ದಿನದ ಸುದ್ದಿ

ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಭೂತಾನ್ ನಿಂದ ವಲಸೆ ಬಂದವರನ್ನು ಸಿ ಎ ಎ ಯಿಂದ ಹೊರಗಿಡಲು ಕಾರಣವೇನು? : ಸಿದ್ದರಾಮಯ್ಯ ಪ್ರಶ್ನೆ

Published

on

ಸುದ್ದಿದಿನ, ಬೆಂಗಳೂರು : ಸಿಎಎ ಇಂದ ದೇಶದ ಯಾವೊಬ್ಬ ಪ್ರಜೆಗೂ ತೊಂದರೆ ಇಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸುಳ್ಳು ಹೇಳಿ ಜನರ ದಾರಿ ತಪ್ಪಿಸುತ್ತಿದ್ದಾರೆ. ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ಇವು ಒಂದಕ್ಕೊಂದು ಸಂಬಂಧ ಹೊಂದಿವೆ. ಇವು ಒಂದು ಸಮುದಾಯದ ಜನರನ್ನು ಮಾತ್ರ ಗುರಿಯಾಗಿರಿಸಿಕೊಂಡು ಜಾರಿಗೆ ತರಲಾಗುತ್ತಿದೆ ಎಂದು ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಕೆಂಡಾಮಂಡಲವಾದರು.

ಗುರುವಾರ ಕೆಪಿಸಿಸಿ ಕಛೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊರದೇಶಗಳಲ್ಲಿ ದೌರ್ಜನ್ಯಕ್ಕೊಳಗಾದ ಜನರಿಗೆ ಭಾರತದ ಪೌರತ್ವ ಕೊಡುವುದಕ್ಕಾಗಲೀ, ಇಲ್ಲಿನ ಅಕ್ರಮ ವಲಸಿಗರಿಗೆ ಪೌರತ್ವ ನೀಡಿ ಅವರನ್ನು ಈ ದೇಶದ ಪ್ರಜೆಗಳಾಗಿಸುವುದಕ್ಕಾಗಲೀ‌ ನಮ್ಮ ವಿರೋಧವಿಲ್ಲ.

ಹೀಗೆ ಪೌರತ್ವ ನೀಡುವುದರಲ್ಲಿ ಮುಸ್ಲಿಂ ಸಮುದಾಯವನ್ನು ಹೊರಗಿಟ್ಟು ನಿಯಮ ಜಾರಿಗೊಳಿಸಲು ಹೊರಟಿರುವುದಕ್ಕಷ್ಟೇ ನಮ್ಮ ವಿರೋಧ. 2014 ಡಿಸೆಂಬರ್ 31ರ ಮುಂಚೆ ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಆಫ್ಘಾನಿಸ್ತಾನದಿಂದ ಬಂದ ಮುಸ್ಲಿಂ ಹೊರತಾದ ಧರ್ಮಗಳ ಜನರಿಗೆ ಪೌರತ್ವ ನೀಡುವುದೇನೋ‌ ಸರಿ, ಆದರೆ ಶ್ರೀಲಂಕಾ, ನೇಪಾಳ, ಮ್ಯಾನ್ಮಾರ್, ಭೂತಾನ್ ಈ ದೇಶಗಳಿಂದ ಭಾರತಕ್ಕೆ ವಲಸೆ ಬಂದವರನ್ನು ಈ ಕಾಯ್ದೆಯಿಂದ ಹೊರಗಿಡಲು ಕಾರಣವೇನು? ಎಂದು ಪ್ರಶ್ನಿಸಿದರು.

ಸಂವಿಧಾನ ರಚನಾ ಸಮಿತಿಯ 289 ಜನ ಸದಸ್ಯರಲ್ಲಿ ಆರ್‌ಎಸ್‌ಎಸ್ ಸಂಘಪರಿವಾರದವರು ಇದ್ದರು. ಮನುಸ್ಮೃತಿ ಆಧಾರದ ಮೇಲೆ ಸಂವಿಧಾನ ರಚನೆಯಾಗಬೇಕೆಂಬುದು ಅವರ ಆಲೋಚನೆಯಾಗಿತ್ತು, ಅಂದು ಈ ಆಲೋಚನೆಗೆ ಅವಕಾಶ ಸಿಗಲಿಲ್ಲ ಹಾಗಾಗಿ ಇಂದು ಅದನ್ನು ಕಾಯ್ದೆ ರೂಪದಲ್ಲಿ ಜಾರಿಮಾಡಲು ಹೊರಟಿದ್ದಾರೆ.

ಒಂದು ಕಾಯ್ದೆ ಸಂಸತ್ತಿನ ಬಹುಮತ ಗಳಿಸಿ ಕಾನೂನಾಗಿ ಜಾರಿಗೆ ಬರಲು ಸಿದ್ಧವಾದರೂ, ಆ ಕಾನೂನು ನ್ಯಾಯಸಮ್ಮತವಲ್ಲ ಎಂದೆನಿದರೆ ಜೈಲಿಗೆ ಹೋದರೂ ಪರವಾಗಿಲ್ಲ ಅದಕ್ಕೆ ಅಸಹಕಾರ ತೋರಿ ಎಂದು ಮಹಾತ್ಮ ಗಾಂಧಿಯವರೇ ಹೇಳಿದ್ದರು.

ರವೀಂದ್ರನಾಥ್ ಠಾಗೋರ್ ಅವರು ಭಾರತ ಸರ್ವಧರ್ಮ ಸಹಿಷ್ಣು ದೇಶವಾಗಬೇಕು, ಮುಕ್ತವಾದ ಶಿಕ್ಷಣ ಮತ್ತು ಅಭಿವ್ಯಕ್ತಿಗೆ ಅವಕಾಶಗಳಿರಬೇಕು, ಇಲ್ಲಿನ ಪ್ರತಿ ಪ್ರಜೆ ಧೈರ್ಯದಿಂದ, ಸ್ವಾಭಿಮಾನದ ಬದುಕು ಬಾಳಬೇಕು ಎಂದು ಹೇಳಿದ್ದರು, ಆದರೆ ಬಿಜೆಪಿ ಹಿಂದೂ ರಾಷ್ಟ್ರ ನಿರ್ಮಾಣದ ಹುನ್ನಾರದೊಂದಿಗೆ ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ಕಿಡಿಕಾರಿದರು.

ಕಾಯ್ದೆಯ ವಿರುದ್ಧ ದೇಶವ್ಯಾಪಿ ಜನರು ಬೀದಿಗಿಳಿದು ಪ್ರತಿಭಟಿಸುತ್ತಿದ್ದಾರೆ. ಅವರಲ್ಲಿ ಬರೀ ಮುಸ್ಲಿಂರಷ್ಟೇ ಅಲ್ಲ, ವಿದ್ಯಾರ್ಥಿಗಳು, ಕಾರ್ಮಿಕರು, ಪ್ರಗತಿಪರರು, ಮಹಿಳೆಯರು ಹೀಗೆ ಎಲ್ಲ ವರ್ಗದ ಜನರು ಇದ್ದಾರೆ. ಕಾಯ್ದೆ ಜಾರಿಯಿಂದ ಮುಸ್ಲಿಂಮರಿಗೆ ಮಾತ್ರವಲ್ಲ, ಆದಿವಾಸಿಗಳು, ಬುಡಕಟ್ಟು ಜನಾಂಗದವರಿಗೂ ತೊಂದರೆ ತಪ್ಪಿದ್ದಲ್ಲ ಎಂದು ಎಚ್ಚರಿಕೆ ನೀಡಿದರು.

ಮನುಸ್ಮೃತಿಯನ್ನು ಬೆಂಬಲಿಸುತ್ತಾ,ದಲಿತರು, ಹಿಂದುಳಿದವರನ್ನು ಅಸ್ಪೃಶ್ಯರನ್ನಾಗಿ ಮಾಡಿ, ಸಮಾಜದಿಂದ ದೂರ ಇಟ್ಟು, ನಮ್ಮದು ಅಖಂಡ ಹಿಂದುತ್ವ, ‘ಸರ್ವೇ ಜನಾಃ ಸುಖಿನೋ ಭವಂತು’ ಅಂದುಬಿಟ್ರೆ ಅದನ್ನು ನಂಬುವಷ್ಟು ಜನ ಮೂರ್ಖರಲ್ಲ. ಸರ್ಕಾರ ಮೊದಲು ಈಗಿರುವ ಸಾಮಾಜಿಕ, ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸಲಿ, ಮತ್ತೆ ಉಳಿದದ್ದು ನೋಡೋಣ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version