ದಿನದ ಸುದ್ದಿ
ವಿಶೇಷ ಚೇತನ ಮಕ್ಕಳು ದೇವರ ಮಕ್ಕಳು – ವಿಧಾನ ಪರಿಷತ್ ಸದಸ್ಯ ಕೆ.ಎಸ್. ನವೀನ್
ಸುದ್ದಿದಿನ,ಚಿತ್ರದುರ್ಗ: ದೈವಿಕ ಕೊರತೆ ಹಾಗೂ ವಿಕಲಚೇತನ ಹೊಂದಿರುವ ಮಕ್ಕಳು ದೇವರ ಮಕ್ಕಳೆಂದೇ ಪರಿಗಣಿಸಲ್ಪಡುತ್ತಾರೆ. ಅಂತಹ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುವುದು ಪ್ರತಿಯೊಬ್ಬ ನಾಗರಿಕ ಹಾಗೂ ಜವಾಬ್ದಾರಿಯುತ ಸಮಾಜದ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ತಿಳಿಸಿದರು.
http://Visit : www.suddidina.com
ತಾಲ್ಲೂಕು ನಿವೃತ್ತ ನೌಕರರ ಸಂಘ ಹಾಗೂ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕೃತಿಕ ಸಂಘದವತಿಯಿಂದ ನಗರದ ಮಾಳಪ್ಪನಹಟ್ಟಿ ರಸ್ತೆಯಲ್ಲಿನ ತೀಕ್ಷ್ಣ ಅಂಧ ಮಕ್ಕಳ ಪುನಶ್ಚೇತನ ವಸತಿಯುತ ಶಾಲೆಯಲ್ಲಿ ವಿಶೇಷ ಚೇತನ ಮಕ್ಕಳಿಗೆ ಸಂಗೀತ ವಾಧೋಪಕರಣಗಳ ಕೂಡುಗೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ಸಂಗೀತ ಶಿಕ್ಷಣ ನೀಡಿ ಅವರ ಬದುಕಿಗೆ ಬೆಳಕಾಗುವ ಉದ್ದೇಶದಿಂದ ವಾದ್ಯೋಪಕರಣಗಳನ್ನು ವಿತರಿಸಲಾಗುತ್ತಿದೆ. ನೌಕರಿಯಿಂದ ನಿವೃತ್ತರಾದ ನಂತರ ಕೇವಲ ವೈಯಕ್ತಿಕ ಜೀವನಕ್ಕೆ ಸೀಮಿತವಾಗದೆ, ಸಂಘಟಿತರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವ ನಿವೃತ್ತ ನೌಕರರ ಸಂಘದ ಶ್ರಮವನ್ನು ಕೆ.ಎಸ್.ನವೀನ್ ಮುಕ್ತಕಂಠದಿಂದ ಶ್ಲಾಘಿಸಿದರು.
ಅಂಧರಾಗಿದ್ದರೂ ತಮ್ಮ ಅಸಾಧಾರಣ ಗಾಯನ ಹಾಗೂ ಸಂಗೀತ ಸಾಧನೆಯಿಂದ ಜಗತ್ತಿಗೇ ಮಾದರಿಯಾದ ಪಂಡಿತ ಪುಟ್ಟರಾಜ ಗವಾಯಿಗಳ ಉದಾಹರಣೆಯನ್ನು ನೀಡಿದ ಕಲೆ ಎಂಬುದು ಯಾರದ್ದೂ ವೈಯಕ್ತಿಕ ಸ್ವತ್ತಲ್ಲ. ಇಂದು ಮಕ್ಕಳಿಗೆ ನೀಡಲಾಗುತ್ತಿರುವ ಹಾರ್ಮೋನಿಯಂ, ತಬಲಾ ಹಾಗೂ ಕೀಬೋರ್ಡ್ಗಳಂತಹ ವಾದ್ಯೋಪಕರಣಗಳ ಮೂಲಕ ಸೂಕ್ತ ತರಬೇತಿ ನೀಡಿದರೆ, ಈ ಮಕ್ಕಳೂ ಸಹ ಭವಿಷ್ಯದಲ್ಲಿ ಉನ್ನತ ಮಟ್ಟದ ಸಂಗೀತಗಾರರಾಗಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಕೀರ್ತಿ ತರಬಲ್ಲರು ಎಂದು ವಿಶ್ವಾಸ ವ್ಯಕ್ತಪಡಿಸಿ ಈ ಮಕ್ಕಳಿಗೆ ಪ್ರತಿದಿನ ನಿಯಮಿತವಾಗಿ ಸಂಗೀತ ಶಿಕ್ಷಕರ ಮೂಲಕ 2 ರಿಂದ 3 ಗಂಟೆಗಳ ಕಾಲ ತರಬೇತಿ ನೀಡಿ, ಅವರಲ್ಲಿರುವ ಪ್ರತಿಭೆಯನ್ನು ಹೊರತರಬೇಕು ಎಂದು ಸಂಸ್ಥೆಯ ಪದಾಧಿಕಾರಿಗಳಿಗೆ ಕಿವಿಮಾತು ಹೇಳಿದರು.
ವಿಶೇಷ ಚೇತನ ಮಕ್ಕಳನ್ನು ಭಿಕ್ಷಾಟನೆ ಅಥವಾ ಸಮಾಜದ ಕೀಳರಿಮೆಯಿಂದ ದೂರವಿಟ್ಟು, ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದೇ ಇಂತಹ ಕಾರ್ಯಕ್ರಮಗಳ ಮುಖ್ಯ ಉದ್ದೇಶವಾಗಿದೆ. ತಾಲೂಕು ನಿವೃತ್ತ ನೌಕರರ ಸಂಘ ಹಾಗೂ ಪುನಶ್ಚೇತನ ಸಂಸ್ಥೆಯ ಈ ಮಾನವೀಯ ಕಳಕಳಿಯ ಕಾರ್ಯವು ಸಮಾಜಕ್ಕೆ ಮಾದರಿಯಾಗಿದೆ ಎಂದ ಅವರು ದೈವಿಕ ಕೊರತೆ ಹಾಗೂ ವಿಕಲಚೇತನ ಹೊಂದಿರುವ ಮಕ್ಕಳು ದೇವರ ಮಕ್ಕಳೆಂದೇ ಪರಿಗಣಿಸಲ್ಪಡುತ್ತಾರೆ. ಅಂತಹ ಮಕ್ಕಳಿಗೆ ಪ್ರೀತಿ, ವಾತ್ಸಲ್ಯ ನೀಡುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿ, ಸ್ವಾವಲಂಬಿ ಜೀವನ ನಡೆಸಲು ಅನುವು ಮಾಡಿಕೊಡುವುದು ಪ್ರತಿಯೊಬ್ಬ ನಾಗರಿಕ ಹಾಗೂ ಜವಾಬ್ದಾರಿಯುತ ಸಮಾಜದ ಕರ್ತವ್ಯವಾಗಿದೆ ಎಂದು ಕೆ.ಎಸ್.ನವೀನ್ ತಿಳಿಸಿದರು.
ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘ ಹಾಗೂ ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕೃತಿಕ ಸಂಘದವ ಅಧ್ಯಕ್ಷರಾದ ಬಿ.ಕೆ.ಹನುಮಂತಪ್ಪ ಮಾತನಾಡಿ, ಸಂಘದ ನಿವೃತ್ತ ನೌಕರರು ಕೇವಲ ದಿನನಿತ್ಯದ ಚಟುವಟಿಕೆಗಳಿಗೆ ಸೀಮಿತವಾಗದೆ ಇಂತಹ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವುದು ಪ್ರಶಂಸನೀಯ. ತಾಲೂಕಿನ ನಿವೃತ್ತ ನೌಕರರ ಸಂಘವು ಹಮ್ಮಿಕೊಳ್ಳುತ್ತಿರುವ ಉತ್ತಮ ಕಾರ್ಯ ಯೋಜನೆಗಳಿಗೆ ಸಾರ್ವಜನಿಕರಿಂದ ಉತ್ತಮ ಮೆಚ್ಚುಗೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿ ಈ ಹಿಂದೆ ಗೋನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿರಾಶ್ರಿತರಿಗೆ ವೈದ್ಯಕೀಯ ಕಿಟ್ಗಳನ್ನು ವಿತರಿಸಲಾಗಿತ್ತು. ಅದೇ ರೀತಿಯಲ್ಲಿ ಈ ಶಾಲೆಯ ಮಕ್ಕಳಿಗೆ ಶಾಶ್ವತವಾಗಿ ಉಪಯೋಗವಾಗಲಿ ಎಂಬ ಉದ್ದೇಶದಿಂದ ಸಂಗೀತೋಪಕರಣಗಳ ಪರಿಕರಗಳನ್ನು ವಿತರಿಸಲಾಗಿದೆ ಎಂದರು.
ವಿಶೇಷ ಚೇತನ ಮಕ್ಕಳ ಶ್ರೇಯೋಭಿವೃದ್ಧಿಗೆ ಪ್ರತಿಯೊಬ್ಬರೂ ಕೈಜೋಡಿಸಿ ಸಹಕರಿಸಬೇಕು ಪ್ರಸ್ತುತ ಸಂಸ್ಥೆಯನ್ನು ಮುನ್ನಡೆಸುತ್ತಿರುವ ಅವರ ಕುಟುಂಬದವರಿಗೆ ಸಂಘದ ವತಿಯಿಂದ ಸಂಪೂರ್ಣ ಸಹಕಾರ ಹಾಗೂ ಬೆಂಬಲ ನೀಡಲಾಗುವುದು ಎಂದು ಭರವಸೆ ನೀಡಿ ನಿವೃತ್ತ ನೌಕರರ ಸಂಘವು ಮುಂದೆಯೂ ಇಂತಹ ಹಲವಾರು ನಿಸ್ವಾರ್ಥ ಸಾಮಾಜಿಕ ಸೇವೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲಿದೆ ಎಂದು ಹನುಮಂತಪ್ಪ ತಿಳಿಸಿದರು.
ಕಾರ್ಯಕ್ರಮದಲ್ಲಿ ತೀಕ್ಷ್ಣ ಅಂಧ ಮಕ್ಕಳ ಪುನಶ್ಚೇತನ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಕೆ.ಎಸ್.ಕೌಶಲ್ಯ ಕಾರ್ಯದರ್ಶಿ ಕೆ.ಎಸ್.ಕಾರ್ತಿಕ್, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಮನರಂಜನಾ ಮತ್ತು ಸಾಂಸ್ಕೃತಿಕ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಪರಮೇಶ್ವರಪ್ಪ ಉಪಾಧ್ಯಕ್ಷರಾದ ಪಿ.ಎಸ್.ಶಿವಕುಮಾರ್, ಸಹ ಕಾರ್ಯದರ್ಶಿ ಎ.ಜಿ.ದೇವೇಂದ್ರಪ್ಪ, ಖಂಜಾಚಿ ಎಸ್.ಹಾಲಾನಾಯ್ಕ್, ನಿರ್ದೆಶಕರಾದ ಇ.ನಾಗರಾಜ್, ಟಿ.ಉಮಾಶಂಕರ್, ಚಿತ್ರದುರ್ಗ ತಾಲ್ಲೂಕು ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷರಾದ ಮಾದಯ್ಯ, ಶ್ರೀಮತಿ ಪ್ರೇಮಾರಾಜಾರಾಮ್, ಖಂಜಾಚಿ ಚಿನ್ನಪ್ಪ ಕೃಷ್ಣಮೂರ್ತಿ, ಜಿ.ವಿ.ನಾಗರಾಜ್, ಕೆ.ನಾಗರಾಜ್ ಸಲಹಾ ಸಮಿತಿ ಸದಸ್ಯರಾದ ವಿ.ಬಿ.ತಿಮ್ಮಾರೆಡ್ಡಿ, ಬಿಎಸ್.ಚಂದ್ರಶೇಖರಪ್ಪ, ಎಂ.ಶ್ರೀನಿವಾಸ್ ಮೂರ್ತಿ, ಕೆ.ರವಿಶಂಕರ್ ಭಾಗವಹಿಸಿದ್ದರು.