ದಿನದ ಸುದ್ದಿ
ವಿದ್ಯುತ್ಮಗ್ಗ ನೇಕಾರರಿಗೆ ಆರ್ಥಿಕ ನೆರವು : ಅರ್ಜಿ ಆಹ್ವಾನ
ಸುದ್ದಿದಿನ,ದಾವಣಗೆರೆ : ರಾಜ್ಯ ಸರ್ಕಾರವು ಕೋವಿಡ್ 19 ಎರಡನೆ ಅಲೆಯಿಂದಾಗಿ ಆರ್ಥಿಕ ಸಂಕಷ್ಟ ಎದುರಿಸಿದ ನೇಕಾರರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ಮೂಲಕ ನೇಕಾರ ಪ್ಯಾಕೇಜ್ ಯೋಜನೆಯಡಿ ಆರ್ಥಿಕ ನೆರವು ನೀಡಲು ಉದ್ದೇಶಿಸಿದ್ದು ಅರ್ಹ ವಿದ್ಯುತ್ ಮಗ್ಗ ನೇಕಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ನೇಕಾರ ಪ್ಯಾಕೇಜ್ ಯೋಜನೆಯಡಿ ಪ್ರತಿ ನೇಕಾರರಿಗೆ ರೂ.3000 ಗಳ ಆರ್ಥಿಕ ನೆರವನ್ನು ನೀಡಲಾಗುತ್ತಿದ್ದು, ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ವಿದ್ಯುತ್ ಮಗ್ಗ ನೇಯ್ಗೆ ಹಾಗೂ ನೇಯ್ಗೆಗೆ ಸಂಬಂಧಿಸಿದ ಮಗ್ಗ ಪೂರ್ವ ಚಟುವಟಿಕೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೇಕಾರರು ಈ ಸೌಲಭ್ಯ ಪಡೆಯಲು ಅರ್ಹರಾಗಿರುತ್ತಾರೆ.
ಜಿಲ್ಲೆಯಲ್ಲಿನ ಅರ್ಹ ನೇಕಾರರು ಈ ಸೌಲಭ್ಯವನ್ನು ಪಡೆಯಲು ಆಧಾರ್ ಕಾರ್ಡ್, (ಬ್ಯಾಂಕ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಆಗಿರಬೇಕು) ವಿದ್ಯುತ್ಮಗ್ಗ ಘಟಕದ ಆರ್ಆರ್ ಸಂಖ್ಯೆಯುಳ್ಳ ಬೆಸ್ಕಾಂ ರವರ ಬಿಲ್ ಪ್ರತಿ, ಘಟಕದ ಮಾಲೀಕರಿಂದ ನೇಕಾರ ಕೆಲಸಗಾರರ ವಿವರಗಳ ದೃಢಿಕರಣ ಪತ್ರ, ಉಳಿತಾಯ ಖಾತೆಯ ಬ್ಯಾಂಕ್ ಪಾಸ್ಬುಕ್ ಜೆರಾಕ್ಸ್ ಪ್ರತಿ, ಎಲ್ಲಾ ದಾಖಲಾತಿಗಳೊಂದಿಗೆ ಪ್ರಸ್ತಾವನೆಯನ್ನು ಉಪನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟ್ಟುವಳ್ಳಿ, ದಾವಣಗೆರೆ. ಇಲ್ಲಿಗೆ ಜು. 23 ರೊಳಗಾಗಿ ಸಲ್ಲಿಸಬೇಕು.
ಇದನ್ನೂ ಓದಿ | ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಸೇವೆ ಸಲ್ಲಿಸುವ ಸ್ಕೌಟ್ಸ್ ಮತ್ತು ಗೈಡ್ಗಳಿಗೆ ಲಸಿಕೆ
ಹೆಚ್ಚಿನ ಮಾಹಿತಿಗಾಗಿ ಉಪನಿರ್ದೇಶಕರ ಕಚೇರಿ ಕೈಮಗ್ಗ ಮತ್ತು ಜವಳಿ ಇಲಾಖೆ, ದಾವಣಗೆರೆ, ರಾಮಾಂಜನೇಯ ಪ್ಲಾಜಾ, ಕಾಲೇಜ್ ರಸ್ತೆ, ನಿಟ್ಟುವಳ್ಳಿ ವಿಳಾಸಕ್ಕೆ ಅಥವಾ ಕಚೇರಿ ದೂರವಾಣಿ ಸಂಖ್ಯೆ 08192-262362 ಕ್ಕೆ ಸಂಪರ್ಕಿಸಬಹುದು ಎಂದು ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243