ದಿನದ ಸುದ್ದಿ

ಅಂಚೆ ಇಲಾಖೆಯಿಂದ ವಿಶೇಷ ಚಿತ್ರಾತ್ಮಕ ಮುದ್ರೆ ಬಿಡುಗಡೆ

Published

on

ಸಾಂದರ್ಭಿಕ ಚಿತ್ರ

ಸುದ್ದಿದಿನ,ದಾವಣಗೆರೆ : ಭಾರತೀಯ ಅಂಚೆ ಇಲಾಖೆಯು ಜೂ.21 ರಂದು ವಿಶ್ವ ಯೋಗ ದಿನಾಚರಣೆ ಅಂಗವಾಗಿ ಪ್ರಧಾನ ಅಂಚೆ ಕಚೇರಿಗಳಾದ ಚಿತ್ರದುರ್ಗ ಮತ್ತು ದಾವಣಗೆರೆಯಲ್ಲಿ ಸ್ವೀಕೃತವಾಗುವ ಹಾಗೂ ಬಟವಾಡೆಯಾಗುವ ಎಲ್ಲಾ ಪತ್ರಗಳಿಗೆ ವಿಶೇಷ ಚಿತ್ರಾತ್ಮಕ ಮುದ್ರೆ ಒತ್ತಲಾಗುವುದು. ಚಿತ್ರದುರ್ಗ ಮತ್ತು ದಾವಣಗೆರೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಆಸಕ್ತ ನಾಗರೀಕರು ಇದರ ಸದುಪಯೋಗ ಪಡೆದುಕೊಳ್ಳಬಹುದು.

ಚಿತ್ರದುರ್ಗ ಮತ್ತು ದಾವಣಗೆರೆ ಪ್ರಧಾನ ಅಂಚೆ ಕಚೇರಿಯಲ್ಲಿ ಈ ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಜೂ.21 ರಂದು ಕಾಯ್ದಿರಿಸಲಾಗಿದ್ದು, ವಿಶೇಷ ಚಿತ್ರಾತ್ಮಕ ಮುದ್ರೆ ಅಂತರಾಷ್ಟ್ರೀಯ ಯೋಗ ದಿನದಂದು ಚಿತ್ರಾತ್ಮಕ ವಿನ್ಯಾಸದೊಂದಿಗೆ ಬಿಡುಗಡೆಗೊಳ್ಳಲಿದೆ. ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ವಿಶೇಷ ಚಿತ್ರಾತ್ಮಕ ಮುದ್ರೆ ರೂಪಗೊಳಿಸಲಾಗುವುದರಿಂದ ಇಂತಹ ರದ್ದತಿಗಳು ಮೌಲ್ಯಯುತ ಸಂಗ್ರಹಣೆಗಳು ಮತ್ತು ಸಾಮಾನ್ಯವಾಗಿ ಅಂಚೆ ಚೀಟಿಗಳ ಸಂಗ್ರಹದ ವಿಷಯಗಳಾಗಿವೆ.

ಇದನ್ನೂ ಓದಿ | ವಿಶೇಷ ಚೇತನ ಮಕ್ಕಳ ಶಿಕ್ಷಣಕ್ಕೆ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ 

ಇತ್ತೀಚಿನ ವರ್ಷಗಳಲ್ಲಿ ಸ್ಟಾಂಪ್ ಸಂಗ್ರಹದ ಉತ್ಸಾಹವು ಕುಸಿತ ಕಂಡಿದೆ. ಹಾಗಾಗಿ ಈ ಹವ್ಯಾಸ ಅಥವಾ ಕಲೆಯನ್ನು ಪುನರುಜ್ಜೀವನಗೊಳಿಸಲು, ಭಾರತೀಯ ಅಂಚೆ ಇಲಾಖೆಯು ಅಂಚೆ ಚೀಟಿಗಳ ಸಂಗ್ರಹವಾಗಿ ರೂ.200 ಠೇವಣಿ ಖಾತೆಯನ್ನು ತೆರೆಯುವ ಮೂಲಕ ಗೊತ್ತುಪಡಿಸಿದ ಪ್ರಧಾನ ಅಂಚೆ ಕಚೇರಿಗಳಲ್ಲಿ ಅಂಚೆ ಚೀಟಿಗಳು ಮತ್ತು ವಿಶೇಷ ಕವರ್‍ಗಳನ್ನು ಆಸಕ್ತರು ಪಡೆಯಬಹುದಾಗಿದೆ.

ಈ ವರ್ಷದ ಯೋಗ ದಿನಾಚರಣೆಯನ್ನು ಯೋಗದೊಂದಿಗೆ ಮನೆಯಲ್ಲಿರಿ ಎಂಬ ಘೋಷ ವಾಕ್ಯವನ್ನು ಪ್ರಚಾರ ಮಾಡುತ್ತಿದೆ. ದೇಶವು 2ನೇ ಅಲೆಯಿಂದ ಸಹಜ ಸ್ಥಿತಿಗೆ ಮರಳುತ್ತಿದ್ದು, 800 ಕ್ಕೂ ಹೆಚ್ಚು ಪ್ರಧಾನ ಅಂಚೆ ಕಚೇರಿಗಳಲ್ಲಿ ಜೂ.21 ರಂದು ವಿಶೇಷ ಚಿತ್ರಾತ್ಮಕ ಮುದ್ರೆಯನ್ನು ಬಿಡುಗಡೆಗೊಳಿಸುವ ಮೂಲಕ ಅಂಚೆಚೀಟಿಗಳ ಸಂಗ್ರಹ ಮಾಡುವ ಹವ್ಯಾಸವನ್ನು ಮತ್ತೆ ಹುರಿದುಂಬಿಸುವ ಕಾರ್ಯ ಮಾಡುತ್ತಿವೆ ಎಂದು ಅಂಚೆ ಅಧೀಕ್ಷಕ ಓ.ವಿರೂಪಾಕ್ಷಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version