ದಿನದ ಸುದ್ದಿ

ಗಿರೀಶ್ ಕುಮಾರ್.ಜಿ ಅವರಿಗೆ ಪಿಎಚ್.ಡಿ ಪದವಿ

Published

on

ಬಳ್ಳಾರಿ/ ವಿಜಯನಗರ:ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲೂಕಿನ ನಂಬರ್ 1. ಇಟಿಗಿ ಗ್ರಾಮದ, ಪ್ರಸ್ತುತ ಬಳ್ಳಾರಿ ನಗರದ ಕಪ್ಪಗಲ್ಲು ರಸ್ತೆಯ ಕೋಟೇಶ್ ಲೇಔಟ್ ನಿವಾಸಿಗಳಾದ ನಿವೃತ್ತ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗೌಡ್ರು ದೊಡ್ಡ ಹನುಮಂತಪ್ಪ ಮತ್ತು ನಾಗರತ್ನ ದಂಪತಿಗಳು ಮಗನಾದ ಗಿರೀಶ್ ಕುಮಾರ್.ಜಿ ಅವರಿಗೆ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರ ಹತ್ತಿರದ ಕನ್ನಡ ವಿಶ್ವವಿದ್ಯಾಲಯ, ವಿದ್ಯಾರಣ್ಯ ಹಂಪಿಯಿಂದ ಪಿಎಚ್.ಡಿ ಪದವಿಯನ್ನು ನೀಡಲಾಯಿತು.

ಇವರು ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ತುಮಕೂರಿನ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ.ನಾಗೇಂದ್ರ ಅವರು ಮಾರ್ಗದರ್ಶನದಲ್ಲಿ ‘ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್ ಅಪರಾಧಗಳ ಪ್ರತಿನೀಧಿಕರಣ’ ( ಬಳ್ಳಾರಿ ಜಿಲ್ಲೆಯ ಅನುಲಕ್ಷಿಸಿ) ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ನೀಡಲಾಗಿದೆ ಎಂದು ಕನ್ನಡ ವಿಶ್ವವಿದ್ಯಾಲಯ ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅವರು ಅಧಿಸೂಚನೆ ಹೊರಡಿಸಿದ್ದಾರೆ.

ಈ ಸಮಯದಲ್ಲಿ ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಯ ಹಿರಿಯ ಪತ್ರಕರ್ತರು, ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು,ತಂದೆ ತಾಯಿ, ಕುಟುಂಬದ ಸದಸ್ಯರು, ಸ್ನೇಹಿತರು ಶುಭಕೋರಿದರು.

29 ರಂದು ಪಿ.ಎಚ್.ಡಿ ಮೌಖಿಕ ಪರೀಕ್ಷೆ

29 ಅಕ್ಟೋಬರ್ 2025 ರಂದು ಕನ್ನಡ ವಿಶ್ವವಿದ್ಯಾಲಯ ವಿದ್ಯಾರಣ್ಯ ಹಂಪಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಮೌಖಿಕ ಪರೀಕ್ಷೆ ನಡೆಯಿತು. ಸಮಾಜ ವಿಜ್ಞಾನ ನಿಕಾಯದ ಡೀನ್ ಡಾ.ಪ್ರಶಾಂತ ಕುಮಾರ್, ಆಂತರಿಕ ವಿಶೇಷ ತಜ್ಞರಾದ ಡಾ.ಎ.ಎಸ್ ಪ್ರಭಾಕರ್, ಬಾಹ್ಯ ಮೌಲ್ಯಮಾಪಕರಾದ ಡಾ.ಪುಟ್ಟಸ್ವಾಮಿ, ಪ್ರಾಧ್ಯಾಪಕ,ಮೈಸೂರು ವಿಶ್ವವಿದ್ಯಾಲಯ, ಮಾರ್ಗದರ್ಶಕ ಸಹಾಯಕ ಪ್ರಾಧ್ಯಾಪಕ ಡಾ.ನಾಗೇಂದ್ರ, ವಿಭಾಗದ ಮುಖ್ಯಸ್ಥ ಡಾ. ಎಸ್.ವೈ ಸೋಮಶೇಖರ್, ವಿಭಾಗದ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು, ಪೋಷಕರು ಹಾಜರಿದ್ದರು.

ವೃತ್ತಿ

ಗಿರೀಶ್ ಕುಮಾರ್.ಜಿ ಅವರು 2017 ರಿಂದ ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಈಟಿವಿ ಭಾರತ್, ಹೊಸಪೇಟೆ ಟೈಮ್ಸ್ ದಿನಪತ್ರಿಕೆ ವರದಿಗಾರಾಗಿ, ಆಕಾಶವಾಣಿ ತಾತ್ಕಾಲಿಕ ಉದ್ಘೋಷಕರಾಗಿ, ಶ್ರೀ ಶಂಕರ ಆನಂದ್ ಸಿಂಗ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಶ್ರೀಮತಿ ಸರಳ ದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೊಪ್ಪಳ ಪದವಿ ಕಾಲೇಜುಗಳಲ್ಲಿ ಮತ್ತು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮುಖ್ಯ ಆವರಣ ಮತ್ತು ಕೊಪ್ಪಳ ಸ್ನಾತಕೋತ್ತರ ಕೇಂದ್ರದಲ್ಲಿ ಅತಿಥಿ ಉಪನ್ಯಾಸಕರಾಗಿ 9 ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಸೇವೆಯನ್ನು ಸಲ್ಲಿಸಿದ್ದಾರೆ. ಪ್ರಸ್ತುತ ಹೊಸಪೇಟೆ ಟೈಮ್ಸ್ ದಿನಪತ್ರಿಕೆ ಬಳ್ಳಾರಿ ಜಿಲ್ಲೆಯ ವರದಿಗಾರರಾಗಿ ಮತ್ತು ಲೋಕಲ್ ಆಪ್ ನಲ್ಲಿ ಬಳ್ಳಾರಿ ಜಿಲ್ಲೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ‌.

ಪಿಎಚ್.ಡಿ ಸಾರಾಂಶ

ಕನ್ನಡ ಮುದ್ರಣ ಮಾಧ್ಯಮಗಳಲ್ಲಿ ಸೈಬರ್ ಅಪರಾಧಗಳ ಪ್ರತಿನೀಧಿಕರಣ (ಬಳ್ಳಾರಿ ಜಿಲ್ಲೆಯ ಅನುಲಕ್ಷಿಸಿ : ಬಳ್ಳಾರಿ ವಿಜಯನಗರ ಜಿಲ್ಲೆ) ಎಂಬ ವಿಷಯದ ಸಂಶೋಧನೆ ಕರ್ನಾಟಕ ರಾಜ್ಯದ ಕನ್ನಡದ ಮೊದಲ ಸಂಶೋಧನೆ ಮಹಾಪ್ರಬಂಧವಾಗಿದೆ.

ಈ ವಿಷಯದ ಕುರಿತು 2019 ರಿಂದ 2022 ಅವಧಿ ವರೆಗೆ ಅಧ್ಯಾಯ ಮಾಡಿ, ಸೈಬರ್ ಅಪರಾಧಗಳ ಬಳ್ಳಾರಿ ಜಿಲ್ಲಾ ಪಕ್ಷೀನೋಟ, ಸೈಬರ್ ಅಪರಾಧಗಳ ಹುಟ್ಟು, ಬೆಳವಣಿಗೆ, 4 ವರ್ಷಗಳ ಸೈಬರ್ ಅಪರಾಧಗಳ ಅಂಕಿ, ಸಂಖ್ಯೆಗಳು, ಪೈ ಮತ್ತು ಸ್ತಂಭ ನಕ್ಷೆಗಳು ಒಳಗೊಂಡಿದೆ. ಮುಖ್ಯವಾಗಿ ವಿಜಯ ಕರ್ನಾಟಕ ಮತ್ತು ವಿಜಯವಾಣಿ ದಿನಪತ್ರಿಕೆ ಹಾಗು ಮೈಸೂರಿನ ಪ್ರತಿನಿಧಿ ದಿನಪತ್ರಿಕೆಗಳಲ್ಲಿ ಬರಹ, ಲೇಖನ, ಅಂಕಣಗಳು ವಿಶೇಷ ವಿಶ್ಲೇಷಣೆ, ಸೈಬರ್ ಅಪರಾಧಗಳ ಬಗ್ಗೆ ಕರ್ನಾಟಕ ರಾಜ್ಯದ ಪೋಲಿಸ್ ಇಲಾಖೆಯ ಐ.ಪಿ.ಎಸ್, ಸಿ.ಪಿ.ಐ, ಪಿ.ಎಸ್.ಐ ಅಧಿಕಾರಿಗಳು, ಹಿರಿಯ ಪತ್ರಕರ್ತರು, ಸೈಬರ್ ತಜ್ಞರು, ವಂಚನೆ ಒಳಗಾದವರ ಸಂರ್ದಶನ ಮತ್ತು ವಿಶ್ಲೇಷಣೆ ಮತ್ತು ಅವರ ಮಾನಸಿಕ ಸ್ಥಿತಿಗತಿ ಬಗ್ಗೆ ಈ ಸಂಶೋಧನೆ ಒಳಗೊಂಡಿದೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version