರುವ ಒಂದೇ ಒಂದು ದಾರಿ, ತಾನು ನಿರಂತರವಾಗಿ ಸಂವಹನವನ್ನು ನಿಭಾಯಿಸಿಕೊಂಡು, ತನ್ನ ಅನುಭವದ ವಿವಿಧ ಸಂಕಥನಗಳನ್ನು ಅಭಿವ್ಯಕ್ತಿಸಲು ಯಾವ ನುಡಿ ಮಾಧ್ಯಮವಾಗಿದೆಯೋ, ಆಯಾ ನುಡಿಗಳ ಮೂಲಕವೇ ತನ್ನ ಬದುಕಿಗೆ ಬೇಕಾಗುವ ತಿಳಿವಿನ ದಾರಿಗಳನನ್ನು ರೂಪಿಸಿಕೊಳ್ಳುವುದೂ ಅನಿವಾರ್ಯವೇ ಆಗಿದೆ.
ಇಂತದೊಂದು ಚಿಂತನೆ ನಮ್ಮನ್ನು ಭಾಷಿಕ ಸಾಪೇಕ್ಷ ಸಿದ್ಧಾಂತಕ್ಕೆ ಈಡು ಮಾಡುತ್ತದೆ. ನಾವಾಡುವ ನುಡಿ ನಮ್ಮ ಲೋಕಾನುಭವನ್ನು ರೂಪಿಸುತ್ತದೆ. ಸಹಜವಾಗಿ ನಮ್ಮ ಆಲೋಚನೆಯ ಕ್ರಮಗಳು ಕೂಡ ಇಂತಹ ಲೋಕಾನುಭವದ ಪರಿಣಾಮಗಳಿಂದ ಮೈದಾಳುತ್ತವೆ ಎಂಬ ನಿರ್ಣಯಗಳಿಗೆ ನಾವು ಬದ್ಧರಾಗುತ್ತೇವೆ. ಒಂದು ಕಾಲದಲ್ಲಿ ಈ ಮಾತಿಗೆ ಬೇಕಾದಷ್ಟು ಸಮರ್ಥನೆಗಳಿದ್ದವು.
ಆದರೆ ಇವತ್ತು ಚಾಮ್ಸ್ಕಿಯ ವಿಚಾರಗಳು ಹೆಚ್ಚು ಹೆಚ್ಚು ತಾತ್ವಿಕ ಹಾಗೂ ವೈಜ್ಞಾನಿಕ ಸಮರ್ಥನೆಗಳಿಂದ ಬಲಗೊಂಡಿದ್ದರಿಂದ, ಚಿಂತನೆ ಮತ್ತು ನುಡಿಗಳ ನಡುವಣ ಅಂತರ್ಸಂಬಂಧವನ್ನು ವಿವರಿಸುವ ಚೌಕಟ್ಟೂ ಬೇರೆಯಾಗಿದೆ. ಸಮಕಾಲೀನ ಸನ್ನಿವೇಶದಲ್ಲಿ ಶಿಕ್ಷಣದ ಮಹತ್ವವನ್ನೂ ಅರಿಯಲು ನುಡಿ ಮತ್ತು ಸಂಕಥನಗಳಿಗೆ ಅತೀಯಾದ ಮಹತ್ವವನ್ನು ನೀಡಲಾಗಿದೆ. ಚಿಂತನೆಗಳನ್ನು ಅಭಿವ್ಯಕ್ತಿಸುವ ಅಸ್ತ್ರವನ್ನಾಗಿ ಮಾತ್ರ ಇವತ್ತು ನುಡಿಯನ್ನು ಬಳಸಲು ಸಾಧ್ಯವಿಲ್ಲ.
ಏಕೆಂದರೆ, ಗ್ರಹಿಕೆಯ ಅಗಾಧತೆಯನ್ನು ಮತ್ತು ತಾತ್ವಿಕತೆಯ ಸಾಧ್ಯತೆಗಳನ್ನು ಕಂಡರಿಯಲು ನುಡಿಯೇ ಮಹತ್ವದ ಸಂಗತಿಯಾಗಿದೆ. ಹಾಗಾಗಿ ನುಡಿ ಮತ್ತು ಚಿಂತನೆಗಳ ನಡುವಣ ಗಡಿಗೆರೆಯು ಅಳಿಸಿ ಹೋಗಿದೆ ಎಂದೂ ಹೇಳಲು ಸಾಧ್ಯವಿಲ್ಲ. ಕಾರಣ ಯಾವುದು ಎಲ್ಲಿ ಆರಂಭಗೊಳ್ಳುತ್ತದೆ ಇಲ್ಲವೇ ಯಾವುದು ಎಲ್ಲಿ ಕೊನೆಗೊಳ್ಳುತ್ತದೆ ಎಂಬುದನ್ನು ಗುರುತಿಸುವುದು ಕೂಡ ದುಸ್ತರ. ಆದ್ದರಿಂದ, ಯಾವುದೇ ಚಿಂತನೆಯ ಬೆಳವಣಿಗೆ ಮತ್ತು ಅದರ ಕ್ರೊಢೀಕರಣದ ನಡುವೆ ಅಂತರಗಳಿವೆ ಎನ್ನುವ ವಾದಗಳನ್ನೂ ಇನ್ನೂ ಒಪ್ಪಲಾಗಿಲ್ಲ.
ಹಾಗೇನೇ ಆಯಾ ನುಡಿಗಳಲ್ಲಿ ಹುದುಗಿರುವ ತಾತ್ವಿಕತೆಯ ಬಗೆಗಿನ ಪ್ರಶ್ನೆಗಳನ್ನು ನಿರಲಕ್ಷಿಸಲೂ ಸಾಧ್ಯವಿಲ್ಲ. ಅಂದರೆ ನುಡಿಯ ಕಸುವನ್ನು ಕುರಿತು ಯೋಚಿಸುವುದೆಂದರೆ, ಆಯಾ ನುಡಿಯು ಉತ್ಪಾದಿಸುವ ‘ಜ್ಞಾನ ಮೀಮಾಂಸೆಯ ವಿನ್ಯಾಸಗಳನ್ನನು’ ಕುರಿತು ಯೋಚಿಸುವುದಾಗಿದೆ. ಹಾಗಾಗಿ ವಿಟಗ್ನ್ಸ್ಟೇನ್ ಹೇಳಿದ ‘ನನ್ನ ಭಾಷೆಯ ಮಿತಿ ಅದು ನನ್ನ ಜ್ಞಾನದ ಮಿತಿ’ ಎನ್ನುವ ಮಾತು ಇಲ್ಲಿ ಮಹತ್ವವನ್ನು ಪಡೆಯುತ್ತದೆ. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಆಯಾ ಲೋಕದ ವಸ್ತು ವಿನ್ಯಾಸಗಳನ್ನು ಸೈದ್ಧಾಂತಿಕವಾಗಿ ಹಾಗೂ ಸೃಜನಾತ್ಮಕವಾಗಿ ಬಣ್ಣಿಸಲು ಆಯಾ ನುಡಿಗಳ ಮೂಲಕವೇ ಸಾಧ್ಯವಾಗಬೇಕು.
ಹೌದು ಒಂದು ನುಡಿಯಲ್ಲಿ ವಿಕಾಸಗೊಳ್ಳುವ ಜ್ಞಾನ ಹಾಗೂ ವೈಚಾರಿಕ ವಿನ್ಯಾಸಗಳನ್ನು ಕೇವಲ ನುಡಿಗೆ ಸೀಮಿತಗೊಳಿಸಿ ನೋಡುವ ಹೊರತಾಗಿ ಯಾವುದೇ ನುಡಿಯೊಂದಿಗೆ ತಳುಕು ಹಾಕಿಕೊಂಡಿರುವ ಸಾಮಾಜಿಕ ಆಚರಣೆಗಳನ್ನು ಒಳ್ಗೊಂಡಂತೆ ಚಿಂತಿಸಬೇಕಾಗುತ್ತದೆ. ಉದಾ.ಗೆ ಲೆಕ್ಕಶಾಸ್ತ್ರದ ತಿಳಿವು ಹಾಗೂ ಸಾಮಾಜಿಕ ಆಚವರಣೆಗಳ ನಡುವಣ ನಂಟಸ್ತಿಕೆಯನ್ನು ವಿಶ್ಲೇಷಿಸುವ ಮೂಲಕ ನುಡಿ ಮತ್ತು ತಾತ್ವಿಕತೆಯನ್ನು ಅರಿಯಬೇಕಿದೆ.
ಜ್ಞಾನದ ಅಧ್ಯಯನ ಮತ್ತು ನುಡಿಯ ಅಧ್ಯಯವನ್ನು ಮಾಡುವಾಗ ಎರಡು ಭಿನ್ನ ಆಯಾಮಗಳು ಹೊರಹೊಮ್ಮುತ್ತವೆ. ಒಂದಡೆ, ನಿಗೂಢ, ಅಮೂರ್ಥ ಭಾಷಾಜ್ಞಾನದೊಂದಿಗೆ ‘ಸಾಮಾನ್ಯ ನುಡಿ ಬಳಕೆದಾರರು’ ಇದ್ದರೆ, ಇನ್ನೊಂದಡೆ ಭಾಷಾಶಾಸ್ತ್ರಜ್ಞರು, ತತ್ವಜ್ಞಾನಿಗಳು, ಭಾಷಾ ಸಿದ್ಧಾಂತಿಗಳು ಇವರೆಲ್ಲರೂ ಸಾಮಾನ್ಯ ಭಾಷಾ ಬಳಕೆದಾರರ ಭಾಷಾಶಾಸ್ತ್ರೀಯ ಸಾಮರ್ಥ್ಯವನ್ನು ವೈಜ್ಞಾನಿಕ ಶಿಸ್ತನ್ನಾಗಿ ಅನುಸರಿಸಲಾಗುತ್ತದೆ.
ಈ ವ್ಯತ್ಯಾಸವು ಭಾಷೆಯ ಜ್ಞಾನಮೀಮಾಂಸೆಯ ನೆಲೆ ಹಾಗೂ ನಿಲುವುಗಳನ್ನು ಪ್ರತಿನಿಧಿಸುತ್ತದೆ. ಹಾಗಾಗಿ ಈ ಮುಂದಿನ ಮಾತುಗಳು ಈ ಹೊತ್ತಿನ ಅತ್ಯಂತ ಮಹತ್ವದ ಹಾಗೂ ಪ್ರಚಲಿತ ವಿದ್ಯಮಾನಗಳಾಗಿ ತೋರುತ್ತವೆ.
- ಅಭಿವ್ಯಕ್ತಿ ಮತ್ತು ಸಂವಹನಗಳೆರಡರಲ್ಲೂ ಅತ್ಯಂತ ಸಂಕೀರ್ಣವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳುವಾಗ, ನಾವು ಮನುಷ್ಯರು ಭಾಷೆಯನ್ನು ಹೇಗೆ ಬಳಸುತ್ತೇವೆ?
- ಸಾಮಾನ್ಯ ಭಾಷಾ ಬಳಕೆದಾರರ ಭಾಷಾಜ್ಞಾನಕ್ಕೆ ನಿಷ್ಠರಾಗಿ ಹಾಗೂ ಫಲಪ್ರದವಾಗಿ, ಅತ್ಯಂತ ಸಂಕೀರ್ಣವಾದ ವಿದ್ಯಮಾನಗಳನ್ನು ಭಾಷಾಶಾಸ್ತ್ರಜ್ಞರು ಹೇಗೆ ಅತ್ಯಂತ ಪರಿಣಾಮಕಾರಿಯಾಗಿ ಶೋಧಿಸಿ, ವಿವರಿಸಬಲ್ಲರು?
ಒಬ್ಬ ಭಾಷಾಶಾಸ್ತಜ್ಞ್ರ ಇಲ್ಲವೇ ತತ್ವಜ್ಞಾನಿಗೆ ಬೇರೆ ಯಾವುದೇ ಪ್ರಶ್ನೆಗಳು ಎದುರಾಗಬಹುದು ಆದರೆ ಇವರಿಬ್ಬರೂ ಕೂಡ ಈ ಮೂಲಭೂತ ಪ್ರಶ್ನೆಗಳನ್ನೇ ನೆಲೆಯಾಗಿಸಿಕೊಂಡು ತಮ್ಮ ತಿಳುವಳಿಕೆಗಳನ್ನು ವಿಸ್ತರಿಸಬಹುದು. ಕುತೂಹಲದ ಸಂಗತಿಯೇನೆಂದರೆ, ಈ ಪ್ರಶ್ನೆಗಳ ಬಗೆಗಿನ ವೈಯಕ್ತಿಕ ನಂಬಿಕೆಗಳು ಯಾವುದೇ ಬಗೆಯ ಪ್ರಜ್ಞಾಪೂರಕವಾದ ನಿಲುವುಗಳಾಗಿ ಪರಿಗಣಿಸಲ್ಪಟ್ಟಿರುವುದಿಲ್ಲ.
ಈ ಮಾತುಗಳನ್ನು ಚಾಮ್ಸ್ಕಿಯ ಚಿಂತನೆಗಳ ಮೂಲಕ ಇನ್ನಷ್ಟು ನಿಚ್ಚಳವಾಗಿ ವಿವರಿಸಬಹುದು. ಅಂದರೆ ಸಾಮಾನ್ಯ ಭಾಷಾ ಬಳಕೆದಾರರು, ಜ್ಞಾನದ ರಚನೆಗಳನ್ನು ಪಡೆದುಕೊಂಡಿರುತ್ತಾರೆ. ಇದನ್ನು ಭಾಷೆಯ ಸಂಕೀರ್ಣ ವ್ಯವಸ್ಥೆಗಳ ನಿಯಮ ಇಲ್ಲವೇ ತತ್ವವೆಂದು ಕರೆಯುವುದು ಅತ್ಯಂತ ಸಮಂಜಸ. ಹಾಗೂ ಭಾಷಾಧ್ಯಯನಕ್ಕೆ ಇರಬಹುದಾದ ಒಂದು ವೈಜ್ಞಾನಿಕ ಆಯಾಮವೇನೆಂದರೆ, ಜ್ಞಾನವನ್ನು ಖಚಿತವಾಗಿ ನಿರೂಪಿಸುವ ಆಯಾಮವನ್ನೂ ಇದು ಒಳ್ಗೊಂಡಿರಬೇಕು.
ಹಲವು ಕಾರಣಗಳಿಗಾಗಿ ಈ ಎರಡೂ ಬಗೆಯ ಆಲೋಚನಾ ಕ್ರಮಗಳ ಬಗೆಗೆ ಚಿಂತಕರು ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ. ಹಾಗೂ ಈ ಎರಡೂ ಮಾದರಿಗಳನ್ನು ನೆಮ್ಮಿಕೊಂಡೇ ನಮ್ಮ ಸಾಮಾನ್ಯ ತಿಳುವಳಿಕೆಯನ್ನು ವಿಸ್ತರಿಸುವ ವಿನ್ಯಸಗಳನ್ನೂ ನೋಡಬಹುದು.
ಮೇಲಿನ ಎಲ್ಲ ಚರ್ಚೆಗಳು ದೇಶಿ ನುಡಿಗಳ ಸ್ವರೂಪವನ್ನು ಅರಿಯುವ ಹಾಗೂ ಜ್ಞಾನಮೀಮಾಂಸೆಯ ಸವಾಲುಗಳು ಹೇಗೆ ಎದುರಾಗುತ್ತವೆ ಎಂಬ ತಾತ್ವಿಕ ವಿನ್ಯಾಸಗಳನ್ನು ಕುರಿತಿವೆ. ಆದ್ದರಿಂದ ಇವತ್ತು ನಾವು ದೇಶಿ ನುಡಿಗಳ ಮೂಲಕ ಜ್ಞಾನಮೀಮಾಂಸೆ ಇಲ್ಲವೇ ಜ್ಞಾನಶಿಸ್ತುಗಳನ್ನು ರೂಪಿಸಲು ಸಾಧ್ಯವಿಲ್ಲ ಅನ್ನುವುದಕ್ಕೆ ಇರಬಹುದಾದ ತಾತ್ವಿಕ ಕೊರತೆಗಳನ್ನೂ ಈ ಚರ್ಚೆಗಳು ಸೂಕ್ಷ್ಮವಾಗಿ ಪ್ರಕಟಿಸುತ್ತವೆ.
ಕನ್ನಡದ ಮೂಲಕ ವಿಜ್ಞಾನ, ತಂತ್ರಜ್ಞಾನ ಹಾಗೂ ಇತರೆ ಶಾಸ್ತ್ರೀಯ ವಿಚಾರಗಳನ್ನು ಅಭಿವ್ಯಕ್ತಿಸಲು ಸಾಧ್ಯವಿಲ್ಲ ಎನ್ನುವವರು ಅರಿಯಬೇಕಾದ ಮೂಲಭೂತ ಸತ್ಯವೇನೆಂದರೆ, ನಮ್ಮ ಗ್ರಹಿಕೆ ಮತ್ತು ಚಿಂತನೆಗಳು ಮೈದಾಳುವ ವಿನ್ಯಾಸಗಳನ್ನು ವೈಜ್ಞಾನಿಕವಾಗಿ ಅರಿಯದೇ ಹೋದರೆ ನುಡಿ ಬಗೆಗಿನ ಚಿಂತನೆಗಳು ಸೇರಿದಂತೆ ಯಾವುದೇ ತಾತ್ವಿಕ ವಿಚಾರಗಳು ಮೌಢ್ಯತೆಯ ಫಲಿತಗಳಾಗುತ್ತವೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243