ದಿನದ ಸುದ್ದಿ
SUPERhuMAN..! ‘ಸೋನು ಸೂದ್’ ಈತ ಅದೆಂತಹ ಹೃದಯವಂತ..!
- ಪಂಜು ಗಂಗೊಳ್ಳಿ
ಪೂರ್ವ ಸಿದ್ಧತೆಯಿಲ್ಲದ ಲಾಕ್ ಡೌನ್ ನಿಂದಾಗಿ ಎಲ್ಲೆಲ್ಲೋ ಸಿಕ್ಕಿ ಹಾಕಿಕೊಂಡಿರುವ ವಲಸೆ ಕಾರ್ಮಿಕರಿಗೆ ಆಪತ್ಬಾಂಧವರಾಗಿ ಬಂದ ಹಿಂದಿ ಚಿತ್ರ ನಟ ಸೋನು ಸೂದ್ ಈಗಾಗಲೇ ಕರ್ನಾಟಕ, ಉತ್ತರಪ್ರದೇಶ, ಬಿಹಾರ್, ಜಾರ್ಖಾಂಡ್, ಒಡಿಶಾ ಮೂಲದ ಇಂತಹ ಸಾವಿರಾರು ಬಡಪಾಯಿಗಳನ್ನು ಬಸ್ಸುಗಳ ಮೂಲಕ ಅವರವರ ಊರುಗಳಿಗೆ ಕಳಿಸಿ ಕೊಟ್ಟಿದ್ದಾರೆ. ಮುಂಬೈಯಲ್ಲಿ ಕೊರೋನಾ ಪೀಡಿತರ ಚಿಕಿತ್ಸೆಗೆ ನಿಂತ ಡಾಕ್ಟರು, ನರ್ಸ್ ಗಳಿಗೆ ತನ್ನ ಐಷರಾಮಿ ಹೋಟೆಲನ್ನೂ ಬಿಟ್ಟು ಕೊಟ್ಟಿರುವ ಸೂದ್ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲದೆ ಈ ಕಾರ್ಮಿಕರನ್ನು ಬೀದಿ ಪಾಲಾಗಿಸಿದ ಉದ್ಯಮಪತಿಗಳನ್ನೂ ನಾಚಿ ತಲೆ ತಗ್ಗಿಸುವಂತೆ ಈ ನತದೃಷ್ಟರಿಗೆ ಒದಗಿ ಬರುತ್ತಿದ್ದಾರೆ.
ಕೇರಳದ ಎರ್ನಾಕುಲಂ ಜಿಲ್ಲೆಯ ಕಿಝಕ್ಕಂಭಾಳಂ ಎಂಬಲ್ಲಿನ ಕೀಟೇಕ್ಸ್ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಒಡಿಸ್ಸಾದ 169 ಜನ ವಲಸೆ ಕಾರ್ಮಿಕರು ತಮ್ಮೂರಿಗೆ ವಾಪಾಸಾಗಲು ಸಹಾಯಕ್ಕೆ ಮೊರೆಯಿಡುವ ವೀಡಿಯೋ ಒಂದನ್ನು ಯಾರೋ ಇವರಿಗೆ ಟ್ವೀಟ್ ಮಾಡಿದರು. ಈ 169 ಜನರಲ್ಲಿ 148 ಜನ ಹೆಣ್ಣು ಮಕ್ಕಳಿದ್ದರು. ಅದನ್ನು ನೋಡಿ ತಕ್ಷಣವೇ ಕಾರ್ಯಪ್ರವೃತ್ತರಾದ ಸೂದ್ ಅವರನ್ನೂ ಬಸ್ಸುಗಳಲ್ಲಿ ಕಳುಹಿಸಿ ಕೊಡಲು ಆಲೋಚಿಸಿದರು. ಆದರೆ ಎರ್ನಾಕುಲಂ ನಿಂದ ಒಡಿಸ್ಸಾಗೆ 2000 ಕಿಮಿ ಗೂ ಹೆಚ್ಚು ದೂರ. ಮತ್ತು ಬಸ್ಸುಗಳು ಹಲವು ರಾಜ್ಯಗಳ ಗಡಿಗಳನ್ನು ದಾಟಿ ಹೋಗಾಬೇಕಾಗುವುದರಿಂದ ಆಯಾಯ ರಾಜ್ಯ ಸರ್ಕಾರಗಳ ಅನುಮತಿ ಪಡೆಯಬೇಕಾಗುತ್ತದೆ.
ಇದು ತೀರಾ ಜಂಜಾಟದ ಮತ್ತು ಸಮಯ ಬೇಡುವ ಕೆಲಸವಾದುದರಿಂದ ಸೂದ್ ಅವರಿಗಾಗಿ ಏರ್ ಏಷಿಯಾ ವಿಮಾನವೊಂದನ್ನು ಬುಕ್ ಮಾಡಿ, ಬಸ್ಸುಗಳ ಮೂಲಕ ಅವರನ್ನು ಎರ್ನಾಕುಲಂ ನಿಂದ ಕೊಚಿನ್ ವಿಮಾನ ನಿಲ್ದಾಣಕ್ಕೆ ತಂದು, ವಿಮಾನ ಹತ್ತಿಸಿ, ಒಡಿಸ್ಸಾದ ಭುವನೇಶ್ವರ ವಿಮಾನ ನಿಲ್ದಾಣದಲ್ಲಿ ಇಳಿಸಿ, ಅಲ್ಲಿಂದ ಬಸ್ಸುಗಳಲ್ಲಿ ಅವರಿಗೆ ಮೊದಲೇ ನಿಗದಿಯಾದ ಕ್ವಾರಂಟೈನ್ ಕೇಂದ್ರಗಳಿಗೆ ಗೌರವ ಪೂರ್ವಕವಾಗಿ ಕಳಿಸಿ ಕೊಟ್ಟರು!
ಈತ ಅದೆಂತಹ ಹೃದಯವಂತ!
(ವ್ಯಂಗ್ಯಚಿತ್ರಕಾರ ‘ಪಂಜು ಗಂಗೊಳ್ಳಿ‘ ಅವರ ಫೇಸ್ ಬುಕ್ ವಾಲ್ ನಿಂದ ತೆಗೆದುಕೊಂಡ ಬರಹ)
ಸುದ್ದಿದಿನ.ಕಾಂ|ವಾಟ್ಸಾಪ್|9980346243