ದಿನದ ಸುದ್ದಿ

ಚನ್ನಗಿರಿ | ವಿದ್ಯಾರ್ಥಿನಿಯ ಉತ್ತರ ಪತ್ರಿಕೆಯೇ ಬದಲು: ಪರೀಕ್ಷಾ ಮಂಡಳಿಯ ಎಡವಟ್ಟು ಬಯಲು

Published

on

ಅಕ್ಷತ, ವಿದ್ಯಾರ್ಥಿನಿ

ಸುದ್ದಿದಿನ, ದಾವಣಗೆರೆ: ಅಕ್ಷತ ದಾವಣಗೆರೆ ಜಿಲ್ಲೆಯ, ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದ ಸರ್ಕಾರಿ ಪ್ರೌಡಶಾಲೆಯಲ್ಲಿ ಎಸ್ ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದಳು. ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಆಕೆ ಈ ಬಾರಿ ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಆಗುತ್ತಾಳೆ ಎಂದು ಪೋಷಕರು ಭರವಸೆ ಇಟ್ಟುಕೊಂಡಿದ್ದರು. ಆದರೆ, ರಿಸಲ್ಟ್​ ಬಂದಾಗ ಆಕೆ ಫೇಲ್ ಆಗಿದ್ದಳು.

ಪರೀಕ್ಷಾ ಮಂಡಳಿಯ ಎಡವಟ್ಟಿನಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಅನ್ಯಾಯವಾಗಿದ್ದು, ಪರೀಕ್ಷೆಯಲ್ಲಿ ಫೇಲ್ ಆಗಿದ್ದಾಳೆ. ಇದರಿಂದ ಆತಂಕಗೊಂಡ ಪೋಷಕರು ಪರೀಕ್ಷಾ ಮಂಡಳಿಯಿಂದ ನಕಲು ಉತ್ತರ ಪತ್ರಿಕೆಯನ್ನು ಪಡೆದಾಗ ಮಂಡಳಿಯ ಎಡವಟ್ಟು ಬಹಿರಂಗವಾಗಿದೆ.

ಉತ್ತರ ಪತ್ರಿಕೆಯಲ್ಲಿ ಕೈ ಬರಹ ಬದಲು

ಹನುಂಮತರಾಜ್ ಕೆ ಇವರು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಳಲಗೆರೆ ಗ್ರಾಮದವರು. ಇವರ ಮಗಳು ಅಕ್ಷತ, ಬೆಳಲಗೆರೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದು, ಕಾರಿಗನೂರು- ಕತ್ತಲಗೆರೆ ಸರ್ಕಾರಿ ಪ್ರೌಢಶಾಲೆ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಈ ಬಾರಿಯ ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಬರೆದಿದ್ದಳು. ಓದಿನಲ್ಲಿ ಮುಂದಿದ್ದ ವಿದ್ಯಾರ್ಥಿನಿ ಅಕ್ಷತ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್ ಆಗುತ್ತಾಳೆ ಎಂದು ಪೋಷಕರು ಭರವಸೆ ಇಟ್ಟುಕೊಂಡಿದ್ದರು. ಆದರೆ, ರಿಸಲ್ಟ್​ ಬಂದಾಗ ಈಕೆ ಫೇಲ್ ಆಗಿದ್ದಳು. ಕನ್ನಡ – 120, ಆಂಗ್ಲ ಭಾಷೆಯಲ್ಲಿ-55, ವಿಜ್ಞಾನ-50, ಗಣಿತ-62 ಹಿಂದಿ-91, ಹಾಗೂ‌ ಸಮಾಜ ವಿಜ್ಞಾನದಲ್ಲಿ ಕೇವಲ 34 ಅಂಕ ಬಂದಿತ್ತು.

ಇದರಿಂದ ಕಂಗಾಲಾದ ವಿದ್ಯಾರ್ಥಿನಿಯ ಪೋಷಕರು ಪರೀಕ್ಷಾ ಮಂಡಳಿಯಿಂದ ಉತ್ತರ ಪತ್ರಿಕೆ ನಕಲು ಪಡೆದಾಗ ಪರೀಕ್ಷಾ ಮಂಡಳಿಯ ಎಡವಟ್ಟು ಬೆಳಕಿಗೆ ಬಂದಿದೆ. ವಿದ್ಯಾರ್ಥಿನಿಯ ಸಮಾಜ ವಿಜ್ಞಾನದ ಉತ್ತರ ಪತ್ರಿಕೆಯಲ್ಲಿ ಕೈ ಬರಹ ಬದಲಾಗಿದ್ದು, ಅಕ್ಷತ 13 ಪುಟ ಬರೆದಿದ್ದೆ ಹಾಗೂ ಇಲ್ಲಿ ಕೇವಲ 05 ಪುಟವಿರುವ ಉತ್ತರ ಪತ್ರಿಕೆ ದೊರೆತಿದೆ.  ರಿಜಿಸ್ಟರ್ ನಂಬರ್ ಕೂಡ ತಿದ್ದುಪಡಿಗೊಂಡಿದೆ ಎನ್ನುತ್ತಾರೆ.

ತಿದ್ದುಪಡಿ ಮಾಡಲಾಗಿದೆ ಎಂಬ ರಿಜಿಸ್ಟರ್ ನಂಬರ್

ಇದರಿಂದ ಕಂಗಾಲಾಗಿರುವ ಕುಟುಂಬ ಇದೀಗ ನ್ಯಾಯಕ್ಕಾಗಿ ಪರೀಕ್ಷಾ ಮಂಡಳಿಗೆ ದೂರು ನೀಡಿದೆ. ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಈ ರೀತಿ ಆಗಿರೋದು ಶಾಲೆಯ ಮುಖ್ಯ ಶಿಕ್ಷಕರಿಗೂ ಅಚ್ಚರಿ ಮೂಡಿಸಿದ್ದು, ಶಾಲೆಯಿಂದ ಕೂಡ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ್ದು, ಪರೀಕ್ಷಾ ಮಂಡಳಿಯಲ್ಲಿ ಇಂದು ಪರಿಶೀಲನೆ ನಡೆಯಲಿದೆ. ಇಂದು ಸಂಜೆ ಫಲಿತಾಂಶ ಗೊತ್ತಾಗಲಿದೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.


ವಿದ್ಯಾರ್ಥಿನಿ ಅಕ್ಷತ ಅವರ ಉತ್ತರ ಪತ್ರಕೆ ಬದಲಾಗಿರುವ ಬಗ್ಗೆ ಈಗಾಗಾಲೇ ಪರಿಶೀಲನೆಗೆ ಕಳಿಸಲಾಗಿದೆ. ಸಂಜೆಯೊಳಗೆ ಫಲಿತಾಂಶ ಗೊತ್ತಾಗಲಿದೆ.”

| ಮಂಜುನಾಥ್, ಕ್ಷೇತ್ರ ಶಿಕ್ಷಣ ಅಧಿಕಾರಿಗಳು, ಚನ್ನಗಿರಿ


ನಮ್ಮ ಶಾಲೆಯ ವಿದ್ಯಾರ್ಥಿನಿ ಅಕ್ಷತಾಳ ಪೂಷಕರು ಉತ್ತರ ಪತ್ರಿಕೆ ಬದಲಾಗಿರುವ ಬಗ್ಗೆ ತಿಳಿಸಿದ್ದು, ಪರೀಕ್ಷಾ ಮಂಡಳಿಗೆ ಇದರ ಬಗ್ಗೆ ಪರಿಶೀಲಿಸಲು ಕಳಿಸಿಕೊಡಲಾಗಿದೆ.”

| ಕಮಲಾಕ್ಷ ಶೇಟ್ , ಮುಖ್ಯೋಪಾಧ್ಯಾಯರು, ಬೆಳಲಗೆರೆ ಸರ್ಕಾರಿ ಪ್ರೌಢಶಾಲೆ


ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version