ದಿನದ ಸುದ್ದಿ
ಸ್ವಾತಂತ್ರ್ಯ ಸೇನಾನಿಗೆ ಕಟ್ಟಿದರು ಎಂಟು ಅಡಿ ಪ್ರತಿಮೆ: ಹಲುವಾಗಲು ಗ್ರಾಮದ ಯುವಕರ ಮಾದರಿ ಕಾರ್ಯ
ಸುದ್ದಿದಿನ ಡೆಸ್ಕ್: ಸ್ವಾತಂತ್ರ್ಯ ಸೇನಾನಿಗೆ ಕಟ್ಟಿದರು ಎಂಟು ಅಡಿ ಪ್ರತಿಮೆ. ಹಲುವಾಗಲು ಗ್ರಾಮದ ಯುವಕರ ಮಾದರಿ ಕಾರ್ಯ. ಗ್ರಾಮಸ್ಥರಿಂದ ಸಂಗ್ರಹಿಸಿದ್ದು ನಾಲ್ಕು ಲಕ್ಷ, ಯುವಕರು ಶ್ರಮಿಸಿದ್ದು ಹಲವು ತಿಂಗಳು, ಗೋಲ್ಡನ್ ಬಣ್ಣದಲ್ಲಿ ಝಗಮಗಿಸುತ್ತಿದೆ ಸ್ವಾತಂತ್ರ್ಯ ಸೇನಾನಿ ರಾಯಣ್ಣ ಪ್ರತಿಮೆ !
ದಾವಣಗೆರೆ ಜಿಲ್ಲೆಯ ಹಲುವಾಗಲು ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಂಗೊಳ್ಳಿ ರಾಯಣ್ಣ ಅವರ ಎಂಟುವರೆ ಅಡಿ ಎತ್ತರದ ಪುತ್ಥಳಿ ನಿರ್ಮಾಣಗೊಂಡಿದೆ. ಸರ್ಕಾರದ ಅನುದಾನ ಬಯಸದೇ ಯುವಕರ ತಂಡವೊಂದು ಪ್ರತಿಮೆ ನಿರ್ಮಾಣಕ್ಕೆ ಹಲವು ತಿಂಗಳು ಶ್ರಮಿಸಿದೆ.
ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಪದಾಧಿಕಾರಿಗಳು ಪ್ರತಿಮೆ ನಿರ್ಮಾಣಕ್ಕಾಗಿ 4 ಲಕ್ಷ ರೂ. ದೇಣಿಗೆ ಸಂಗ್ರಹಿಸಿದ್ದರು. 2017ರ ಆಗಸ್ಟ್ನಲ್ಲಿ ಆರಂಭವಾಗಿದ್ದ ಕಾಮಗಾರಿ ಒಂದು ವರ್ಷದಲ್ಲಿ ಪೂರ್ಣಗೊಂಡಿದೆ.
ಸದ್ಯ ಆ.19ರಂದು ಪ್ರತಿಮೆ ಲೋಕಾರ್ಪಣೆಗೊಳ್ಳಲಿದೆ. ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಶಾಖಾಮಠದ ಶ್ರೀ ಈಶ್ವರನಾಂದಪುರಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಭಾನುವಾರ ನಡೆಯುವ ಸಮಾರಂಭದಲ್ಲಿ ಪ್ರತಿಮೆಯನ್ನು ಶಾಸಕ ಜಿ.ಕರುಣಾಕರ ರೆಡ್ಡಿ ಉದ್ಘಾಟಿಸುವರು. ಯುವಕರ ಈ ಸಮಾಜಮುಖಿ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಟರಾದ ದುನಿಯಾ ವಿಜಯ್, ಯಶ್, ಲೋಸ್ ಮಾದ ಯೋಗಿ, ನಟಿ ಪ್ರಿಯಾಂಕ ಉಪೇಂದ್ರ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9986715401