ದಿನದ ಸುದ್ದಿ
ರೈತರ ಹೋರಾಟ; ಜ. 30ರಂದು ರಾಜ್ಯದಲ್ಲೂ ಉಪವಾಸ ಸತ್ಯಾಗ್ರಹ
ಸುದ್ದಿದಿನ,ಬೆಂಗಳೂರು: ದೆಹಲಿಯ ಸಂಯುಕ್ತ ಕಿಸಾನ್ ಮೋರ್ಚಾದ ಕರೆಯಂತೆ ರಾಜ್ಯದಲ್ಲೂ ಗಾಂಧೀಜಿ ಹುತಾತ್ಮರಾದ ದಿನವಾದ ಜನವರಿ 30 ರಂದು ಉಪವಾಸ ಸತ್ಯಾಗ್ರಹವನ್ನು ನಡೆಸಲು ಸಂಯುಕ್ತ ಹೋರಾಟ-ಕರ್ನಾಟಕ ತೀರ್ಮಾನಿಸಿದೆ.
ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಜಿಲ್ಲಾ /ತಾಲ್ಲೂಕು ಕೇಂದ್ರ ಗಳಲ್ಲೂ ಅಂದು ಬೆಳಗ್ಗೆ 10 ರಿಂದ ಸಂಜೆ 4 ರ ತನಕ ಉಪವಾಸ ಸತ್ಯಾಗ್ರಹ ಧರಣಿ ನಡೆಸಿ ಈ ಕರೆಯನ್ನು ರಾಜ್ಯದಲ್ಲೂ ಯಶಸ್ವಿ ಗೊಳಿಸಲು ಇಂದು ನಡೆದ ಸಭೆಯ ಮೂಲಕ ಸಂಯುಕ್ತ ಹೋರಾಟ ಕರ್ನಾಟಕ ಕರೆ ನೀಡಿದೆ.
ಬಹಿರಂಗ ಹಾಗೂ ಅಂತರಂಗ ಶುದ್ಧಿಗಾಗಿ, ಮಹಾತ್ಮಾಗಾಂಧಿಯವರು ಹುತಾತ್ಮರಾದ ದಿನದಂದು ಸತ್ಯದ ಸ್ಥಾಪನೆಗಾಗಿ ಈ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ ಎಂದು ಸಮಿತಿ ತಿಳಿಸಿದೆ.
ಜ. 26ರಂದು ದೆಹಲಿಯಲ್ಲಿ ಬಾಡಿಗೆ ಪಡೆಗಳ ಮೂಲಕ ಹುನ್ನಾರ ನಡೆಸಿದ ಸರ್ಕಾರಕ್ಕೆ ಪಶ್ಚಾತ್ತಾಪವಾಗಲಿ. ಗಾಂಧಿಯವರ ನಾಡಿನಿಂದ ಬಂದ ನಾಯಕರಿಗೆ ಸದ್ಭುದ್ಧಿ ಬರಲಿ ಎಂದು ನಾವು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದು ಸಂಯುಕ್ತ ಹೋರಾಟ, ಕರ್ನಾಟಕ ಹೇಳಿಕೆ ನೀಡಿದೆ.
ಕೃಪೆ : mass media foundation
ಸುದ್ದಿದಿನ.ಕಾಂ|ವಾಟ್ಸಾಪ್|9980346243