ದಿನದ ಸುದ್ದಿ
ಕೌಶಲ್ಯಯುತ ಶಿಕ್ಷಣ ವೃತ್ತಿ ಭವಿಷ್ಯಕ್ಕೆ ಆಧಾರ : ಸಹಾಯಕ ಪ್ರಾಧ್ಯಾಪಕ ಎ.ಆರ್. ಸಲೀಮ್ ಮಲಿಕ್ ಕಿವಿಮಾತು
ಸುದ್ದಿದಿನ,ಹರಿಹರ:ಪ್ರಸ್ತುತ ಉನ್ನತ ಶಿಕ್ಷಣ ಪಡೆಯುತ್ತಿರುವ ಯುವಜನರು ತಮ್ಮ ಕೌಶಲ್ಯವನ್ನು ಆಧರಿಸಿದ ಶಿಕ್ಷಣದ ಕಡೆ ಆಸಕ್ತಿ ತೋರಬೇಕು. ತಂತ್ರಜ್ಞಾನ ಸಂಬಂಧಿತ ಕೌಶ್ಯಲ್ಯಗಳು ವೃತ್ತಿ ಭವಿಷ್ಯಕ್ಕೆ ಉಜ್ವಲ ಅವಕಾಶಗಳನ್ನು ಪಡೆಯಬಹುದು ಎಂದು ದಾವಣಗೆರೆಯ ಜೆ.ಟಿ ಕಾಲೇಜಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಎ.ಆರ್.ಸಲೀಮ್ ಮಲಿಕ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐ.ಕ್ಯೂ.ಎ.ಸಿ ಮತ್ತು ಪ್ರೇರಣಾ ಕೋಶದ ಸಹಯೋಗದಲ್ಲಿ ‘ಮೃದು ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ’ ಎಂಬ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ವ್ಯಕ್ತಿತ್ವ ವಿಕಸನ ಮಾಡಿಕೊಳ್ಳುವ ಮೂಲಕ ಜಾಗತಿಕ ಸಂದರ್ಭದಲ್ಲಿ ವೃತ್ತಿಪರ ವ್ಯಕ್ತಿಗಳು ಬೇರೆಯವರಿಗಿಂತ ಭಿನ್ನವಾಗಿ ತಮ್ಮನ್ನು ತಾವು ರೂಪಿಸಿಕೊಳ್ಳುವ ಅನಿವಾರ್ಯತೆ ಇದೆ ಎಂದು ಸ್ಪರ್ಧಾತ್ಮಕ ಜಗತ್ತಿನಲ್ಲಿ ವೃತ್ತಿಪರ ಬದುಕು ಕಟ್ಟಿಕೊಳ್ಳುವ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಎನ್.ರಮೇಶ್ ಅವರು ಮಾತನಾಡಿ, ವೃತ್ತಿ ಆಧಾರಿತ ಶಿಕ್ಷಣದ ಜೊತೆಗೆ ಮೃದು ಕೌಶಲ್ಯಗಳನ್ನು ಪಡೆಯಿರಿ. ಸರ್ಕಾರದ ಸೌಲಭ್ಯಗಳನ್ನು ಮತ್ತು ಶಿಕ್ಷಣ ಸಂಸ್ಥೆಗಳಲ್ಲಿನ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ವೃತ್ತಿ ಭವಿಷ್ಯವನ್ನು ತಮ್ಮದಾಗಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಐ.ಕ್ಯೂ.ಎಸ್.ಸಿ ಸಂಯೋಜಕರಾದ ಡಾ.ಅನಂತನಾಗ್ ಹೆಚ್.ಪಿ, ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಬಾಬು ಕೆ.ಎ ಅವರುಗಳು ಉಪಸ್ಥಿತರಿದ್ದು ಮಾತನಾಡಿದರು.
ವಿದ್ಯಾರ್ಥಿನಿ ಕು.ಆಶ್ಲೇಷ ಎಸ್ ಪ್ರಾರ್ಥಿಸಿದರು, ಕಾಲೇಜಿನ ಪ್ರೇರಣಾ ಕೋಶದ ಸಂಚಾಲಕರು, ಭೌತಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕರು ಆದ ಬಸವರಾಜ ಬಿ.ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಾಣಿಜ್ಯಶಾಸ್ತç ವಿಭಾಗದ ವಿದ್ಯಾರ್ಥಿ ಆಕಾಶ್ ವಂದಿಸಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243