ದಿನದ ಸುದ್ದಿ
ಶಿವಮೊಗ್ಗ | ಅಲೆಮಾರಿಗಳಿಗೆ ಶಾಶ್ವತ ಸೂರು ಒದಗಿಸಲು ಹೋರಾಟ
ಸುದ್ದಿದಿನ ಡೆಸ್ಕ್ : ನಗರದ ಸಹ್ಯಾದ್ರಿ ಕಾಲೇಜು ಬಳಿಯಲ್ಲಿ ಟೆಂಟ್ಗಳಲ್ಲಿ ವಾಸ ಮಾಡುತ್ತಿರುವ ಅಲೆಮಾರಿಗಳಿಗೆ ಶಾಶ್ವತ ಸೂರು ಒದಗಿಸಲು ಸಂಘಟನಾತ್ಮಕ ಮತ್ತು ಕಾನೂನಾತ್ಮಕ ಹೋರಾಟ ನಡೆಸಲು ತೀರ್ಮಾನ ಮಾಡಲಾಯಿತು.
ಶಿವಮೊಗ್ಗ ನಿರಂತರ ಸಂಘಟನೆಯ ಸಹಯೋಗದಲ್ಲಿ ನಗರವು ಸೇರಿದಂತೆ ವಿವಿದೆಡೆಯಿಂದ ಬಂದ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು, ಚಳವಳಿಗಾರರ ಅಲೆಮಾರಿಗಳ ಟೆಂಟ್ ಬಳಿ ನಡೆಸಿದ ಸಭೆಯಲ್ಲಿ ಅಲೆಮಾರಿಗಳಿಗೆ ಸೂರು ಒದಗಿಸಲು ಸಂಬಂಧ ಸರ್ಕಾರದ ಮಟ್ಟದಲ್ಲಿ ಕೈಗೊಳ್ಳಬಹುದಾದ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಸಿದರು.
ಕಳೆದ ಹಲವು ವರ್ಷಗಳಿಂದ ನಿರಂತರ ಗೆಳೆಯರ ನೇತೃತ್ವದಲ್ಲಿ ಅಲೆಮಾರಿಗಳಿಗೆ ಸೌಲಭ್ಯ ಕೊಡಿಸಲು ನಡೆಸಿದ ವಿವರಗಳ ಕುರಿತು, ಪಡೆದ ಸೌಲಭ್ಯಗಳ ಕುರಿತ ನೂತನ ಜಿಲ್ಲಾಧಿಕಾರಿಗಳಿಗೆ ಈ ತಕ್ಷಣ ಮನವರಿಕೆ ಮಾಡಿಕೊಡವುದಲ್ಲದೆ ಅಲೆಮಾರಿಗಳಿಗೆ ಜಾತಿ ಪ್ರಮಾಣ ಕೊಡಿಸಿ ಕೋಡುವ ಬಗ್ಗೆ ಡಿಸಿಯವರೊಂದಿಗೆ ಚರ್ಚಿಸಲು ತೀರ್ಮಾನಿಸಲಾಯಿತು.
ರಾಜ್ಯ ಸರ್ಕಾರ ರಚನೆ ಮಾಡಿರುವ ರಾಜ್ಯ ಅಲೆಮಾರಿ ಕೋಶ ಮತ್ತು ಜಿಲ್ಲಾ ಅನುಷ್ಟಾನ ಸಮಿತಿಗೆ ಇಲ್ಲಿನ ಅಲೆಮಾರಿಗಳ ಸ್ಥಿತಿಗತಿಗಳ ಕುರಿತು ವರದಿ ನೀಡಲು ಮತ್ತು ವಾಸ್ತವ ಸ್ಥಿತಿ ಅಧ್ಯಯನಕ್ಕೆ ಸ್ಥಳ ಸಮೀಕ್ಷೆ ನಡೆಸಲು ರಾಜ್ಯ ಅಲೆಮಾರಿ ಕೋಶದ ಅಧಿಕಾರಿಗಳಿಗೆ ಅವರನ್ನು ಸಂಪರ್ಕಿಸಿ ಆಹ್ವಾನ ನೀಡಲು ತೀರ್ಮಾನ ಮಾಡಲಾಯಿತು.
ಅಲೆಮಾರಿ ಸಮುದಾಯದ ಸುನೀತಮ್ಮ ಮಾತನಾಡಿ ನಮಗೆ ಮನೆ ಕಟ್ಟಿಸಿಕೊಡುವುದೇ ಬೇಡ ನಮಗೆ ಟೆಂಟ್ ನಿರ್ಮಿಸಲು ಶಾಶ್ವತವಾದ ಜಾಗ ಸಿಕ್ಕರೆ ಸಾಕು. ನಮಗೆ ಈ ಅಭದ್ರತೆಯ ಜೀವನ ಸಾಕಾಗಿದೆಎಂದು ಬಂದವರಲ್ಲಿ ಮನವಿ ಮಾಡಿದ್ದು ಅಲೆಮಾರಿಗಳ ಅಸಾಹಾಯಕ ಸ್ಥಿತಿಯನ್ನು ತೆರೆದಿಟ್ಟಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಅನಿಲ್ ಕುಮಾರ್ ಹಲವು ವರ್ಷಗಳಿಂದ ನಿರಂತರ ಗೆಳೆಯರ ಅಲೆಮಾರಿಗಳ ಪರ ಹೋರಾಟ ಮಾಡಿದ್ದಾರೆ ಆದರೆ ಇಂದು ಹಲವು ಚಿರಪರಿಚಿತ ಸಂಗಮವಾಗಿದೆ, ಅದು ನಮ್ಮ ಚಳವಳಿಯ ಯಶಸ್ಸು ಎಂದು ಬಾವಿಸುವೆ. ಕಳೆದ ೨೦ವರ್ಷಗಳಲ್ಲಿ ಈ ಟೆಂಟ್ಗಳಲ್ಲಿ ಮಕ್ಕಳ ಕಳ್ಳತನವಾಗಿದೆ. ಮಕ್ಕಳು, ಬಾಣಂತಿಯರು ಮೃತರಾಗಿದ್ದಾರೆ. ಇವರಿಗೆ ನಾಗರೀಕ ಸೌಲಭ್ಯ ಸಿಗದಿರುವುದು ನಾಗರೀಕ ಸಮಾಜ ತಲೆ ತಗ್ಗಿಸಬೇಕಾದ ಸಂಗತಿ. ಆದರೆ ಜನ ಪ್ರತಿನಿಧಿಗಳು, ಅಧಿಕಾರಿಗಳು ಗಮನ ಹರಿಸದಿರುವುದು ವಿಷಾದನೀಯ. ಈಗ ನಾವೆಲ್ಲ ಸೇರಿದ್ದೇವೆ. ಇವರಿಗೆ ಕನಿಷ್ಠ ಸೂರು ಒದಗಿಸಲು ನಮ್ಮೊಂದಿಗೆ ಕೈ ಜೋಡಿಸಿ ಎಂದು ಮನವಿ ಮಾಡಿದರು.
ಶೃಂಗೇಶ್ ಮಾತನಾಡಿ ಅಧಿಕಾರಿಗಳನ್ನು ಇದೇ ಸ್ಥಳದಲ್ಲಿ ಕರೆಸಿ ಸಭೆ ನಡೆಸಿದರೆ ಅವರಿಗೆ ವಾಸ್ತವ ಚಿತ್ರಣ ಅರಿವಾಗಲಿದೆ. ಆ ನಿಟ್ಟಿನಲ್ಲಿ ಎಲ್ಲರು ಕಾರ್ಯನ್ಮುಖರಾಗೋಣ ಎಂದರು.
ರಂಗಕರ್ಮಿ ಎಂ ವಿ ಪ್ರತಿಭಾ ಮಾತನಾಡಿ ಇಲ್ಲಿನ ಜನರ ಪರಿಸ್ಥಿತಿ ನೋಡಿದರೆ ನಾಗರೀಕ ಸಮಾಜ ತಲೆ ತಗ್ಗಿಸಬೇಕು. ಎರೆಡೆರಡು ಅಟೆಚ್ಡ್ ಬಾತ್ ರೂಂ ಹೊಂದಿರುವ ಈ ಕಾಲದಲ್ಲಿ ಇಲ್ಲಿನ ಹೆಣ್ಣು ಮಕ್ಕಳ ಶೌಚಾಲಯವಿಲ್ಲ , ಋತು ಚಕ್ರದ ಸಂದರ್ಭವನ್ನು ಹೇಗೆ ನಿಭಾಯಿಸುತ್ತಾರೆ. ಬಸುರಿ ಭಾಣಂತೀಯರ ಹೇಗಿರುತ್ತಾರೆಂದು ಯೋಚಿಸಲು ಸಾಧ್ಯವಾಗದು. ಇವರಿಗೆ ನಾಗರೀಕ ಸೌಲಭ್ಯ ಸಿಗುವವರೆಗೂ ಸಂಘಟನೆ ಪ್ರಯತ್ನ ಮುಂದುವರಿಸೋಣ ಎಂದರು.
ಪ್ರಗತಿಪರ ಹೋರಾಟಗಾರ , ಪತ್ರಕರ್ತ ಹರ್ಷಕುಮಾರ್ ಕುಗ್ವೆ ಅಲೆಮಾರಿಗಳಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಕುರಿತು ಮಾಹಿತಿ ನೀಡಿ ಸಂಘಟನಾತ್ಮಕ ಹೋರಾಟ ಮಾಡಿ ಈ ಅಲೆಮಾರಿ ಜನಾಂಗದವರಿಗೆ ಮನೆ ಮತ್ತಿತರ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಬೆಕಿದೆ.ಸರ್ಕಾರ ಪ್ರತಿವರ್ಷ ಹಣ ತೆಗೆದಿರಿಸಿದರು ಕ್ರಿಯಾಯೋಜನೆ ಮಾಡಿರಲಿಲ್ಲ. ಇತ್ತೀಚೆಗೆ ಅಲೆಮಾರಿ ಕೋಶದ ಮೂಲಕ ಸೌಲಭ್ಯ ಸಿಗುತ್ತಿವೆ. ಸರ್ಕಾರಗಳೂ ಸ್ಪಂದಿಸಿವೆ. ಆದರೆ ಅಧಿಕಾರಿಗಳ ಮೇಲೆ ಒತ್ತಡ ತರಬೇಕಿದೆ. ಈ ಮೂಲಕ ಅಲೆಮಾರಿಗಳು ಒಳ್ಳೆಯ ಬದುಕು ಕಾಣಲು ನಾಗರಿಕ ಸಮಾಜ ಸಹಕರಿಸಬೇಕಿದೆ ಎಂದರು
ವೃತ್ತಿ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೈ.ಕೆ. ಸೂರ್ಯನಾರಾಯಣ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಉಪನ್ಯಾಸಕ ಗಾಜನೂರು ಕಿರಣ್, ಭಾಸ್ಕರ ಸಮುದಾಯದ ಕೆ.ಎಲ್.ರಾವ್, ಕುಮುದ, ಕವಯತ್ರಿ ಅಕ್ಷತ, ಇಂದ್ರಾನಾಯಕ್, ವಕೀಲರಾದ ಗೀತಾಬಾಯಿ, ಪೂರ್ಣಿಮ , ಮುಖಂಡರಾದ ಗೌಸ್ ಪೀರ್, ಅಜಿತ್ , ಪ್ರಕಾಶ್ ಮಂಡಘಟ್ಟ, ಧರ್ಮ ಪ್ರಭು, ಮೊದಲಾದವರಿದ್ದರು.
ಉಪನ್ಯಾಸಕ ಮಂಜುನಾಥ್ಸ್ವಾಗತಿಸಿ, ಅನನ್ಯ ಶಿವುವಂದಿಸಿ, ಸುನಿಲ್ಕುಮಾರ್ಶಿರನಲ್ಲಿ ಕಾರ್ಯಕ್ರಮ ನಿರೂಪಿಸಿದರು. ಅಲೆಮಾರಿ ಮಕ್ಕಳು ಭಾವೈಕ್ಯತಾ ಗೀತೆ ಹಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401