ರಾಜಕೀಯ

ಅನರ್ಹತೆಯ “Extrapolation”

Published

on

  • ರಾಜಾರಾಮ್ ತಲ್ಲೂರ್

15ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಫಲಿತಾಂಶ ಎಷ್ಟರ ಮಟ್ಟಿಗೆ ಆಳುವ ಸರ್ಕಾರದ ಪರವಾಗಿ “ಟೇಲರ್ ಮೇಡ್” ಇದೆಯೆಂದರೆ, ಬಿಜೆಪಿ ನಿರ್ಧಾರಕ ಗೆಲುವು ಸಾಧಿಸಿದೆ. ಗೋಕಾಕ , ಕೆ ಆರ್ ಪೇಟೆ, ಚಿಕ್ಕಬಳ್ಳಾಪುರಗಳಲ್ಲಿ ಮಾತ್ರ ಗೆದ್ದ ಅಭ್ಯರ್ಥಿಗೆ 50%ಗಿಂತ ಕಡಿಮೆ ಮತ ಬಂದಿದೆ ಅರ್ಥಾತ್ ಎದುರು ಪಕ್ಷಗಳ ಮತ ಚದುರಿಹೋಗಿ ಬಿಜೆಪಿ ಗೆದ್ದಿದೆ.

ಉಳಿದ ಕ್ಷೇತ್ರಗಳಲ್ಲಿ ಎಲ್ಲೆಡೆ ಬಿಜೆಪಿಯದು ನಿರ್ಧಾರಕ ಜಯ. ಅಥಣಿ (59.83), ಕಾಗವಾಡ್ (54.18), ಯೆಲ್ಲಾಪುರ (60.22), ಹಿರೇಕೆರೂರು (58.99), ರಾಣೆಬೆನ್ನೂರು (55.52), ವಿಜಯನಗರ(55.42), ಕೆ ಆರ್ ಪುರ (62.99), ಯಶವಂತಪುರ (50.86), ಮಹಾಲಕ್ಷ್ಮಿ ಲೇಔಟ್ (58.65).

ಗೋಕಾಕ (48.97), ಕೆ ಆರ್ ಪೇಟೆ (39.41), ಚಿಕ್ಕಬಳ್ಳಾಪುರ (48.53) ಗಳಲ್ಲಿ ಮಾತ್ರ ಬಿಜೆಪಿಗೆ 50%ಗಿಂತ ಕಡಿಮೆ ಮತ ಬಿದ್ದಿದ್ದೆಯಾದರೂ ಸೋತ ಅಭ್ಯರ್ಥಿಗಿಂತ ಕ್ರಮವಾಗಿ 29,006; 9731ಮತ್ತು 34801 ಮತಗಳ ಅಂತರದ ಜಯ ಸಿಕ್ಕಿದೆ. ಬಿಜೆಪಿ ಬಂಡಾಯ ಅಭ್ಯರ್ಥಿ ಗೆದ್ದಿರುವ ಹೊಸಕೋಟೆ (41.43)ಯಲ್ಲಿ, ಒಮ್ಮತದ ಅಭ್ಯರ್ಥಿ ಆಗಿರುತ್ತಿದ್ದರೆ ದೊಡ್ಡ ಜಯ ಬಿಜೆಪಿಗೆ ಸಿಗುತ್ತಿತ್ತು.

ಕಾಂಗ್ರೆಸ್ ಗೆದ್ದಿರುವ ಹುಣಸೂರು (50.45), ಶಿವಾಜಿನಗರ (53) ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಬಹುತೇಕ ನಿರ್ಣಾಯಕ ಜಯವೇ ಸಿಕ್ಕಿದೆ. ಆದರೆ ಇವೆರಡೂ ಸ್ಥಳೀಯ ರಾಜಕಾರಣದ ಒಳಸುಳಿಯ ಜಯಗಳೇ.

ಒಟ್ಟಿನಲ್ಲಿ ಫಲಿತಾಂಶ ಬಿಜೆಪಿಗೆ ಒಂದು ಕಂತಿನ ಸವಾಲು ಗೆದ್ದು ಎರಡನೇ ಕಂತಿನ (ಅಂದರೆ ಗೆದ್ದವರೊಂದಿಗೆ ಅಧಿಕಾರ ಹಂಚಿಕೊಳ್ಳುವ) ಸವಾಲಿನ ಬಾಗಿಲು ತೆರೆದಿದೆ. ಇತ್ತ ಕಾಂಗ್ರೆಸ್ ಗೆ ನೀವು ಸುಧಾರಿಸದಿದ್ದರೆ ನಿಮ್ಮನ್ನು ಮೂಸುವವರಿಲ್ಲ ಎಂಬ ಸ್ಪಷ್ಟ ಸಂದೇಶ ಕೊಟ್ಟಿದೆ. ಬಣರಾಜಕಾರಣ, ಲಾಭರಾಜಕಾರಣಗಳನ್ನು ಬಿಟ್ಟು ಸಿದ್ಧಾಂತ -ಸೇವೆಯ ರಾಜಕಾರಣಕ್ಕೆ ಹಿಂದಿರುಗದಿದ್ದರೆ ಕಾಂಗ್ರೆಸ್ ಪ್ರಸ್ತುತತೆ ಉಳಿಸಿಕೊಳ್ಳುವುದು ಸದ್ಯದ ಸ್ಥಿತಿಯಲ್ಲಿ ಕಷ್ಟ ಇದೆ.

ಕುದುರೆ ವ್ಯಾಪಾರದಂತಹ ಅಪ್ರಜಾತಾಂತ್ರಿಕ ಸಂಗತಿಯೊಂದನ್ನು “ಚುನಾವಣಾ ಇಷ್ಯೂ” ಆಗಿ ಹೊಂದಿದ್ದೂ ಮತದಾರರನ್ನು ಒಲಿಸಿಕೊಳ್ಳಲಾಗದಿರುವ ಕಾಂಗ್ರೆಸ್ಸಿಗೆ ಅದು ತಲುಪಿರುವ ದುರ್ಬಲ ಸ್ಥಿತಿ ಎಷ್ಟು ಆಳವಾಗಿದೆ ಎಂದು ಈ ಚುನಾವಣೆ ಮನದಟ್ಟು ಮಾಡಿಕೊಟ್ಟಿದೆ.

ದುಡ್ಡನ್ನು ದುಡ್ಡಿನಿಂದಲೇ ಎದುರಿಸುವ ಕಾಂಗ್ರೆಸ್ ತಂತ್ರವೇ ಈವತ್ತು ಕಾಂಗ್ರೆಸ್ ಪಕ್ಷವನ್ನು ಈ ಸ್ಥಿತಿಗೆ ದೂಡಿದೆ. ಹಳೆಯ ಕಾಂಗ್ರೆಸ್ಸಿನ ತಳಮಟ್ಟದ ಸೇವೆ ರಾಜಕಾರಣ ಈವತ್ತು ದುರ್ಬೀನು ಹಾಕಿ ಹುಡುಕಿದರೂ ಸಿಗುತ್ತಿಲ್ಲ. ಹೊಸ ದುಡ್ಡಿನ ರಾಜಕಾರಣಿಗಳು ಇಂದು ಕಾಂಗ್ರೆಸ್ ಜೊತೆಗಿಲ್ಲ. ಹಾಗಾಗಿ ಇಂದು ಕಾಂಗ್ರೆಸ್, ಅವರು ದುಡ್ಡು ಚೆಲ್ಲಿ ಗೆದ್ದರು ಎಂದು ಅಲವತ್ತುಕೊಂಡರೆ ಅದಕ್ಕೆ ಕೇಳುಗರು ಉಳಿದಿಲ್ಲ.

JDS ತನ್ನ ಕ್ಷಣಿಕ ಲಾಭಗಳಿಗಾಗಿ ರಾಜ್ಯದ ಒಟ್ಟು ಹಿತಾಸಕ್ತಿಗಳನ್ನು ಕಡೆಗಣಿಸದಿದ್ದರೆ ನಿರ್ಣಾಯಕ ಶಕ್ತಿಯಾಗಿ ನಿಲ್ಲುತ್ತಿತ್ತು. ಅದು ಅವಕಾಶ ಸಿಕ್ಕಾಗಲೆಲ್ಲ ಅದನ್ನು ಕೈಚೆಲ್ಲಿ ಈವತ್ತಿನ ಸ್ಥಿತಿ ತಲುಪಿದೆ.

ಇಷ್ಟಾಗಿ ಬಿಜೆಪಿ, ತನ್ನ ಪೂರ್ಣಾವಧಿಯನ್ನು ಬೇರೇನೂ ಗದ್ದಲ ಇಲ್ಲದೆ ಯಶಸ್ವಿಯಾಗಿ ಪೂರೈಸೀತೇ ಎಂಬುದೊಂದೇ ಈಗ ಉಳಿದಿರುವ ಕುತೂಹಲ.

ಇದಿಷ್ಟು ಈವತ್ತಿನ ಚುನಾವಣಾ ಫಲಿತಾಂಶಕ್ಕೆ ನನ್ನ ಆಬ್ಸರ್ವೇಷನ್ ಗಳು.

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version