ದಿನದ ಸುದ್ದಿ

ಕೋಲಾರ | ‘ಚಿಂತಕ ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ’ ಎಸ್ಎಫ್ಐ ನಿಂದ ಪ್ರತಿಭಟನೆ

Published

on

ಸುದ್ದಿದಿನ,ಕೋಲಾರ : ಮಾನವ ಹಕ್ಕುಗಳ ಹೋರಾಟಗಾರ,ಚಿಂತಕ ಹಾಗೂ ಅಂಬೇಡ್ಕರ್ ಮೊಮ್ಮಗ ಆನಂದ್ ತೇಲ್ತುಂಬ್ಡೆ ಬಂಧನ ಖಂಡಿಸಿ ಇಂದು ಕೋಲಾರ ನಗರದಲ್ಲಿ ಹೋರಾಟ ನಡೆಸಲಾಯಿತು.

ಕಾಲೇಜು ವೃತ್ತದಲ್ಲಿ ರಸ್ತೆ ತಡೆ ನಡೆಸಿ ಅಲ್ಲಿಂದ ‌ತಾಲ್ಲೂಕು ಕಛೇರಿ ವರೆಗೂ ಮೆರವಣಿಗೆ ನಡೆಯಿತು.ಪ್ರತಿಭಟನೆಯನ್ನುದ್ದೇಶಿಸಿ ಎಸ್ಎಫ್ಐ ಜಿಲ್ಲಾಧ್ಯಕ್ಷ ಕೆ. ವಾಸುದೇವರೆಡ್ಡಿ ಮಾತನಾಡಿ. ದೇಶದಲ್ಲಿ ಪ್ರಗತಿಪರ ಚಿಂತಕರು, ಹೋರಾಟಗಾರ ಧ್ವನಿ ಅಡಗಿಸಲು ಮೋದಿ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ಕಿಡಿಕಾರಿದರು.

ಕಳೆದ ವರ್ಷ ಜನವರಿ-01 ರಂದು ಕೋರೆಂಗಾವ್ ನಲ್ಲಿ ಕಲ್ಲು ತೂರಾಟ ನಡೆಸಿ ಹಿಂಸಾಚಾರ ಪೇಶ್ವೆದಳ, RSS ಗೂಂಡಾಗಳನ್ನು ವಿರುದ್ಧ ಕ್ರಮಕೈಗೊಳ್ಳುವ ಬದಲು ಈ ಕಿಡಿಗೇಡಿಗಳಿಗೆ ಕ್ಲೀನ್ ಚಿಟ್ ನೀಡಲಾಗಿದೆ. ಆದರೆ ಈ ಹಿಂಸಾಚಾರದ ಕೃತ್ಯ ಖಂಡಿಸಿ ಕೋರೆಂಗಾವ್ ಸಭೆಯಲ್ಲಿ ಶಾಂತಿಯುತವಾಗಿ ಭಾಗವಹಿಸಿದ್ದ ಪ್ರಗತಿಪರ ಚಿಂತಕರು, ಹೋರಾಟಗಾರರ ಮೇಲೆ ಮೊಕದ್ದಮೆ ದಾಖಲು ಮಾಡಿ ಮಹಾರಾಷ್ಟ್ರ BJP ಸರ್ಕಾರ, ಮೋದಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಲು ಹೊರಟಿದ್ದಾರೆ.

ಈ ಪ್ರಕರಣದಲ್ಲಿ ಆನಂದ್ ತೇಲ್ತುಂಬ್ಡೆ ಯವರನ್ನು ಅನಾವಶ್ಯಕವಾಗಿ ಸಿಲುಕಿಸಲು RSS, BJP ವ್ಯವಸ್ಥಿತವಾಗಿ ಸಂಚು ರೂಪಿಸಿದ್ದಾರೆ. ಆದ್ದರಿಂದ ಈ ಕೂಡಲೇ ಬೇಷರತ್ತಾಗಿ ಆನಂದ್ ತೇಲ್ತುಂಬ್ಡೆ, ವರವರ ರಾವ್ ಸೇರಿದಂತೆ ಇನ್ನಿತರ ಚಿಂತಕರು, ಸಾಹಿತಿಗಳನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು. ‌ತಾಲ್ಲೂಕು ದಂಡಾಧಿಕಾರಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ನೀಡಲಾಯಿತು.

ಪ್ರತಿಭಟನೆಯಲ್ಲಿ ಡಿಎಸ್ಎಸ್ ಮುಖಂಡ ವಕ್ಕಲೇರಿ ರಾಜಪ್ಪ, ರೈತ ಸಂಘದ ರಾಜ್ಯ ಉಪಾಧ್ಯಕ್ಷ ನಾರಾಯಣಗೌಡ, ಎಸ್ಎಫ್ಐ ರಾಜ್ಯಾಧ್ಯಕ್ಷ ವಿ.ಅಂಬರೀಶ್, ಜನಾಧೀಕಾರ ಜಿಲ್ಲಾ ಅಧ್ಯಕ್ಷರು ಹೂವರಸನಹಳ್ಳಿ ರಾಜಪ್ಪ, ರಾಮಮೂರ್ತಿ, ಸಿ.ವಿ.ನಿಗರಾಜ್, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಶಿವಪ್ಪ, ಜೆಎಂಎಸ್ ಜಿಲ್ಲಾ ಕಾರ್ಯದರ್ಶಿ ವಿಜಯ ಕುಮಾರಿ, ಎಸ್ಎಫ್ಐ ತಾಲ್ಲೂಕು ಅಧ್ಯಕ್ಷರಾದ ಗಾಯತ್ರಿ, ಕಾರ್ಯದರ್ಶಿ ಶ್ರೀಕಾಂತ್, ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ವಿಜಯ ಕೃಷ್ಣ, ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಕಾರ್ಯದರ್ಶಿ ಭೀಮರಾಜ್, ಹಾಗೂ ನೂರಾರು ಎಸ್ಎಫ್ಐ ಕಾರ್ಯಕರ್ತರು ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version