ದಿನದ ಸುದ್ದಿ
ಸಂಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮಪಡಿಸುವುದಕ್ಕೆ ಟೆಲಿ-ಕೌನ್ಸಲಿಂಗ್ ಪ್ರಾರಂಭ
ಸುದ್ದಿದಿನ,ಬಳ್ಳಾರಿ: ಸಮಗ್ರ ಮಕ್ಕಳ ರಕ್ಷಣೆ ಯೋಜನೆಯು ನಿರ್ಲಕ್ಷತೆಗೊಳಗಾದ ಪರಿತ್ಯಜಿಸಲ್ಪಟ್ಟ, ದೌರ್ಜನ್ಯಕ್ಕೆ, ಶೋಷಣೆಗೆ ಒಳಗಾದ ಮತ್ತು ಕುಟುಂಬದಿಂದ ಬೇರ್ಪಟ್ಟ ಮಕ್ಕಳು ದುರ್ಬಲ ಸ್ಥಿತಿಗೆ ತಲುಪದಿರುವಂತೆ ತಡೆಯಲು ಹಾಗೂ ಇಂತಹ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ಸಂಕಷ್ಟದಲ್ಲಿರುವ ಮಕ್ಕಳ ಪರಿಸ್ಥಿತಿಯನ್ನು ಉತ್ತಮಪಡಿಸುವ ಉದ್ದೇಶದಿಂದ ಜಿಲ್ಲೆಯಲ್ಲಿ ಆಪ್ತಸಮಾಲೋಚನೆ ಪಡೆಯಲು ಅಗತ್ಯವಿರುವ ಎಲ್ಲಾ ಮಕ್ಕಳಿಗಾಗಿ “ಟೆಲಿ-ಕೌನ್ಸ್ಲಿಂಗ್” ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸೈಯದ್ ಚಾಂದ್ ಪಾಶಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಪ್ತ ಸಮಾಲೋಚನೆ ಬಯಸುವವರು 18ವರ್ಷದೊಳಗಿನ ಎಲ್ಲಾ ಸಂಕಷ್ಠದಲ್ಲಿರುವ ಮಕ್ಕಳು ಹಾಗೂ ಮಕ್ಕಳ ಪೋಷಕರು ಸಹ ಉಚಿತ ಟೋಲ್ ಫ್ರೀ ಸಂ. “18004252244” ಕರೆ ಮಾಡುವ ಮೂಲಕ ಉಚಿತವಾಗಿ ಆಪ್ತ ಸಮಾಲೋಚನೆ ಪಡೆಯಬಹುದು.
ಈ ಟೆಲಿ ಕೌನ್ಸ್ಲಿಂಗ್ ಸೌಲಭ್ಯವು ಪ್ರಮುಖವಾಗಿ ಎರಡು ಸಿಬ್ಬಂದಿಗಳನ್ನು ಹೊಂದಿದ್ದು(ಒಬ್ಬ ಸಿಬ್ಬಂದಿ ಬೆಳಗ್ಗೆ 8 ರಿಂದ ಮಧ್ಯಾಹ್ನ 2 ವರಗೆ ಹಾಗೂ ಮಧ್ಯಾಹ್ನ 2 ರಿಂದ ರಾತ್ರಿ 8 ರವರೆಗೆ) ಪಾಳಿ ಕೆಲಸ ನಿರ್ವಹಿಸುತ್ತಾರೆ ಇವರು ಪ್ರಥಮವಾಗಿ ಮಗುವಿನ ಕರೆಗಳನ್ನು ಸ್ವೀಕರಿಸಿ ಮಗುವಿನ ನಿರ್ಧಿಷ್ಟವಾದ ಸಮಾಲೋಚನೆ ಅವಶ್ಯಕತೆಯನ್ನು ಆದರಿಸಿ ಸಂಬಂಧಪಟ್ಟ ಸಮಾಲೋಚಕರಿಗೆ ಸಂಪರ್ಕ ಕಲ್ಪಿಸುತ್ತಾರೆ.
ಟೋಲ್ ಫ್ರೀ ಸಂ.18004252244 ಗೆ ಬಂದ ಕರೆಗಳಿಗೆ ಅವಶ್ಯಕ ಆಪ್ತ ಸಮಾಲೋಚನೆ ಒದಗಿಸಲು ರಾಜ್ಯಾದಂತ್ಯ ಸಮಗ್ರ ಮಕ್ಕಳ ರಕ್ಷಣಾ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ 148 ಸಮಾಲೋಚಕರಿಗೆ ಹಾಗೂ ಸಮಾಜ ಕಾರ್ಯಕರ್ತರಿಗೆ ಪ್ರಥಮ ಹಂತದ ತರಬೇತಿಯನ್ನು ನೀಡಲಾಗುತ್ತದೆ.
ಮುಂದಿನ ದಿನಗಳಲ್ಲಿ ಅನುಭವದ ಆಧಾರದ ಮೇಲೆ ಮನೋಶಾಸ್ತ್ರ ಬೆಂಬಲದ ಅವಶ್ಯಕತೆಯಿರುವ ಮಕ್ಕಳಿಗೆ ಸೇವೆ ಸಲ್ಲಿಸಲು ಅಗತ್ಯವಿರುವ ಹೆಚ್ಚಿನ ತರಬೇತಿಯನ್ನು ಎಲ್ಲಾ ಸಮಾಲೋಚಕರಿಗೂ ಒದಗಿಸುವ ಮೂಲಕ ಇವರುಗಳ ಸಾಮರ್ಥ್ಯ ಆಗಿಂದಾಗ್ಗೆ ಅಭಿವೃದ್ಧಿ ಮಾಡಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243