ದಿನದ ಸುದ್ದಿ
ದಾವಣಗೆರೆ | ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಪಿಂಚಣಿ ಯೋಜನೆಯ ಸೌಲಭ್ಯ
ಸುದ್ದಿದಿನ,ದಾವಣಗೆರೆ : ಕಾರ್ಮಿಕರಿಗೆ ವೃದ್ದಾಪ್ಯದಲ್ಲಿ ಮಾಸಿಕ ಪಿಂಚಣಿ ಸೌಲಭ್ಯವನ್ನು ಒದಗಿಸಿ ಆರ್ಥಿಕ ಭದ್ರತೆ ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರವು ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಸೌಲಭ್ಯವನ್ನು 18 ರಿಂದ 40 ವರ್ಷ ವಯೋಮಾನದ ಅಸಂಘಟಿತ ವಲಯದ ಕಾರ್ಮಿಕರು ಪಡೆಯಬಹುದು.
ಈ ಯೋಜನೆಯಡಿಯಲ್ಲಿ ಅಸಂಘಟಿತ ವರ್ಗದ ಕೃಷಿ ಕಾರ್ಮಿಕರು ಮತ್ತು ಕೃಷಿ ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರು ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೊಂದಾಯಿಸಿಕೊಳ್ಳುವ ಮೂಲಕ 60 ವರ್ಷ ಪೂರೈಸಿದ ನಂತರ ಮಾಸಿಕ ನಿಶ್ಚಿತ ರೂ. 3000/- ಗಳ ಪಿಂಚಣಿ ಸೌಲಭ್ಯವನ್ನು ಪಡೆಯಬಹುದಾಗಿದೆ.
ಯೋಜನೆಯ ಸೌಲಭ್ಯಗಳು
ಫಲಾನುಭವಿಯು ಪಾವತಿಸಬೇಕಾದ ವಂತಿಕೆಯ ಮೊತ್ತವು ಅವರ ವಯೋಮಾನದ ಆಧಾರದ ಮೇಲೆ ನಿಗದಿಪಡಿಸಲಾಗಿದ್ದು, ಮಾಸಿಕ ರೂ.55 ರಿಂದ ರೂ.200ರೂ ವರೆಗೆ ಇರುತ್ತದೆ. ಕೇಂದ್ರ ಸರ್ಕಾರವು ಚಂದಾದಾರರು ಪಾವತಿಸುವ ವಂತಿಕೆಯ ಸಮಾನಾಂತರ ವಂತಿಕೆಯನ್ನು ಪಿಂಚಣಿ ಖಾತೆಗೆ ಪಾವತಿಸುತ್ತದೆ.
ಯೋಜನೆಯಡಿ ಫಲಾನುಭವಿಗಳ ಅರ್ಹತೆಗಳು
ಯೋಜನೆಗೆ ಒಳಪಡುವ ಅಸಂಘಟಿತ ವಲಯದ ಕಾರ್ಮಿಕರಾಗಿದ್ದು, 18 ರಿಂದ 40 ವರ್ಷ ವಯೋಮಾನದ ಒಳಗಿರಬೇಕು. ಮಾಸಿಕ ಆದಾಯ ರೂ. 15000ರೂ ಕ್ಕಿಂತ ಕಡಿಮೆ ಇರಬೇಕು. ಆದಾಯ ತೆರಿಗೆ / ಇಪಿಎಫ್ಒ/ನ್ಯಾಷನಲ್ ಪೆನ್ಷನ್ ಸ್ಕೀಮ್ ವ್ಯಾಪ್ತಿಗೆ ಒಳಪಟ್ಟಿರಬಾರದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ ತಾಲ್ಲೂಕು ಮಟ್ಟದಲ್ಲಿ ಹಿರಿಯ / ಕಾರ್ಮಿಕ ನಿರೀಕ್ಷಕರನ್ನು ಸಂಪರ್ಕಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಶರಣಪ್ಪ ಬಿ ಮುದಗಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243