ದಿನದ ಸುದ್ದಿ

ಮರೆಯಾದ ದಾದಾ ಗೆ ಶ್ರದ್ಧಾಂಜಲಿ

Published

on

  • ಜಗದೀಶ್ ಕೊಪ್ಪ

ಭಾರತ ಕಂಡ ಪ್ರಬುದ್ಧ ರಾಜಕಾರಣಿ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಿಧನರಾಗಿದ್ದಾರೆ. ಅಪಾರ ಓದಿನ ಹಾಗೂ ಪ್ರಣಬ್ ದಾದಾ ಎಂದು ಕರೆಸಿಕೊಳ್ಳುತ್ತಿದ್ದ ಮುಖರ್ಜಿಯವರು ರಾಜೀವ್ ಗಾಂಧಿಯವರ ಆಳ್ವಿಕೆಯಲ್ಲಿ ಕಾಂಗ್ರೇಸ್ ಪಕ್ಷದಿಂದ ಒಂದಷ್ಟು ಕಾಲ ಮೂಲೆಗುಂಪಾಗಿದ್ದು ಹೊರತು ಪಡಿಸಿಸಿದರೆ, ಕಾಂಗ್ರೇಸ್ ಪಕ್ಷದ ನಿಷ್ಟಾವಂತ ನಾಯಕರಲ್ಲಿ ಒಬ್ಬರಾಗಿ ದುಡಿದರು.

ದೇಶ ಕಂಡ ಸಭ್ಯ ರಾಜಕಾರಣಿಗಳಲ್ಲಿ ಒಬ್ಬರಾಗಿದ್ದ ಮುಖರ್ಜಿಯವರು ಪಶ್ಚಿಮ ಬಂಗಾಳದಲ್ಲಿ ಜ್ಯೋತಿ ಬಸುರವರು ಹಲವು ದಶಕಗಳ ಕಾಲ ಎಡರಂಗವನ್ನು ಅಧಿಕಾರಕ್ಕೆ ತಂದು‌ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿರುವಾಗ ಕಾಂಗ್ರೇಸ್ ಪಕ್ಷದ ನಾಯಕರಾಗಿದ್ದುಕೊಂಡು, ಎಂದಿಗೂ ಇಂದಿನ ರಾಜಕಾರಣಿಗಳ ರೀತಿಯಲ್ಲಿ ಮೂರನೆಯ ದರ್ಜೆ ಭಾಷೆಯನ್ನು ಬಳಸದೆ ಸೈದ್ಧಾಂತಿಕವಾಗಿ ಹೋರಾಟ ಮಾಡುತ್ತಿದ್ದರು.

ಡಾ.ಮನಮೋಹನ್ ಸಿಂಗ್ ರವರನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೌರ್ನರ್ ಮಾಡಿದ ಮುತ್ಸದ್ಧಿ. ಪಿ.ವಿ.ನರಸಿಂಹರಾವ್ ಪ್ರಧಾನಿಯಾಗಿದ್ದಾಗ ಅವರನ್ನು ಒಪ್ಪಿಸುವುದರ ಮೂಲಕ ಸಿಂಗ್ ರವರನ್ನು ಮುನ್ನಲೆಗೆ ತಂದವರು.ಇಂದಿರಾಗಾಂಧಿ ಮತ್ತು ನರಸಿಂಹರಾವ್ ಅವಧಿಯಲ್ಲಿ ವಿದೇಶಾಂಗ, ಹಣಕಾಸು, ಗೃಹಖಾತೆಯಂತಹ ಪ್ರಭಾವಿ ಖಾತೆಗಳನ್ನು ನಿರ್ವಹಿಸಿದರು.

1984ರಲ್ಲಿ ದೆಹಲಿಯ ಗ್ರೇಟರ್ ಕೈಲಾಸ್ ಪ್ರದೇಶದ ಬಂಗಾಳಿ ಮಾರ್ಕೆಟ್ ಬಳಿ ಒಂದೇ ಅಪಾರ್ಟ್ ಮೆಂಟ್ ನ ಎದುರು‌ ಬದುರು ನಿವಾಸಿಗಳಾಗಿದ್ದ ಎಸ್.ಎಂ.ಕೃಷ್ಣ ಮತ್ತು ಪ್ರಣಬ್ ಮುಖರ್ಜಿ ಒಳ್ಳೆಯ ಸ್ನಹಿತರಾಗಿದ್ದರು. ರಾಷ್ಟ್ರಪತಿ ಹುದ್ದೆಯಿಂದ ಹಿಡಿದು, ಭಾರತ ರತ್ನ ಪ್ರಶಸ್ತಿ ಗೆ ಭಾಜನರಾಗಿದ್ದ ಪ್ರಣಬ್ ದಾದಾ ಒಂದರ್ಥದಲ್ಲಿ ಅಜಾತ ಶತ್ರು. ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಸಿದ್ಧಾರ್ಥ ಶಂಕರ್ ರಾಯ್, ಜ್ಯೋತಿ ಬಸು ಹಾಗೂ ಪ್ರಣಬ್ ಮುಖರ್ಜಿ ಮರೆಯಲಾಗದ ಹೆಸರುಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version