ಸಿನಿ ಸುದ್ದಿ
‘ಉರಿ – ಸರ್ಜಿಕಲ್ ಸ್ಟೈಕ್’ ಎಂಬ ಸೈನಿಕರ ಅದ್ಬುತ ಕಾರ್ಯಾಚರಣೆ..!
ಭಾರತೀಯ ಸೇನಾ ಕಾರ್ಯಾಚರಣೆ ಸಂಬಂಧಿತ ಭಾರತೀಯ ಸಿನಿಮಾರಂಗದಲ್ಲಿ ಈವರೆಗೂ ಅನೇಕ ಚಿತ್ರಗಳು ಬಂದಿದೆ. ಹಿಂದಿ ಜತೆಗೆ ಪ್ರಾದೇಶಿಕ ಭಾಷೆಗಳಲ್ಲಿಯೂ ಸೈನಿಕರ ವೀರತೆ ಪ್ರದರ್ಶಿಸುವ ಕಥಾ ಚಿತ್ರಗಳು ವೀಕ್ಷಕರ ಗಮನ ಸೆಳೆದಿದೆ. ಕಾರ್ಗಿಲ್ ವಿಷಾಯಾಧರಿಸಿ ಹತ್ತಕ್ಕೂ ಅಧಿಕ ಸಿನಿಮಾಗಳು ತೆರೆಕಂಡಿದೆ. ಕಾರ್ಗಿಲ್ ಸಮರವನ್ನೇ ಮುಖ್ಯಕಥೆಯಾಗಿರಿಸಿಕೊಂಡ ಚಿತ್ರಗಳು ಹಣ ಗಳಿಸುವಲ್ಲಿ ಯಶಸ್ಸು ಕಂಡಿದೆ. ಈ ಮೂಲಕ ಸೈನಿಕರು, ಸೈನ್ಯದ ಕಥೆಯನ್ನು ಹೊಂದಿದ ಚಿತ್ರಗಳು ಪ್ರೇಕ್ಷಕರ ಮನಸ್ಸು ಗೆಲ್ಲುತ್ತದೆ ಎಂಬುದು ಸಾಬೀತಾಗಿದೆ.
ಆದರೆ, ಇದೀಗ ಮತ್ತೊಂದು ಇತಿಹಾಸ ಸೖಷ್ಟಿಯಾಗಿದೆ. 2016 ರ ಸರ್ಜಿಕಲ್ ಸ್ಟೈಕ್ ಆಧರಿಸಿ ಉರಿ ಎಂಬ ಹೆಸರಿನ ಚಿತ್ರ ತೆರೆಕಂಡು ದೇಶ ಮಾತ್ರವಲ್ಲದೇ ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ.
ಕಾಶ್ಮೀರ ಗಡಿಯಲ್ಲಿನ ಉರಿ ಎಂಬ ಗ್ರಾಮದ ಸೇನಾ ಶಿಬಿರದ ಮೇಲೆ ಬೆಳ್ಳಂಬೆಳಗ್ಗೆ ಪಾಕ್ ಭಯೋತ್ಪಾದಕರು ನುಸುಳಿ ಭಾರತದ ಹೆಮ್ಮೆಯ 19 ಯೋಧರನ್ನು ಬಲಿ ಪಡೆದಿದ್ದರು. ಈ ಭಯೋತ್ಪಾದಕರ ಕಾರ್ಯಾಚರಣೆ ಭಾರತೀಯರನ್ನು ರೊಚ್ಚಿಗೆಬ್ಬಿಸಿತ್ತು. ಅದರಲ್ಲಿಯೂ ಸೈನ್ಯದ ಅತ್ಯಂತ ಪರಾಕ್ರಮಿ ಯೋಧರೇ ಭಯೋತ್ಪಾದಕರಿಗೆ ಸುಲಭವಾಗಿ ಬಲಿಯಾಗಿದ್ದರು. ಭಾರತದ ಸೈನ್ಯದ ಪ್ರತಿಷ್ಟೆಗೂ ಈ ಘಟನೆ ಮಸಿ ಬಳಿದಿತ್ತು. ಸೈನ್ಯದ ಮರ್ಯಾದೆಯೂ ಪ್ರಶ್ನೆಯಾಗಿತ್ತು.
ಪ್ರಧಾನಿ, ರಕ್ಷಣಾ ಸಚಿವರೂ ಸೇರಿದಂತೆ ಎಲ್ಲರೂ ಹುತಾತ್ಮರ ಬಲಿದಾನಕ್ಕೆ ಮಮ್ಮಲ ಮರುಗಿದರು. ತಮ್ಮವರನ್ನು ವಂಚಿಸಿ ಬಲಿತೆಗೆದುಕೊಂಡದ್ದು ಭಾರತೀಯ ಸೈನಿಕರ ರಕ್ತ ಕುದಿಯುವಂತೆ ಮಾಡಿತ್ತು. ಪ್ರತಿಕಾರ ತೀರಿಸಿಯೇ ಸಿದ್ದ ಎಂದು ಸೈನಿಕರು ಯೋಜನೆ ರೂಪಿಸುತ್ತಿದ್ದರು.
ಇಂಥ ಸೈನಿಕರ ಚಿಂತನೆಗೆ ಬೆಂಬಲವಾಗಿ ನಿಂತದ್ದೇ ಕೇಂದ್ರ ರಕ್ಷಣಾ ಸಚಿವಾಲಯ. ಸೇನಾ ಪಡೆಗೆ ಎಲ್ಲಾ ರೀತಿಯ ನೆರವು ನೀಡಿ ಮುನ್ನುಗ್ಗಿ, ಪಾಕ್ ನೆಲೆಗೆ ನುಗ್ಗಿ ಅಲ್ಲಿ ಅವಿತಿಟ್ಟುಕೊಂಡಿರುವ ಭಯೋತ್ಪಾದಕರನ್ನು ಬಗ್ಗು ಬಡಿಯಿರಿ ಎಂದು ಆದೇಶ ನೀಡಿಯೇ ಬಿಟ್ಟಿತ್ತು. ಈ ಆದೇಶವನ್ನೇ ಕಾಯುತ್ತಿದ್ದ ಭಾರತೀಯ ಸೈನಿಕರಿಗೆ ಅಷ್ಟೇ ಸಾಕಿತ್ತು. ಯಾವ ರೀತಿ ರಾತ್ರೋರಾತ್ರಿ ಪಾಕ್ ನೆಲೆಗೆ ನುಗ್ಗಿ ಭಯೋತ್ಪಾದಕರ ಹುಟ್ಟಡಗಿಸಿದ್ದಲ್ಲದೇ ತಾವೂ ಸುರಕ್ಷಿತವಾಗಿ ಮರಳಿ ಭಾರತಕ್ಕೆ ಮರಳುತ್ತಾರೆ.
ಉರಿ ಸರ್ಜಿಕಲ್ ಸ್ಟೈಕ್ ಗೆ ಕೇವಲ 11 ದಿನಗಳಲ್ಲಿ ನಮ್ಮ ಸೇನಾ ಪಡೆ ಎಲ್ಲಾ ರೀತಿಯಲ್ಲಿಯೂ ಸಜ್ಜಾಗುವುದೇ ಅತ್ಯಂತ ರೋಮಾಂಚಕ. ಸೈನಿಕರ ಮನೋಸ್ಥೆರ್ಯ, ಜತೆಗೆ ಗರುಡ ಎಂಬ ಅತ್ಯಾಧುನಿಕ ಹದ್ದಿನ ದ್ರೋಣ್ ಕ್ಯಾಮರ ಕಾರ್ಯಾಚರಣೆಯೂ ಕುತೂಹಲಕಾರಿ.
ಭಾರತೀಯ ಸೇನಾ ಪಡೆ ಯಾವೆಲ್ಲಾ ರೀತಿಯಲ್ಲಿ ತಯಾರಿ ನಡೆಸಿ ಭಯೋತ್ಪಾದಕರ ಹುಟ್ಟಡಗಿಸಿಸುತ್ತಾರೆ ಎಂಬ ಅದ್ಬುತ ಕಥೆಯನ್ನು ಯುವ ನಿರ್ದೇಶಕರ ಆದಿತ್ಯ ಧರ್ ತನ್ನ ಮೊದಲ ಚಿತ್ರದಲ್ಲಿ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ಕಾಶ್ಮೀರ – ಪಾಕ್ ಗಡಿಯ ನೈಜತೆಯನ್ನು ಸೈಬ್ರಿಯಾ ದೇಶದ ಕಾಡಿನಲ್ಲಿ ಚಿತ್ರಿಸಲಾಗಿದೆ. ವಿಕ್ಕಿ ಕೌಷಲ್ ಎಂಬ ನಟ ಸೇನಾಧಿಕಾರಿ ವಿಹಾನ್ ಸಿಂಗ್ ಪಾತ್ರದಲ್ಲಿ ನಟಿಸಿದ ರೀತಿಯೂ ಮೆಚ್ಚುಗೆಯಾಗುತ್ತದೆ. ಪ್ರಧಾನಿ ಮೋದಿ, ರಕ್ಷಣಾ ಸಚಿವ ಪರಿಕ್ಕರ್ ಸೇರಿದಂತೆ ಎಲ್ಲರ ಪಾತ್ರಗಳಲ್ಲಿಯೂ ನೈಜತೆಯಿದೆ. ನಿಜ ಘಟನೆಯೊಂದನ್ನು ಹೀಗೂ ಚಿತ್ರವಾಗಿಸಬಹುದು ಎಂಬುದಕ್ಕೆ ಉರಿ ಸಿನಿಮಾ ಸಾಕ್ಷಿಯಾಗುತ್ತದೆ.
ಸಾಮಾನ್ಯವಾಗಿ ಉರಿ ಸರ್ಜಿಕಲ್ ಸ್ಟೈಕ್ ನಂಥ ವಿಷಯವನ್ನು ಹೇಳುವಾಗ ಬಹಳಷ್ಟು ಸಂಗತಿಗಳಿಗೆ ಸೇನಾಡಳಿತ ಅನುಮತಿ ನೀಡುವುದಿಲ್ಲ. ಆದರೆ, ಈ ಚಿತ್ರದ ಮಟ್ಟಿಗೆ ಹಲವು ಸಂಗತಿಗಳನ್ನು ಪ್ರಸ್ತಾಪಿಸಲು ಅವಕಾಶ ನೀಡುವ ಮೂಲಕ ಬಾರತೀಯರಿಗೆ ಸೇನಾಕಾರ್ಯಾಚರಣೆಯ ವಿಷಯಗಳ ಮಾಹಿತಿ ನೀಡುವಲ್ಲಿ ಸಫಲವಾಗಿದೆ. ದೇಶಪ್ರೇಮವನ್ನು ಬಡಿದೆಬ್ಬಿಸುವ ಪ್ರಯತ್ನಕ್ಕೂ ಉರಿ ಚಿತ್ರ ನೆರವಾಗಿದೆ. ಈ ಮೂಲಕ ಸೈನ್ಯದ ಉದ್ದೇಶವೂ ಸಫಲವಾಗಿದೆ.
ಎಲ್ಲಿಯೂ ವಿಷಾಯಾಂತರಗೊಳ್ಳದೇ, ಉತ್ಪೇಕ್ಷೆಗೆಗೊಳಗಾಗದೇ ಸೀದಾಸಾದಾ ರೀತಿಯಲ್ಲಿಯೇ ಕಥೆ ಹೇಳುತ್ತಾ ಸಾಗುವ ಚಿತ್ರ ಅಂತಿಮವಾಗಿಯೂ ಬಹುಪರಾಕ್ ಎನಿಸಿಕೊಳ್ಳದೇ ದಿಡೀರ್ ಅಂತ್ಯಗೊಳ್ಳುತ್ತದೆ. ಇನ್ನೂ ಬೇಕಿತ್ತು ಎನಿಸುವಾಗಲೇ ಚಿತ್ರ ಮುಗಿಯುತ್ತದೆ. ಈ ಮೂಲಕ ಚಿತ್ರ ಮನಸ್ಸಿನಲ್ಲಿ ಹಲವು ದಿನಗಳ ಕನವರಿಕೆಗೆ ಕಾರಣವಾಗುತ್ತದೆ.
ರಾಜಕೀಯಕ್ಕಾಗಿನ ಚಿತ್ರವೇ?
ಇದು ಮೋದಿಗೆ ವೋಟ್ ತಂದುಕೊಡಲು ನೆರವಾಗುತ್ತದೆ. ಚಿತ್ರ ಹಣ ಮಾಡಲೆಂದೇ ನಿರ್ಮಿತವಾಗಿವೆ. ಇದೇನ್ ಮಹಾ ಎಂದೆಲ್ಲಾ ಕೆಲವರು ಬಾಲಿಶವಾದ ಹೇಳಿಕೆ ನೀಡುತ್ತಿದ್ದಾರೆ. ಇಂಥ ಹೇಳಿಕೆಗಳು ಬದಿಗಿರಲಿ.
ಪ್ರದಾನಿಯಾಗಿದ್ದ ವ್ಯಕ್ತಿ ಸೈನಿಕರಿಗೆ ಮುನ್ನುಗ್ಗಿ, ಸೋಲು ನನಗಿರಲಿ, ಗೆಲವು ನಿಮ್ಮದಾಗಿರಲಿ ಎಂದು ಹುರಿದುಂಬಿಸಿ ರಾತ್ರಿಯಿಡಿ ಜಾಗರಣೆ ಕುಳಿತು ಭಾರತೀಯ ಸೈನಿಕರ ಸ್ಥಿತಿ ಕಾರ್ಯಾಚರಣೆ ಸಂದರ್ಭ ಹೇಗಿದೆಯೋ ಎಂದು ತಲೆಕೆಡಿಸಿಕೊಳ್ಳುತ್ತಾರೆ ಎಂದರೆ ಅಂಥ ಪ್ರಧಾನಿ ಬಗ್ಗೆಯೂ ಗೌರವ ಬಾರದಿದ್ದರೆ ಹೇಗೆ? ಚುನಾವಣೆಯಲ್ಲಿ ಮತಗಳನ್ನು ಯಾರಿಗೆ ಹಾಕುತ್ತೇವೆಯೋ ಅದು ಅವರವರಿಗೆ ಬಿಟ್ಟದ್ದು. ಆದರೆ, ಸೈನಿಕರೇ ಭಯೋತ್ಪಾದಕರ ಹುಟ್ಟಡಗಿಸಿ ಬನ್ನಿ ಎಂದು ಧೈರ್ಯ, ಸ್ಥೆರ್ಯ, ಆಧುನಿಕ ಶಸ್ತ್ರಾಸ್ತಗಳನ್ನು ನೀಡಿದ ಆ ಪ್ರಧಾನಿಗೆ ಮೆಚ್ಚುಗೆ ಸೂಚಿಸದಿದ್ದರೆ ಹೇಗೆ?
ಇದೇ ಅನುಮತಿ ಮೊದಲೇ ಸಿಕ್ಕಿದ್ದರೇ?
ಕೆಲವು ದಶಕಗಳ ಹಿಂದೆ, ನನಗೆ 24 ಗಂಟೆಗಳ ಕಾಲಾವಕಾಶ ನೀಡಿ ಪಾಕಿಸ್ತಾನಿಗಳ ಹುಟ್ಟಡಗಿಸಿ ಬರುತ್ತೇನೆ ಎಂದಿದ್ದ ಕೊಡಗಿನ ಹೆಮ್ಮೆಯ ಜನರಲ್ ತಿಮ್ಮಯ್ಯ ಅವರಿಗೂ ಆ ಸಂದರ್ಭ ಸರ್ಜಿಕಲ್ ಸ್ಟೈಕ್ ಗೆ ಅನುಮತಿ ನೀಡಿದ್ದರೆ, ಕಾಶ್ಮೀರಕ್ಕೆ ಇಂದಿನ ದುರ್ಗತಿ ಬರುತ್ತಿರಲಿಲ್ಲವೇನೋ.
ಅದೇನೇ ಇರಲಿ.. ಉರಿ ಎಂಬ ಅಪರೂಪದ ಸಿನಿಮಾ ವೀಕ್ಷಿಸುವ ಮೂಲಕ ಸೈನಿಕ ಕಾರ್ಯಾಚರಣೆ ಹೇಗಿರುತ್ತೆ.. ಸೈನಿಕರ ಜೀವನ ಎಷ್ಟೊಂದು ಸಾಹಸಮಯ, ಯಾತನಾಮಯವಾಗಿರುತ್ತೆ ಎಂದು ತಿಳಿದುಕೊಳ್ಳುವ ಅಪೂರ್ವ ಅವಕಾಶವನ್ನು ಉರಿ ಎಂಬ ಚಿತ್ರ ನೀಡಿದೆ. ನಾನು ಸಿನಿಮಾಗಳನ್ನು ನೋಡೇದೇ ಇಲ್ಲ ಎಂಬ ಧೋರಣೆ ಬದಿಗಿಟ್ಟು ಭಾರತದ ಗಡಿಯನ್ನು ತಮ್ಮ ಪ್ರಾಣ ಒತ್ತೆಯಿಟ್ಟು ಕಾಯುತ್ತಿರುವ ಸೈನಿಕರಿಗಾಗಿಯಾದರೂ ಒಮ್ಮೆ ನೋಡಿ.
ಅಂದ ಹಾಗೆ, ಈವರೆಗೂ ನಾವು ನೀವೆಲ್ಲಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದ ಬಾಹುಬಲಿ -2 ಎಂಬ ಚಿತ್ರದ ಎಲ್ಲಾ ದಾಖಲೆಗಳನ್ನು ಉರಿ ಚಿತ್ರ ಪುಡಿಗಟ್ಟಿದೆ. ಕೇವಲ 23 ದಿನಗಳಲ್ಲಿ ಉರಿ ಚಿತ್ರ 200 ಕೋಟಿ ರು ಸಂಗ್ರಹಿಸಿ 500 ಕೋಟಿ ಸಂಗ್ರಹದತ್ತ ಮುನ್ನುಗ್ಗಿ ದೇಶದ ಇತಿಹಾಸದಲ್ಲಿಯೇ ಮಹೋನ್ನತ ದಾಖಲೆಗೆ ದಾಪುಗಾಲಿಡುತ್ತಿದೆ.
ಉರಿ ಎಂಬ ಚಿತ್ರವನ್ನು ನೋಡುತ್ತಿದ್ದಾಗ ಕೇಳಿಬರುತ್ತಿದ್ದ ಸೈನಿಕರ ಪರ ಘೋಷಣೆಗಳು, ವಂದೇ ಮಾತರಂ ಎಂಬ ಉದ್ಗೋಷ. ಚಪ್ಪಾಳೆಯ ಮಾರ್ಧನಿ. ಭಾರತದ ಸೇನಾ ಪಡೆಯ ಬಗ್ಗೆ ಭಾರತೀಯರಿಗೆ ಇರುವ ಹೆಮ್ಮೆಯ ದ್ಯೋತಕ ಎನ್ನಿಸಿತು. ಸೈನಿಕರ ವೀರಸಾಹಸವನ್ನು ಚಿತ್ರ ರೂಪದಲ್ಲಿ ವೀಕ್ಷಿಸಿದರರ ಸಂತೋಷದ ಕಂಬನಿ ನಮ್ಮ ಸೈನಿಕರಿಗೆ ತುಡಿಯುವ ಮನಸ್ಸುಗಳು ಇನ್ನೂ ಜೀವಂತವಿದೆ ಎಂಬ ಭಾವನೆಗೆ ಕಾರಣವಾಯಿತು. ಅವರವರ ಅಭಿಮಾನಿ ನಾಯಕರಿಗೆ ಪ್ರೇಕ್ಷಕರು ಥಿಯೇಟರ್ ಸೂರು ಹಾರಿಹೋಗುವಂತೆ ಚಪ್ಪಾಳೆ ತಟ್ಟಿ , ಶಿಳ್ಳೆ ಹೊಡೆದು ಸಂಭ್ರಮಿಸಿದ್ದನ್ನು ನೋಡಿದ್ದೇನೆ.
ಆದರೆ, ಚಿತ್ರವೊಂದನ್ನು ವೀಕ್ಷಿಸುತ್ತಲೇ ಕಣ್ಣೀರುಗರೆಯುತ್ತಾ, ಆ ವೀರ ಸೈನಿಕರಿಗೆ ಭಾಷ್ಪಾಂಜಲಿ ಹಾಕುತ್ತಿದ್ದ ಬಹಳ ಅಪರೂಪದ ಸನ್ನಿವೇಶವನ್ನೂ ನಾನು ನೋಡಿದೆ. ಅದೇ ಉರಿ ಎಂಬ ಸರ್ಜಿಕಲ್ ಸ್ಟ್ಕೈಕ್ ನ ಸಾರ್ಥಕತೆ.
(ಗಮನಿಸಿ – ಮಡಿಕೇರಿಯ ಕಾವೇರಿ ಚಿತ್ರಮಂದಿರ ಶ್ರ10, 2, 6 ಮತ್ತು 9 ಗಂಟೆ ಪ್ರದಶ೯ನ ಹಾಗೂ ಕುಶಾಲನಗರದ ಕೂರ್ಗ್ ಸಿನಿಫ್ಲೆಕ್ಸ್ ( 11, 2,5 ಮತ್ತು 8 ಗಂಟೆ ಪ್ರದಶ೯ನ) ಗಳಲ್ಲಿ ಗುರುವಾರದವರೆಗೆ ಉರಿ ಚಿತ್ರ ವೀಕ್ಷಿಸಬಹುದು.)
ಸೈನಿಕರಾಗಲಿಲ್ಲ, ಪರವಾಗಿಲ್ಲ. ಸೈನಿಕರ ಧೀರ ಕಾರ್ಯಾಚರಣೆಯನ್ನು 2.10 ಗಂಟೆ ಸಿನಿಮಾದಲ್ಲಿ ವೀಕ್ಷಿಸಿ ಅಭಿನಂದಿಸುವ ಅವಕಾಶ ಮಿಸ್ ಮಾಡಿಕೊಳ್ಳಬೇಡಿ.
– ಅನಿಲ್ ಎಚ್.ಟಿ
ಪತ್ರಕರ್ತ
ಮಡಿಕೇರಿ
ಸುದ್ದಿದಿನ.ಕಾಂ|ವಾಟ್ಸಾಪ್|9986715401