ಲೈಫ್ ಸ್ಟೈಲ್
ಕ್ಷಯರೋಗ; ಒಂದು ಸವಾಲು
ಕ್ಷಯರೋಗ (Tuberculosis) ಎನ್ನುವುದು ಜನಸಾಮಾನ್ಯರಲ್ಲಿ ಕೇಳಲ್ಪಡುವ ಒಂದು ಸಾಮಾನ್ಯ ಸಾಂಕ್ರಾಮಿಕ ಖಾಯಿಲೆ. ಒಬ್ಬರಿಂದೊಬ್ಬರಿಗೆ ಸುಲಭವಾಗಿಯೇ ಹರಡುವ ಈ ಖಾಯಿಲೆ, ಇಡೀ ಪ್ರಪಂಚದಲ್ಲಿ, ಅದರಲ್ಲೂಭಾರತದಲ್ಲಿ ಆರೋಗ್ಯ ಕ್ಷೇತ್ರದ ಅತೀ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ. ಕಾರಣ, ಬೇರೆ ಯಾವುದೇ ಸಾಂಕ್ರಾಮಿಕ ರೋಗಕ್ಕಿಂತ ಅತೀ ಹೆಚ್ಚು ಜನರನ್ನು ಮರಣಕ್ಕೀಡು ಮಾಡುವ ಖಾಯಿಲೆ ಇದಾಗಿದೆ.
2014 ನೇ ಸಾಲಿನ ಅಂಕಿಅಂಶಗಳಲ್ಲಿ ಹೇಳುವುದಾದರೆ ಭಾರತದಲ್ಲಿ 28.4ಲಕ್ಷ ಜನಪ್ರತಿವರ್ಷ ಕ್ಷಯರೋಗಕ್ಕೀಡಾಗುತ್ತಿದ್ದಾರೆ ಹಾಗೂ 5.1ಲಕ್ಷ ರೋಗಿಗಳು ಮರಣಕ್ಕೀಡಾಗುತ್ತಿದ್ದಾರೆ. ಇನ್ನೂ ಸೂಕ್ಷ್ಮವಾಗಿ ಹೇಳುವುದಾದರೆ ಭಾರತದಲ್ಲಿ ಪ್ರತಿದಿನ 6000ಕ್ಕೂ ಅಧಿಕ ಜನ ಕ್ಷಯರೋಗಕ್ಕೆ ತುತ್ತಾಗುತ್ತಿದ್ದಾರೆ ಮತ್ತು 600ಕ್ಕೂ ಹೆಚ್ಚು ರೋಗಿಗಳು ಸಾಯುತ್ತಿದ್ದಾರೆ ಅಂದರೆ ಪ್ರತೀ 5 ನಿಮಿಷಗಳಿಗೆ 2 ರೋಗಿಗಳು ಮರಣಕ್ಕೀಡಾಗುತ್ತಿದ್ದಾರೆ.
ಕ್ಷಯರೋಗವು ಮೈಕೊಬ್ಯಾಕ್ಟೀರಿಯಂ ಟ್ಯೂಬರ್ಕುಲೊಸಿಸ್ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಮುಖ್ಯವಾಗಿ ಶ್ವಾಸಕೋಶಗಳಿಗೆ ಹಾನಿಮಾಡುವ ಈ ಖಾಯಿಲೆ, ಮುಂದೆ ಇತರ ಅಂಗಾಂಗಗಳಿಗೂ ಹಾನಿ ಮಾಡಬಲ್ಲದು.
ಸೋಂಕು ಹರಡುವ ರೀತಿ: ಕೆಮ್ಮು, ಸೀನು ಅಥವಾ ಉಗುಳಿನಲ್ಲಿರುವ ಹನಿಗಳೊಳಗಿರುವ ರೋಗಾಣು ಮೂಲಕ ಒಬ್ಬರಿಂದೊಬ್ಬರಿಗೆ ಹರಡುತ್ತದೆ.
ಶ್ವಾಸಕೋಶ ಕ್ಷಯರೋಗದ ಗುಣಲಕ್ಷಣಗಳು
- 2 ವಾರಗಳಿಗೂ ಹೆಚ್ಚು ಕೆಮ್ಮು
- 2ವಾರಗಳಿಗೂ ಹೆಚ್ಚು ಜ್ವರ
- ತೂಕ ಕಡಿಮೆಯಾಗುವುದು
ಕಫದಲ್ಲಿ ರಕ್ತ ಎದೆಯ ಎಕ್ಸ್ರೇದಲ್ಲಿ ಯಾವುದೇ ಅಸ್ವಾಭಾವಿಕ ಲಕ್ಷಣ
ಕ್ಷಯದ ಪರಿಣಾಮಗಳು
- ಮೊದಮೊದಲು ಶ್ವಾಸಕೋಶಗಳಿಗಷ್ಟೇ ಸೀಮಿತವಾಗಿ ಶುರುವಾಗುವ ಕ್ಷಯ, ಮುಂದೆ ಮಿದುಳು, ಬೆನ್ನುಮೂಳೆ, ಸಣ್ಣಕರುಳು, ದೊಡ್ಡಕರುಳು, ಹೀಗೆ ವಿವಿಧ ಅಂಗಾಂಗಗಳಿಗೆ ಹರಡಬಲ್ಲದು.
- ಹೆಚ್.ಐ.ವಿ. ಸೋಕು ಇರುವ ವ್ಯಕ್ತಿಗಳಿಗೆ ಸುಲಭವಾಗಿ ಈ ಸೋಂಕು ಅಂಟಿಕೊಂಡು, ವ್ಯಕ್ತಿಯ ರೋಗನಿರೋಧಕ ಶಕ್ತಿ ಕಡಿಮೆ ಮಾಡುತ್ತದೆ.
- ಜೊತೆಯಲ್ಲಿ ಅಪೌಷ್ಟಿಕತೆಯೂ ಇದ್ದಲ್ಲಿ, ರೋಗಾಣು ಬೇಗನೇ ಎಲ್ಲಾ ಅಂಗಾಂಗಗಳನ್ನು ಆವರಿಸಿಕೊಳ್ಳುತ್ತದೆ.
ಕಂಡು ಹಿಡಿಯುವ ವಿಧಾನ
- ಕಫ ಪರೀಕ್ಷೆ
- ಎಕ್ಸ್ರೇ
- ರಕ್ತ ಪರೀಕ್ಷೆ
ಚಿಕಿತ್ಸೆ: ಕ್ಷಯರೋಗದ ಚಿಕಿತ್ಸೆಯಲ್ಲಿ ಮುಖ್ಯವಾಗಿ 5 ರೀತಿಯ ಧಾತುಗಳನ್ನೊಳಗೊಂಡ ಮಾತ್ರೆಗಳನ್ನು ನೀಡಲಾಗುತ್ತದೆ
- ಐಸೊನಿಯಾಝಿಡ್
- ರಿಫಾಂಪಿಸಿನ್
- ಪೈರಝಿನಮೈಡ್
- ಎಥಾಂಬುಟಾಲ್
- ಸ್ಟ್ರೆಪ್ಟೊಮೈಸಿನ್
ಈ ಎಲ್ಲಾ ಮಾತ್ರೆಗಳನ್ನು ವಿವಿಧ ಕಾಂಬಿನೇಷನ್ಗಳಲ್ಲಿ ಪ್ರತಿದಿನದಂತೆ ಸೇವಿಸಬೇಕಾಗುತ್ತದೆ.
ಕ್ಷಯರೋಗಿಗಳನ್ನು ಚಿಕಿತ್ಸಾ ನಿಟ್ಟಿನಲ್ಲಿ ಮುಖ್ಯವಾಗಿ ಎರಡು ವಿಭಾಗಗಳಾಗಿ ವಿಂಗಡಿಸಲಾಗುತ್ತದೆ.
- ಹೊಸದಾಗಿ ಕಂಡುಹಿಡಿಯಲ್ಪಟ್ಟ ರೋಗಿಗಳು: ಇವರು 2+4 ತಿಂಗಳು, ಒಟ್ಟು 6 ತಿಂಗಳ ಕಾಲ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ
- ಮೊದಲು ಚಿಕಿತ್ಸೆ ಪಡೆದಿದ್ದ ರೋಗಿಗಳು: ಇವರು 2+1+5 ತಿಂಗಳು, ಒಟ್ಟು 8 ತಿಂಗಳ ಕಾಲ ಮಾತ್ರೆಗಳನ್ನು ಸೇವಿಸಬೇಕಾಗುತ್ತದೆ
ಆದರೆ ಈ ಸುದೀರ್ಘ ಚಿಕಿತ್ಸಾ ಅವಧಿಗೆ ಕೆಲ ರೋಗಿಗಳು ಒಗ್ಗಿಕೊಳ್ಳದೆ ಮಧ್ಯದಲ್ಲೇ ಕೈಬಿಡುವ ಸಾಧ್ಯತೆಗಳಿರುತ್ತವೆ. ಪರಿಣಾಮ ಈ ಮೇಲೆ ತಿಳಿಸಿರುವ ಮಾತ್ರೆಗಳಿಗೆ ದೇಹದಲ್ಲಿ ಪ್ರತಿರೋಧ ಬೆಳೆದು ಈ ಮೇಲಿನ ಯಾವುದೇ ಮಾತ್ರೆಗಳಿಗೂ ರೋಗಿ ಸ್ಪಂದಿಸದೇ ಹೋಗುವ ಸಂದರ್ಭಗಳೂ ಇರುತ್ತವೆ. ಇದಕ್ಕೆ Multidrug resistant TB and XDR TB ಎಂದು ಕರೆಯಲಾಗುತ್ತದೆ. ಅಂಥ ಸಂದರ್ಭಗಳಲ್ಲಿ ಈ ಮಾತ್ರೆಗಳ ಜೊತೆಗೆ ಇನ್ನೂ ಹೆಚ್ಚಿನ ಇಂಜೆಕ್ಟೆಬಲ್ ಧಾತುಗಳನ್ನೂ ನೀಡಲಾಗುತ್ತದೆ. ಆದರೆ ಆ ಚಿಕಿತ್ಸಾ ಅವಧಿ 18 ರಿಂದ 24 ತಿಂಗಳ ವರೆಗೂ ವಿಸ್ತಾರವಾಗುವ ಸಾಧ್ಯತೆಗಳೂ ಇರುತ್ತವೆ.
- ಕ್ಷಯದ ಜೊತೆಗೆ ಸುಲಭವಾಗಿ ಕೆಲವೊಂದು ಖಾಯಿಲೆಗಳು ಬಹುಬೇಗ ಆವರಿಸಿಕೊಳ್ಳುತ್ತವೆ. ಅವೆಂದರೆ,
- ಹೆಚ್ಐವಿ ಸೋಂಕು: ಶೇ.80 ರಷ್ಟು ಸಂದರ್ಭಗಳಲ್ಲಿ ಹೆಚ್ಐವಿ – ಕ್ಷಯರೋಗ ಪರಸ್ಪರ ಹೊಂದಿಕೊಂಡು (Co-infection) ಒಂದನ್ನೊಂದು ಬಹುಬೇಗ ಆವರಿಸಿಕೊಳ್ಳುತ್ತವೆ.
- ಮಧುಮೇಹ
- ಅಪೌಷ್ಟಿಕತೆ
ಕ್ಷಯ ಬರದಂತೆ ತಡೆಗಟ್ಟಲು ಕ್ರಮಗಳು
- ಕ್ಷಯ ಹೊಂದಿರುವ ರೋಗಿಗಳೊಡನೆ ಸಂಪರ್ಕದಿಂದ ದೂರ ಇರುವುದು. ಒಂದು ವೇಳೆ ಆ ರೀತಿ ಉಂಟಾದರೆ ತಕ್ಷಣವೇ ವೈದ್ಯರ ಸಲಹೆ ಪಡೆದು, ಅವಶ್ಯಕತೆಯಿದ್ದರೆ ಚಿಕಿತ್ಸೆಯನ್ನೂ ಶುರು ಮಾಡುವುದು.
- ಕೈಗಳ ಮತ್ತು ದೇಹದ ಸ್ವಚ್ಛತೆ ಕಾಪಾಡಿಕೊಳ್ಳುವುದು
ಮಾಂಸಾಹಾರಿ ಸೇವಿಸುವವರು, ಪದಾರ್ಥಗಳನ್ನು ಚೆನ್ನಾಗಿ ಬೇಯಿಸಿಕೊಂಡು ಸೇವಿಸಬೇಕು. - ಧೂಮಪಾನ, ಮದ್ಯಪಾನಗಳಿಗೆ ಕಡಿವಾಣ ಹಾಕಬೇಕು.
- ಆಗಾಗ್ಗೆ ಉಸಿರಾಟ ತೊಂದರೆ ಇರುವವರು ವೈದ್ಯರ ಬಳಿ ಸಮಾಲೋಚನೆ ಪಡೆದು ಬಹುಬೇಗ ಸೂಕ್ತ ಚಿಕಿತ್ಸೆ ಪಡೆಯಬೇಕು
- ಪ್ರಮುಖವಾಗಿ ಸಮಯಕ್ಕೆ ಸರಿಯಾಗಿ ಪೌಷ್ಟಿಕ ಆಹಾರ ಮತ್ತು ನೀರು ಸೇವಿಸುವುದು
ಕ್ಷಯ ಹೊಂದಿರುವವರು ಅನುಸರಿಸಬೇಕಾದ ಅಂಶಗಳು - ಕ್ಷಯರೋಗಿ ಎಂದು ಗೊತ್ತಾದ ದಿನದಿಂದಲೇ ಅದನ್ನು ಅರಿತುಕೊಂಡು ವೈದ್ಯರ ಸಲಹೆ ಮೇರೆಗೆ ಚಾಚೂತಪ್ಪದೆ ಸಮಯಕ್ಕೆ ಸರಿಯಾಗಿ ಅವಧಿ ಮುಗಿಯುವವರೆಗೂ ಪ್ರತಿದಿನವೂ ಔಷಧಗಳನ್ನು ಸೇವಿಸಲು ಮಾನಸಿಕವಾಗಿ ಸಿದ್ಧರಾಗಬೇಕು
- ಕ್ಷಯ ಬರದಂತೆ ತಡೆಗಟ್ಟಲು ಮೇಲೆ ನೀಡಿರುವ ಕ್ರಮಗಳನ್ನು ಅನುಸರಿಸುವುದು
ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗು ಎರಡಕ್ಕೂ ಕರ್ಚೀಫ್ನಿಂದ ಮರೆಮಾಡಿಕೊಳ್ಳಬೇಕು. - ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯ ಜೊತೆ ಇರುವಾಗ ಅಥವಾ ವ್ಯವಹರಿಸುವಾಗ ಅವರಿಗೆ ರೋಗ ಹರಡದಂತೆ ಗಮನ ಹರಿಸುವುದು ಪ್ರತಿ ರೋಗಿಯ ಆದ್ಯ ಕರ್ತವ್ಯ.
- ಚಿಕಿತ್ಸೆ ಶುರು ಮಾಡಿದ ಸ್ವಲ್ಪ ದಿನಗಳಾದ ಮೇಲೆ ಕೆಲವೊಮ್ಮೆ ಆ ಮಾತ್ರೆಗಳಿಂದಲೂ ಅಡ್ಡಪರಿಣಾಮಗಳಾಗುವುದುಂಟು. ಅದಕ್ಕೆ ವೈದ್ಯರನ್ನು ದೂಷಿಸದೇ, ಸೂಕ್ತ ಸಮಾಲೋಚನೆ ಪಡೆಯುವುದು.
ಚಿಕಿತ್ಸಾ ಗುರಿ
ವಿಶ್ವ ಆರೋಗ್ಯ ಸಂಸ್ಥೆಯು 2020ರ ವೇಳೆಗೆ 2015ರಲ್ಲಿದ್ದ ಕ್ಷಯರೋಗಿಗಳ ಸಂಖ್ಯೆಯಲ್ಲಿ ಶೇ.35 ಹಾಗೂ ಕ್ಷಯದಿಂದ ಸಂಭವಿಸುವ ಪ್ರಮಾಣದಲ್ಲಿ ಶೇ.20ರಷ್ಟು ಕಡಿಮೆ ಮಾಡುವ ಹಾಗೂ 2035ರ ವೇಳೆಗೆ ಕ್ರಮವಾಗಿ ಶೇ.95 ಹಾಗೂ ಶೇ.90ರಷ್ಟು ಕಡಿಮೆ ಮಾಡುವ ಗುರಿ (End TB Strategy)ಹೊಂದಿದೆ. ಇವೆಲ್ಲವನ್ನು ಸಾಧಿಸಬೇಕಾದರೆ ಈ ಮೇಲೆ ತಿಳಿಸಿರುವ ಎಲ್ಲಾ ಅಂಶಗಳನ್ನು ಗಮನದಲ್ಲಿಡಬೇಕಿರುವುದು ಅತ್ಯವಶ್ಯಕ.
ಸುದ್ದಿಗಾಗಿ ಸುದ್ದಿದಿನ.ಕಾಂ ವಾಟ್ಸಾಪ್ ನಂಬರ್ | 9986715401