ದಿನದ ಸುದ್ದಿ
ರೈತರಿಗೆ ಸಿಹಿಸುದ್ದಿ; ಋಣಭಾರ ಪೀಡಿತರಿಗೆ ಕಿರುಕುಳ ತಡೆಯಲು ಸೂಚನೆ
ಸುದ್ದಿದಿನ ಡೆಸ್ಕ್: ರಾಜ್ಯ ಸರ್ಕಾರ ರೈತರಿಗೆ ಅನುಕೂಲವಾಗುವಂಥ ಕಾನೂನು ಅನುಷ್ಠಾನಕ್ಕೆ ಮುಂದಾಗಿದ್ದು, ಋಣಭಾರ ಪೀಡಿತ ಸಣ್ಣ ರೈತರು, ದುರ್ಬಲ ವರ್ಗದವರಿಗೆ ಲೇವಾದೇವಿದಾರರು ಕಿರುಕುಳ ನೀಡದಂತೆ ಕ್ರಮ ವಹಿಸಲು ಎಲ್ಲಾ ಪ್ರಾದೇಶಿಕ ಆಯುಕ್ತರು, ಎಲ್ಲಾ ವಲಯಗಳ ಪೊಲೀಸ್ ಮಹಾನಿರೀಕ್ಷಕರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸರ್ಕಾರ ಸೂಚಿಸಿದೆ.
ಋಣಭಾರ ಪೀಡಿತ ಎಲ್ಲ ವರ್ಗದ ಜನರ ಮೇಲೆ ಲೇವಾದೇವಿಗಾರರಿಂದ ಕಾನೂನು ಬಾಹಿರ ಒತ್ತಡಗಳು ಹೇರುತ್ತಿರುವ ವರದಿಯಾಗುತ್ತಿದ್ದು, ಇದರ ತಡೆಗಾಗಿ ಕರ್ನಾಟಕ ಋಣಭಾರ ಪರಿಹಾರ ಮಸೂದೆ ೨೦೧೮ನ್ನು ಮಂಡಿಸಲು ಸರ್ಕಾರ ಚಿಂತನೆ ನಡೆಸಿದೆ. ಇದರಿಂದ ರಾಜ್ಯದ ಋಣಭಾರ ಪೀಡಿತ ಸಣ್ಣ ಭೂರಹಿತ ರೈತ, ಕೃಷಿ ಕಾರ್ಮಿಕರು, ದುರ್ಬಲ ವರ್ಗದವರಿಗೆ ಋಣಭಾರ ಸಮಸ್ಯೆಗಳ ಪರಿಹಾರಕ್ಕಾಗಿ ಮಸೂದೆ ಮಂಡಿಸಲು ಪರಿಶೀಲನೆ ನಡೆಸುತ್ತಿದೆ.
ಸಾಲ ಪಡೆದವರ ಮೇಲೆ ಯಾವುದೇ ರೀತಿಯ ಕಾನೂನು ಬಾಹಿರ ಒತ್ತಡ, ದೌರ್ಜನ್ಯ ಎಸಗದಂತೆ ತಡೆಗಟ್ಟಲು ಕಾನೂನು ರೀತಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಆದೇಶದಂತೆ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಸುತ್ತೋಲೆ ಹೊರಡಿಸಿದ್ದಾರೆ.