ದಿನದ ಸುದ್ದಿ

ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ ‘ಸಾಯಿ ಖೇಲೋ ಇಂಡಿಯಾ’ ಸಂಸ್ಥೆಗೆ ಏಕೆ..? ಕೊಡಬಾರದು..?

Published

on

  • ಡಾ. ಸಣ್ಣರಾಮ
    ವಿಶ್ರಾಂತ ಪ್ರಾಧ್ಯಾಪಕರು
    ಹಿರಿಯ ವಿದ್ಯಾರ್ಥಿ. ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ

1. ಸಹ್ಯಾದ್ರಿ ಕಾಲೇಜು 1941ರಲ್ಲಿ ಶ್ರೀ ಜಯ ಚಾಮರಾಜೇಂದ್ರ ಒಡೆಯರ ಅಮೃತ ಹಸ್ತದಿಂದ ಉದ್ಘಾಟನೆಯಾಗಿ ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಸುಮಾರು 100ಎಕರೆ ಭೂಮಿಯನ್ನು ದಾನಿಗಳಿಂದ ಪಡೆದು ಕೊಡಮಾಡಲ್ಪಟ್ಟಿದೆ. ‍‍

ಹಾಗಾದರೆ ಸ್ಪೋರ್ಟ್ಸ್ ಶಿಕ್ಷಣವಲ್ಲವೇ?

ಖಂಡಿತ ಅಲ್ಲ. ಎಲ್ಲ ಕಾಲೇಜುಗಳಲ್ಲಿ NCC, NSS, ಹಾಗೆಯೇ ಸ್ಪೋರ್ಟ್ಸ್ ಕೂಡ ಒಂದು ಭಾಗ. ಅದೇ ಮುಖ್ಯವಲ್ಲ.
ಸಾಹಿ ಖೇಲೋ ಇಂಡಿಯಾದವರು ಅಂತರರಾಷ್ಟ್ರ ಮಟ್ಟದ ತರಬೇತಿ ಕೊಡುತ್ತಾರೆ. ಆ ಮಟ್ಟದ ಶಿಕ್ಷಣ ಮತ್ತು ತರಬೇತಿ ಕೊಡುವುದಕ್ಕೆ ವಿಶ್ವವಿದ್ಯಾನಿಲಯದಲ್ಲಿ Bped, Mped ಶಿಕ್ಷಣವನ್ನು ಕೊಡಲಾಗುತ್ತದೆ. ಅತ್ಯತ್ತಮ ಶಿಕ್ಷಕರು ವಿಶ್ವವಿದ್ಯಾನಿಲಯದಲ್ಲೇ ಇದ್ದಾರೆ.

2. ಸಹ್ಯಾದ್ರಿ ಕಾಲೇಜಿಗೆ ಭವ್ಯವಾದ ಪರಂಪರೆ ಇದೆ. ಯು. ಆರ್ ಅನಂತಮೂರ್ತಿ, ಜಿ.ಎಸ್. ಶಿವರುದ್ರಪ್ಪ , ಪಿ ಲಂಕೇಶ್, ಕಲಿತು ಕಲಿಸಿದ ಕಾಲೇಜು. ಕುವೆಂಪು ಅವರಿಂದ ನಾಮಂಕಿತ ಪಡೆದ ಕಾಲೇಜು. ಅಲ್ಲದೆ ಹಲವಾರು ಐ ಎ ಎಸ್, ಐ ಪಿ ಎಸ್, ಅಧ್ಯಾಪಕರು, ಪ್ರಾಧ್ಯಾಪಕರನ್ನು ರಾಜ್ಯಕ್ಕೆ ರಾಷ್ಟ್ರಕ್ಕೆ ಕೊಟ್ಟ ಕಾಲೇಜು.

3. ಡಿಮ್ಡ ವಿಶ್ವವಿದ್ಯಾನಿಲಯವಾಗುವ ಎಲ್ಲ ಅರ್ಹತೆಯನ್ನು ಹೊಂದಿದೆ. ಹಾಗಾದರೆ ಹಲವಾರು ಸ್ವತಂತ್ರ ವಿಭಾಗಗಳು ಸ್ಥಾಪಿಸಬೇಕಾಗುತ್ತದೆ. ಆಗ ಹಾಲಿ ಇರುವ ಜಾಗ ಸಾಲದಾಗುತ್ತದೆ.

4. ರಾಷ್ಟ್ರ ಮಟ್ಟದ ಸಂಶೋಧನಾ ಕೇಂದ್ರಗಳು, ವೈಜ್ಞಾನಿಕ ಕೇಂದ್ರಗಳು ಸ್ಥಾಪನೆಯಾಗಬಹುದು.

5. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಕಲಿಕೆಯ ಜ್ಞಾನಗಂಗೋತ್ರಿಯಾಗಿದೆ. ಹಾಲಿ 6500 ವಿದ್ಯಾರ್ಥಿಗಳು ಕಲಿಯುತ್ತಿದ್ದು ಇಲ್ಲಿಯ ಪರಿಸರವೇ ವಿದ್ಯಾರ್ಥಿಗಳಿಗೆ ಆಕರ್ಷಣೀಯವಾಗಿದೆ.

6. ತರಬೇತಿ ನಡೆಯುವುದು 4 ತಿಂಗಳು ಮಾತ್ರ ಉಳಿದಂತೆ ಕಾಲೇಜಿಗೆ ಉಪಯುಕ್ತ

ಸೆಮಿಸ್ಟರ್ ವ್ಯವಸ್ಥೆಯಲ್ಲಿ ಕಾಲೇಜು ನಡೆಯುವುದು ನಾಲ್ಕು ತಿಂಗಳು ಉಳಿದಂತೆ ಎರಡು ತಿಂಗಳು ಪರೀಕ್ಷೆ ಇರುತ್ತದೆ. ವಿದ್ಯಾರ್ಥಿಗಳ ಬಿಡುವು ಸಿಗುವುದೇ ಎರಡು ತಿಂಗಳು ಆದರೆ ಅದೇ ಸಂದರ್ಭದಲ್ಲಿ ಅಂತರಾಷ್ಟ್ರಮಟ್ಟಕ್ಕೆ ತರಬೇತಿ ನಡೆದರೆ ಕಾಲೇಜಿನವರೆಗೆ ಅವಕಾಶ ಸಿಗುವುದು ಕನಸಿನ ಮಾತು.

7. ಸದ್ಯ ಕ್ರೀಡಾ ಹಬ್ ನಲ್ಲಿ ಕೇವಲ 14 ಕ್ರೀಡೆಗಳು ಮಾತ್ರ ತರಬೇತಿ

ಹೌದು ಮುಂದೆ ಇನ್ನೂ ಹೆಚ್ಚಿನ ಕ್ರೀಡೆಗಳಿಗೆ ತರಬೇತಿ ನಡೆಯಬಹುದು. ಆಗ ಕ್ರೀಡೆಗಾಗಿ ವಿಸ್ತರಿಸಬೇಕಾದ ಸಂದರ್ಭ ಬಂದೇ ಬರುತ್ತದೆ. ಆಗ ಎತ್ತಂಗಡಿಯಾಗುವುದು ಸಹ್ಯಾದ್ರಿ ಕಾಲೇಜು.

8. ಮ್ಯಾಚ್ ಫ್ಯಾಕ್ಟರಿಯ ಎಂಟು ಎಕರೆ ಜಾಗ ಕಾಲೇಜಿಗೆ ಕೊಟ್ಟು ಅಲ್ಲಿಗೆ ವಿದ್ಯಾರ್ಥಿ ಮತ್ತು ಅಧ್ಯಾಪಕರು ಹೋಗಿಬರಲು ಮೇಲ್ಸೇತುವೆ ನಿರ್ಮಾಣ ಮಾಡಿ ಕೊಡಲಾಗುವುದು.ಇದು ಸಹ ಕನಸಿನ ಮಾತು ಆ ಜಾಗ ಕೋರ್ಟಿನಲ್ಲಿದೆ. ಅರಣ್ಯ ಇಲಾಖೆಯ ಹಕ್ಕಿನಲ್ಲಿದೆ. ಇದನ್ನು ಬಿಡಿಸಿಕೊಡುವುದು ಕಷ್ಟಕರವಾದ ಮಾತು. ಅಲ್ಲದೆ ಸೇತುವೆ ಮೇಲೆ ಹತ್ತಿ  ಇಳಿಯಲಾಗದ ಅಧ್ಯಾಪಕರು, ವಿದ್ಯಾರ್ಥಿಗಳು ವಾಹನದಟ್ಟಣೆಯಲ್ಲಿ ರಸ್ತೆ ದಾಟುವಾಗ ಅಪಘಾತಗಳು ಸಂಭವಿಸುತ್ತದೆ.

ಇಂತಹ ನೂರಾರು ಕಾರಣಗಳನ್ನು ಕೊಡಬಹುದು. ‘‘ಸಾಯಿ  ಖೇಲೊ ಇಂಡಿಯಾ ಹಬ್ ’’ ಸ್ಥಾಪನೆಗೆ ನಾವುಗಳು ವಿರೋಧಿಗಳಲ್ಲ. ಅದು ಪ್ರತ್ಯೇಕ ಸ್ಥಳದಲ್ಲಿ ತಲೆಯೆತ್ತಿ ಶಿವಮೊಗ್ಗದಲ್ಲಿ ವಿಜೃಂಭಿಸಬೇಕು. ಸಹ್ಯಾದ್ರಿ ಕಾಲೇಜಿನ ಕ್ಯಾಂಪಸ್ಸಿನ ಉಸಿರುಗಟ್ಟಿದ ಸ್ಥಳದಲ್ಲಿ ಅಲ್ಲ.  ಜಿಲ್ಲಾಡಳಿತ, ವಿಶ್ವವಿದ್ಯಾನಿಲಯ ಆಡಳಿತ, ಮಾನ್ಯ ಸಂಸದರು ಈ ನಿಟ್ಟಿನಲ್ಲಿ ಯೋಚಿಸಬೇಕೆಂದು ವಿನಂತಿ.

ಸುದ್ದಿದಿನ.ಕಾಂ| ವಾಟ್ಸಾಪ್ | 9980346243

Trending

Exit mobile version