ದಿನದ ಸುದ್ದಿ
ಶಿಬಿರಗಳು ವ್ಯಕ್ತಿತ್ವ ಅರಳಿಸುವ ತರಬೇತಿ ತಾಣಗಳು : ಶ್ರೀಮತಿ ಸುಜಾತ ಶಿವಾನಂದಪ್ಪ
ಸುದ್ದಿದಿನ, ಮಲೆಬೆನ್ನೂರು : ಮಲೇಬೆನ್ನೂರು ಗ್ರಾಮದ ಜಿಗಳಿ ರಸ್ತೆಯಲ್ಲಿರುವ ರಾಜ ರಾಜೇಶ್ವರಿ ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.
ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಸುಜಾತ ಶಿವಾನಂದಪ್ಪ ಮಾತನಾಡಿ, ರಜಾ ಅವಧಿಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾಗುವ ಶಿಬಿರಗಳು ಮಕ್ಕಳ ವ್ಯಕ್ತಿತ್ವ ಅರಳಿಸುವ ತರಬೇತಿ ತಾಣಗಳಿದ್ದಂತೆ. ರಜಾ ಅವಧಿಯನ್ನು ಸಹ ಕಲಿಕೆಗೆ ಬಳಸಿಕೊಂಡಿರುವ ಈ ಶಿಬಿರದ ಮಕ್ಕಳು ವಿಭಿನ್ನ ವ್ಯಕ್ತಿತ್ವದ ಪ್ರತೀಕವಾಗಿದ್ದಾರೆ ಎಂದು ಹೇಳಿದರು.
ಮಕ್ಕಳ ಹೊಸ ಕಲಿಕೆಗೆ ಪ್ರೋತ್ಸಾಹಿಸಿ ಅವರನ್ನು ಉತ್ತೇಜಿಸಿ ಶಿಬಿರಕ್ಕೆ ಸೇರಿಸುವ ಮೂಲಕ ಅವರಲ್ಲಿ ಉತ್ತಮ ಸಂಸ್ಕಾರ ಬಿತ್ತನೆಗೆ ಕಾರಣ ರಾದ ಪೋಷಕರು ಅಭಿನಂದನಾರ್ಹರು ಎಂದು ಶ್ಲಾಘಿಸಿದರು.
ನಮೋ ಶಾರದೆ ಪ್ರಾರ್ಥನೆಯೊಂದಿಗೆ ಆರಂಭವಾದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಶಾಲೆಯಿಂದ ಆಗಮಿಸಿ 25 ದಿನಗಳಿಂದ ಬೇಸಿಗೆ ಶಿಬಿರದಲ್ಲಿ ಪಾಲ್ಗೊಂಡಿದ್ದ ಮಕ್ಕಳು ಶಿಬಿರದಲ್ಲಿ ತಾವು ಕಲಿತ ವಿಷಯಗಳ ಕುರಿತು ಅನಿಸಿಕೆ ಹಂಚಿಕೊಂಡರು. ಪೇಪರ್ ಕ್ರಾಫ್ಟ್, ವಿವಿಧ ಅಭಿನಯ ಗೀತೆ, ಕಿರು ನಾಟಕ, ಇತ್ಯಾದಿ ಪ್ರದರ್ಶಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ಶ್ರೀಮತಿ ಸುಜಾತ ಶಿವಾನಂದಪ್ಪ ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಿ ಶುಭ ಹಾರೈಕೆಯೊಂದಿಗೆ ಬೀಳ್ಕೊಟ್ಟರು.
ಮುಖ್ಯ ಶಿಕ್ಷಕರಾದ ಶ್ರೀ ಶಶಿಧರ್ ವೇದಿಕೆಯಲ್ಲಿದ್ದರು. ಶಿಕ್ಷಕಿ ಶ್ರೀಮತಿ ಕವಿತಾ ಸ್ವಾಗತಿಸಿದರು. ಪ್ರತಿಭಾ ನಿರೂಪಣೆ ಮಾಡಿದರು. ಶಿಬಿರಾರ್ಥಿಗಳ ಪೋಷಕರು, ಪ್ರೌಢ ಶಾಲಾ ವಿದ್ಯಾರ್ಥಿಗಳು, ಸಂಸ್ಥೆಯ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243