ದಿನದ ಸುದ್ದಿ
ಮೇಲುಕೋಟೆ ಪಾರಂಪರಿಕ ಕಟ್ಟಡಗಳ ಅಭಿವೃದ್ಧಿಗೆ ಸಾಥ್ ನೀಡಿದ ಸುಧಾಮೂರ್ತಿ..!
ಸುದ್ದಿದಿನ,ಮಂಡ್ಯ : ಮೇಲುಕೋಟೆಯಲ್ಲಿ ಹೊಯ್ಸಳರ ಕಾಲದ, ಮೈಸೂರು ರಾಜರ ಕಾಲದ ಕುರುಹುಗಳಿವೆ. ನೂರಕ್ಕೂ ಹೆಚ್ಚು ಕೊಳಗಳು ಹಾಗೂ ಮಂಟಪಗಳು ಇದ್ದು, ಸರ್ಕಾರದ ಸಹಯೋಗದೊಂದಿಗೆ ಮೇಲುಕೋಟೆ ಅಭಿವೃದ್ದಿಯನ್ನು ಮಾಡಲಾಗುವುದು ಎಂದು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷರಾದ ಸುಧಾಮೂರ್ತಿ ಅವರು ತಿಳಿಸಿದರು.
ಅವರು ಇಂದು ಮೇಲುಕೋಟೆ ಕ್ಷೇತ್ರಕ್ಕೆ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಮೇಲುಕೋಟೆ ಪ್ರವಾಸಿ ಮಂದಿರದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಸಾವಿರ ವರ್ಷಗಳ ಹಿಂದೆ ಹಿರಿಯರು ಕಷ್ಟಪಟ್ಟು ಈ ಪಾರಂಪರಿಕ ತಾಣಗಳಾದ ಕೊಳಗಳು, ಮಂಟಪಗಳು ಹಾಗೂ ದೇವಸ್ಥಾನವನ್ನು ನಿರ್ಮಿಸಿ ಬಳುವಳಿಯಾಗಿ ನೀಡಿದ್ದು, ಇದರ ಸಂರಕ್ಷಣೆ ಹಾಗೂ ಅಭಿವೃದ್ಧಿ ನಮ್ಮ ಕರ್ತವ್ಯವಾಗಿದೆ ಎಂದು ಅವರು ತಿಳಿಸಿದರು.
ಈ ಪಾರಂಪರಿಕ ಕಟ್ಟಡಗಳಿಗೆ ಯಾವುದೇ ಧಕ್ಕೆಯಾಗದ ಹಾಗೇ ಮೇಲುಕೋಟೆ ಅಭಿವೃದ್ಧಿ ಮಾಡಲಾಗುವುದು. ಆದಷ್ಟು ಬೇಗ ಈ ಯೋಜನೆಯನ್ನು ಕಾರ್ಯರೂಪಗೊಳ್ಳಲ್ಲಿದೆ. ಈ ನಿಟ್ಟಿನಲಿ ಅಧಿಕಾರಿಗಳು ಹಾಗೂ ಸ್ಥಳಿಯರ ಸಹಕಾರ ಅಗತ್ಯವಾಗಿದ್ದು, ಸರ್ಕಾರದ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ ನೀರಾವರಿ ಸಚಿವರಾದ ಸಿ.ಎಸ್.ಪುಟ್ಟರಾಜು ಅವರು ಸರ್ಕಾರ ಹಾಗೂ ಇನ್ಫೋಸಿಸ್ ಸಂಸ್ಥೆ ಜತೆಯಾಗಿ ಮೇಲುಕೋಟೆ ಅಭಿವೃದ್ಧಿಗೆ ಮುಂದಾಗಿದೆ. ಇನ್ಫೋಸಿಸ್ ಸಂಸ್ಥೆ ಈ ಪಾರಂಪರಿಕ ಸ್ಥಳಗಳ ಅಭಿವೃದ್ಧಿಗೆ ಮುಂದಾಗಿರುವುದು ಖುಷಿಯ ವಿಚಾರವಾಗಿದ್ದು, ಇನ್ಫೋಸಿಸ್ ಸಂಸ್ಥೆಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಅವರು ತಿಳಿಸಿದರು.
ಮೇಲುಕೋಟೆ ವ್ಯಾಪ್ತಿಯಲ್ಲಿರುವ ಕಲ್ಯಾಣಿಗಳು ನಿರ್ವಹಣೆ ಇಲ್ಲದೇ ಶಿಥಿಲಗೊಂಡಿದ್ದು ಆ ಕಲ್ಯಾಣಿಗಳನ್ನು ದುರಸ್ತಿಗೊಳಿಸಿ ಪುನರುಜ್ಜೀವನಗೊಳಿಸಲು ಯೋಜನಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದ್ದು, ಈ ಯೋಜನೆಯ ವರದಿಯ ಅಂದಾಜು ಮೊತ್ತ ರೂ 32 ಕೋಟಿಯಾಗಿರುತ್ತದೆ. ಸರ್ಕಾರ ಹಾಗೂ ಇನ್ಫೋಸಿಸ್ ಸಂಸ್ಥೆ ಜತೆಯಾಗಿ ಮೇಲುಕೋಟೆ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರವಾಸೋದ್ಯಮ ಸಚಿವರಾದ ಸಾರಾ ಮಹೇಶ್ ಅವರು ಮೇಲುಕೋಟೆ ಸಮಗ್ರ ಅಭಿವೃದ್ಧಿಗೊಸ್ಕರ ಇನ್ಫೋಸಿಸ್ ಸಂಸ್ಥೆ ಮುಂದಾಗಿದ್ದು, ತುಂಬಾ ಸಂತೋಷದ ವಿಷಯವಾಗಿದೆ. ಮೇಲುಕೋಟೆಯಲ್ಲಿ 108 ಕೊಳಗಳಿದ್ದು, ಪುರಾತತ್ವ ಇಲಾಖೆಯಿಂದ ಎಲ್ಲಾ ಕೊಳಗಳನ್ನು ಪುನರುಜ್ಜೀವನಗೊಳಿಸುವ ಸಿದ್ಧತೆ ನಡೆದಿದೆ. ಸಣ್ಣ ನೀರಾವರಿ ಇಲಾಖೆಯಿಂದ ರೂ 30 ಕೋಟಿ ಅನುದಾನ ಮತ್ತು ಪ್ರವಾಸೋದ್ಯಮ ಇಲಾಖೆಯಿಂದ ಅಗತ್ಯವಿರುವ ಹಣ ಬಿಡುಗಡೆಯಾಗಲ್ಲಿದ್ದು, ಇನ್ಫೋಸಿಸ್ ಸಂಸ್ಥೆ ಜತೆ ಸೇರಿ ಮೇಲುಕೋಟೆ ಸಮಗ್ರ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಎನ್.ಮಂಜುಶ್ರೀ, ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಾದ ಕೆ.ಯಾಲಕ್ಕಿಗೌಡ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9986715401