ರಾಜಕೀಯ
ಮೋದಿ ಜನರ ಚೌಕಿದಾರನಲ್ಲ, ಅಂಬಾನಿಯ ಚೌಕಿದಾರ : ರಾಹುಲ್ ಗಾಂಧಿ
ಸುದ್ದಿದಿನ,ಹಾವೇರಿ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಾರತವನ್ನು ಎರಡು ರೀತಿ ಮಾಡಿ ಅಧಿಕಾರವನ್ನು ನಡೆಸುತ್ತಿದೆ. ಶ್ರೀಮಂತರಿಗೆ ಒಂದು ಹಿಂದೂಸ್ತಾನ, ಬಡ ಜನರಿಗೆ ಮತ್ತೊಂದು ಹಿಂದೂಸ್ತಾನವನ್ನು ಮೋದಿ ಸರ್ಕಾರ ಮಾಡುತ್ತಿದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಾವೇರಿಯಲ್ಲಿ ನಡೆದ ಪರಿವರ್ತನಾ ಱಲಿಯಲ್ಲಿ ಮಾತನಾಡಿದ ಅವರು, ಒಂದನೇ ಹಿಂದೂಸ್ತಾನದಲ್ಲಿ ವಿಜಯ ಮಲ್ಯ, ಲಲಿತ್ ಮೋದಿ, ಚೋಕ್ಸಿಯಂತವರು ಇದ್ದಾರೆ. ಇವರಿಗೆ ಬೇಕಾದಷ್ಟು ಹಣ ಈ ಸರ್ಕಾರ ನೀಡುತ್ತದೆ. ಇಂತಹ ಶ್ರೀಮಂತ ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಎಲ್ಲದ್ದಕ್ಕೂ ಈ ಸರ್ಕಾರ ವ್ಯವಸ್ಥೆಯನ್ನು ನೋಡಿಕೊಳ್ಳುತ್ತದೆ. ಆದರೆ, ಎರಡನೇ ಹಿಂದೂಸ್ತಾನದಲ್ಲಿ ಬಡವರು, ಹಿಂದುಳಿದವರು ಇದ್ದಾರೆ. ಇಲ್ಲಿ ಮೋಸ, ವಂಚನೆಯನ್ನು ಈ ಸರ್ಕಾರ ಮಾಡುತ್ತಿದೆ ಎಂದು ಮೋದಿ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ಕಿಡಿಕಾರಿದರು.
ಇನ್ನು, ಲೋಕಸಭೆಯಲ್ಲಿ ರಫೇಲ್ ಹಗರಣದ ಬಗ್ಗೆ ನಾಲ್ಕು ಪ್ರಶ್ನೆಯನ್ನು ಕೇಳಿದೆ. ಆದರೆ, ಬಿಜೆಪಿ ಸಂಸದರು ಸುಮ್ಮನೇ 10 ನಿಮಿಷ ಚಪ್ಪಾಳೆ ಹೊಡೆದು ಸದನದ ಸಮಯವನ್ನು ವ್ಯರ್ಥ ಮಾಡಿದರು. ಅಲ್ಲದೇ, ಮೋದಿಯವರು ಸದನದಲ್ಲಿ ಗಂಟೆಗಟ್ಟಲೇ ಭಾಷಣ ಮಾಡಿದರೂ ನಾನು ಕೇಳಿದ ಪ್ರಶ್ನೆಗೆ ಉತ್ತರ ನೀಡಲಿಲ್ಲ. ಬದಲಾಗಿ ನನ್ನ ಪ್ರಶ್ನೆಗೆ ಉತ್ತರ ಕೊಡಲು ತಪ್ಪಿಸಿಕೊಳ್ಳಲು ಮೋದಿಯವರು ಮೇಲೆ, ಕೆಳಗೆ, ಅಕ್ಕ ಪಕ್ಕ ನೋಡಲು ಶುರು ಮಾಡಿದರು. ಈ ಸರ್ಕಾರ ಜನರಿಗೆ ವಂಚನೆ ಮಾಡುತ್ತಿದೆ ಎಂದು ಆರೋಪಿಸಿದರು.
ರಫೇಲ್ ಒಪ್ಪಂದದಲ್ಲಿ ಪ್ರಧಾನಿ ನರೇಂದ್ರ ಮೋದಿ ₹ 30 ಕೋಟಿಯನ್ನ ಹೊಡೆದಿದ್ದಾರೆ. ದೇಶದ ಪ್ರಧಾನಿ ನರೇಂದ್ರ ಮೋದಿ ಜನರ ಚೌಕಿದಾರನಲ್ಲ, ಅಂಬಾನಿಯ ಚೌಕಿದಾರ ಎಂದು ಆರೋಪಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401