ದಿನದ ಸುದ್ದಿ

ಪ್ರಧಾನಿಯಾಗಿ ಮೋದಿ ಪದಗ್ರಹಣ | ಹೇಗಿತ್ತು ಸಮಾರಂಭ ; ಯಾರೆಲ್ಲಾ ಬಂದಿದ್ರು..

Published

on

ಸುದ್ದಿದಿನಡೆಸ್ಕ್ : ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿರುವ ಭಾರತದ ಪ್ರಧಾನಮಂತ್ರಿಯಾಗಿ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಪದಗ್ರಹಣ ಮಾಡಿದ್ದಾರೆ.

ರಾಷ್ಟ್ರಪತಿ ಭವನದ ಭವ್ಯ ಮೆಟ್ಟಿಲುಗಳ ಮೇಲೆ ದೇಶ ವಿದೇಶಗಳ ಗಣ್ಯರ ಸಮ್ಮುಖದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ನರೇಂದ್ರ ಮೋದಿ ಅವರಿಗೆ ಪ್ರಮಾಣವಚನ ಬೋಧಿಸಿದರು. 30 ಮಂದಿ ಸಂಪುಟ ದರ್ಜೆ ಸಚಿವರು, ಐದು ಮಂದಿ ಸ್ವತಂತ್ರ ಜವಾಬ್ದಾರಿ ಹೊಂದಿರುವ ರಾಜ್ಯ ಸಚಿವರು ಮತ್ತು 36 ಮಂದಿ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದು, ಒಟ್ಟು 72ಸದಸ್ಯಬಲದ ಪೂರ್ಣ ಪ್ರಮಾಣದ ಸಂಪುಟ ಅಸ್ಥಿತ್ವಕ್ಕೆ ಬಂದಿದೆ.

ಕರ್ನಾಟಕಕ್ಕೆ ಮೂರು ಸಂಪುಟ ದರ್ಜೆ ಮತ್ತು ಎರಡು ರಾಜ್ಯ ಸಚಿವ ಸ್ಥಾನಗಳು ಲಭಿಸಿವೆ. ಸಂಪುಟ ದರ್ಜೆ ಸಚಿವರಾಗಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ಡಾ. ಎಸ್. ಜೈಶಂಕರ್, ಪಿಯೂಶ್ ಗೋಯಲ್, ಧರ್ಮೆಂದ್ರ ಪ್ರಧಾನ್, ನಿರ್ಮಲಾ ಸೀತಾರಾಮನ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕಿರಣ್ ರಿಜಿಜು, ಜೆಡಿಎಸ್ ನ ಎಚ್.ಡಿ. ಕುಮಾರ ಸ್ವಾಮಿ, ಪ್ರಹ್ಲಾದ್ ಜೋಷಿ, ಅಶ್ವನಿ ವೈಷ್ಣವ್, ಜ್ಯೋತಿರಾಧಿತ್ಯ ಸಿಂಧಿಯಾ, ಭೂಪೇಂದ್ರ ಯಾದವ್, ಗಿರಿರಾಜ್ ಸಿಂಗ್, ಗಜೇಂದ್ರ ಸಿಂಗ್ ಶೇಖಾವತ್, ಅನ್ನಪೂರ್ಣ ದೇವಿ, ಹರ್ದಿಪ್ ಸಿಂಗ್ ಪುರಿ, ಡಾ. ಮನ್ಸೂಖ್ ಮಾಂಡವೀಯಾ, ಜಿ. ಕಿಶನ್ ರೆಡ್ಡಿ, ಸಿ.ಆರ್. ಪಾಟೀಲ್, ಡಾ. ವಿರೇಂದ್ರ ಕುಮನಾರ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಬಿಜೆಪಿ ನಾಯಕರಾದ ರಾವ್ ಇಂದ್ರಜಿತ್ ಸಿಂಗ್, ಡಾ. ಜಿತೇಂದ್ರ ಸಿಂಗ್, ಅರ್ಜುನ್ ರಾಮ್ ಮೆಗ್ವಾಲ್, ಶಿವಸೇನೆಯ ಪ್ರತಾಪ್ ರಾವ್ ಜಾಧವ್, ಆರ್.ಎಲ್.ಡಿಯ ಜಯಂತ್ ಚೌಧರಿ ಸ್ವತಂತ್ರ ಕಾರ್ಯನಿರ್ವಹಣೆಯ ರಾಜ್ಯ ಸಚಿವರಾಗಿ ಪದಗ್ರಹಣ ಮಾಡಿದರು. ಕರ್ನಾಟದಿಂದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಕೇರಳದ ಸುರೇಶ್ ಗೋಪಿ, ಆರ್.ಪಿ.ಐ ಪಕ್ಷದ ರಾಮದಾಸ್ ಅಠಾವಳೆ, ಜೆಡಿಯು ನ ರಾಮ್ ನಾಥ್ ಠಾಕೂರ್, ಅಪ್ನಾದಳ್ ನ ಅನುಪ್ರಿಯ ಪಟೇಲ್, ಟಿಡಿಪಿಯ ಪೆಮ್ಮಸಾನಿ ಚಂದ್ರಶೇಖರ್ ಅವರು ಒಳಗೊಂಡಂತೆ 36 ಮಂದಿ ರಾಜ್ಯ ಸಚಿವರಾಗಿ ಅಧಿಕಾರ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ, ಮಾಲ್ಡೀವ್ಸ್ ಅಧ್ಯಕ್ಷ ಡಾ. ಮೊಹಮದ್ ಮುಜ್ಜು, ಸೆಷಲ್ಸ್ ನ ಉಪಾಧ್ಯಕ್ಷ ಅಹಮದ್ ಅಫಿಪ್, ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ, ಮಾರಿಷಸ್ ಪ್ರಧಾನಿ ಪ್ರವೀಂದ್ ಕುಮಾರ್ ಜುಗ್ನೌತ್, ಭೂತಾನ್ ಪ್ರಧಾನಿ ತ್ಸೆರಿಂಗ್ ತೋಬ್ಗಾಯ್, ನೇಪಾಳ ಪ್ರಧಾನಿ ಪುಷ್ಪ ಕಮಲ್ ಧಹಲ್, ಉಪಾರಾಷ್ಟ್ರಪತಿ ಜಗದೀಪ್ ಧನ್‌ಕರ್, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಾ. ಡಿ.ವೈ. ಚಂದ್ರಚೂಡ್, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಗವಹಿಸಿದ್ದರು.

ಇದೇ ವೇಳೆ ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಬಿಜೆಪಿ ಹಿರಿಯ ನಾಯಕ ಮುರುಳಿ ಮನೋಹರ್ ಜೋಶಿ, ಜೆಡಿಯು ವರಿಷ್ಠ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಟಿಡಿಪಿ ರಾಷ್ಟ್ರೀಯ ಅಧ್ಯಕ್ಷ ಚಂದ್ರಬಾಬು ನಾಯ್ಡು, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್, ನಟರಾದ ರಜನೀಕಾಂತ್, ಅಕ್ಷಯ್ ಕುಮಾರ್, ಶಾರುಖ್ ಖಾನ್, ಉದ್ಯಮಿ, ಮುಖೇಶ್ ಅಂಬಾನಿ, ಉದ್ಯಮಿ ಗೌತಮ್ ಅದಾನಿ, ಎನ್‌ಡಿಎ ಮಿತ್ರಪಕ್ಷಗಳ ನಾಯಕರು, ವಿವಿಧ ಮಠಗಳ ಮಠಾಧೀಶರು, ಸಂತರು ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪ್ರಮಾಣವಚನ ಸಮಾರಂಭದಲ್ಲಿ ನಂತರ ವಿದೇಶಿ ಗಣ್ಯರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಔತಣಕೂಟ ಏರ್ಪಡಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version