ದಿನದ ಸುದ್ದಿ
ಮನುಷ್ಯನಿಗೆ ಪರಿಸರ ಮುಖ್ಯ ; ಪರಿಸರಕ್ಕೆ ಮನುಷ್ಯ ಮುಖ್ಯವಲ್ಲ : ನ್ಯಾಯಾಧೀಶ ಬಿ.ಕೆ.ಮನು
ಸುದ್ದಿದಿನ, ಮಡಿಕೇರಿ : ಓಝೋನ್ ಪದರದ ರಕ್ಷಣೆ ನಮ್ಮೆಲ್ಲರ ಹೊಣೆ, ಮಾನವರಿಗೆ ಪರಿಸರ ಬಹಳ ಮುಖ್ಯ ಆದರೆ ಪರಿಸರಕ್ಕೆ ಮಾನವರು ಮುಖ್ಯವಲ್ಲ, ಇದನ್ನು ಅರಿತು ಪ್ರತಿಯೊಬ್ಬರು ಓಝೋನ್ ಪದರದ ರಕ್ಷಣೆಗೆ ಮುಂದಾಗಬೇಕೆಂದು ಮಡಿಕೇರಿಯ ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ಕೆ.ಮನು ಅವರು ನುಡಿದರು.
ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಕೊಡಗು ಪ್ರಾದೇಶಿಕ ಕಚೇರಿ, ಕ.ರಾ.ವಿ.ಪ.ಕೊಡಗು ಜಿಲ್ಲಾ ವಿಜ್ಞಾನ ಸಮಿತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಇಕೋ ಕ್ಲಬ್, ಸರ್ಕಾರಿ ಪದವಿ ಪೂರ್ವ ಕಾಲೇಜು ಇವುಗಳ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ವಿಶ್ವ ಓಝೋನ್ ಪದರ ಸಂರಕ್ಷಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಬಿ.ಕೆ ಮನು ಅವರು ಓಝೋನ್ ಪದರ ಹಾನಿಯಾದಲ್ಲಿ ಮಾನವರಿಗೆ ಹಾಗೂ ಸಕಲ ಜೀವಿಗಳಿಗೆ ತೊಂದರೆ ಉಂಟಾಗುವುದು, ಆದ್ದರಿಂದ ಓಝೋನ್ ಪದರ ಸಂರಕ್ಷಣೆಗೆ ಎಲ್ಲರೂ ಕಟಿಬದ್ದರಾಗಿರಬೇಕೆಂದು ಅವರು ತಿಳಿಸಿದರು.
ಓಝೋನ್ ಪದರ ಹಾನಿಯಿಂದ ಮಾನವರ ದೇಹಕ್ಕೆ ಜೀವ ಸಂಕುಲಕ್ಕೆ ದಕ್ಕೆಯಾಗುವುದು ಮತ್ತು ಜಲಚರಗಳಿಗೆ ಮಾರಕವಾದದ್ದು. ಈ ಕಾರ್ಯಕ್ರಮದ ವಿಚಾರವನ್ನು ವಿದ್ಯಾರ್ಥಿಗಳು ತಿಳಿದುಕೊಂಡು ಬೇರೆಯವರಿಗೂ ಓಜೋನ್ ಪದರದ ಸಂರಕ್ಷಣೆ ಕುರಿತು ಅರಿವು ಮೂಡಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಜಿಲ್ಲಾ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್ ಅವರು ಮಾತನಾಡಿ ಓಜೋನ್ ಪದರದ ಹಾನಿಯಿಂದ ನೇರಳಾತೀತ ನೀಲ ಕಿರಣಗಳು ಭೂಮಿಯನ್ನು ನೇರವಾಗಿ ಪ್ರವೇಶಮಾಡಿ ಜೀವ ಸಂಕುಲಕ್ಕೆ ಹಾನಿ ಉಂಟುಮಾಡುತ್ತದೆ. ಹಾಗೂ ಇದನ್ನು ತಡೆಯದಿದ್ದರೆ ಭೂಮಿಯ ನಾಶಕ್ಕೆ ನಾಂದಿಯಾಗುತ್ತದೆ. ಇಂಗಾಲ ಪ್ರಮಾಣದ ಬಳಕೆಗೆ ಕಡಿವಾಣ ಹಾಕಿ ಓಝೋನ್ ಪದರದ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಓಝೋನ್ ಪದರದ ರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಹಾಗೂ ಶಿಥಿಲೀಕರಣ ಘಟಕಗಳಲ್ಲಿ ಹೊರಸೂಸುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.
ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಮಿತಿಯ ಜಿಲ್ಲಾ ಸಂಯೋಜಕರಾದ ಟಿ.ಜಿ.ಪ್ರೇಮ್ ಕುಮಾರ್ ಅವರು ಮಾತನಾಡಿ ಪರಿಸರ ಸ್ನೇಹಿಯಾಗಿ ಎಲ್ಲರೂ ಕಾರ್ಯನಿರ್ವಹಿಸಬೇಕು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಪ್ರತಿಯೊಬ್ಬರೂ ಹೆಚ್ಚು ಹೆಚ್ಚ್ಚು ಗಿಡ-ಮರಗಳನ್ನು ಬೆಳೆಸಿ ಓಜೋನ್ ಪದರದ ರಕ್ಷಣೆ ಮಾಡಬೇಕು ಎಂದು ಅವರು ತಿಳಿಸಿದರು.ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಕೆಂಚಪ್ಪ ಅವರು ಮಾತನಾಡಿ ಪ್ರತಿಯೊಬ್ಬರಿಗೂ ಪರಿಸರ ಸಂರಕ್ಷಣೆ ಮಾಡುವುದು ಅತಿ ಮುಖ್ಯ ಕರ್ತವ್ಯವಾಗಿದ್ದು, ಎಲ್ಲರೂ ಇದನ್ನು ಮನಗಂಡು ಪರಿಸರವನ್ನು ರಕ್ಷಿಸಿ ಓಝೋನ್ ಪದರದ ಸಂರಕ್ಷಣೆ ಮಾಡಬೇಕೆಂದು ಹೇಳಿದರು.
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕರಾದ ಜಿ.ಶ್ರೀನಾಥ್ ಅವರು ಮಾತನಾಡಿ ಓಝೋನ್ ಪದರದ ಹಾನಿಯಿಂದ ಮಾನವರು ಚರ್ಮದ ಕಾನ್ಸರ್ಗೆ ತುತ್ತಾಗಬೇಕಾಗುತ್ತದೆ. ಹವಾ ನಿಯಂತ್ರಿತ ವಸ್ತುಗಳಿಂದ ಹೊರಸೂಸುವ ಇಂಗಾಲದಿಂದ ಓಝೋನ್ ಪದರಕ್ಕೆ ಹಾನಿಯಾಗಿ ನೇರಳಾತೀತ ನೀಲ ಕಿರಣಗಳು ನೇರವಾಗಿ ಭೂಮಿಯನ್ನು ತಲುಪಿ ಜೀವಸಂಕುಲಕ್ಕೆ ಭಾರಿ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ. ಇದನ್ನು ಅರಿತು ಪ್ರತಿಯೊಬ್ಬರು ಪರಿಸರದ ಮೇಲಾಗುತ್ತಿರುವ ಮಾನವನ ಹಸ್ತ ಕ್ಷೇಪವನ್ನು ತಡೆಗಟ್ಟಬೇಕು. ಮರಗಳ ಸಂಖ್ಯೆಯನ್ನು ಹೆಚ್ಚಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಮರಗಳನ್ನು ಬೆಳೆಸುವುದರಿಂದ ಓಜೋನ್ ಪದರವನ್ನು ರಕ್ಷಿಸಬಹುದಾಗಿದೆ. ಪ್ರಕೃತಿಯು ತನ್ನ ಸಮತೋಲನವನ್ನು ತಾನೇ ಮಾಡಿಕೊಳ್ಳುತ್ತದೆ ಎಂಬುದನ್ನು ಪ್ರತಿಯೊಬ್ಬರು ಅರಿತು ನೆಲ, ಜಲದ ರಕ್ಷಣೆಗೆ ಮುಂದಾಗಬೇಕೆಂದು ವೈಜ್ಞಾನಿಕವಾಗಿ ವಿದ್ಯಾರ್ಥಿಗಳಿಗೆ ವಿವರಣೆ ನೀಡಿದರು.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ವಿಜಯ್ ಅವರು ಮಾತನಾಡಿ ಪ್ರತಿಯೊಬ್ಬರೂ ಪರಿಸರದ ರಕ್ಷಣೆಗೆ ಮುಂದಾಗಬೇಕು. ಪ್ಲಾಸ್ಟಿಕ್ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಹೆಚ್ಚು ಗಿಡ ಮರಗಳನ್ನು ಬೆಳಸಿ ಓಝೋನ್ ಪದರವನ್ನು ರಕ್ಷಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಓಝೋನ್ ಪದರ ರಕ್ಷಣೆಯ ಪ್ರತಿಜ್ಞಾ ವಿಧಿಯನ್ನು ಟಿ.ಜಿ.ಪ್ರೇಮ್ ಕುಮಾರ್ ಅವರು ಭೋದಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಜಿ.ಕೆಂಚಪ್ಪ ಅವರು ಓಝೋನ್ ಪದರ ರಕ್ಷಣೆ ಕುರಿತ ಕರಪತ್ರವನ್ನು ಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಓಜೋನ್ ಪದರ ರಕ್ಷಣೆ ಕುರಿತು ಆಯೋಜಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಎಂ.ಇ.ಮೊಹಿದ್ದೀನ್, ಉಪ ಪರಿಸರ ಅಧಿಕಾರಿ ಡಾ.ಎಂ.ಕೆ.ಸುಧಾ, ಸಹಾಯಕ ಪರಿಸರ ಅಧಿಕಾರಿ ಶ್ರುತಿ, ಕಾನೂನು ಸೇವಾ ಪ್ರಾಧಿಕಾರದ ಸಹಾಯಕ ಆಡಳಿತ ಅಧಿಕಾರಿ ಜೋಯಪ್ಪ ಇತರರು ಇದ್ದರು. ಉಪನ್ಯಾಸಕರಾದ ಎಸ್.ನಂದೀಶ್ ಕಾರ್ಯಕ್ರಮ ನಿರೂಪಿಸಿದರು. ಎನ್.ಎಸ್.ಚಿದಾನಂದ ಅವರು ವಂದನಾರ್ಪಣೆ ಮಾಡಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401