ದಿನದ ಸುದ್ದಿ
ಸಹಜತೆಯೇ ಸಾಹಿತ್ಯದ ನಿಜ ಸೊಬಗು : ಹಿರಿಯ ಸಾಹಿತಿ ಸುಶೀಲಾ ದೇವಿ ಆರ್ ರಾವ್
ಸುದ್ದಿದಿನ, ದಾವಣಗೆರೆ : ಸರಳ ಭಾಷೆ, ಸಹಜ ವಿಷಯ ವಸ್ತುವಿನಿಂದ ಕೂಡಿದ ಸಾಹಿತ್ಯ ಓದುಗರ ಮನವನ್ನು ಶೀಘ್ರ ತಲುಪಬಲ್ಲದು ಎಂದು ಹಿರಿಯ ಸಾಹಿತಿ, ದಾವಣಗೆರೆ ಜಿಲ್ಲಾ 11 ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯುಕ್ತ ಸರ್ವಾಧ್ಯಕ್ಷರಾದ ಶ್ರೀಮತಿ ಸುಶೀಲಾದೇವಿ ಆರ್ ರಾವ್ ಅವರು ಅಭಿಪ್ರಾಯಿಸಿದರು.
ತಿಂಗಳ ಅಂಗಳ ಸಾಹಿತ್ಯ ಸಾಂಸ್ಕೃತಿಕ ಬಳಗದ ವತಿಯಿಂದ ದಿನಾಂಕ : 20.03.2022 ರ ಭಾನುವಾರ ಬೆಳಿಗ್ಗೆ 11 ಗಂಟೆಗೆ ದಾವಣಗೆರೆ ಸೀತಮ್ಮ ಬಾಲಕಿಯರ ಸರ್ಕಾರಿ ಪ.ಪೂ ಕಾಲೇಜಿನ ಗ್ರಂಥಪಾಲಕಿ ಶ್ರೀಮತಿ ಅನ್ನಪೂರ್ಣ ಪಾಟೀಲ್, ವಕೀಲರಾದ ಜಗದೀಶ ಎಸ್ ಮರಕಳ್ಳಿ ದಂಪತಿಗಳ ಶ್ಯಾಮನೂರು ಜೆ.ಹೆಚ್.ಪಟೇಲ್ ಬಡಾವಣೆಯಲ್ಲಿರುವ ಭಾವ ಸಂಗಮ ನಿವಾಸದಲ್ಲಿ ಆಯೋಜಿಸಲಾಗಿದ್ದ ಕವಿ ಕಾವ್ಯ ಭಾವ ಸಂಗಮ, ಹ್ಯಾಪಿನೆಸ್ ಡೇ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸರಳತೆಯೇ ಸಾಹಿತ್ಯದ ನಿಜ ಸೊಬಗು ಎಂದು ಬಣ್ಣಿಸಿದರು.
ಕಲ್ಪನೆಗಿಂತ ಸಾಂದರ್ಭಿಕ ಮತ್ತು ಸಮಕಾಲೀನ ಚಿಂತನೆಗಳಿಗೆ ಬರವಣಿಗೆ ತೆರೆದುಕೊಳ್ಳಬೇಕು. ಆಂತಹ ಸಾಹಿತ್ಯ ಮರು ದೃಷ್ಟಿಗೆ – ಹೊಸ ಸೃಷ್ಟಿಗೆ ಕಾರಣವಾಗುತ್ತದೆ. ಅದೇ ನಿಜವಾದ ಸತ್ವಯುತ ಬರಹ ಎಂದು ವಿಶ್ಲೇಷಿಸಿದರು.
ವಿಶೇಷ ಗೌರವ ಪುರಸ್ಕಾರ ಸ್ವೀಕರಿಸಿ ಮಾತನಾಡಿದ ರಾಣೇಬೆನ್ನೂರು ಭರಮಗಿರಿ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷರು ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಮಾಜ ಸೇವಕರಾದ ಆದರ್ಶ ಸಾಧಕ ಮಹಿಳೆ ಶ್ರೀಮತಿ ಸರೋಜಿನಿ ಯರೇಶೀಮಿ ಸಮಾಜ ಸೇವೆಗೆ ಹಣ ಬೇಕಾಗಿಲ್ಲ. ಸೇವೆ ಮಾಡುವ ಮನಸ್ಸಿದ್ದರೆ ಸಾಕು, ಎಲ್ಲವೂ ನಿಶ್ಚಿಂತೆಯಿಂದ ಸುಗಮವಾಗಿ ಸಾಗುತ್ತದೆ ಎಂದು ನುಡಿದರು.
ಆಶಯ ನುಡಿಯಾಡಿದ ಬಳಗದ ಸಂಚಾಲಕ ಗಂಗಾಧರ ಬಿ ಎಲ್ ನಿಟ್ಟೂರ್ ಮನೋವೈಜ್ಞಾನಿಕ ನೆಲೆಗಟ್ಟಿನಲ್ಲಿ ಕನ್ನಡ ಸಾರಸ್ವತ ಲೋಕಕ್ಕೆ ಉತ್ಕೃಷ್ಟ ಸಾಹಿತ್ಯಿಕ ಕೊಡುಗೆ ನೀಡುವ ಜೊತೆ ಸರಳ ಸಜ್ಜನಿಕೆ ಮೈಗೂಡಿಸಿಕೊಂಡು ಆದರ್ಶಪ್ರಾಯರಾಗಿರುವ ಸುಶೀಲಾದೇವಿ ಅಮ್ಮನವರು ಹಾಗೂ ದೇಶ ವಿದೇಶಗಳಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ತಾಯ್ನೆಲದ ಒಲವಿನ ಧ್ಯೋತಕವಾಗಿ ತಮ್ಮ ಜ್ಞಾನಾನುಭವವನ್ನು ಸಮಾಜ ಸೇವೆಯ ಮೂಲಕ ಕನ್ನಡ ನಾಡಿಗೆ ಹಂಚುತ್ತಿರುವ ಮಾದರಿ ಸಾಧಕ ಮಹಿಳೆ ಶ್ರೀಮತಿ ಸರೋಜಿನಿ ಯರೇಶೀಮಿ ಅವರ ಉಪಸ್ಥಿತಿಯಿಂದಾಗಿ ತಿಂಗಳ ಅಂಗಳ ಬಳಗದ ಮಹಿಳಾ ದಿನಾಚರಣೆ ಸಾರ್ಥಕಗೊಂಡಿತು ಎಂದು ಧನ್ಯತಾ ಭಾವ ವ್ಯಕ್ತಪಡಿಸಿದರು.
ಸಮ್ಮೇಳನದ ಸರ್ವಾಧ್ಯಕ್ಷರರಾಗಿ ಆಯ್ಕೆ ಗೊಂಡಿರುವ ಹಿನ್ನೆಲೆಯಲ್ಲಿ ಹಿರಿಯ ಸಾಹಿತಿ ಶ್ರೀಮತಿ ಸುಶೀಲಾದೇವಿ ಆರ್ ರಾವ್ ಅವರಿಗೆ ಬಳಗದ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಹೂಕುಂಡಲಕ್ಕೆ ನೀರು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಾಹಿತಿ ಮಹಾಂತೇಶ್ ಬಿ ನಿಟ್ಟೂರು ನಿರೂಪಣೆಯೊಂದಿಗೆ ಕವನ ವಾಚಿಸಿದರು.
ಬಳಗದ ಆಹ್ವಾನಿತ ಕವಿ ಮಿತ್ರರಾದ ಶಿವಯೋಗಿ ಹಿರೇಮಠ, ಅರುಂಧತಿ ರಮೇಶ್, ಶಕುಂತಲ, ಮಲ್ಲಮ್ಮ ನಾಗರಾಜ್, ಶೈಲಜಾ, ಎನ್ ಕೆ ಕೊಟ್ರೇಶ್, ಜಗದೀಶ್ ಬೂದಿಹಾಳ, ತಾಜುದ್ದೀನ್ ಬೇತೂರು, ಪ್ರಿಯದರ್ಶಿನಿ, ಸೌಮ್ಯ, ಶಿವಾನಂದಯ್ಯ, ಕುಸುಮ ಲೋಕೇಶ್, ಶೋಭಾ, ವಿಶ್ವನಾಥ್ ಸೇರಿದಂತೆ ಇತರರು ಸಂತಸ, ಸಮೃದ್ಧಿ, ಮಹಿಳೆ ಹಾಗೂ ಮಾನವೀಯ ಮೌಲ್ಯ ಬಿಂಬಿಸುವ ಸ್ವರಚಿತ ಕವನ ವಾಚಿಸಿದರು.
ಪ್ರಾಯೋಜಕರಾದ ಶ್ರೀಮತಿ ಅನ್ನಪೂರ್ಣ ಪಾಟೀಲ್ , ಜಗದೀಶ್ ಮರಕಳ್ಳಿ, ಶಂಕರ್ ಗೌಡ ಪಾಟೀಲ್, ಸೌಜನ್ಯ, ಹಾಗೂ ಅವರ ಕುಟುಂಬ ವರ್ಗ ಮತ್ತು ಬಂಧುಮಿತ್ರರು ಹಾಜರಿದ್ದರು. ಉತ್ತರ ಕರ್ನಾಟಕದ ಸವಿ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
ಸುದ್ದಿದಿನ.ಕಾಂ|ವಾಟ್ಸಾಪ್|9980346243