ದಿನದ ಸುದ್ದಿ
ನಾಳೆ ಕರ್ನಾಟಕ ಬಂದ್ ಇಲ್ಲ: ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್
ಸುದ್ದಿದಿನ,ಬೆಂಗಳೂರು: ಸೋಮವಾರ ಕರ್ನಾಟಕ ಬಂದ್ ಗೆ ಅವಕಾಶವಿರುವುದಿಲ್ಲ. ಹಾಗೇನಾದರು ಒಂದು ವೇಳೆ ಬಂದ್ ಮಾಡಲು ಪ್ರಯತ್ನಿಸಿದರೆ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.
ಎಂದಿನಂತೆ ಶಾಲಾ-ಕಾಲೇಜುಗಳು ನಡೆಯಲಿವೆ. ಹಾಗೇ ಖಾಸಗಿ ಶಾಲೆಗಳೂ ಸಹ ರಜೆಯನ್ನು ಘೋಷಿಸಿರುವುದಿಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ಸ್ವಯಂಪ್ರೇರಿತ ಬಂದ್ ಗೆ ಕರೆ
ಭಾನುವಾರ (ಇಂದು) ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು, “ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು 24 ಗಂಟೆಗಳ ಅವಧಿಯಲ್ಲಿ ರೈತರ ಸಾಲಾಮನ್ನಾ ಮಾಡಬೇಕಿತ್ತು. ಆದರೆ, ಈಗಿರುವ ಸಮ್ಮಿಶ್ರ ಸರ್ಕಾರದಲ್ಲಿ ಅವರು ಕೊಟ್ಟ ಮಾತಿಗೆ ತಪ್ಪಿನಡೆಯುತ್ತಿದ್ದಾರೆ. ಆದ್ದರಿಂದ ಎಲ್ಲರೂ ಸ್ವಯಂಪ್ರೇರಿತರಾಗಿ ಬಂದ್ ಗೆ ಬೆಂಬಲವನ್ನು ಸೂಚಿಸ ಬೇಕು” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.