ದಿನದ ಸುದ್ದಿ

ಪಠ್ಯ ಪುಸ್ತಕ ಅವಾಂತರಕ್ಕೆ ಕಾರಣವಾದ ಸಮಿತಿಯನ್ನು ಕೂಡಲೇ ವಿಸರ್ಜಿಸಿ‌ : ಕರವೇ ನಾರಾಯಣ ಗೌಡ

Published

on

ಸುದ್ದಿದಿನ, ಬೆಂಗಳೂರು : ಕರ್ನಾಟಕದ ಕನ್ನಡದ ಕೀರ್ತಿಶಿಖರಗಳಲ್ಲಿ ಒಬ್ಬರಾದ ಮೇರುಸಾಹಿತಿ ದೇವನೂರು ಮಹಾದೇವ ಅವರು ಹತ್ತನೇ ತರಗತಿಯ ಪಠ್ಯಕ್ಕೆ ನೀಡಿದ್ದ ಎದೆಗೆ ಬಿದ್ದ ಅಕ್ಷರ’ ಲೇಖನ ಹಿಂದಕ್ಕೆ ಪಡೆದಿರುವುದನ್ನು ಕೇಳಿ ಆಘಾತವಾಯಿತು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕ್ಷಣಕಾಲವೂ ತಡಮಾಡದೆ ಮಧ್ಯೆ ಪ್ರವೇಶಿಸಿ ಬಿಕ್ಕಟ್ಟನ್ನು ಬಗೆಹರಿಸಬೇಕು ಎಂದು ಪತ್ರಿಕಾ ಪ್ರಕಟಣೆ ಹೇಳಿಕೆಯಲ್ಲಿ ಮನವಿಮಾಡಿದ್ದಾರೆ.

ತಮ್ಮ ಪಠ್ಯವನ್ನು ಹಿಂದಕ್ಕೆ ಪಡೆದ ಘಟನೆ ಕರ್ನಾಟಕದ ಇತಿಹಾಸದಲ್ಲಿ ಮೊದಲಬಾರಿ ಘಟಿಸಿದೆ. ಕರ್ನಾಟಕ ಸರ್ಕಾರಕ್ಕೆ ಇದು ಶೋಭೆ ತರುವ ವಿಷಯವಲ್ಲ. ಇಂಥ ನಿರ್ಧಾರ ಕೈಗೊಳ್ಳುವ ಹಿನ್ನೆಲೆಯಲ್ಲಿ ದೇವನೂರು ಅವರು ಅನುಭವಿಸಿರುವ ಮಾನಸಿಕ ಯಾತನೆಯನ್ನು ಮುಖ್ಯಮಂತ್ರಿಗಳು ಅರ್ಥ ಮಾಡಿಕೊಳ್ಳಬೇಕು. ಇದು ನಾಡಿನ ದೃಷ್ಟಿಯಲ್ಲಿ ಒಳ್ಳೆಯ ಬೆಳವಣಿಗೆಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಪಠ್ಯಪುಸ್ತಕ ಪುನರ್ ಪರಿಶೀಲನೆಗಾಗಿ ಸಮಿತಿ ನೇಮಕ ಮಾಡಿದಾಗಲೇ ಸರ್ಕಾರ ಎಡವಿದೆ. ಸಮಿತಿಗೆ ನೇಮಕ ಮಾಡಲು ಬಲಪಂಥೀಯ ವಿದ್ವಾಂಸರು, ಶಿಕ್ಷಣ ತಜ್ಞರೇ ಬೇಕು ಎಂದಿದ್ದರೆ ಹಲವಾರು ಮಂದಿ ಸಜ್ಜನರು, ಎದೆಯಲ್ಲಿ ನಂಜು ಇಟ್ಟುಕೊಳ್ಳದೆ ಕಾರ್ಯ ನಿರ್ವಹಿಸುವವರು ಲಭ್ಯವಿದ್ದರು. ಆದರೆ ಸರ್ಕಾರ ಇಂಥವರನ್ನು ನೇಮಕ ಮಾಡದೆ ತಪ್ಪೆಸಗಿದೆ ಎಂದು ಕಿಡಿಕಾರಿದ್ದಾರೆ.

ಶಿಕ್ಷಣ ತಜ್ಞನಲ್ಲದ, ಕನ್ನಡ ಸಾಹಿತಿಗಳ ಕುರಿತು ಅಗೌರವ ಹೊಂದಿರುವ, ರಾಷ್ಟ್ರಕವಿ ಕುವೆಂಪು ಅವರನ್ನು ನಿಂದಿಸಿ ಲೇಖನ ಬರೆದ, ನಾಡಗೀತೆಯನ್ನು ಅತ್ಯಂತ ಕೊಳಕಾಗಿ ಪರಿಷ್ಕರಿಸಿ ಬರೆದ, ಕನ್ನಡಿಗರ ಅಸ್ಮಿತೆಯ ಪ್ರತೀಕವಾಗದ ಕನ್ನಡ ಧ್ವಜವನ್ನು ತನ್ನ ಒಳಚೆಡ್ಡಿಗೆ ಹೋಲಿಸಿದ ವ್ಯಕ್ತಿಯನ್ನು ಪಠ್ಯ ಪುಸ್ತಕ ಸಮಿತಿಗೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದೇ ಮೊದಲ ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಮಾಡಿಕೊಂಡು ಜಾಲತಾಣಗಳಲ್ಲಿ ಸದಾ ಕನ್ನಡದ್ರೋಹದ ಕನ್ನಡದ್ರೋಹದ ಕೆಲಸವನ್ನೇ ಬಂದ ವ್ಯಕ್ತಿಯನ್ನು ಪಠ್ಯಪುಸ್ತಕ ಪರಿಶೀಲನೆಗೆ ಬಿಟ್ಟರೆ ಏನಾಗಬಹುದು ಎಂಬುದನ್ನು ಇಂದು ನಾವು ನೋಡುತ್ತಿದ್ದೇವೆ. ಕನ್ನಡದ ಸಾರಸ್ವತ ಲೋಕ ಎದ್ದು ನಿಂತು ಪ್ರತಿಭಟಿಸುತ್ತಿದೆ. ಮಕ್ಕಳ ಪಠ್ಯದಲ್ಲಿ ನಂಜು ತುಂಬುವ ಇಂಥವರ ವಿರುದ್ಧ ಶೈಕ್ಷಣಿಕ, ಬುದ್ಧಿಜೀವಿ ವಲಯ ಧ್ವನಿ ಎತ್ತಿದೆ.

ಸರ್ಕಾರ ಕೂಡಲೇ ಪರಿಷ್ಕರಣಾ ಸಮಿತಿಯ ಎಲ್ಲ ಪರಿಷ್ಕರಣೆಯನ್ನೂ ತಿರಸ್ಕರಿಸಬೇಕು. ಈಗಾಗಲೇ ಮುದ್ರಿಸಿರುವ ಹಳೆಯ ಪಠ್ಯಪುಸ್ತಕಗಳನ್ನೇ ಶಾಲೆಗಳಿಗೆ ನೀಡಬೇಕು. ಶಾಲೆಗಳು ಈಗಾಗಲೇ ಆರಂಭವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲವಾಗದಂತೆ ಕೂಡಲೇ ಹಳೆಯ ಪಠ್ಯ ಪುಸ್ತಕಗಳನ್ನೇ ಒದಗಿಸಬೇಕು. ಇಷ್ಟೆಲ್ಲ ಅವಾಂತರಕ್ಕೆ ಕಾರಣವಾದ ಸಮಿತಿಯನ್ನು ಈ ಕೂಡಲೇ ವಿಸರ್ಜಿಸಬೇಕು‌ ಎಂದು ಸೂಚಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರರು ಸಾಮಾಜಿಕ, ಸಾಂಸ್ಕೃತಿಕ ವಿಷಯಗಳಲ್ಲಿ ಎಚ್ಚರ ಮತ್ತು ಪ್ರಜ್ಞೆ ಉಳ್ಳವರು. ಅವರು ಯಾವುದೇ ರೀತಿಯ ಬಾಹ್ಯ ಒತ್ತಡಕ್ಕೆ ಒಳಗಾಗದೆ ನಾಯಕತ್ವದ ಗುಣವನ್ನು ಪ್ರದರ್ಶಿಸಬೇಕು. ಕೂಡಲೇ ಮಧ್ಯಪ್ರವೇಶಿಸಿ ವಿವಾದವನ್ನು ಬಗೆಹರಿಸಬೇಕು ಎಂದು ಮನವಿ ಮಾಡುತ್ತೇನೆ ಎಂದಿದ್ದಾರೆ.

ದೇವನೂರು ಮಹದೇವ, ಬರಗೂರು ರಾಮಚಂದ್ರಪ್ಪ ಸೇರಿದಂತೆ ಕನ್ನಡದ ಹಿರಿಯ ಸಾಹಿತಿಗಳು ಕನ್ನಡದ ಆಸ್ತಿ, ಕನ್ನಡತನದ ಪ್ರತೀಕ, ಕನ್ನಡಿಗರ ಹೆಮ್ಮೆ. ಅವರಿಗೆ ಅಪಚಾರ, ಅಪಮಾನ ಎಸಗುವ ಯಾವ ಕೆಲಸವನ್ನೂ ಯಾರೂ ಮಾಡಬಾರದು. ಕರ್ನಾಟಕ ರಕ್ಷಣಾ ವೇದಿಕೆ ಇದನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದ್ದಾರೆ.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version