ದಿನದ ಸುದ್ದಿ
ಕನ್ನಡ ಚಿತ್ರರಂಗಕ್ಕೆ ಜಾತಿ ವ್ಯವಸ್ಥೆ ಮತ್ತು ಅಸ್ಪೃಶ್ಯತೆ ಕಾಣಲಿಲ್ಲವೆ..?
- ರಘೋತ್ತಮ ಹೊ.ಬ
ಸಮಯ ಸಿಕ್ಕಾಗಲೆಲ್ಲ ನನ್ನ ಹವ್ಯಾಸ ಕನ್ನಡ ಸಿನಿಮಾ ಹಾಡುಗಳನ್ನು ಕೇಳುವುದು ಹಾಗೆ ಒಟ್ಟಿಗೆ ಗುನುಗುವುದು. ಹಿಂದೆ ಆಕಾಶವಾಣಿಯಲ್ಲಿ ಬರುತ್ತಿದ್ದ ಹಾಡುಗಳು ಈಗ ಆ್ಯಪ್ ಗಳ ಮೂಲಕ ಬರುತ್ತಿವೆ. ಒಂದು ರೀತಿಯ ಖುಷಿ ಕೊಡುತ್ತವೆ. ಆಶ್ಚರ್ಯ ಎಂದರೆ ಈ ಹಾಡುಗಳಲ್ಲೆಲ್ಲ ಎಲ್ಲಿಯೂ ಕೂಡ ಅಸ್ಪೃಶ್ಯತೆ, ಜಾತೀಯತೆ ಪ್ರಸ್ತಾಪ ಇಲ್ಲ!
ಅರೆ, ನಮ್ಮ ಕನ್ನಡ ಚಿತ್ರರಂಗ ಏನು ಅಮೆರಿಕದಲ್ಲಾ ಕೆಲಸ ಮಾಡ್ತ ಇರೋದು? ಇಲ್ಲ. ಇಲ್ಲೇ ಬೆಂಗಳೂರು, ಮೈಸೂರು, ಹಾಸನ, ಶಿವಮೊಗ್ಗ, ಬಾದಾಮಿ, ಐಹೊಳೆ… ಹೀಗೆ. ಪ್ರಶ್ನೆ ಎಂದರೆ ನಮ್ಮ ನಿರ್ದೇಶಕ ರುಗಳಿಗೆ, ಗೀತರಚನೆಕಾರರಿಗೆ, ಕತೆಗಾರರಿಗೆ, ಚಿತ್ರ ಕತೆ ಬರೆಯುವವರಿಗೆ ಅಸ್ಪೃಶ್ಯತೆಯ ಒಂದು ದೃಶ್ಯವೂ ಬೀಳಲಿಲ್ಲವೆಂದರೆ? ಸಮಾಜವನ್ನು ಮುಕ್ತವಾಗಿ ನೋಡದಷ್ಟು ಕುರುಡರೆ ಇವರು?
ಪೌರಾಣಿಕ, ಐತಿಹಾಸಿಕ, ಕೌಟುಂಬಿಕ, ಲವ್, ರೊಮಾನ್ಸ್, ಕಾಮಿಡಿ ಹೀಗೆ ಹುಡುಕಿ ಹುಡುಕಿ ಸಿನಿಮಾ ತೆಗೆದ ಇವರಿಗೆ ಅಸ್ಪೃಶ್ಯತೆ ಕಾಣಲಿಲ್ಲವಲ್ಲ? ಕಡೆ ಪಕ್ಷ ಒಂದೊಂದು ಸಣ್ಣ ದೃಶ್ಯವನ್ನಾದರೂ ಸೇರಿಸದಿರುವಷ್ಟು ನಿರ್ದಯಿಗಳೆ ಇವರು. Very bad. ಇವರೆಲ್ಲ ರಸಿಕರ ರಾಜರು, ಸಾಹಸ ಸಿಂಹಗಳು, ಕಿಂಗ್ ಗಳು, ಕ್ರೇಜಿ ಸ್ಟಾರ್ ಗಳು, ಪ್ರಣಯ ರಾಜಗಳು! ಅಬ್ಬಬ್ಬಾ! ಅದೆಂತೆಂಥ ಬಿಲ್ಡ್ ಅಪ್ ಗಳು. ಅಂದಹಾಗೆ ಶೋಷಿತ ವರ್ಗದ ನಮ್ಮ ವಿಚಾರಗಳನ್ನು ತಮ್ಮ ಸಿನಿಮಾಗಳಲ್ಲಿ ತೋರಿಸದ ಇವರುಗಳು ನಿಮ್ಮ ದುಡ್ಡು ನಮಗೆ ಬೇಡ, ನೀವು ನಮ್ಮ ಸಿನಿಮಾ ನೋಡಬೇಡಿ ಎಂದು ಹೇಳಬೇಕಿತ್ತು. ಆದರೆ?
ದುರಂತ ಎಂದರೆ ಬಾಬಾಸಾಹೇಬ್ ಅಂಬೇಡ್ಕರರ ಜೀವನ ಚರಿತ್ರೆ ತಿಳಿಯಲು ಕನ್ನಡಿಗರು ಹಿಂದಿ ಧಾರಾವಾಹಿಯೊಂದು “ಮಹಾನಾಯಕ”ದ ರೂಪದಲ್ಲಿ ಕನ್ನಡಕ್ಕೆ ಡಬ್ ಆಗಲು ಕಾಯಬೇಕಾಯಿತು! ಆ ಮಟ್ಟಿಗೆ ಕನ್ನಡ ಚಿತ್ರರಂಗ ಅಸ್ಪೃಶ್ಯತೆಯಂತಹ ಸಾಮಾಜಿಕ ಸಮಸ್ಯೆಗಳನ್ನು, ಅಂಬೇಡ್ಕರರ ಜೀವನ ಚರಿತ್ರೆಯನ್ನು ಕಡೆಗಣಿಸಿದೆ. ಅದರಲ್ಲಿ ಬೇರೆ ಸ್ಯಾಂಡಲ್ ವುಡ್ ಎಂಬ ಹೆಸರು! ಅಲ್ಲಿ ಸಮಾನತೆಯ ಗಂಧಕ್ಕೆ ಸ್ಥಳವೇ ಇಲ್ಲ. ಈ ದಿಸೆಯಲ್ಲಿ ಹೇಳುವುದಾದರೆ ತಮಿಳು ಚಿತ್ರರಂಗವೇ ಎಷ್ಟೋ ಪರವಾಗಿಲ್ಲ. ಕನ್ನಡ ಚಿತ್ರರಂಗ? ಅದರಲ್ಲೂ ಈ ಚಿತ್ರಗಳಿಗೆ ಸರ್ಕಾರದ ಧನಸಹಾಯ ಬೇರೆ! ಖಂಡಿತ, ನಾವು ಕೇಳೇ ಕೇಳುತ್ತೇವೆ. ತಪ್ಪೋ ಸರಿಯೋ. ಯಾಕೆಂದರೆ ಆ ಧನಸಹಾಯದಲ್ಲಿ ನಮ್ಮೆಲ್ಲರ ತೆರಿಗೆಯ ಪಾಲಿದೆ. ಆ ಪಾಲು ತಿನ್ನುವಾಗ ಸಮಾಜದ ಎಲ್ಲಾ ವರ್ಗಗಳ ಋಣ ತೀರಿಸಬೇಕು ಎಂಬ ಜವಾಬ್ದಾರಿ ಸಿನಿಮಾ ಪ್ರಭೃತಿಗಳಿಗೆ ಇರಬೇಕಿತ್ತು. ಇಲ್ಲದಿದ್ದರೆ ಅಂತಹ ಸಿನಿ ಮಂದಿಗಳು ಅದು ಯಾರೇ ಇರಲಿ ಅಸಮಾನತೆಯ ಬೆಂಬಲಿಗರು ಎಂದು ಮುಲಾಜಿಲ್ಲದೆ ಹೇಳಬೇಕಾಗುತ್ತದೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243