ರಾಜಕೀಯ
ಅನರ್ಹ ಶಾಸಕರು ಜನಸಾಮಾನ್ಯರ ರಕ್ತ ಹೀರುವ ಮಾಫಿಯಾ ಗ್ಯಾಂಗ್ನವರಂತೆ, ಇಂಥವರನ್ನು ಸೋಲಿಸಿ : ಸಿದ್ದರಾಮಯ್ಯ ಮನವಿ
ಸುದ್ದಿದಿನ,ಹೊಸಪೇಟೆ : ಹೊಸಪೇಟೆಯಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಬೃಹತ್ ಸಮಾವೇಶದಲ್ಲಿ ಭಾಗವಹಿಸಿ, ನಮ್ಮ ಪಕ್ಷದ ಅಭ್ಯರ್ಥಿ ವೆಂಕಟರಾವ್ ಘೋರ್ಪಡೆ ಅವರಿಗೆ ಮತ ನೀಡಿ ಆಶೀರ್ವಾದ ಮಾಡಬೇಕೆಂದು ಕ್ಷೇತ್ರದ ಮತದಾರರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನವಿ ಮಾಡಿದರು.
ಹಿಂದೆ ಆನಂದ್ ಸಿಂಗ್ ನನ್ನ ಬಳಿ ಕಾಂಗ್ರೆಸ್ ಟಿಕೆಟ್ ಕೇಳಿದಾಗ ಏನಪ್ಪಾ ನಿನ್ನ ಹಿನ್ನೆಲೆ ಸರಿಯಿಲ್ಲ, ಅಕ್ರಮ ಗಣಿಗಾರಿಕೆ ಕೇಸಲ್ಲಿ ಜೈಲಿಗೆ ಹೋಗಿ ಬಂದಿದೀಯ, ಇಷ್ಟೆಲ್ಲ ಸಮಸ್ಯೆ ಇದ್ರೆ ಹೇಗಪ್ಪ? ಅಂದೆ. ನಾನು ಇನ್ಮೇಲೆ ಯಾವ ಭ್ರಷ್ಟಾಚಾರವನ್ನೂ ಮಾಡಲ್ಲ, ಕಾಂಗ್ರೆಸ್ಗೆ ನಿಷ್ಠನಾಗಿರ್ತೀನಿ ಅಂತ ನನಗೆ ಮಾತು ಕೊಟ್ಟಿದ್ರು. ಆನಂದ್ ಸಿಂಗ್ ತನ್ನನ್ನು ಆಯ್ಕೆ ಮಾಡಿದ ಜನತೆಗೂ ಬೆಲೆ ಕೊಡದೆ ಪಕ್ಷಾಂತರ ಮಾಡಿ ಮತ್ತೆ ಚುನಾವಣೆ ಎದುರಾಗುವಂತೆ ಮಾಡಿದ್ದಾರೆ. ಯಾಕಪ್ಪ ಆನಂದ್ ಸಿಂಗ್ ನಾವೇನು ದ್ರೋಹ ಮಾಡಿದ್ವಿ ನಿಮ್ಗೆ? ಕ್ಷೇತ್ರದ ಜನತೆ ಮತ ನೀಡಿ ಗೆಲ್ಲಿಸಿದ್ದು ತಪ್ಪಾ? ಅಥವಾ ನಿಮ್ಮ ಮಾತನ್ನು ನಂಬಿ ಪಕ್ಷದ ಟಿಕೆಟ್ ಕೊಟ್ಟಿದ್ದು ತಪ್ಪಾ? ಎಂದು ಪ್ರಶ್ನಿಸಿದರು.
ಆನಂದ್ ಸಿಂಗ್ ಸೇರಿದಂತೆ 15 ಶಾಸಕರು ಪಕ್ಷಾಂತರ ಮಾಡಿರುವುದು ಸಾಬೀತಾಗಿರುವುದರಿಂದ ಸುಪ್ರೀಂ ಕೋರ್ಟ್ ಅವರನ್ನು ರಾಜಕೀಯದಲ್ಲಿ ಮುಂದುವರೆಯಲು ನಾಲಾಯಕ್ ಎಂದು ಹೇಳಿದೆ. ಈಗ ಜನತೆಯ ಸರದಿ, ಈ ಚುನಾವಣೆಯಲ್ಲಿ ಅನರ್ಹ ಶಾಸಕ ಆನಂದ್ ಸಿಂಗ್ರನ್ನು ತಿರಸ್ಕರಿಸಿ, ಶಾಶ್ವತವಾಗಿ ಮನೆಗೆ ಕಳುಹಿಸಿ, ಕೋರ್ಟ್ ತೀರ್ಪನ್ನು ಎತ್ತಿಹಿಡಿಯಬೇಕು. ಈ ಚುನಾವಣೆ ಇಲ್ಲಿನ ಮತದಾರರ ಸ್ವಾಭಿಮಾನದ ಪ್ರಶ್ನೆ. ಆನಂದ್ ಸಿಂಗ್ ಹೆಸರು ಈಗ ಅನರ್ಹ ಸಿಂಗ್ ಆಗಿದೆ. ಅವರಿಗೆ ಬಡವರ ಕಷ್ಟ ಗೊತ್ತಿಲ್ಲ. ಕ್ಷೇತ್ರದ ಜನರ ಸಮಸ್ಯೆ ಕೇಳಲು ಬಿಡುವಿಲ್ಲ. ಚುನಾವಣೆಯಲ್ಲಿ ಗೆದ್ದಾಗಿನಿಂದ ಈವರೆಗೆ ಕ್ಷೇತ್ರಕ್ಕೇ ಬಂದಿಲ್ಲ. ಇಂಥ ವ್ಯಕ್ತಿ ಬೇಕೇ? ಅಥವಾ ಸರಳ ಸಜ್ಜನ ನಾಯಕ ಘೋರ್ಪಡೆಯವರು ಬೇಕೇ ಎಂದು ಯೋಚಿಸಬೇಕಿದೆ ಎಂದರು.
ಇದೇ ಆನಂದ್ ಸಿಂಗ್, ಜನಾರ್ದನ ರೆಡ್ಡಿ, ಯಡಿಯೂರಪ್ಪ ಅವರ ವಿರುದ್ಧ ವಿಧಾನಸಭೆಯಲ್ಲಿ ತೊಡೆತಟ್ಟಿ, ಅವರಿಗೆ ಸವಾಲು ಹಾಕಿ ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ಮಾಡಿದ್ದರ ಫಲ ಬಳ್ಳಾರಿಯ ಗಣಿಕಳ್ಳರೆಲ್ಲ ಜೈಲಿಗೆ ಹೋಗಿ ಬಂದಿದ್ದರು. ಇಂಥ ಲೂಟಿಕೋರರ ಕೈಗೆ ಮತ್ತೆ ಅಧಿಕಾರ ಸಿಗಬೇಕಾ? ನಾನು ಪ್ರಚಾರಕ್ಕೆಂದು ಹೋದ ಕಡೆಗಳಲ್ಲಿ ಸರ್ಕಾರ 4 ಕೆ.ಜಿ ಅಕ್ಕಿ ಕೊಡ್ತಿದೆ, ರಾಗಿ, ಗೋಧಿ ನಿಯಮಿತವಾಗಿ ಕೊಡ್ತಿಲ್ಲ ಎಂದು ಜನ ತಮ್ಮ ಕಷ್ಟ ಹೇಳಿಕೊಳ್ತಿದ್ದಾರೆ. ‘ಈ ಕಷ್ಟ ಇನ್ನು ಕೆಲವೇ ದಿನ ಮಾತ್ರ. ಉಪಚುನಾವಣೆ ಫಲಿತಾಂಶದ ನಂತರ ನಮ್ಮ ಸರ್ಕಾರ ಬರುತ್ತೆ, ಆಗ ಮತ್ತೆ 10 ಕೆ.ಜಿ ಅಕ್ಕಿ ಕೊಡ್ತೀವಿ’ ಅಂತ ಅವರಿಗೆ ಧೈರ್ಯ ಹೇಳಿದ್ದೀನಿ. ಆಪರೇಷನ್ ಕಮಲಕ್ಕೆ ನೂರಾರು ಕೋಟಿ ಖರ್ಚು ಯಡಿಯೂರಪ್ಪ ಅವರ ಬಳಿ ಹಣವಿದೆ, ಆದ್ರೆ ಬಡಜನರ ಎರಡು ಹೊತ್ತಿನ ಊಟಕ್ಕೆ ಅಕ್ಕಿ ಕೊಡಲು ಹಣವಿಲ್ಲ. ಬಡವರ ಅನ್ನ ಕಸಿದ ಇಂಥ ಭಂಡ ಸರ್ಕಾರ ಬೇಕಾ? ಈ ಉಪಚುನಾವಣೆಯಲ್ಲಿ ಮತ ನೀಡುವ ಮುನ್ನ ಜನತೆ ಈ ವಿಚಾರ ನೆನಪು ಮಾಡಿಕೊಳ್ಳಬೇಕು. ಸ್ವಾರ್ಥ ಸೋಲಬೇಕು, ಪ್ರಜಾತಂತ್ರ ಗೆಲ್ಲಬೇಕು ಎಂಬುದು ನನ್ನ ಆಶಯ ಎಂದು ಹೇಳಿದರು.
ತನ್ನ ಸ್ವಾರ್ಥಸಾಧನೆ, ಅಕ್ರಮ ಆಸ್ತಿಯನ್ನು ರಕ್ಷಿಸಿಕೊಳ್ಳಲು ಆನಂದ್ ಸಿಂಗ್ ರಾಜಕೀಯದಲ್ಲಿ ಇದ್ದಾರೆ. ಜನಸೇವೆ ಮಾಡಲು ಅಲ್ಲ. ಇವರೆಲ್ಲ ಜನಸಾಮಾನ್ಯರ ರಕ್ತ ಹೀರುವ ಮಾಫಿಯಾ ಗ್ಯಾಂಗ್ನವರು. ಎಲ್ಲ 15 ಅನರ್ಹ ಶಾಸಕರು ಇಂಥವರೆ. ಇವರು ಗೆದ್ದರೆ ಯಾರಿಗೂ ಪ್ರಯೋಜನವಿಲ್ಲ. ಇಂಥವರನ್ನು ಸೋಲಿಸಿ ದೇಶಕ್ಕೆ ಉತ್ತಮ ಸಂದೇಶ ರವಾನಿಸಬೇಕು ಎಂದು ಕ್ಷೇತ್ರದ ಮತದಾರರಲ್ಲಿ ಕೈಮುಗಿದು ಮನವಿ ಮಾಡುತ್ತೇನೆ ಎಂದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243