ದಿನದ ಸುದ್ದಿ

ಉಚ್ಛ ನ್ಯಾಯಾಲಯದ ಆದೇಶಗಳಿಗೆ ಬೆಲೆ ಕೊಡದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ : ಎಸ್.ನಾಗರಾಜ್ ಮನವಿ

Published

on

ಸುದ್ದಿದಿನ,ಹೊಳಲ್ಕೆರೆ:ಪೊಲೀಸ್ ಇಲಾಖೆ ಸಿಬ್ಬಂದಿ ತಪಾಸಣೆ ನೆಪದಲ್ಲಿ ನಮ್ಮ ಸಂಸ್ಥೆ ‘ಕರ್ನಾಟಕ ಫ್ಯಾಮಿಲಿ ಅಸೋಸಿಯೇಷನ್’ ಮೇಲೆ ಆಗಾಗ ದಾಳಿ ನಡೆಸುತ್ತಿದ್ದು, ನಮ್ಮ ಸದಸ್ಯರ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ. ಉಚ್ಛ ನ್ಯಾಯಾಲಯದ ಆದೇಶಗಳಿಗೆ ಬೆಲೆ ಕೊಡದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳಿಗೆ ಸಂಸ್ಥೆಯ ಅಧ್ಯಕ್ಷ ಎಸ್.ನಾಗರಾಜ್ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಉಚ್ಚ ನ್ಯಾಯಾಲಯದ ಆದೇಶದಂತೆ ನಮ್ಮ ಸಂಸ್ಥೆ ಮೂರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಆದರೂ ಪೊಲೀಸರು ನಮ್ಮ ಸಂಸ್ಥೆಯ ಸದಸ್ಯರ ವಾಹನಗಳನ್ನು ಜಪ್ತಿ ಮಾಡುವುದು, ಹಾಗೂ ಅನವಶ್ಯಕವಾಗಿ ನಮ್ಮ ಸದಸ್ಯರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಗಾಂಜಾ ಸೇವನೆ ಪರೀಕ್ಷೆ (ಎನ್ ಡಿಪಿಎಸ್) ಮಾಡಿಸಿ ಅವಮಾನಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಜುಲೈ 4ರಂದು ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ್ದು, ಅದೇ ದಿನ ಪೊಲೀಸರು ನನ್ನ ಮೇಲೆ ಸುಳ್ಳು ಪ್ರಕರಣ 199/2025 ದಾಖಲಿಸಿ ಬಂಧಿಸಿದ್ದರು. ನಂತರ ನ್ಯಾಯಾಲಯ ನನಗೆ ಜಾಮೀನು ಮಂಜೂರು ಮಾಡಿತ್ತು. ಈ ಕುರಿತು ನಾನು ಜುಲೈ 10 ರಂದು ಮಾನ್ಯ ಉಚ್ಛ ನ್ಯಾಯಾಲಯಕ್ಕೆ ಪ್ರಕರಣದ ತಡೆ ಕೋರಿ ಅರ್ಜಿ ಸಲ್ಲಿಸಿದ್ದೆ. ನ್ಯಾಯಾಲಯ ಜೂನ್ 23 ರಂದು ಸಿಆರ್ ಎಲ್ ಪಿ-9994/2025 ರಂತೆ ಸದರಿ ಪ್ರಕರಣವನ್ನು ರದ್ದುಗೊಳಿಸಿರುತ್ತದೆ ಎಂದಿದ್ದಾರೆ.

ಪೊಲೀಸರು ಜಿಲ್ಲೆಯಲ್ಲಿರುವ ಎಲ್ಲಾ ಮನರಂಜನಾ ಕೇಂದ್ರಗಳನ್ನು ಸುಗಮವಾಗಿ ನಡೆಯಲು ಬಿಟ್ಟು, ನಮ್ಮ ಸಂಸ್ಥೆಗೆ ಮಾತ್ರ ದುರುದ್ದೇಶಪೂರ್ವಕವಾಗಿ ತಪಾಸಣೆ ನೆಪದಲ್ಲಿ ನಮ್ಮ ಸದಸ್ಯರಿಗೆ ಮಾನಸಿಕವಾಗಿ ಕಿರುಕುಳ ಕೊಡುತ್ತಿದ್ದಾರೆ. ಇದು ಮಾನವ ಹಕ್ಕುಗಳ ಸ್ಪಷ್ಠ ಉಲ್ಲಂಘನೆ ಆಗಿರುತ್ತದೆ. ಈ ಕುರಿತು ಮಾನವ ಹಕ್ಕುಗಳ ಆಯೋಗಕ್ಕೂ ದೂರು 3222/10/7/2025 ಸಲ್ಲಿಸಿದ್ದೇನೆ. ಈ ಕುರಿತು ವಿಚಾರಣೆ ಪ್ರಗತಿಯಲ್ಲಿದೆ ಎಂದು ಮಾಹಿತಿ‌ ನೀಡಿದ್ದಾರೆ.

ಈ ಕುರಿತು ಸರ್ಕಾರ ಮನರಂಜನಾ ಕೇಂದ್ರಗಳ ವಿಷಯದಲ್ಲಿ ಸ್ಪಷ್ಟ ನಿಲುವು ತಾಳಬೇಕು. ಮಾನ್ಯ ಉಚ್ಛ ನ್ಯಾಯಾಲಯದ ಆದೇಶಗಳನ್ನು ಚಿತ್ರದುರ್ಗ ಜಿಲ್ಲಾ ಪೊಲೀಸರು ಪಾಲಿಸುವಂತೆ ಸಾಮಾಜಿಕ ನ್ಯಾಯ ಒದಗಿಸುವಂತೆ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನಿರ್ದೇಶನ ಮಾಡಬೇಕೆಂದು ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version