ದಿನದ ಸುದ್ದಿ
ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಗುಣಮುಖರ ಸಂಖ್ಯೆ ಹೆಚ್ಚಾಗಿದೆ, ಜನತೆ ಭಯ ಪಡಬೇಕಿಲ್ಲ : ಸಚಿವ ಡಾ.ಸುಧಾಕರ್
ಸುದ್ದಿದಿನ,ರಾಯಚೂರು: ರಾಜ್ಯದಲ್ಲಿ ಒಟ್ಟಾರೆ 6.516 ಕೋವಿಡ್-19 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಅವರಲ್ಲಿ3.440 ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೂಲಕ ಕರ್ನಾಟಕದಲ್ಲಿ ನೋವೆಲ್ ಕೊರೋನಾ ಸೋಂಕಿನ ಚೇತರಿಕೆ ಪ್ರಮಾಣ ಶೇ 52.8 ರಷ್ಟು ಹೆಚ್ಚಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಅವರು ತಿಳಿಸಿದರು.
ಅವರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಇದುವರೆಗೂ ಕೋವಿಡ್-19 ನಿಂದಾಗಿ 79 ಸಾವುಗಳು ಸಂಭವಿಸಿವೆ. ಮರಣ ಪ್ರಮಾಣ ಶೇಕಡವಾರು1.2 ರಷ್ಟು ದಾಖಲಾದರೆ, ರಾಷ್ಟçಮಟ್ಟದಲ್ಲಿ ಅವುಗಳ ಪ್ರಮಾಣ ಶೇ.2.8 ರಷ್ಟಿದೆ. ರಾಜ್ಯದಲ್ಲಿ ಕೋವಿಡ್-19 ಸೋಂಕಿನಿಂದ ಗುಣಮುಖರಾದ ಪ್ರಮಾಣ ಶೇ. 52.8 ವಾದರೆ, ರಾಷ್ಟ್ರಮಟ್ಟದಲ್ಲಿ49.8 ರಷ್ಟು ದಾಖಲಾಗಿದೆ.
ಈ ಮೂಲಕ ಕೋವಿಡ್-19 ಸೋಂಕಿನ ವಿರುದ್ಧ ರಾಜ್ಯ ಸರ್ಕಾರ ಉತ್ತಮ ಕ್ರಮಗಳನ್ನು ಕೈಗೊಂಡಿದೆ, ರಾಜ್ಯದಲ್ಲಿ ಸಕ್ರೀಯವಿರುವ2.995 ಪ್ರಕರಣಗಳ ಪೈಕಿ 2.531 ರೋಗಿಗಳಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲ, ಆದಕಾರಣ ಸಾರ್ವಜನಿಕರು ಕೋವಿಡ್-19 ಗೆ ಭಯಪಡುವ ಅಗತ್ಯವಿಲ್ಲ, ಸ್ವಾಭಾವಿಕವಾಗಿ ಬರುವ ಕೆಮ್ಮು, ನೆಗಡಿ, ಜ್ವರಕ್ಕೆ ವೈದ್ಯರ ಬಳಿಗೆ ತೆರಳಲು ಹೆದರುವ ಸ್ಥಿತಿ ಕೊರೋನಾದಿಂದ ನಿರ್ಮಾಣವಾಗಿದೆ.
ಇದು ಹೋಗಬೇಕು. ಕೊರೋನಾ ಶೀಘ್ರವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಸಾರ್ಸ್, ಎಬೊಲಾ, ನಿಫಾದಂತೆ ಪ್ರಾಣ ಹರಣ ಮಾಡುವ ಭಯಾನಕ ರೋಗವಲ್ಲ ಎಂದವರು ಹೇಳಿದರು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತಹ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡರೆ ಕೊರೋನಾವನ್ನು ಶೇ.50 ರಷ್ಟು ನಿಯಂತ್ರಿಸಬಹುದಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ನಮ್ಮಲ್ಲಿ ಮಾಡಿಕೊಳ್ಳುವ ಸಣ್ಣ ಬದಲಾವಣೆಗಳಿಂದ ದೊಡ್ಡ ಹಾಗೂ ಪರಿಣಾಮಕಾರಿ ಫಲಿತಾಂಶವನ್ನು ಪಡೆಯಬಹುದಾಗಿದೆ. ಶುಚಿತ್ವ ಪಾಲನೆ ನಮ್ಮ ಜೀವನದ ಭಾಗವಾಗಬೇಕು.
ಸುದ್ದಿದಿನ.ಕಾಂ|ವಾಟ್ಸಾಪ್|9980346243