ರಾಜಕೀಯ

ಈಶ್ವರಪ್ಪನವರ ರಕ್ಷಣೆಗೆ ನಿಂತ ಸರ್ಕಾರ ; 40% ಕಮಿಷನ್ ನಲ್ಲಿ ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಪಾಲುದಾರರಾ? : ಬಿ ಕೆ ಹರಿಪ್ರಸಾದ್

Published

on

ಸುದ್ದಿದಿನ,ಬೆಂಗಳೂರು : ಸಂತೋಷ್ ಪಾಟೀಲ್ ಆತ್ಮಹತ್ಯೆ ವಿಷಯಕ್ಕೆ ಕ್ರಿಮಿನಲ್ ಆರೋಪ ಹೊತ್ತಿರುವ ಸಚಿವ ಈಶ್ವರಪ್ಪನವರನ್ನ ಸಚಿವ ಸಂಪುಟದಿಂದ ವಜಾ ಮಾಡಲು ರಾಜ್ಯಪಾಲರನ್ನ ಕಾಂಗ್ರೆಸ್ ನಿಯೋಗ ಭೇಟಿ ನೀಡಿ ಮನವಿ ಮಾಡಿದ್ದೇವೆ. ಸೆಕ್ಷನ್ 306ರಡಿಯಲ್ಲಿ ಈಶ್ವರಪ್ಪನವರನ್ನ ಬಂಧಿಸಿ ತನಿಖೆ ನಡೆಸಲು ಸರ್ಕಾರಕ್ಕೆ ಸೂಚನೆ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದುವಿ ಧಾನ ಪರಿಷತ್ ವಿಪಕ್ಷ ನಾಯಕರಾದ ಬಿಕೆ ಹರಿಪ್ರಸಾದ್ ಹೇಳಿದ್ದಾರೆ

ಸಚಿವ ಈಶ್ವರಪ್ಪನವರ ಪರವಾಗಿ ವಕಲಾತ್ತು ವಹಿಸುತ್ತಿರುವ ಸಿಎಂ ಬೊಮ್ಮಾಯಿಯವರು, ಹಾಗೂ ನಾ ಖಾನೇ ದುಂಗಾ, ನಾ ಖಾವೂಂಗಾ ಎಂದು ಘೋಷಣೆ ಮಾಡಿದ್ದ ಮೋದಿಯವರು ಮೌನವಹಿಸಿದ್ದಾರೆ. ಸಚಿವರ ಕಮಿಷನ್ ಪಡೆಯುತ್ತಿರುವುದರಲ್ಲಿ ಸಿಎಂ ಹಾಗೂ ಪಿಎಂಗೂ ಪಾಲುದಾರಿಕೆ ಇರಬೇಕು. ಇಲ್ಲದಿದ್ದರೇ ಈ ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ಎಂದರು.

ಸಂತೋಷ್ ಪಾಟೀಲ್ ಸೇರಿದಂತೆ ಗುತ್ತಿಗೆದಾರರ ಸಂಘ ರಾಜ್ಯದಲ್ಲಿ 40% ಕಮಿಷನ್ ಪಡೆಯುತ್ತಿದೆ ಎಂದು ಪ್ರಧಾನಿಗಳಿಗೂ ಪತ್ರ ಬರೆದಿದ್ದರೂ ಕಮಿಷನ್ ಬಗ್ಗೆ ರಾಜ್ಯ ಸರ್ಕಾರ ಹಾಗೂ ಪ್ರಧಾನಿ ಮೌನವಹಿಸಿದ್ದಾರೆ. ಆರೋಪ ಬಂದ ಕೂಡಲೇ ಕ್ರಮವಹಿಸಿದ್ದರೆ ಅಮಾಯಕ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಿರಲಿಲ್ಲ. ಸರ್ಕಾರದ ನಿರ್ಲಕ್ಷ್ಯವೇ ಸಂತೋಷ್ ಆತ್ಮಹತ್ಯೆಗೆ ಕಾರಣ, ಇದೊಂದು ಪ್ರಾಯೋಜಿತ ಕೊಲೆ ಎಂದು ಕಿಡಿ ಕಾರಿದರು.

ಸಂತೋಷ್ ಪಾಟೀಲ್ ಪತ್ನಿ ಸೇರಿದಂತೆ ಇಡೀ ಕುಟುಂಬ ಸಚಿವ ಈಶ್ವರಪ್ಪನೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಸರ್ಕಾರಕ್ಕೆ ನೈತಿಕತೆ ಇದ್ರೆ ಈಶ್ವರಪ್ಪನವರನ್ನ ವಜಾ ಮಾಡಿ ಕೂಡಲೇ ಬಂಧಿಸಿಬೇಕು. ಬಿಜೆಪಿ ಸರ್ಕಾರದ ಕಮಿಷನ್ ದಂಧೆಯಿಂದ ರಾಜ್ಯದಲ್ಲಿ ಗುತ್ತಿಗೆದಾರರು ಕಿರುಕುಳ ಅನುಭವಿಸುವಂತಾಗಿದೆ.

ಈಶ್ಬರಪ್ಪನವರ ರಾಜಕೀಯ ಆರಂಭವೇ ಅಮಾಯಕ ಹೆಣಗಳ ಮೇಲೆ ರಾಜಕೀಯ ನಡೆಸಿದ್ದು. ಕಾಂಗ್ರೆಸ್ ಪಕ್ಷಕ್ಕೆ ಹೆಣದ ಮೇಲೆ ರಾಜಕೀಯ ಮಾಡಿದ ಇತಿಹಾಸವೇ ಇಲ್ಲ. ಈಶ್ವರಪ್ಪನವರನ್ನ ವಜಾ‌ಮಾಡಿ, ಬಂಧಿಸಿ ತನಿಖೆ ನಡೆಸದೇ ಇದ್ದರೇ ಕಾಂಗ್ರೆಸ್ ಪಕ್ಷ ರಾಜ್ಯಾದ್ಯಂತ ಹೋರಾಟ ನಡೆಸಲಿದೆ ಎಂದರು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version