ರಾಜಕೀಯ

ಇದು ‘ರೈತ ವಿರೋಧಿ‌, ಯುವಜನ ವಿರೋಧಿ’ ಬಜೆಟ್ : ಸಿದ್ದರಾಮಯ್ಯ ಟ್ವೀಟ್

Published

on

ಸುದ್ದಿದಿನ ಡೆಸ್ಕ್ : 2019-20ರ ಕೇಂದ್ರದ ಮಧ್ಯಂತರ ಬಜೆಟ್ ಸಂಪೂರ್ಣವಾಗಿ ‘ರೈತ ವಿರೋಧಿ’ ಮತ್ತು ‘ಯುವಜನ ವಿರೋಧಿ’ ಆಗಿದೆ. ತೀರಾ ಸಂಕಷ್ಟದಲ್ಲಿರುವ ಈ ಎರಡೂ ವರ್ಗಗಳಿಗೆ ಸಮಾಧಾನ ನೀಡಬಲ್ಲ ಬಲವಾದ ಯಾವ ಯೋಜನೆಗಳೂ ಬಜೆಟ್ ನಲ್ಲಿ ಇಲ್ಲ. ಎರಡೂ ವರ್ಗಕ್ಕೂ ಪ್ರಧಾನಿ ನರೇಂದ್ರ ಮೋದಿ ದ್ರೋಹ ಎಸಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮೂಲಕ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.

ಕೇಂದ್ರ ಹಣಕಾಸು ಸಚಿವರು ತಮ್ಮ ಮಧ್ಯಂತರ ಬಜೆಟ್ ನಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’; ಎಂಬ ಹೊಸ ಯೋಜನೆಯನ್ನು ಘೋಷಿಸಿದ್ದಾರೆ. ಇದಕ್ಕಾಗಿ ನಾನು 2018-19ರ ಬಜೆಟ್ ನಲ್ಲಿ ಪ್ರಕಟಿಸಿದ್ದ ರೈತ ಬೆಳಕು’’ ಯೋಜನೆಯ ಅರ್ಧ ಕಾಪಿ ಹೊಡೆದಿದ್ದಾರೆ‌ ಎಂದಿದ್ದಾರೆ.

‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’ಯ ಪ್ರಕಾರ 2 ಹೆಕ್ಟೇರ್ ಗಿಂತ ಕಡಿಮೆ ಹಿಡುವಳಿಯ ರೈತರಿಗೆ ವಾರ್ಷಿಕ ರೂ.6000 ಮೂರು ಕಂತುಗಳಲ್ಲಿ ನೀಡಲಾಗುವುದಂತೆ. ಅಂದರೆ ಪ್ರತಿ ಹೆಕ್ಟೇರ್ ಗೆ ಮೂರು ಸಾವಿರ ರೂಪಾಯಿ. (ನಮ್ಮ ಯೋಜನೆಯ ಪ್ರಕಾರ ಹೆಕ್ಟೇರ್ ಗೆ ರೂ.5000 ನೀಡಲಾಗುತ್ತದೆ)ಎಂದು ವ್ಯಂಗ್ಯವಾಡಿದ್ದಾರೆ.

ರಾಷ್ಟ್ರೀಯ ಬ್ಯಾಂಕುಗಳಲ್ಲಿ 11 ಲಕ್ಷ ಕೋಟಿ ರೂಪಾಯಿ ಕೃಷಿ ಸಾಲವನ್ನು ರೈತರು ಪಡೆದಿದ್ದಾರೆ.ಬರಗಾಲ ಮತ್ತು ಬೆಳೆಗಳ ಬೆಲೆ ಕುಸಿತದಿಂದಾಗಿ ರೈತರು ಸಂಕಷ್ಟದಲ್ಲಿದ್ದಾರೆ.
ರಾಷ್ಟ್ರೀಯ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡಬಹುದೆಂಬ ನಿರೀಕ್ಷೆ ಇತ್ತು, ಅದು ಹುಸಿಯಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ’ ಎರಡು ಹೆಕ್ಟೇರ್ ಹಿಡುವಳಿಯ ಮಿತಿ ಹೇರಿದೆ. ಎರಡು ಹೆಕ್ಟೇರ್ ನೀರಾವರಿ ಪ್ರದೇಶ ಮತ್ತು ನೀರಾವರಿ ಸೌಲಭ್ಯ ಇಲ್ಲದ ಖುಷ್ಕಿ ಪ್ರದೇಶಕ್ಕೆ ವ್ಯತ್ಯಾಸ ಇಲ್ಲವೇ? ಈ ಎರಡೂ ಹಿಡುವಳಿಗಳ ರೈತರ ಆದಾಯದಲ್ಲಿ ವ್ಯತ್ಯಾಸ ಇಲ್ಲವೇ? ಇದನ್ನು ಪರಿಗಣಿಸಲು ಸರ್ಕಾರ ಸೋತಿದೆ‌ ಎಂದು ಕಿಡಿಕಾರಿದ್ದಾರೆ.

ಶೇಕಡಾ 17.4ರ ಪ್ರಮಾಣದ ನಿರುದ್ಯೋಗ ದೇಶದ ಈಗಿನ ಜ್ವಲಂತ ಸಮಸ್ಯೆ. ಉದ್ಯೋಗ ಸೃಷ್ಟಿಗೆ ನೆರವಾಗುವಂತಹ ಯಾವ ಯೋಜನೆಗಳನ್ನು ಹಣಕಾಸು ಸಚಿವರು ಘೋಷಿಸಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಮಾಡುತ್ತೇವೆ ಎಂದು ನೀಡಿದ್ದ ಆಶ್ವಾಸನೆಯ ಬಗ್ಗೆ ಇಡೀ ಬಜೆಟ್ ನಲ್ಲಿ ಸೊಲ್ಲೆತ್ತಿಲ್ಲ. ಇದು ಯುವಜನ ವಿರೋಧಿ ಬಜೆಟ್ ಎಂದು ಟೀಕಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9986715401

Trending

Exit mobile version