ದಿನದ ಸುದ್ದಿ
ಶ್ರೀರಾಮ್ ಕೋಚಿಂಗ್ ಸೆಂಟರ್ ಶಿಬಿರದ ಸಮಾರೋಪ
ಸುದ್ದಿದಿನ,ಹರಪನಹಳ್ಳಿ : ಇಲ್ಲಿನ ಮೇಗಳಪೇಟೆಯ ನವೋದಯ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಶ್ರೀರಾಮ್ ಕೋಚಿಂಗ್ ಸೆಂಟರ್ ವತಿಯಿಂದ ಪ್ರತಿಭಾವಂತ ಬಡ S. S. L. C ವಿದ್ಯಾರ್ಥಿಗಳಿಗಾಗಿ ಏಪ್ರಿಲ್ ನಿಂದ 2 ತಿಂಗಳ ಕಾಲ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಶುಭ ಕೋರಿ ಸಿಹಿ ಹಂಚುವ ಮೂಲಕ ಸಮಾರೋಪಗೊಳಿಸಲಾಯಿತು.
ಅತಿಥಿಯಾಗಿ ಭಾಗವಹಿಸಿ ವಿವಿಧ ಆಟೋಟಗಳೊಂದಿಗೆ “ಸಾಧನೆಯ ಹಾದಿ ಹಾಗೂ ವ್ಯಕ್ತಿತ್ವ ವಿಕಸನ” ವಿಷಯ ಕುರಿತು ಮಾತನಾಡಿದ ಗಂಗಾಧರ್ ಬಿ.ಎಲ್ ನಿಟ್ಟೂರ್ ಅಂತಿಮವಾಗಿ ಸಮಾರೋಪ ನುಡಿಗಳನ್ನಾಡಿದರು.
ಪ್ರತಿದಿನ ಬೆಳಗ್ಗೆ 10.30ರಿಂದ ಸಂಜೆ 4 ರವರೆಗೆ 2 ತಿಂಗಳ ಕಾಲ ನಡೆದ ಈ ಶಿಬಿರದಲ್ಲಿ ಪಠ್ಯ ಬೋಧನೆಯ ಜೊತೆ ವಾರಕ್ಕೆರೆಡು ದಿನದಂತೆ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಸಹಕಾರಿಯಾದ ಚಟುವಟಿಕೆಗಳನ್ನು ಸಹ ಆಯೋಜಿಸಿದ್ದಕ್ಕಾಗಿ ವಿದ್ಯಾರ್ಥಿಗಳ ಪೋಷಕರು ಸಂತಸ ವ್ಯಕ್ತಪಡಿಸಿ ಆಯೋಜಕರಿಗೆ ಅಭಿನಂದನೆ ಸಲ್ಲಿಸಿದರು.
ಸಂಪನ್ಮೂಲ ವ್ಯಕ್ತಿ ಇಸ್ಮಾಯಿಲ್ ಎಲಿಗಾರ್, ಬಿಸಿಎಂ ತಾಲ್ಲೂಕು ವಿಸ್ತರಣಾಧಿಕಾರಿಗಳಾದ ಬಿ.ಸಿ ಚಂದ್ರಪ್ಪ, ಶಿಬಿರದ ಸಂಚಾಲಕರಾದ ಕೆ.ಎನ್ ರೇವಣಸಿದ್ದಪ್ಪ, ಶಿಕ್ಷಕ ಕೃಷ್ಣಮೂರ್ತಿ ಹಾಗೂ ನವೋದಯ ಶಾಲಾ ಸಂಸ್ಥಾಪಕರಾದ ಪಟೇಲ್ ಬೆಟ್ಟನಗೌಡ್ರು ಸೇರಿದಂತೆ ಇತರರು ಹಾಜರಿದ್ದರು. 150ಕ್ಕೂ ಹೆಚ್ಚು ಶಿಬಿರಾರ್ಥಿಗಳು ಭಾಗವಹಿಸಿದ್ದರು.