ದಿನದ ಸುದ್ದಿ
ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ವೃದ್ಧಿಗೆ ಶಿಕ್ಷಕ ಪರ್ವ ಚಟುವಟಿಕೆ ಸಹಕಾರಿ : ಎಸ್.ಬಸವರಾಜು
ಸುದ್ದಿದಿನ,ಚಿತ್ರದುರ್ಗ: ವಿದ್ಯಾರ್ಥಿ ಮತ್ತು ಶಿಕ್ಷಕರಲ್ಲಿ ಆತ್ಮವಿಶ್ವಾಸ, ಕ್ರಿಯಾಶೀಲತೆ ವೃದ್ಧಿಗೆ ಶಿಕ್ಷಕ ಪರ್ವ ಚಟುವಟಿಕೆಗಳು ಸಹಕಾರಿಯಾಗಿವೆ ಎಂದು ಡಯಟ್ನ ಶಿಕ್ಷಕ ಪರ್ವ ನೋಡಲ್ ಅಧಿಕಾರಿ ಎಸ್.ಬಸವರಾಜು ಹೇಳಿದರು.
ನಗರದ ಡಯಟ್ನಲ್ಲಿ ಶಿಕ್ಷಕ ಪರ್ವ-ಶಿಕ್ಷಕರ ನಾವಿನ್ಯಯುತ ಬೋಧನಾ ವಿಧಾನ ವಿಷಯ ಕುರಿತು ಜಿಲ್ಲೆಯ ಬಿ.ಆರ್.ಸಿ, ಸಿ.ಆರ್.ಪಿ ಮತ್ತು ಶಿಕ್ಷಕರಿಗೆ ಆಯೋಜಿಸಿದ್ದ ಆನ್ಲೈನ್ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಶಿಕ್ಷಣ ಮಂತ್ರಾಲಯದಿಂದ ಎನ್.ಇ.ಪಿ-2020ರ ದೃಷ್ಠಿಕೋನ ಹಾಗೂ ಉದ್ದೇಶಗಳ ಪ್ರಕಾರ ಸಮುದಾಯದ ಬಲವರ್ಧನೆಯಲ್ಲಿ ಶಿಕ್ಷಕರ ಪಾತ್ರವನ್ನು ಗುರುತಿಸಲು ಮಾದರಿ ಪಾಠ ಬೋಧನೆ, ಶಾಲಾ ವಿದ್ಯಾರ್ಥಿಯು ಒಂದು ದಿನದ ಮಟ್ಟಿಗೆ(ಸೆಪ್ಟಂಬರ್-೫) ಶಿಕ್ಷಕರಂತೆ ಕಾರ್ಯ ನಿರ್ವಹಿಸುವುದು, ಕಲಿಕಾ ಫಲಗಳ ಆಧಾರದ ಮೇಲೆ 1 ರಿಂದ 12 ನೇ ತರಗತಿವರೆಗೆ ಪ್ರಶ್ನೆ ಕೋಠಿ ರಚನೆ, ಶಿಕ್ಷಕರ ಉತ್ತಮ ಪಾಠದ ವಿಡಿಯೋ ಎಂಬ 4 ಚಟುವಟಿಕೆಗಳನ್ನು ಹಮ್ಮಿಕೊಂಡಿದ್ದು ಪ್ರಾಚಾರ್ಯರಾದ ಎಸ್.ಕೆ.ಬಿ.ಪ್ರಸಾದ್ ರವರ ಮಾರ್ಗದರ್ಶನದಲ್ಲಿ 3 ಚಟುವಟಿಕೆಗಳನ್ನು ಶಿಕ್ಷಕರು ಯಶಸ್ವಿಯಾಗಿ ನಿರ್ವಹಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.
ಶಾಲೆಯ ಶೈಕ್ಷಣಿಕ ಚಟುವಟಿಕೆಗಳ ಭಾಗೀದಾರರಲ್ಲಿ ಸಾಮೂಹಿಕ ಜವಾಬ್ದಾರಿ ಉತ್ತೇಜಿಸಿ ವಿದ್ಯಾರ್ಥಿಗಳನ್ನು ಸಮರ್ಪಕವಾಗಿ ಕ್ರಿಯಾಶೀಲ ಹಾಗೂ ಸಂತಸದಾಯಕ ಕಲಿಕಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶಿಕ್ಷಕ ಪರ್ವ ಚಟುವಟಿಕೆಗಳು ಪರಿಣಾಮಕಾರಿಯಾಗಿವೆ ಎಂದರು.
ತಾಂತ್ರಿಕ ಸಹಾಯಕ ಕೆ.ಆರ್.ಲೋಕೇಶ್ ಮಾತನಾಡಿ, ಶಿಕ್ಷಕರಲ್ಲಿ ನಾವಿನ್ಯ ಬೋಧನಾ ಶಾಸ್ತ್ರಗಳ ಅರಿವು ಮೂಡಿಸಿಕೊಳ್ಳಲು ಶಿಕ್ಷಕ ಪರ್ವ ಚಟುವಟಿಕೆ ಪೂರಕವಾಗಿದ್ದು ತರಗತಿ ಪ್ರಕ್ರಿಯೆಯಲ್ಲಿ ನಾವಿನ್ಯಯುತ ಬೋಧನೆ ಮಾಡಿರುವ ವಿಡಿಯೊವನ್ನು 5 ನಿಮಿಷದ ಉತ್ತಮ ಅಂಶಗಳನ್ನು ಒಳಗೊಂಡ ಗುಣಮಟ್ಟದ ವಿಡಿಯೋವನ್ನು 50 ಎಂ.ಬಿ ಸೈಜ್ನಲ್ಲಿ ವಿದ್ಯಾ ಅಮೃತ್ ಪೋರ್ಟ್ಲ್ನಲ್ಲಿ ಅಪ್ಲೋಡ್ ಮಾಡಬೇಕು. ಪ್ರತಿ ಬ್ಲಾಕ್ನಲ್ಲಿ ಎಲ್ಲಾ ಶಿಕ್ಷಕರು ಈ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಶಿಕ್ಷಕ ಪರ್ವ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಉಪನ್ಯಾಸಕ ಯು.ಸಿದ್ದೇಶಿ, ತಾಂತ್ರಿಕ ಸಹಾಯಕ ಆರ್.ಲಿಂಗರಾಜು ಎಲ್ಲಾ ತಾಲೂಕಿನ ಬಿ.ಆರ್.ಸಿ, ಬಿ.ಆರ್.ಪಿ, ಸಿ.ಆರ್.ಪಿ ಮತ್ತು ಶಿಕ್ಷಕರು ಭಾಗವಹಿಸಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243