ದಿನದ ಸುದ್ದಿ
ದೇಶದಲ್ಲಿರುವ ‘ಓಬಿಸಿಗಳಿಗೆ ಸಂವಿಧಾನದತ್ತ ಮೀಸಲಾತಿಯ’ ಮಹತ್ವದ ಅರಿವಿಲ್ಲ ; ಡಾ.ಶಿಲಾಧರ ಮುಗಳಿ
ಸುದ್ದಿದಿನ,ಧಾರವಾಡ : ನಮ್ಮ ದೇಶದಲ್ಲಿರುವ ಇತರೆ ಹಿಂದುಳಿದ ವರ್ಗ(ಓಬಿಸಿ)ಗಳ ಹಿತರಕ್ಷಣೆಗಾಗಿ ಸೇರಿಸಲಾಗಿರುವ ಸಂವಿಧಾನದ ಆರ್ಟಿಕಲ್-340ರ ಮಹತ್ವ ಮತ್ತು ಅರಿವಿಲ್ಲದ ಓಬಿಸಿಗಳಿಗೆ ಬಾಬಾಸಾಹೇಬರು ನೀಡಿದ ಸಂವಿಧಾನದತ್ತ ಮೀಸಲಾತಿಯ ಕುರಿತು ತಿಳಿದುಕೊಳ್ಳದೆ ಹಿತಶತ್ರುಗಳ ಮಾತಿಗೆ ಮರುಳಾಗಿ ಸಂವಿಧಾನದ ಸವಲತ್ತುಗಳಿಂದ ವoಚಿತರಾಗಲು ತಮಗೆ ತಾವೇ ಕಾರಣರಾಗಿದ್ದಾರೆ ಎಂದು ಕವಿವಿ ಇತಿಹಾಸ ಪ್ರಾಧ್ಯಾಪಕ ಡಾ.ಶಿಲಾಧರ ಮುಗಳಿ ವಿಷಾದ ವ್ಯಕ್ತಪಡಿಸಿದರು.
ಅವರು ಧಾರವಾಡದಲ್ಲಿ ಗಣಕರಂಗ ಸಂಸ್ಥೆಯು (Nov.26) ಸಂವಿಧಾನ ದಿನಾಚರಣೆ ಅಂಗವಾಗಿ ಎರ್ಪಡಿಸಿದ್ದ 3ಬಿ ನೆನಪಿನ ಕವಿಗೋಷ್ಟಿಯ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಿದ್ದರು. ಬಹುಮುಖ ವ್ಯಕ್ತಿತ್ವದ ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರು ಗುರುತಿಸಿರುವಂತೆ ಈ ದೇಶದಲ್ಲಿ ಆಚರಿಸಲಾಗುತ್ತಿರುವ ಅಸ್ಪøಶ್ಯತೆಯ ಮೂರು ಪ್ರಕಾರಗಳಾದ ಮುಟ್ಟಿಸಿಕೊಳ್ಳದ, ಸಂಪರ್ಕಿಸದ ಮತ್ತು ನೋಡಬಾರದ ಶೋಷಿತ ವರ್ಗಗಳ ಉದ್ಧಾರವನ್ನು ಗಮನದಲ್ಲಿಟ್ಟುಕೊಂಡು ವಿಶ್ವವೇ ಒಪ್ಪುವಂತಹ ಸಂವಿಧಾನ ರಚನೆ ಮಾಡಿದ್ದು ಈಗ ಇತಿಹಾಸ. ಮೊದಲು ಮತ್ತು ಅಂತಿಮವಾಗಿ ನಾವು ಭಾರತೀಯರು ಎಂದು ಪ್ರತಿಪಾಧಿಸಿದ ದೇಶಭಕ್ತ ಬಾಬಾಸಾಹೇಬ ಡಾ.ಅಂಬೇಡ್ಕರ ಅವರು ಕೊಡುಗೆಯಾಗಿ ಈ ದೇಶಕ್ಕೆ ನೀಡಿದ್ದು ರಾಜಕೀಯ ಮೀಸಲಾತಿ ಮತ್ತು ರಾಜಕೀಯೇತರ ಮೀಸಲಾತಿ ಎಂಬ ಎರಡು ಮೀಸಲಾತಿಗಳು ಮಾತ್ರ. ರಾಜಕೀಯ ದುರ್ಲಾಭಕ್ಕಾಗಿ ರಾಜಕೀಯ ಮೀಸಲಾತಿಯನ್ನು ಇಂದಿಗೂ ಮುಂದುವರೆಸಲಾಗುತ್ತಿದೆ. ರಾಜಕೀಯೇತರ ಮೀಸಲಾತಿಗೆ ಕೊನೆಯೆಂಬುದಿಲ್ಲ. ವಿವಿಧ ವಲಯಗಳಲ್ಲಿ ಅಂದರೆ ಭಾಷಾ ಮಾಧ್ಯಮ ಮೀಸಲಾತಿ, ಯೋಜನಾ ನಿರಾಶ್ರಿತರ ಮೀಸಲಾತಿ, ಮಹಿಳಾ ಮೀಸಲಾತಿ, ವಿಶೇಷ ವಲಯ ಮೀಸಲಾತಿ, ಕಾಶ್ಮೀರ ಪಂಡಿತರಿಗೆ ಮೀಸಲಾತಿ ಹೀಗೆ ಹಲವಾರು ರೀತಿಯ ಮೀಸಲಾತಿಗಳು ಜಾರಿಯಲಿದ್ದರೂ ಸಹ ಎಲ್ಲರ ಕಣ್ಣುಕಿಸುರಾಗುವುದು ಎಸ್ಸಿ-ಎಸ್ಟಿ ಅಂದರೆ ದಲಿತ-ದಮನಿತರ ಮೀಸಲಾತಿಯ ವಿಷಯದಲ್ಲಿ. ಆದರೆ ಇತ್ತೀಚಿನ ದಿನಗಳಲ್ಲಿ ಮೀಸಲಾತಿಯ ಸಂಪೂರ್ಣ ಅರಿವಿರದ ಕೆಲವು ಎಡಬಿಡಂಗಿಗಳು ದೇಶಬಾಂಧವರಲ್ಲಿ ತಪ್ಪು ತಿಳುವಳಿಕೆ, ಪರಸ್ಪರ ಅಪನಂಬಿಕೆ, ಅಸೂಯೆ, ವೈರತ್ವ ಮೂಡುವಂಥಹ ಸನ್ನಿವೇಶ ಸೃಷ್ಟಿಸುವ ಕುತಂತ್ರಗಳನ್ನು ಮಾಡುತ್ತಿದ್ದಾರೆ. ಈ ಕುರಿತು ಈ ದೇಶದ ಸಂವಿಧಾನದ ಸರ್ವ ಫಲಾನುಭವಿಗಳು ಅಂದರೆ ಜಾಗೃತ ದೇಶಬಾಂಧವರು ಎಚ್ಚರಿಕೆಯಿಂದ ಇರಬೇಕಾದುದು ಅವಶ್ಯ ಎಂದು ವಿವರಿಸಿದರು.
ಆಶಯ ನುಡಿಗಳನ್ನಾಡಿದ ಕವಿ ಡಾ.ಮಹೇಶ ರುದ್ರಕರ ಅವರು, ಸರ್ವ ಶೊಷಿತ ಸಮುದಾಯಗಳಷ್ಟೇ ಅಲ್ಲದೇ ಸರ್ವ ಪ್ರಜೆಗಳ ಕಲ್ಯಾಣವನ್ನು ಬಯಸುವ ವಿಶ್ವಶ್ರೇಷ್ಟ ಭಾರತದ ಸಂವಿಧಾನ ನೀಡುವ ಎಲ್ಲ ಸವಲತ್ತುಗಳನ್ನು ಪಡೆದುಕೊಳ್ಳಲು ಸಂವಿಧಾನದ ಕುರಿತಾದ ಅರಿವು, ತಿಳುವಳಿಕೆ ಮೂಡಿಸುವ ಕೆಲಸ ನಿರಂತರ ನಡೆಯಬೇಕಾಗಿದೆ. ಕೆಲವು ರೂಡಿಗತ ಸಂಪ್ರದಾಯವಾದಿಗಳು ಬಹುತ್ವದ ಭಾರತದ ಮುಗ್ದರನ್ನು ದುರೂಪಯೋಗಪಡಿಸಿಕೊಳ್ಳಲು ಇಲ್ಲದ ಕಥೆ, ಪುರಾಣಗಳನ್ನು ಕಟ್ಟಿ ದಾರಿ ತಪ್ಪಿಸುವ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ದುಷ್ಕøತ್ಯವನ್ನು ತಡೆಯುವುದು ಸುಶಿಕ್ಷಿತ ಸಮುದಾಯದ ಜವಾಬ್ದಾರಿಯಾಗಿದೆ ಎಂದು ಹೇಳುತ್ತಾ, ಕೊನೆಯಲ್ಲಿ ಸಂವಿಧಾನದ ಮಹತ್ವ ಸಾರುವ ಸ್ವರಚಿತ ಕವನ ವಾಚಿಸಿದರು.
ಜಗತ್ತಿನ ಶಾಂತಿ, ಮೈತ್ರಿಯ ಸಂದೇಶ ನೀಡಿದ ಬುದ್ಧ, ಕಾಯಕದ ಮಹತ್ವ ಸಾರಿದ ಬಸವಾದಿ ಶರಣರು ಮತ್ತು ಆಧುನಿಕ ಭಾರತಕ್ಕೆ ದಿಕ್ಸೂಚಿಯಾದ ವಿಶ್ವಶ್ರೇಷ್ಟ ಸಂವಿಧಾನ ನೀಡಿದ ಬಾಬಾಸಾಹೇಬ ಡಾ.ಅಂಬೇಡ್ಕರ ನೆನಪಿನ ಕವಿಗೋಷ್ಟಿ ಮತ್ತು ಸಂವಿಧಾನ ದಿನಾಚರಣೆ ಹೆಚ್ಚು ಸೂಕ್ತವಾಗಿದೆ. 3ಬಿ ನೆನಪಿನ ಕವಿಗೋಷ್ಟಿ ಹೆಚ್ಚು ಅರ್ಥಪೂರ್ಣವಾಗಿದೆ. ಎಲ್ಲಾ ರಂಗಗಳಲ್ಲಿ ಅಭಿವೃದ್ಧಿ ಕಾಣಬೇಕಾಗಿತ್ತು ಆದರೆ ಸಿನಿಕತನ ಹೆಚ್ಚಾಗುತ್ತಿರುವ ಇಂದಿನ ಸಾಮಾಜೀಕರಲ್ಲಿ ಸಾಮಾಜಿಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ತೀವ್ರವಾಗಿದೆ ಎಂದು ಅತಿಥಿಗಳಾಗಿ ಆಗಮಿಸಿದ್ದ ಕವಿ, ಕಥೆಗಾರ ಡಾ.ಬಸು ಬೇವಿನಗಿಡದ ಅಭಿಪ್ರಾಯ ವ್ಯಕ್ತಪಡಿಸಿದರು.
ಚಿಂತಕ ಲಕ್ಷ್ಮಣ ಬಕ್ಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮವನ್ನು ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ ಅಚ್ಚುಕಟ್ಟಾಗಿ ನಿರ್ವಹಿಸಲು ನಿತಿನ್ ಗುಡಿಮನಿ ಸಹಕರಿಸಿದರು. ಕಾರ್ಯಕ್ರಮದ ಆರಂಭಕ್ಕೆ ಇತ್ತಿಚೆಗೆ ಅಗಲಿದ ಮಹಾನ್ ಚೇತನಗಳಾದ ಕನ್ನಡದ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು, ಕಲಾವಿದ-ರಾಜಕಾರಣಿ ಡಾ.ಅಂಬರೀಷ ಮತ್ತು ಕವಿ-ರಾಜಕಾರಣಿ ಜಾಫರ್ ಶರೀಪ್ ಗೌರವಾರ್ಥ ಒಂದು ನಿಮಿಷದ ಮೌನಾಚರಣೆ ಮೂಲಕ ಗೌರವ ನಮನ ಸಲ್ಲಿಸಲಾಯಿತು. ನಂತರ ನಡೆದ ‘ನಮ್ಮ ಭಾರತದ ಸಂವಿಧಾನ’ ಶೀರ್ಷಿಕೆಯಡಿಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಂದೀಪ ಕುಲಕರ್ಣಿ, ಶ್ರೀಧರ ಗಸ್ತಿ, ಆನಂದ ಮಾಲಗಿತ್ತಿಮಠ, ಆನಂದ ಹಕ್ಕೇನ್ನವರ, ಅರುಣ ಮೂಡಿ, ಅರುಣ ಕೊಪ್ಪ, ಭಾಗ್ಯಶ್ರೀ ರಜಪೂತ, ಎನ್.ಆರ್.ಠಕ್ಕಾಯಿ, ಸಚಿನ್ ಮುಂದಿನಕೇರಿ, ವಿನೋದಾ ಕರಣಂ, ಸುಭಾಸ ಚವಾಣ್, ಶರಣಪ್ಪ ಗೊಲ್ಲರ, ಶಿವಾನಂದ ಚವಾರ, ಅನಿಲಕುಮಾರ ಉಮಚಗಿ ಮುಂತಾದ ಕವಿಗಳು ಸ್ವರಚಿತ ಕವನ ವಾಚಿಸಿದ ನಂತರ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮ ನಿರ್ವಾಹಕರು
9902674005 / 9845109480
ಸುದ್ದಿದಿನ.ಕಾಂ|ವಾಟ್ಸಾಪ್|9986715401