Connect with us

ದಿನದ ಸುದ್ದಿ

ಸಿದ್ದರಾಮಯ್ಯ ಬುಲೆಟ್ ನಂತಹ ಪ್ರಶ್ನೆಗಳಿಗೆ ಉತ್ತರಿಸ್ತಾರಾ ಯಡಿಯೂರಪ್ಪ..? ಏನವು ಪ್ರಶ್ನೆಗಳು..?

Published

on


  • ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಯಡಿಯೂರಪ್ಪ ಅವರಿಗೆ ಪ್ರಶ್ನೆಗಳ ಸುರಿಮಳೆಗೈಯ್ದಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಈ ಪ್ರಶ್ನೆಗಳನ್ನು ಅವರು ಹಂಚಿಕೊಂಡಿದ್ದಾರೆ.

ಸುದ್ದಿದಿನ ಡೆಸ್ಕ್ : ಯಡಿಯೂರಪ್ಪನವರು (yeddyurappa) ಇತ್ತೀಚೆಗೆ ಜನಸಂಕಲ್ಪ ಯಾತ್ರೆಯೊಂದರಲ್ಲಿ ಮೋದಿಯವರನ್ನು ( Modi ) ಟೀಕಿಸುವವರ ವಿರುದ್ಧ ಆ ಕ್ಷಣದಲ್ಲಿಯೆ ಪ್ರತಿಭಟಿಸಿ ಎಂದು ಕಾರ್ಯಕರ್ತರಿಗೆ ಆಜ್ಞೆ ಹೊರಡಿಸುವ ಧ್ವನಿಯಲ್ಲಿ ಹೇಳಿದ್ದಾರೆ. ಮಾನ್ಯ ಯಡಿಯೂರಪ್ಪನವರಿಗೆ ಈ ಕೆಳಕಂಡ ಪ್ರಶ್ನೆಗಳನ್ನು ಜವಾಬ್ಧಾರಿಯುತ ವಿರೋಧ ಪಕ್ಷದ ನಾಯಕನಾದ ನಾನು ಕೇಳಬಯಸುತ್ತೇನೆ.

2014ಕ್ಕೂ ಮೊದಲು ಮನಮೋಹನ್ ಸಿಂಗ್ ಸರ್ಕಾರ ರೈತರ ಎಷ್ಟು ಸಾಲವನ್ನು ಮನ್ನಾ ಮಾಡಿತ್ತು? ಅಂಬಾನಿ, ಅದಾನಿ ಮುಂತಾದ ಕಾರ್ಪೊರೇಟ್ ಬಂಡವಾಳಿಗರ ಎಷ್ಟು ಸಾಲವನ್ನು ಮನ್ನಾ ಮಾಡಲಾಗಿತ್ತು? ಮೋದಿಯವರು ಅಧಿಕಾರಕ್ಕೆ ಬಂದ ಮೇಲೆ ಯಾರ್ಯಾರ ಎಷ್ಟು ಸಾಲವನ್ನು ಮನ್ನಾ ಮಾಡಿದ್ದಾರೆ?

ಮೋದಿಯವರು ಅಧಿಕಾರಕ್ಕೆ ಬರುವ ಮೊದಲು ಜನರು ಕಟ್ಟುತ್ತಿದ್ದ ತೆರಿಗೆ ಎಷ್ಟು? ಕಾರ್ಪೊರೇಟ್ ಬಂಡವಾಳಿಗರು ಪಾವತಿಸುತ್ತಿದ್ದ ತೆರಿಗೆ ಎಷ್ಟಿತ್ತು? ಈಗ ಎಷ್ಟಿದೆ? ಜನರ ಮೇಲಿನ ತೆರಿಗೆ ಹೆಚ್ಚಿಸಿ ಅದಾನಿ, ಅಂಬಾನಿ ಮುಂತಾದವರ ಮೇಲಿದ್ದ ತೆರಿಗೆಯನ್ನು ಶೇ.8 ರಷ್ಟು ಇಳಿಸಿದ್ದು ಏಕೆ?

2014 ಕ್ಕೆ ಮೊದಲು ಪೆಟ್ರೋಲ್, ಡೀಸೆಲ್‍ಗಳ ಮೇಲೆ ವಿಧಿಸುತ್ತಿದ್ದ ಸೆಸ್‍ಗಳೆಷ್ಟು? ಮೋದಿಯವರು ವಿಧಿಸುತ್ತಿರುವ ಸೆಸ್‍ಗಳ ಪ್ರಮಾಣವೆಷ್ಟು?
ಇದರಿಂದಾಗಿ ಪೆಟ್ರೋಲ್, ಡೀಸೆಲ್‍ಗಳ ಬೆಲೆ ಹಿಂದೆ ಎಷ್ಟಿತ್ತು? ಈಗ ಎಷ್ಟಿದೆ? 2014 ರ ಮೊದಲು 10 ವರ್ಷಗಳ ಕಚ್ಛಾ ತೈಲದ ಸರಾಸರಿ ಬೆಲೆಗಳು ಎಷ್ಟಿತ್ತು? 2014 ರಿಂದ ಇದುವರೆಗೆ ಕಚ್ಛಾ ತೈಲದ ಸರಾಸರಿ ಬೆಲೆಗಳು ಎಷ್ಟು?

2014 ಕ್ಕೆ ಮೊದಲು ದೇಶದಲ್ಲಿ ನಿರುದ್ಯೋಗದ ಪ್ರಮಾಣ ಎಷ್ಟಿತ್ತು? ಈಗ ಎಷ್ಟಿದೆ?
2014ಕ್ಕೆ ಮೊದಲು ರೈತರ ತಲೆಯ ಮೇಲೆ, ದೇಶದ ಜನರ ತಲೆಯ ಮೇಲೆ ಇದ್ದ ಸಾಲವೆಷ್ಟು? ಈಗ ಎಷ್ಟಿದೆ? ರೈತರ ಹಾಗೂ ಇತರೆ ಜನಸಮುದಾಯಗಳ ಆದಾಯ ಎಷ್ಟಿತ್ತು? ಈಗ ಎಷ್ಟಿದೆ?

2014ಕ್ಕಿಂತ ಮೊದಲು ಮಹಿಳಾ ಕಾರ್ಮಿಕರ ಪ್ರಮಾಣ ಶೇ.32 ಇದ್ದದ್ದು ಈಗ ಶೇ.21 ಕ್ಕೆ ಇಳಿಯಲು ಮೋದಿ ಸರ್ಕಾರದ ಮಹಿಳಾ ವಿರೋಧಿ ನೀತಿಗಳು ಕಾರಣವಲ್ಲವೆ?

2014ಕ್ಕಿಂತ ಮೊದಲು ದೇಶದ ಮೇಲೆ 53 ಲಕ್ಷ ಕೋಟಿ ಇದ್ದದ್ದು, ಈಗ 155 ಲಕ್ಷ ಕೋಟಿಗೆ ಏರಿಸಿ ದೇಶವನ್ನು ದಿವಾಳಿ ಮಾಡಿದ್ದು ಮೋದಿಯವರಲ್ಲವೆ?

2018 ಕ್ಕೆ ಮೊದಲು 2.42 ಲಕ್ಷ ಕೋಟಿ ಇದ್ದ ರಾಜ್ಯದ ಸಾಲವು ಈ ವರ್ಷದ ಕೊನೆಯ ಹೊತ್ತಿಗೆ 5.30 ರಿಂದ 5.40 ಲಕ್ಷ ಕೋಟಿಗಳವರೆಗೆ ಏರಿಕೆಯಾಗಲು ಕಾರಣವೇನು?

2014 ಕ್ಕಿಂತ ಮೊದಲು ಕೇಂದ್ರವು ಕರ್ನಾಟಕದಿಂದ ವಿವಿಧ ಬಾಬತ್ತುಗಳಿಂದ ಸಂಗ್ರಹಿಸುತ್ತಿದ್ದ ತೆರಿಗೆಗಳು, ಸೆಸ್ಸುಗಳು, ಅಡಿಷನಲ್ ಎಕ್ಸೈಜ್ ಡ್ಯೂಟಿಗಳೆಷ್ಟು? ಈಗ ಎಷ್ಟು ಸಂಗ್ರಹಿಸುತ್ತಿದ್ದಾರೆ? ಕರ್ನಾಟಕಕ್ಕೆ ಎಷ್ಟು ಹಂಚಿಕೆ ಮಾಡುತ್ತಿದ್ದಾರೆ? ಕರ್ನಾಟಕದಿಂದ ಪ್ರತಿ ವರ್ಷ 3.5 ಲಕ್ಷ ಕೋಟಿಗಳವರೆಗೆ ದೋಚಿಕೊಂಡು ನಮಗೆ ಕೇವಲ 30 ಸಾವಿರ ಕೋಟಿ ತೆರಿಗೆ ಹಂಚಿಕೆ ಮಾಡುತ್ತಿದ್ದಾರೆ. ಇದನ್ನು ನ್ಯಾಯ ಎನ್ನಬೇಕೆ? ಇದರಿಂದಾಗಿ 2018-19 ಮತ್ತು 2019-20 ಕ್ಕೆ ಹೋಲಿಸಿದರೆ ರಾಜ್ಯವು ಈ ವರ್ಷ ಕನಿಷ್ಟ 60 ಸಾವಿರ ಕೋಟಿ ಕಳೆದುಕೊಳ್ಳುತ್ತಿದೆ.

2014 ಕ್ಕಿಂತ ಮೊದಲು ಕೇಂದ್ರ ಸರ್ಕಾರ ಅಡುಗೆ ಸಿಲಿಂಡರಿನ ಮೇಲೆ ನೀಡುತ್ತಿದ್ದ ಸಬ್ಸಿಡಿಗಳೆಷ್ಟು? ಈಗ ಎಷ್ಟು ಸಬ್ಸಿಡಿಗಳನ್ನು ನೀಡಲಾಗುತ್ತಿದೆ?

1947 ರಿಂದ 2014 ರವರೆಗೆ ಕೇಂದ್ರ ಸರ್ಕಾರವು ಸ್ಥಾಪಿಸಿದ್ದ ಸಾರ್ವಜನಿಕ ವಲಯದ ಕಂಪೆನಿ/ ಸಂಸ್ಥೆ/ಉದ್ದಿಮೆಗಳೆಷ್ಟು? ಹಿಂದಿನವರು ಸ್ಥಾಪಿಸಿದವುಗಳನ್ನು ಖಾಸಗೀಕರಿಸಿದ್ದೆಷ್ಟು?

2014ರ ನಂತರ ಮೋದಿಯವರು ಒಂದು ಕಂಪೆನಿ/ ಸಂಸ್ಥೆಯನ್ನೂ ಸ್ಥಾಪಿಸದೆ ಎಲ್ಲವುಗಳನ್ನೂ ಮಾರಾಟ ಮಾಡುತ್ತಿರುವುದನ್ನು ಒಳ್ಳೆಯ ಆಡಳಿತವೆನ್ನುತ್ತಾರೊ ಅಥವಾ ದಾರಿದ್ರ್ಯಾವಸ್ಥೆ ತಲುಪಿದ ಆಡಳಿತವೆನ್ನುತ್ತಾರೊ ಎಂದು ಯಡಿಯೂರಪ್ಪನವರು ಹೇಳಬೇಕು.

ಸರ್ಕಾರಿ ಸಂಸ್ಥೆಗಳನ್ನು ಮುಚ್ಚುತ್ತಿರುವುದರಿಂದ ದಲಿತರು, ಹಿಂದುಳಿದವರಿಗೆ ಮೀಸಲಾತಿ ಅವಕಾಶಗಳು ಮುಚ್ಚಿ ಹೋಗುತ್ತಿವೆ. ಮೀಸಲಾತಿ ಹೊರಟು ಹೋಗಲಿ ಎಂದು ಭಾವಿಸಿಯೆ ಖಾಸಗೀಕರಣ ಮಾಡುತ್ತಿರುವಂತಿದೆ. ಇದನ್ನು ಮನುವಾದಿ ಸಿದ್ಧಾಂತದ ಮೌನ ಅನುಷ್ಠಾನದ ವಿಧಾನ ಎನ್ನದೆ ಬೇರೆ ದಾರಿ ಇದೆಯೆ?

2014ಕ್ಕೆ ಮೊದಲು ರಾಜ್ಯದ ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ ಅನುದಾನದ ಪಾಲೆಷ್ಟು? 2014 ರ ನಂತರ ನೀಡುತ್ತಿರುವ ಪಾಲು ಎಷ್ಟು?

2014 ಕ್ಕೆ ಮೊದಲು ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ ಸರಾಸರಿ ಜಿಡಿಪಿ ಬೆಳವಣಿಗೆ ಎಷ್ಟು? ಕಳೆದ 8 ವರ್ಷಗಳ ಸರಾಸರಿ ಬೆಳವಣಿಗೆ ಎಷ್ಟು?

2004-05 ರಿಂದ 2013-14 ರವರೆಗೆ ಕೇಂದ್ರ ಸರ್ಕಾರವು ರೈತರು ಬೆಳೆದ ಕೃಷಿ ಉತ್ಪನ್ನಗಳಿಗೆ ನೀಡಿದ ಬೆಂಬಲ ಬೆಲೆಗಳ ಪ್ರಮಾಣ ಎಷ್ಟು? 2014 ರಿಂದ 2021-22 ರವರೆಗೆ ನೀಡಿದ ಬೆಂಬಲ ಬೆಲೆಗಳೆಷ್ಟು?

2014 ಕ್ಕಿಂತ ಮೊದಲು ದೇಶದ ವ್ಯಾಪಾರದ ಕೊರತೆ ಎಷ್ಟಿತ್ತು? ಈಗ ಎಷ್ಟಿದೆ? ಮೇಕ್ ಇಂಡಿಯಾ ಎಂದವರು ಯಾರು? ಚೀನಾದಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ದುಪ್ಪಟ್ಟು ಮಾಡಿದ್ದು ಏಕೆ?

2014 ಕ್ಕಿಂತ ಮೊದಲು ರೂಪಾಯಿಯ ಮೌಲ್ಯ ಡಾಲರಿನ ಎದುರು ಸರಾಸರಿ 58 ರೂ ಇದ್ದದ್ದು ಎಷ್ಟಿತ್ತು? ಈಗ 82.5 ರೂಗಳಿಗೆ ಬೀಳಿಸಿದ್ದನ್ನು ಮೋದಿಯವರ ಜಗಮೆಚ್ಚುವ ಕೆಲಸ ಎನ್ನಬೇಕೆ?

2014 ಕ್ಕಿಂತ ಮೊದಲು ಭಾರತ ಹಸಿವು ಮತ್ತು ಬಡತನದ ಸೂಚ್ಯಂಕಗಳಲ್ಲಿ ಯಾವ ಸ್ಥಾನದಲ್ಲಿತ್ತು? ಈಗ ಯಾವ ಸ್ಥಾನದಲ್ಲಿದೆ?

2015 ಕ್ಕಿಂತ ಮೊದಲು ಭಾರತೀಯರ ಸ್ವಾತಂತ್ರ್ಯ ಸೂಚ್ಯಂಕವು 75 ನೇ ಸ್ಥಾನದಲ್ಲಿದ್ದದ್ದು 2020ರ ವೇಳೆಗೆ 111 ನೇ ಸ್ಥಾನಕ್ಕೆ ಕುಸಿಯಲು ಮೋದಿ ಕಾರಣರಲ್ಲವೆ?

2013-2019 ರವರೆಗೆ ಮೋದಿಯವರು ಎಷ್ಟು ಭರವಸೆಗಳನ್ನು ದೇಶದ ಜನರಿಗೆ ನೀಡಿದ್ದರು? ಅವುಗಳಲ್ಲಿ ಎಷ್ಟನ್ನು ಈಡೇರಿಸಿದ್ದಾರೆ?

ಜಾಗತಿಕ ಸ್ಪರ್ಧಾತ್ಮಕತೆಯಲ್ಲಿ ಭಾರತದ ಸ್ಥಾನ 2013 ರಲ್ಲಿ 40 ರ‌್ಯಾಂಕ್ ಇದ್ದದ್ದು 2021 ರ ಹೊತ್ತಿಗೆ 43 ಕ್ಕೆ ಸ್ಥಾನಕ್ಕೆ ಕುಸಿಯಲು ಕಾರಣವೇನು?

ವಿಶ್ವ ಸಂಸ್ಥೆಯ ಸಮೀಕ್ಷೆಯಲ್ಲಿ ಭಾರತೀಯರ ಸಂತೋಷದ ಸೂಚ್ಯಂಕವು 2015 ರಲ್ಲಿ 117 ನೇ ಸ್ಥಾನದಲ್ಲಿದ್ದದ್ದು 2021 ರ ಹೊತ್ತಿಗೆ 139 ಸ್ಥಾನಕ್ಕೆ ಕುಸಿದದ್ದು ಯಾಕೆ? ಇದಕ್ಕೆ ಯಾರು ಕಾರಣ?

ಜಾಗತಿಕ ಆರ್ಥಿಕ ಸ್ವಾತಂತ್ರ್ಯದಲ್ಲಿ ಭಾರತದ ಸ್ಥಾನವು 2015 ರಲ್ಲಿ 95 ಸ್ಥಾನದಲ್ಲಿದ್ದದ್ದು 2020 ರ ಹೊತ್ತಿಗೆ 105 ನೇ ಸ್ಥಾನಕ್ಕೆ ಕುಸಿದಿದ್ದು ಯಾಕೆ?

ಟ್ರಾನ್ಸಪೆರೆನ್ಸಿ ಇಂಟರ್ ನ್ಯಾಷನಲ್ ಗ್ಲೋಬಲ್ ಕರಪ್ಷನ್ ಇಂಡೆಕ್ಸ್‌ನಲ್ಲಿ 2014 ರಲ್ಲಿ 85ನೇ ಸ್ಥಾನದಲ್ಲಿದ್ದ ಭಾರತ 2020 ರ ವೇಳೆಗೆ 86 ನೆ ಸ್ಥಾನಕ್ಕೆ ಕುಸಿಯಲು ಕಾರಣವೇನು? ಇದರ ಹೊಣೆಯನ್ನು ಮೋದಿಯವರೆ ಹೊರಬೇಕಲ್ಲವೆ?

ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಜಾಗತಿಕ ಜೆಂಡರ್ ಗ್ಯಾಪ್‍ನ ಸೂಚ್ಯಂಕದಲ್ಲಿ 2014 ರಲ್ಲಿ 114 ನೇ ಸ್ಥಾನದಲ್ಲಿದ್ದ ಭಾರತ 2021 ರಲ್ಲಿ ತೀವ್ರ ಕುಸಿತ ಕಾಣಲು ಕಾರಣ ಯಾರು?

ವಿಶ್ವ ಆರ್ಥಿಕ ವೇದಿಕೆಯ ಪ್ರಕಾರ ಜಾಗತಿಕ ಆರ್ಥಿಕ ಸ್ಪರ್ಧಾತ್ಮಕತೆಯಲ್ಲಿ 2017 ರಲ್ಲಿ ಭಾರತವು 40 ನೇ ರ‌್ಯಾಂಕ್ ನಲ್ಲಿದ್ದದ್ದು 2020 ರ ವೇಳೆಗೆ 68 ನೇ ಸ್ಥಾನಕ್ಕೆ ಕುಸಿಯಲು ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಕಾರಣವಲ್ಲವೆ?

ಪಾಸ್ ಪೋರ್ಟ್ ಇಂಡೆಕ್ಸ್‍ನಲ್ಲಿ 2013ರಲ್ಲಿ 74ನೇ ಸ್ಥಾನದಲ್ಲಿದ್ದ ಭಾರತವು 2021ರ ವೇಳೆಗೆ 85 ನೇ ಸ್ಥಾನಕ್ಕೆ ಕುಸಿಯಲು ಕಾರಣ ಯಾರು? ಇದರಿಂದ ಭಾರತೀಯರ ಘನತೆ ಕಡಿಮೆಯಾಗಲು ಮೋದಿಯವರ ಆಡಳಿತ ಕಾರಣವಲ್ಲವೆ?

ವಿಶ್ವ ಆರ್ಥಿಕ ವೇದಿಕೆಯ ಬಂಡವಾಳ ಸೂಚ್ಯಂಕದಲ್ಲಿ 78ನೇ ಸ್ಥಾನದಲ್ಲಿದ್ದ ಭಾರತವು 2017 ರ ವೇಳೆಗೆ 103 ನೇ ಸ್ಥಾನಕ್ಕೆ ಕುಸಿಯಲು ಮೋದಿಯವರು ಕಾರಣರಲ್ಲವೆ?

ಬ್ಲೂಮ್‍ಬರ್ಗ್ ಸಮೀಕ್ಷೆಗಳ ಪ್ರಕಾರ ಭಾರತದ ಆರೋಗ್ಯ ಕ್ಷೇತ್ರದ ಸೂಚ್ಯಂಕವು 2015 ರಲ್ಲಿ 103 ನೇ ಸ್ಥಾನದಲ್ಲಿದ್ದದ್ದು 2020 ರ ವೇಳೆಗೆ 120 ನೇ ಸ್ಥಾನಕ್ಕೆ ಕುಸಿಯಲು ಕಾರಣ ಯಾರು?

ಸುಸ್ಥಿರ ಅಭಿವೃದ್ಧಿ ಸೂಚ್ಯಂಕದಲ್ಲಿ 2016 ರಲ್ಲಿ 110 ನೇ ಸ್ಥಾನದಲ್ಲಿದ್ದ ಭಾರತವು 2021 ರ ವೇಳೆಗೆ 120 ನೇ ಸ್ಥಾನಕ್ಕೆ, ಬಾಂಗ್ಲಾ, ನೇಪಾಳ, ಶ್ರೀ ಲಂಕಾ, ಭೂತಾನ್ ಗಳಿಗಿಂತ ಕೆಳಕ್ಕೆ ಕುಸಿದು ಬೀಳಲು ಕಾರಣ ಮೋದಿಯವರಲ್ಲವೆ?

ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ಎಡವಿ ದೇಶದ ಜನರನ್ನು ಸಾವಿನ ಸಮುದ್ರದಲ್ಲಿ ಮುಳುಗಿಸಿದವರು ಮೋದಿಯವರಲ್ಲವೆ? ಜಾಗತಿಕವಾಗಿ ಕೋವಿಡ್ಡನ್ನು ಅತಿ ಕೆಟ್ಟದಾಗಿ ನಿಭಾಯಿಸಿದ 5 ಕೆಟ್ಟ ನಾಯಕರಲ್ಲಿ ಮೋದಿಯವರೂ ಒಬ್ಬರೆಂದು ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳು ವರದಿ ಮಾಡಿದ್ದನ್ನು ದೇಶ ಮರೆತಿದೆಯೆ? ನಿಮಗೂ ಮರೆತು ಹೋಗಿದೆಯೆ ಯಡಿಯೂರಪ್ಪನವರೆ?

2014 ಕ್ಕಿಂತ ಮೊದಲು ಇದ್ದ ಸಣ್ಣ, ಮಧ್ಯಮ, ಗುಡಿ ಕೈಗಾರಿಕೆಗಳೆಷ್ಟು? ಈಗ ಎಷ್ಟಿವೆ? ಶೇ. 60 ರಷ್ಟು ಕಂಪೆನಿಗಳು ಮುಚ್ಚಲು, ಮುಚ್ಚುವ ಹಂತಕ್ಕೆ ಬರಲು ಕಾರಣ ಯಾರು?

ಮನೆಗೆ ಮಾರಿ ಪರರಿಗೆ ಉಪಕಾರಿಯಂತೆ ವರ್ತಿಸುವ ಪ್ರಧಾನಿ ನರೇಂದ್ರ ಮೋದಿವರಿಂದಾಗಿಯೆ ದೇಶ ದುರವಸ್ಥೆಗೆ ಸಿಲುಕಿಕೊಂಡಿದೆ. ಆದರೂ ಅವರನ್ನು ಟೀಕಿಸಬೇಡಿ ಎಂದು ಆಜ್ಞೆ ಹೊರಡಿಸುವ ಯಡಿಯೂರಪ್ಪನವರನ್ನು, ಬೊಮ್ಮಾಯಿಯವರನ್ನು ಹಾಗೂ ಬಿಜೆಪಿಯವರನ್ನು ಏನೆಂದು ಕರೆಯಬೇಕು?

ಸುದ್ದಿದಿನ.ಕಾಂ|ವಾಟ್ಸಾಪ್|9980346243

ದಿನದ ಸುದ್ದಿ

ಮಾನವ ಸಂಪನ್ಮೂಲ ನೀತಿ ಗುತ್ತಿಗೆ ನೌಕರರಿಗೆ ಮಾರಕ | ನೀತಿ ರದ್ದುಗೊಳಿಸಲು ಶಾಸಕ ಜೆ.ಎಸ್.ಬಸವಂತಪ್ಪಗೆ ಮನವಿ

Published

on

ಸುದ್ದಿದಿನ,ದಾವಣಗೆರೆ: ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಪ್ರಸ್ತಾವನೆ ಎನ್ಎಚ್ ಎಂ ಸಿಬ್ಬಂದಿಗಳಲ್ಲಿ ಆತಂಕ ಮೂಡಿಸಿದ್ದು, ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಮಧ್ಯಸ್ತಿಕೆ ವಹಿಸಿ ಸರಿಪಡಿಸಲು ಶಿಪಾರಸ್ಸು ಮಾಡಬೇಕು. ಈ ಬಗ್ಗೆ ಬೆಳಗಾವಿಯ ಚಳಿಗಾಲ ಅಧಿವೇಶನದಲ್ಲಿ ಪ್ರಸ್ತಾಪ ಮಾಡಬೇಕೆಂದು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಅವರಿಗೆ ಶನಿವಾರ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಆರೋಗ್ಯ ಅಭಿಯಾನ ಅಡಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಸುಮಾರು 30 ಸಾವಿರ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಈ ಸಿಬ್ಬಂದಿಗಳಿಗೆ ನೇಮಕಾತಿ ಮತ್ತು ವರ್ಗಾವಣೆ ಒಳಗೊಂಡು ಮಾನವ ಸಂಪನ್ಮೂಲ (HR Policy) ನೀತಿಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಕಳೆದ ಅ.28ರಂದು ಆದೇಶ ಹೊರಡಿಸಿ, ಅಭಿಯಾನ ನಿರ್ದೇಶಕರು, ಮುಖ್ಯ ಆಡಳಿತಾಧಿಕಾರಿಗಳು ಹಾಗೂ ಮುಖ್ಯ ಆರ್ಥಿಕ ಅಧಿಕಾರಿಗಳಿಗೆ ವರದಿ ನೀಡಲು ಸೂಚನೆ ನೀಡಿದ್ದಾರೆ.

ಈ ವಿಷಯದ ಬಗ್ಗೆ ಈಗಾಗಲೇ ಅಭಿಯಾನ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಎಲ್ಲಾ ಗುತ್ತಿಗೆ ನೌಕರರ ವೃಂದವಾರು ಸಂಘಟನೆಗಳ ಅಭಿಪ್ರಾಯ ನೀಡಲಾಗಿದೆ. ಎಲ್ಲಾ ಸಂಘಟನೆಗಳು ಈ ಒಂದು ಹೊಸ ಸಿಬ್ಬಂದಿಗಳಿಗೆ ಮಾರಕ ಇರುವಂತಹ ಮಾನವ ಸಂಪನ್ಮೂಲ ನೀತಿಯನ್ನು ಜಾರಿಗೊಳಿಸಲು ವಿರೋಧ ವ್ಯಕ್ತಪಡಿಸಿವೆ.

ಸರ್ಕಾರ ಈಗ ನೀಡುತ್ತಿರುವ ಕಡಿಮೆ ವೇತನದಲ್ಲಿ ಈ ಸಿಬ್ಬಂದಿಗಳು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ. ಈ ಸಿಬ್ಬಂದಿಗಳಿಗೆ ಖಾಯಂ ಸಿಬ್ಬಂದಿಗಳಂತೆ ಕಡ್ಡಾಯ ವರ್ಗಾವಣೆ ಮಾಡಿದರೆ ಈ ಕಡಿಮೆ ವೇತನದಲ್ಲಿ ಕುಟುಂಬ ನಿರ್ವಹಣೆ ಹೇಗೆ ಸಾಧ್ಯ? ಮೂರು ಮೂರು ತಿಂಗಳಿಗೊಮ್ಮೆ ವೇತನ ಆಗುತ್ತಿದ್ದು ಬೇರೆ ಜಿಲ್ಲೆಗೆ ಕಡ್ಡಾಯ ವರ್ಗಾವಣೆ ಮಾಡಿದ್ದರೆ ಮನೆ ಬಾಡಿಗೆ ಕಟ್ಟಲಾಗದೇ ಬೀದಿಗೆ ಬರಬೇಕಿದೆ ಎಂದು ಶಾಸಕರಿಗೆ ಮನವರಿಕೆ ಮಾಡಿದರು.

ಒಂದು ವೇಳೆ ಇಂತಹ ಕ್ರಮ ಕೈಗೊಂಡರೆ ಖಾಯಂ ಸಿಬ್ಬಂದಿಗಳಿಗೆ ನೀಡಿದಂತೆ ಎಲ್ಲಾ ಸೌಕರ್ಯ ಹಾಗೂ ಖಾಯಂ ಸೇರಿದಂತೆ ವೇತನ ಹೆಚ್ಚಳ ಮಾಡಿ, ಟಿಎ, ಡಿಎ, ಎಚ್ ಆರ್ ಎ ನೀಡಿ ಇಂತಹ ಆದೇಶ ಮಾಡಬೇಕು. ಸಿಬ್ಬಂದಿಗಳಿಗೆ ಬೆನ್ನು ತಟ್ಟಿ ಕೆಲಸ ಮಾಡಿಸಿಕೊಳ್ಳಬೇಕು.ಅದು ಬಿಟ್ಟು ಹೊಟ್ಟೆ ಮೇಲೆ ಹೊಡೆಯುವಂತಹ ಯಾವುದೇ ಆದೇಶ ಹೊರಡಿಸುವುದು ಎಷ್ಟು ಸರಿ ಎಂದು ಸಿಬ್ಬಂದಿಗಳು ಪ್ರಶ್ನೆ ಮಾಡಿದ್ದಾರೆ.

ಪ್ರಧಾನ ಕಾರ್ಯದರ್ಶಿಗಳ ಈ ಒಂದು ಪತ್ರ 30 ಸಾವಿರ ನೌಕರರಿಗೆ ಆತಂಕ ಸೃಷ್ಟಿ ಮಾಡಿದೆ. ಇದು ಈ ವರ್ಷದಲ್ಲಿ ಮೊದಲ ಸಾರಿ ಅಲ್ಲದೆ ಇದೇ ವರ್ಷ ಸಾಕಷ್ಟು ಮಾನಸಿಕ ಒತ್ತಡ ಹೆಚ್ಚಳವಾಗಿರುವ ಅನೇಕ ಆದೇಶ ಮಾಡಿದ್ದಾರೆ.

ಪ್ರತಿ ವರ್ಷ ಏಪ್ರಿಲ್ ಒಂದನೇ ತಾರೀಖು ಎಲ್ಲಾ ನೌಕರರಿಗೆ ಒಂದು ದಿವಸ ವಿರಾಮ ನೀಡಿ ಮುಂದುವರೆಸುತ್ತಿದ್ದು 2005 ರಿಂದ ಸುಮಾರು 20 ವರ್ಷಗಳವರೆಗೆ ಈ ಪದ್ಧತಿ ನಡೆದುಕೊಂಡು ಬಂದಿದೆ. ಆದರೆ ಈ ವರ್ಷ ಏಕಾಏಕಿ ಕೇವಲ 15 ದಿವಸ ವಿಸ್ತರಣೆ ನೀಡಿ, ತದನಂತರ ಒಂದು ತಿಂಗಳು ವಿಸ್ತರಣೆ ನೀಡಿ ಆಮೇಲೆ ಮೂರು ತಿಂಗಳ ವಿಸ್ತರಣೆ ನೀಡಿ ತದನಂತರ ಸಿಬ್ಬಂದಿಗಳಿಗೆ ಕರ್ತವ್ಯದಿಂದ ವಿಮುಕ್ತಿಗೊಳಿಸುವ ಆದೇಶ ನೀಡಿದ್ದು ನಮ್ಮ ಸಂಘಟನೆಯಿಂದ ಕೋರ್ಟ್ ನಲ್ಲಿ ದಾವೆ ಹೂಡಿದ್ದು ಇದೆ, ಕಳೆದ 8 ತಿಂಗಳಲ್ಲಿ ವೇತನ ಪಡೆಯಲು ಸರಿಯಾಗಿ ಅನುದಾನ ಬಿಡುಗಡೆ ಆಗದೇ ಸಿಬ್ಬಂದಿಗಳು ಪರದಾಡುವಂತಾಗಿದೆ. ಈ ಬಗ್ಗೆ ಸದನದಲ್ಲಿ ಗಮನ ಸೆಳೆದು ನಮಗೆ ನ್ಯಾಯ ಕೊಡಿಸಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಹಾಲಸ್ವಾಮಿ, ಪ್ರಧಾನ ಕಾರ್ಯದರ್ಶಿ ಡಾ.ಮಂಜುನಾಥ್, ಸುನೀಲ್, ಸುರೇಶ್, ಮಹಾಲಿಂಗಪ್ಪ, ಬಸವರಾಜ್, ದೊಡ್ಡಮನಿ, ಡಾ.ರೇಣುಕಾ, ಇನ್ನಿತರರಿದ್ದರು‌.”

  • ಪ್ರಧಾನ ಕಾರ್ಯದರ್ಶಿಗಳ ಆದೇಶ ರದ್ದುಗೊಳಿಸಲು ಎನ್ ಎಚ್ ಎಂ ಸಿಬ್ಬಂದಿಗಳು ಆಗ್ರಹ
  • ಈ ಬಗ್ಗೆ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಲು ಶಾಸಕ ಕೆ.ಎಸ್.ಬಸವಂತಪ್ಪಗೆ ಸಿಬ್ಬಂದಿಗಳ ಮನವಿ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕನ್ನಡ ಚಳವಳಿ ಸಮಿತಿಯಿಂದ ಇಮ್ಮಡಿ ಪುಲಕೇಶಿ ಜಯಂತಿ ಆಚರಣೆ

Published

on

ಸುದ್ದಿದಿನ,ದಾವಣಗೆರೆ:ನಗರದ ಜಯದೇವ ವೃತ್ತದಲ್ಲಿರುವ ಅಖಿಲ ಕರ್ನಾಟಕ ಕನ್ನಡ ಚಳವಳಿ ಕೇಂದ್ರ ಸಮಿತಿಯಿಂದ ಗುರುವಾರ (ಡಿಸೆಂಬರ್.4) ಕನ್ನಡ ಚಳವಳಿಯ ಕಚೇರಿಯ ಆವರಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಉಪಾಧ್ಯಕ್ಷರಾದ ಟಿ ಶಿವಕುಮಾರ್ ಅವರು ಇಮ್ಮಡಿ ಪುಲ್ಲಕೇಶಿ ಸಾಮ್ರಾಟ್ ರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ಜಿಲ್ಲಾಧ್ಯಕ್ಷರಾದ ಶಿವರತನ್ ಮಾತನಾಡಿ ,ನಾಡಿನ ಇತಿಹಾಸ ಪುಟಗಳಲ್ಲಿ ಕಣ್ಮರೆಯಾಗಿರುವ ಕನ್ನಡದ ಶ್ರೇಷ್ಠ ಸಾಮ್ರಾಟರಲ್ಲಿ ಇಮ್ಮಡಿ ಪುಲಿಕೇಶಿ ಅಗ್ರ ಸ್ಥಾನ ಪಡೆದಿದ್ದಾರೆ. ಇಂತಹ ಮಹಾನ್ ಸಾಮ್ರಾಟರನ್ನ ನೆನಪಿಸಿ ಮುಂದಿನ ಪೀಳಿಗೆಗೆ ಪರಿಚಯಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಾಗಿದೆ ಎಂದರು.

ಭಾರತೀಯ ನೌಕಾಪಡೆಯ ಪಿತಾಮಹ ಎಂದೇ ಕರೆಯಲಾಗುವ ಇಮ್ಮಡಿ ಪುಲಿಕೇಶಿ ಸಾಮ್ರಾಟರ ಜನ್ಮದಿನದ ಪ್ರಯುಕ್ತ ಭಾರತೀಯ ನೌಕಾಪಡೆ ದಿನಾಚರಣೆಯೆoದು ಆಚರಿಸುವುದು ಕನ್ನಡಿಗರಿಗೆ ಹೆಮ್ಮೆಯ ವಿಚಾರ.

ಬೇರೆಲ್ಲ ಜಯಂತಿಗಳನ್ನು ಆಚರಿಸುವ ಸರ್ಕಾರಗಳು ಇಮ್ಮಡಿ ಪುಲಿಕೇಶಿ ಜಯಂತಿಯನ್ನು ಕಡ್ಡಾಯವಾಗಿ ಎಲ್ಲೆಡೆ ಆಚರಿಸಲು ಆಡಳಿತಾತ್ಮಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು.

ಮಹಿಳಾ ಅಧ್ಯಕ್ಷೆ ಶುಭಮಂಗಳ ಅವರು ಸಿಹಿ ವಿತರಿಸಿದರು. ಕನ್ನಡ ಚಳವಳಿಯ ಹಿರಿಯ ಹೋರಾಟಗಾರರು , ಕನ್ನಡ ಚಳವಳಿಯ ಮಾಜಿ ಅಧ್ಯಕ್ಷರಾದ ಬಂಕಾಪುರ ಚನ್ನಬಸಪ್ಪ, ದಾ.ಹ. ಶಿವಕುಮಾರ್. ಈಶ್ವರ್. ಪ್ರಕಾಶ್. ವಾರ್ತಾ ಇಲಾಖೆ ನಿವೃತ್ತ ಬಿ.ಎಸ್. ಬಸವರಾಜ್ ಹಾಗೂ ಹಲವಾರು ಕನ್ನಡಪರ ಹೋರಾಟಗಾರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

ದಿನದ ಸುದ್ದಿ

ದಾವಣಗೆರೆ | ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಆಹ್ವಾನ

Published

on

ಸುದ್ದಿದಿನ,ದಾವಣಗೆರೆ:ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗಾಗಿ ಕ್ರಮಿಸುತ್ತಿರುವ ಅರ್ಹ ಸಂಘ, ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳನ್ನೊಳಗೊಂಡಂತೆ ಕ್ರೀಡೆ, ಕಲೆ, ಸಾಹಿತ್ಯ ಹಾಗೂ ಶಿಕ್ಷಣ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಮಹಿಳೆಯರು ಹಾಗೂ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಆತ್ಮಸ್ಥೆರ್ಯದಿಂದ ಹೋರಾಡಿ ಜೀವನೋಪಾಯದಿಂದ ಪಾರು ಮಾಡಿದಂತಹ ಮಹಿಳೆಯರಿಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಹ ಮಹಿಳೆಯರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಯನ್ನು ಉಪನಿರ್ದೇಶಕರು ಕಛೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದಾವಣಗೆರೆ ಪಡೆದು ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 24 ರೊಳಗಾಗಿ ಉಪ ನಿರ್ದೇಶಕರು, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸರ್ಕಾರಿ ಬಾಲಕರ ಬಾಲಮಂದಿರ ಕಟ್ಟಡ, 14ನೇ ಮುಖ್ಯ ರಸ್ತೆ, ಕುವೆಂಪುನಗರ, ಎಂ.ಸಿ.ಸಿ, ‘ಬಿ’ ಬ್ಲಾಕ್, ದಾವಣಗೆರೆ ದೂ.ಸಂ:08192-264056 ಸಲ್ಲಿಸಬೇಕೆಂದು ಇಲಾಖೆಯ ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Continue Reading

Trending