ದಿನದ ಸುದ್ದಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು, ನಾಳೆ ಗುಜರಾತ್ ಮತ್ತು ತಮಿಳುನಾಡು ಭೇಟಿ ; ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ ಡೆಸ್ಕ್ : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ಮತ್ತು ನಾಳೆ ಗುಜರಾತ್ ಮತ್ತು ತಮಿಳುನಾಡಿಗೆ ಭೇಟಿ ನೀಡಲಿದ್ದಾರೆ.

ಇಂದು ಮಧ್ಯಾಹ್ನ 12 ಗಂಟೆಗೆ ಪ್ರಧಾನಮಂತ್ರಿ ಅವರು ಸಬರ್‌ಕಾಂತಾದ ಗಧೋಡಾ ಚೌಕಿಯಲ್ಲಿ ಸಬರ್ ಡೇರಿ ಸೇರಿದಂತೆ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಹಲವು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಬರ್‌ಕಂತದ ಈ ಡೇರಿಯಿಂದ ಹೈನು ಉತ್ಪಾದಕರಿಗೆ ನೆರವಾಗಲಿದೆ. ಡೇರಿಯ ಎರಡು ಘಟಕಗಳನ್ನು ಪ್ರಧಾನಿ ಅವರು ಉದ್ಘಾಟಿಸಲಿದ್ದು, ಅದರಲ್ಲಿ ಪ್ರತಿದಿನ 120 ಮೆಟ್ರಿಕ್ ಟನ್ ಹಾಲಿನ ಪುಡಿ ಮಾಡುವ ಘಟಕವೂ ಸೇರಿದೆ. ಅಲ್ಲದೆ, ಅವರು ಸಬರ್ ಚೀಸ್ ಮತ್ತು ಡೇರಿ ಘಟಕಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸಬರ್ ಡೇರಿ ಗುಜರಾತ್ ಸಹಕಾರಿ ಹಾಲು ಒಕ್ಕೂಟದ ಭಾಗವಾಗಿದ್ದು, ಅದು ಅಮುಲ್ ಎಂದೇ ಜನಪ್ರಿಯವಾಗಿದೆ. ನಂತರ ಪ್ರಧಾನಮಂತ್ರಿ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದು, ಸಂಜೆ 6 ಗಂಟೆಗೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ 44ನೇ ಚೆಸ್ ಒಲಿಂಪಿಯಾಡ್‌ಗೆ ಚಾಲನೆ ನೀಡಲಿದ್ದಾರೆ.

ನಾಳೆ ಬೆಳಿಗ್ಗೆ 10 ಗಂಟೆಗೆ ಪ್ರಧಾನಮಂತ್ರಿ, ಅಣ್ಣಾ ವಿಶ್ವವಿದ್ಯಾಲಯದ 42ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲಿಂದ ಅವರು ಗಾಂಧಿನಗರಕ್ಕೆ ತೆರಳಿ ಗಿಫ್ಟ್ ಸಿಟಿಗೆ ಭೇಟಿ ನೀಡಲಿದ್ದು, ಅಲ್ಲಿ ಅವರು ಸಂಜೆ 4 ಗಂಟೆಗೆ ವಿವಿಧ ಯೋಜನೆಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version