ದಿನದ ಸುದ್ದಿ
ರೂ.10172 ಕೋಟಿ ಜಿಎಸ್ಟಿ ದಾಖಲೆ ಸಂಗ್ರಹ ಕೇಂದ್ರ ಜಿ.ಎಸ್.ಟಿ : ಬೆಳಗಾವಿ ವಿಭಾಗದಲ್ಲಿ ಜಿ.ಎಸ್.ಟಿ ಆದಾಯ ದಾಖಲೆ ಸಂಗ್ರಹ..!
ಸುದ್ದಿದಿನ,ಬಳ್ಳಾರಿ : ಕೇಂದ್ರ ಜಿಎಸ್ಟಿ ಆಯುಕ್ತಾಲಯದ ಬೆಳಗಾವಿ ವಿಭಾಗದಲ್ಲಿ 2021-22ರ ಆರ್ಥಿಕ ವರ್ಷದಲ್ಲಿ ರೂ.10172 ಕೋಟಿಗಳ ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್.ಟಿ) ದಾಖಲೆಯ ಸಂಗ್ರಹವನ್ನು ಸಾಧಿಸಿದೆ. ಇಂತಹ ಜಿಎಸ್ಟಿ ಸಂಗ್ರಹವು, ದೃಢವಾದ ಆರ್ಥಿಕ ಬೆಳವಣಿಗೆಯ ಸಂಕೇತವಾಗಿದೆ ಮತ್ತು ದೇಶವು ಸಾಂಕ್ರಾಮಿಕದ ನೆರಳಿನಿಂದ ದೂರ ಸರಿದಿದೆ ಎಂಬುದರ ಸೂಚಕವಾಗಿದೆ ಎಂದು ಬೆಳಗಾವಿ ಕೇಂದ್ರ ಜಿಎಸ್ಟಿ ಆಯುಕ್ತಾಲಯದ ಆಯುಕ್ತರಾದ ಬಸವರಾಜ ನಲೆಗಾವೆ ಅವರು ತಿಳಿಸಿದ್ದಾರೆ.
ಬೆಳಗಾವಿ ಆಯುಕ್ತಾಲಯ ವ್ಯಾಪ್ತಿಯು ದೊಡ್ಡದಾಗಿದ್ದು, ಇದು ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ, ವಿಜಯನಗರ, ಬಳ್ಳಾರಿ, ರಾಯಚೂರು, ಯಾದಗಿರಿ, ಕಲಬುರ್ಗಿ, ಬೀದರ, ವಿಜಯಪುರ ಮತ್ತು ಬಾಗಲಕೋಟೆ ಸೇರಿದಂತೆ ಉತ್ತರ ಕರ್ನಾಟಕದ ಹನ್ನೆರಡು ಜಿಲ್ಲೆಗಳಲ್ಲಿ ವ್ಯಾಪಿಸಿದೆ. ದಾಖಲೆಯ ಸಂಗ್ರಹವು ಈ ಜಿಲ್ಲೆಗಳಲ್ಲಿ ರೋಮಾಂಚಕ ಮತ್ತು ದೃಢವಾದ ಆರ್ಥಿಕ ಚಟುವಟಿಕೆಯ ಸೂಚನೆಯಾಗಿದೆ. ಇದು ಈ ಪ್ರದೇಶದ ಜನಸಂಖ್ಯೆಯಲ್ಲಿ ಅಂತರ್ಗತವಾಗಿರುವ ಉದ್ಯಮಶೀಲ ಸ್ವಭಾವವನ್ನು ಎತ್ತಿ ತೋರಿಸುತ್ತದೆ.
ಈ ಜಿಲ್ಲೆಗಳಲ್ಲಿ ಒಟ್ಟು 2,30,566 ತೆರಿಗೆದಾರರು ಜಿಎಸ್ಟಿ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ ಮತ್ತು ಇವುಗಳನ್ನು ರಾಜ್ಯ ಅಥವಾ ಕೇಂದ್ರ ಜಿಎಸ್ಟಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಕೇಂದ್ರ ಜಿಎಸ್ಟಿ ಆಡಳಿತದ ಅಡಿಯಲ್ಲಿ ನೋಂದಾಯಿಸಲಾದ ತೆರಿಗೆದಾರರಿಂದ, ಬೆಳಗಾವಿ ಕೇಂದ್ರ ಜಿಎಸ್ಟಿ ರಚನೆಯಿಂದ ರೂ.10,172 ಕೋಟಿಗಳನ್ನು ಸಂಗ್ರಹಿಸಲಾಗಿದೆ. 2019-20ನೇ ಸಾಲಿನ ಆಯುಕ್ತಾಲಯದ ಆದಾಯ ರೂ.7,677 ಕೋಟಿ, 2020-21ಕ್ಕೆ ರೂ.7,124 ಕೋಟಿ ಮತ್ತು 2021-22ನೇ ಸಾಲಿಗೆ ರೂ.10,172 ಕೋಟಿಯಷ್ಟಿದ್ದು, ಇದು ಹಿಂದಿನ ವರ್ಷಗಳ ಸಂಗ್ರಹಕ್ಕಿಂತ ಶೇ.43ರಷ್ಟು ಹೆಚ್ಚಳವಿದೆ.
ಉಕ್ಕು, ಸಿಮೆಂಟ್, ಗಣಿಗಾರಿಕೆ, ಸಕ್ಕರೆಯ ಪ್ರಮುಖ ಕೈಗಾರಿಕೆಗಳಾದ ಜೆಎಸ್ಡಬ್ಲ್ಯೂ ಸ್ಟೀಲ್, ಕೆಸೋರಾಮ್ ಇಂಡಸ್ಟ್ರೀಸ್, ಓರಿಯಂಟ್ ಸಿಮೆಂಟ್, ಎನ್ಎಂಡಿಸಿ ಇತ್ಯಾದಿಗಳು, ಈ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ ಅಪಾರ ಸಂಖ್ಯೆಯ ವರ್ತಕರು ಕೂಡ ದಾಖಲೆಯ ಜಿಎಸ್ಟಿ ಸಂಗ್ರಹಕ್ಕೆ ಕೊಡುಗೆ ನೀಡಿದ್ದಾರೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ, ಬೆಳಗಾವಿ ಜಿಎಸ್ಟಿ ಆಯುಕ್ತಾಲಯ ತೆರಿಗೆದಾರರ ಅನುಸರಣೆಗೆ ಅನುಕೂಲವಾಗುವಂತೆ ವಿವಿಧ ಕ್ರಮಗಳನ್ನು ಕೈಗೊಂಡಿದೆ. ಆಯುಕ್ತರು ವ್ಯಾಪಾರ ಸಂಸ್ಥೆಗಳ ಸದಸ್ಯರೊಂದಿಗೆ ವ್ಯಾಪಕ ಸಂವಾದ ನಡೆಸಿದರು. ಅವರ ಸಮಸ್ಯೆಗಳನ್ನು ಆಲಿಸಿದರು ಮತ್ತು ಅವುಗಳನ್ನು ಪರಿಹರಿಸಲು ನಿರ್ದೇಶನಗಳನ್ನು ನೀಡಿದರು.
ಕಾರ್ಯನಿರತ ಬಂಡವಾಳದ ಸಕಾಲಿಕ ಲಭ್ಯತೆಯನ್ನು ಅನುಸರಿಸುವ ಮೂಲಕ ವ್ಯಾಪಾರ ಮತ್ತು ಉದ್ಯಮವನ್ನು ಸುಗಮಗೊಳಿಸಲು, ಅರ್ಹವಾದ ಜಿಎಸ್ಟಿ ಮರುಪಾವತಿಗಳ ಸಕಾಲಿಕ ಮಂಜೂರಾತಿಯನ್ನು ಖಾತ್ರಿಪಡಿಸಲಾಗಿದೆ ಮತ್ತು ಅದನ್ನು ಆಯುಕ್ತರು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ರಾಷ್ಟ್ರದ ‘ಆಜಾದಿ ಕಾ ಅಮೃತ್ ಮಹೋತ್ಸ’ವದ ಅಂಗವಾಗಿ,ವ್ಯಾಪಾರ ಮತ್ತು ಉದ್ಯಮಕ್ಕೆ ಸಹಾಯ ಮಾಡಲು ತೆರಿಗೆದಾರರ ಸೌಲಭ್ಯ ಕೇಂದ್ರವನ್ನು (ಖಿಚಿxಠಿಚಿಥಿeಡಿ ಈಚಿಛಿiಟiಣಚಿಣioಟಿ ಅeಟಿಣಡಿe) ಬೆಳಗಾವಿಯಲ್ಲಿ ರಚಿಸಲಾಗಿದೆ.
ಆಯುಕ್ತಾಲಯ ಕೂಡ, ತೆರಿಗೆ ವಂಚಕರ ವಿರುದ್ಧ ಉತ್ತಮವಾಗಿ ಕಾರ್ಯನಿರ್ವಹಿಸಿದೆ. 2021 ರಸೆಪ್ಟೆಂಬರ್ನಲ್ಲಿ ಇ-ವೇ ಬಿಲ್ ಇಲ್ಲದೆ ಸಾಗಿಸುತ್ತಿದ್ದ ಕಾರಣ ಏಳು ಕೋಟಿ ರೂಪಾಯಿ ಮೌಲ್ಯದ ಅಡಿಕೆಯ ಬೃಹತ್ ಸರಕುಗಳನ್ನು ಜಪ್ತಿ ಮಾಡಲಾಗಿದೆ.
ಶೀಘ್ರನಾಶವಾಗುವಂತಹ ಈ ಅಡಿಕೆಯ ಸರಕನ್ನು, ಯಶಸ್ವಿಯಾಗಿ ಹರಾಜು ಮಾಡಿ, ಜಿಎಸ್ಟಿ ಮೊತ್ತವನ್ನು ವಸೂಲಿ ಮಾಡಲಾಗಿದೆ. ಬೇಹುಗಾರಿಕೆ ಅಧಿಕಾರಿಗಳು ಕೂಡ, ರೂ.ಮೂರುಕೋಟಿ ನಗದು ಮತ್ತು ರೂ.503 ಕೋಟಿ ಹೂಡುವಳಿ ತೆರಿಗೆ ಜಮೆ ಯಲ್ಲಿ, ಈ ಹಣಕಾಸು ವರ್ಷದಲ್ಲಿ 101ಸಂಖ್ಯೆಯ ಅಪರಾಧ ಪ್ರಕರಣಗಳನ್ನು ದಾಖಲೆಮಾಡುವ ಮೂಲಕ/ಪತ್ತೆ ಮಾಡಲಾಗಿ ಜಿಎಸ್ಟಿ ವಸೂಲಿಮಾಡಿದ್ದಾರೆ.
ಬೇಹುಗಾರಿಕೆ ತಂಡದಿಂದಲೂ.549 ಕೋಟಿ(ಖs.549 ಅಡಿoಡಿes) ಬೇಹುಗಾರಿಕೆ ಮತ್ತು ಮರುಪಡೆಯುವಿಕೆ ಪ್ರಕ್ರಿಯೆಯು ನಡೆಯುತ್ತಿದೆ. ತೆರಿಗೆ ವಂಚಕರ ವಿರುದ್ಧ ಕ್ರಮಕೈಗೊಳ್ಳಲು ಜಿಎಸ್ಟಿ ಕಾನೂನಿನಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಎರಡೂ ಪ್ರಾಧಿಕಾರಗಳಿಗೆ ಅಧಿಕಾರ ನೀಡಲಾಗಿದೆ.
2021-22 ಆರ್ಥಿಕ ವರ್ಷವನ್ನು ಪೂರ್ಣಗೊಳಿಸಿದ ನಂತರ ತಡವಾದ ಶುಲ್ಕವನ್ನು ತಪ್ಪಿಸಲು ಸಮಯಕ್ಕೆ ಸರಿಯಾಗಿ, ಜಿಎಸ್ಟಿ ರಿಟನ್ರ್ಸ್ ಸಲ್ಲಿಸುವಂತೆ ಬೆಳಗಾವಿ ಕೇಂದ್ರ ಜಿಎಸ್ಟಿ ಆಯುಕ್ತಾಲಯದ ಆಯುಕ್ತರಾದ ಬಸವರಾಜ ನಲೆಗಾವೆ ವ್ಯಾಪಾರವೃಂದವನ್ನು ವಿನಂತಿಸಿದ್ದಾರೆ.
ಅವರು ದಾವೆಗಳನ್ನು ತಪ್ಪಿಸಲು ಅರ್ಹವಾದ ಹೂಡುವಳಿತೆರಿಗೆಜಮೆ ಅನ್ನು ಮಾತ್ರ ಪಡೆದುಕೊಳ್ಳಲು ತೆರಿಗೆದಾರರಿಗೆ ವಿನಂತಿಸಿದ್ದಾರೆ. ಕೃತಕ ಬುದ್ಧಿಮತ್ತೆ ಪ್ರೇರಿತ ದತ್ತಾಂಶ ಗಣಿಗಾರಿಕೆ ಕಾರ್ಯವಿಧಾನವು ಹೆಚ್ಚು ವಿಕಸನಗೊಂಡಿದೆ ಮತ್ತು ಇದು ಮುಂದಿನ ದಿನಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸುಸ್ತಿದಾರರ ವಿರುದ್ಧ ಕ್ರಮವನ್ನು ತೀವ್ರಗೊಳಿಸುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಈ ಕಾರ್ಯವಿಧಾನವು ಪ್ರಾಮಾಣಿಕ ತೆರಿಗೆ ಪಾವತಿದಾರರ ಪ್ರಯತ್ನಗಳನ್ನು ಅಂಗೀಕರಿಸುತ್ತದೆ. ಜಿಎಸ್ಟಿ ಸುಸ್ತಿದಾರರನ್ನು ಪತ್ತೆ ಮಾಡಲು, ಕೇಂದ್ರ ಮತ್ತು ರಾಜ್ಯ ಜಿಎಸ್ಟಿ ಅಧಿಕಾರಿಗಳ ನಡುವೆ ಹೆಚ್ಚಿನ ಸಂವಹನ ಮತ್ತು ಸಮನ್ವಯವಿದೆ ಎಂಬ ಅಂಶವನ್ನು ಅವರು ಎತ್ತಿ ತೋರಿಸಿದ್ದಾರೆ.
ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಸಂಯೋಜನೆ (COMPOSITION Scheme) ಅಥವಾ ತ್ರೈಮಾಸಿಕ ರಿಟರ್ನ್ ಫೈಲಿಂಗ್ ಮತ್ತು ತೆರಿಗೆಗಳ ಮಾಸಿಕ ಪಾವತಿ ಯೋಜನೆಯನ್ನು ಆಯ್ಕೆ ಮಾಡಿಕೊಳ್ಳುವುದನ್ನು ಅವರು ಉತ್ತೇಜಿಸಿದರು. ಅವರು ಯಾವುದೇ ಜಿಎಸ್ಟಿ ವಂಚನೆಯನ್ನು PREV@gov.in ಗೆ ವರದಿ ಮಾಡಲು ಸಾರ್ವಜನಿಕರಿಗೆ ವಿನಂತಿಸಿದ್ದಾರೆ.
ವ್ಯಾಪಾರ ಮತ್ತು ಉದ್ಯಮವನ್ನು ಮೀಸಲಾದ ವ್ಯಾಪಾರ ಸೌಲಭ್ಯ ಕೇಂದ್ರ ಅಥವಾ ಜಿಎಸ್ಟಿಸೇವಾ ಕೇಂದ್ರ ಅಥವಾ TECH@gov.in ನಲ್ಲಿ ಸಂಪರ್ಕಿಸಲು ಅಥವಾ ನೇರವಾಗಿ ಟೆಲಿಗ್ರಾಮ್ https://t.me/belagavicgst ಮೂಲಕ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಳ್ಳಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243