ಬಹಿರಂಗ
ಯುದ್ಧೋನ್ಮಾದದ ನಡುವೆ ನಾಗರಿಕ ಪ್ರಜ್ಞೆಯ ಜಾಗೃತಿ
- ನಾ ದಿವಾಕರ
ಕೋವಿದನ ರಣಕೇಕೆ, ಕೊರೋನಾದ ರಣಾಂಗಣ ಮತ್ತು ಸೂರ್ಯ ಗ್ರಹಣದ ಪ್ರಳಯಾಂತಕ ಆಕ್ರಮಣದ ಸುದ್ದಿಗಳು ತೆರೆಮರೆಗೆ ಸರಿದು ಇದೀಗ ಕನ್ನಡ ಸುದ್ದಿಮನೆಗಳಲ್ಲಿ ಚೀನಾ ಬಂದು ಕುಳಿತಿದೆ.
ಗಡಿ ಪ್ರದೇಶದಲ್ಲಿ ಚೀನಾ ಮತ್ತು ಭಾರತದ ಘರ್ಷಣೆ ನಡೆದು ತಹಬಂದಿಗೆ ಬಂದಿದ್ದು, ಉಭಯ ರಾಷ್ಟ್ರಗಳ ರಾಜಕೀಯ, ಸೇನಾ ನಾಯಕರು, ರಾಜತಾಂತ್ರಿಕ ಅಧಿಕಾರಿಗಳು ಮಾತುಕತೆಯಲ್ಲಿ ತೊಡಗಿದ್ದರೂ ಇತ್ತ ಕನ್ನಡದ ಸುದ್ದಿಮನೆಗಳಲ್ಲಿ ಯುದ್ಧದ ಸಿದ್ಧತೆ ಇನ್ನೂ ನಿಂತಿಲ್ಲ. ಜನತೆಗೆ ದೇಶದಲ್ಲಿ ನಡೆಯುವ ವಿದ್ಯಮಾನಗಳನ್ನು ಸುದ್ದಿಯ ಮೂಲಕ ಮುಟ್ಟಿಸುವ ತಮ್ಮ ಪ್ರಾಥಮಿಕ ಕರ್ತವ್ಯವನ್ನೇ ಮರೆತಂತಿರುವ ಸುದ್ದಿಮನೆಗಳು ಈಗ ಬಹುತೇಕ ಒಂದು ಪಕ್ಷದ ವಕ್ತಾರರಂತೆ ವರ್ತಿಸುತ್ತಿರುವುದು ದುರಂತ.
ಭಾರತದ ಪ್ರತಿಯೊಬ್ಬ ಪ್ರಜೆಯೂ ತನ್ನ ದೇಶದ ಬಗ್ಗೆ ಗೌರವ, ಕಾಳಜಿ, ವಿಶ್ವಾಸ ಮತ್ತು ನಂಬಿಕೆಯನ್ನು ಹೊಂದಿರುತ್ತಾನೆ. ರಾಜಕೀಯ ಪರಿಭಾಷೆಯ ಅಥವಾ ಸಾಂಸ್ಕೃತಿಕ ರಾಜಕಾರಣದ ಪರಿಭಾಷೆಯ ಪ್ರೇಮ, ಭಕ್ತಿ ಮತ್ತು ಉನ್ಮಾದಗಳನ್ನು ಬದಿಗಿಟ್ಟು ನೋಡಿದಾಗ ಜನಸಾಮಾನ್ಯರ ಈ ಭಾವನೆ ಸ್ಪಷ್ಟವಾಗಿ ಕಾಣುತ್ತದೆ.
ನಾನು ಭಾರತೀಯ ಎಂದು ಎದೆತಟ್ಟಿ ಹೇಳಿಕೊಳ್ಳುವುದು ಭಾವನಾತ್ಮಕವಾಗಿ ಗಮನ ಸೆಳೆಯಬಹುದು. ಆದರೆ ಈ ರೀತಿಯ ಸ್ವಯಂ ಘೋಷಣೆಯ ಅನಿವಾರ್ಯತೆ ಸೃಷ್ಟಿಯಾಗುವುದು ನೈತಿಕ ಅವಸಾನದ ಸಂಕೇತ. ಸಾಪೇಕ್ಷ ನೆಲೆಯಲ್ಲಿ ಸೃಷ್ಟಿಯಾಗುವ ಈ ಸ್ವಘೋಷಣಾ ಪ್ರವೃತ್ತಿ ಭಾರತದಂತಹ ವೈವಿಧ್ಯಮಯ ದೇಶದಲ್ಲಿ ಅಸ್ಮಿತೆಗಳ ಚೌಕಟ್ಟಿಗೆ ಸಿಲುಕಿ ವಿಭಜಕ ರಾಜಕಾರಣಕ್ಕೆ ದಾರಿ ಮಾಡಿಕೊಡುತ್ತದೆ.
ಗಡಿಯಲ್ಲಿ ದೇಶ ಕಾಯುವ ಯೋಧರು ನಾಗರಿಕ ಸಮಾಜದ ನಡುವೆ ಸದಾ ನೆಲೆಸಿರುತ್ತಾರೆ. ಈ ಯೋಧರ ನಿತ್ಯ ಬವಣೆ, ಚಳಿ ಗಾಳಿಯೆನ್ನದೆ ಹಗಲಿರುಳೆನ್ನದೆ ದೇಶದ ರಕ್ಷಣೆಗಾಗಿ ಜೀವ ಪಣಕ್ಕಿಟ್ಟು ಹೋರಾಡಲು ಸಜ್ಜಾಗಿರುವ ಈ ಜೀವಿಗಳು ಸಮಾಜದ ಹಿತವಲಯದ ಕೂಸುಗಳಲ್ಲ ಎನ್ನುವ ಪರಿಜ್ಞಾನ ನಮ್ಮಲ್ಲಿದ್ದರೆ ನಾವು ಯೋಧರನ್ನು ಭಾವನಾತ್ಮಕ ನೆಲೆಯಲ್ಲಿ ನೋಡುವುದಿಲ್ಲ.
ಮಡಿದ ಮೇಲೆ ಹುತಾತ್ಮರಾಗಿ ಜನಮಾನಸದಲ್ಲಿ ನೆಲೆಸುವ ಯೋಧರು ಸೇವೆಯಿಂದ ನಿವೃತ್ತರಾಗಿ ಸಮಾಜದ ನಡುವೆ ಬದುಕು ಸವೆಸುವ ಸಂದರ್ಭದಲ್ಲಿ ಯಾವ ನೆಲೆಯಲ್ಲಿ ನಿಲ್ಲುತ್ತಾರೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ನಮ್ಮ ಸಮಾಜದ ಮತ್ತೊಂದು ಮುಖ ಪರಿಚಯವಾಗಲು ಸಾಧ್ಯ.
ಆಧುನಿಕ ನಾಗರಿಕ ಪ್ರಪಂಚದಲ್ಲಿ ಸಾಂಕೇತಿಕ ಅಭಿವ್ಯಕ್ತಿಗೆ ಎಷ್ಟು ಮಾನ್ಯತೆ ದೊರೆಯುವುದೋ ಅಷ್ಟೇ ಮಾನ್ಯತೆ ವ್ಯಕ್ತಿಯ ಬಾಹ್ಯ ಚಹರೆ ಮತ್ತು ಈ ಚಹರೆಗೆ ಒಂದು ಅಸ್ಮಿತೆಯನ್ನು ನೀಡುವ ಪೋಷಾಕುಗಳಿಗೂ ದೊರೆಯುತ್ತದೆ. ಸಮವಸ್ತ್ರವನ್ನು ಕಳಚಿಟ್ಟ ಯೋಧರ ಬದುಕನ್ನು ಒಮ್ಮೆ ನೋಡಿದರೆ ಈ ವಾಸ್ತವದ ಅರಿವಾಗುತ್ತದೆ.
ಏಕೆ ಹೀಗೆ ಎಂದು ಯೋಚಿಸಿದಾಗ ನಾವು ಯುದ್ಧ ಸನ್ನಿವೇಶದ ನೈಜ ಚಿತ್ರಣದತ್ತ ಗಮನಹರಿಸಬೇಕಾಗುತ್ತದೆ. ಯುದ್ಧ ಎಂದರೆ ಕೇವಲ ಮಾರಣಾಂತಿಕ ಶಸ್ತ್ರಾಸ್ತ್ರಗಳ ಪೈಪೋಟಿ ಅಲ್ಲ ಎನ್ನುವ ವಾಸ್ತವವನ್ನು ನಾಗರಿಕ ಸಮಾಜ ಅರ್ಥಮಾಡಿಕೊಳ್ಳದೆ ಹೋದರೆ ಬಹುಶಃ ನಾಗರಿಕತೆಯೇ ಅಳಿಸಿಹೋಗುತ್ತದೆ.
ಈ ದುರಂತ ವಾಸ್ತವದ ಕಥನವನ್ನು ನಾವು, ವೀರ ಸೇನಾನಿಗಳ ಅನುಭವದಿಂದಲೇ ಗ್ರಹಿಸಬೇಕಿದೆ. ಸೇನೆ ಎಂದ ಕೂಡಲೇ ಮೈನವಿರೇಳುವಂತೆ ಮಾತನಾಡುವುದು , ರೋಮಾಂಚನವಾದಂತೆ ವರ್ತಿಸುವುದು, ದೇಶಭಕ್ತಿಯ ಉನ್ಮಾದದಲ್ಲಿ ತೇಲುವುದು ನಾಗರಿಕ ಸಮಾಜದ ಲಕ್ಷಣವಲ್ಲ. ಹೀಗೆ ಮಾಡುವುದರಿಂದಲೇ ನಮಗೆ ಹೆಣಗಳನ್ನು ಎಣಿಸುವ ಚಾಳಿ ಕರಗತವಾಗಿದೆ.
ಗಡಿಯಲ್ಲಿ ಮಡಿದ ಪ್ರತಿಯೊಬ್ಬ ಯೋಧ ನಮ್ಮೊಳಗಿನ ಮಾನವ ಪ್ರಜ್ಞೆಯನ್ನು ಬಡಿದೆಬ್ಬಿಸಿ ನಾಗರಿಕತೆಯ ರಕ್ಷಣೆಗೆ ಬದ್ಧರಾಗುವಂತೆ ಮಾಡಬೇಕು. ಆದರೆ ಉನ್ಮಾದದ ಪರಿಸ್ಥಿತಿಯಲ್ಲಿ ಈ ಪ್ರತಿಯೊಂದು ಸಾವು ಪ್ರತೀಕಾರದ ಕ್ರೋಧವನ್ನು ಬೆಳೆಸುತ್ತದೆ. ಈ ಕ್ರೌರ್ಯವೇ ಉರುಳಿದ ತಲೆಗಳಿಗಾಗಿ ಹಾತೊರೆಯುವಂತೆ ಮಾಡುತ್ತದೆ.
ನಾವು ಬಯಸುವುದಾದರೂ ಏನನ್ನು ? ನಮ್ಮ ದೇಶದ ಸುರಕ್ಷತೆಯೇ ನಮ್ಮ ಆದ್ಯತೆಯಾಗಿದ್ದರೆ ನಾವು ಯುದ್ಧ ಬಯಸುವುದಿಲ್ಲ, ಶಾಂತಿ ಬಯಸುತ್ತೇವೆ. ಆದರೆ ಮತ್ತಾವುದೋ ರಾಷ್ಟ್ರ ನಮ್ಮ ದೇಶದ ಮೇಲೆ ಆಕ್ರಮಣ ನಡೆಸಿದಾಗ ಮನಸು ವಿಚಲಿತವಾಗುತ್ತದೆ. ಆತಂಕ ಹೆಚ್ಚಾಗುತ್ತದೆ. ಅನಿಶ್ಚಿತತೆ ಕಾಡುತ್ತದೆ. ನಾಳಿನ ಚಿಂತೆ ಕಾಡುತ್ತದೆ.
ಏಕೆಂದರೆ ಯುದ್ಧ ಎನ್ನುವುದು ಸಮಾಜದ ಬಹುಸಂಖ್ಯೆಯ ಜನರಿಗೆ ಸಾವು ಬದುಕಿನ ಪ್ರಶ್ನೆಯಾಗುತ್ತದೆ. ಇದು ಹಿತವಲಯದಲ್ಲಿರುವವರಿಗೆ ಅರ್ಥವಾಗುವುದಿಲ್ಲ. ಗಡಿಯಲ್ಲಿ ದೇಶದ ರಕ್ಷಣೆಗಾಗಿ ಟೊಂಕಕಟ್ಟಿ ನಿಂತಿರುವ ಯೋಧರು ಈ ಅನಿಶ್ಚಿತತೆಯನ್ನು ಪ್ರತಿಕ್ಷಣವೂ ಎದುರಿಸುತ್ತಿರುತ್ತಾರೆ ಎನ್ನುವ ಪರಿಜ್ಞಾನವೂ ಸಮಾಜಕ್ಕೆ ಇರಬೇಕು.
ಈ ಪರಿಜ್ಞಾನ ಸಮಾಜದಲ್ಲಿ ಇದ್ದರೆ ಆಳುವ ವರ್ಗಗಳು ಆದಷ್ಟೂ ಮಟ್ಟಿಗೆ ತಮ್ಮ ಪರಾಕ್ರಮದ ಧೋರಣೆಯನ್ನು ಬದಿಗಿಟ್ಟು ಸ್ನೇಹಸೇತುವೆಗಳನ್ನು ನಿರ್ಮಿಸುವುದರಲ್ಲಿ ತೊಡಗುತ್ತವೆ. ಎರಡನೆ ಮಹಾಯುದ್ಧದ ನಂತರದಲ್ಲಿ ಅನೇಕ ರಾಷ್ಟ್ರಗಳು ಈ ನೀತಿಯನ್ನು ಪಾಲಿಸಲು ಸಜ್ಜಾಗಿದ್ದವು.
ಯಾವುದೇ ಹೊರ ದೇಶಗಳಿಗೆ ತನ್ನ ಸೇನೆಯ ನೆರವು ನೀಡುವುದಿಲ್ಲ ಎನ್ನುವ ನೀತಿಗೂ ಬದ್ಧವಾಗಿದ್ದವು. ಜಪಾನ್ ಇಂದಿಗೂ ಬದ್ಧವಾಗಿದೆ. ಏಕೆಂದರೆ ಯೋಧರು ಹರಕೆಯ ಕುರಿಗಳಾಗಬಾರದು, ಆಪದ್ಭಾಂಧವರಾಗಬೇಕು. ದುರಂತ ಎಂದರೆ ಸಾಮ್ರಾಜ್ಯಶಾಹಿಯ ವಿಸ್ತರಣೆಯ ರಾಜಕಾರಣದಲ್ಲಿ ಯೋಧರು ಬಲಿಪೀಠಕ್ಕೆ ಸಿದ್ಧರಾಗಿರುವ ಹರಕೆಯ ಕುರಿಗಳಂತೆಯೇ ಕಾಣುತ್ತಾರೆ.
ಈ ಧೋರಣೆಯೇ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳನ್ನು ಶಸ್ತ್ರಾಸ್ತ್ರಗಳ ಭಂಡಾರಗಳನ್ನಾಗಿ ಮಾಡಿದೆ. ವಿಶ್ವದ ದೊಡ್ಡಣ್ಣ ಈ ಶಸ್ತ್ರಾಸ್ತ್ರಗಳ ಪೈಪೋಟಿಗೆ ಹರಾಜು ಮಾರುಕಟ್ಟೆಯಂತೆ ಕಾರ್ಯ ನಿರ್ವಹಿಸುತ್ತದೆ. ಬಂಡವಾಳ ವ್ಯವಸ್ಥೆ ಬಿಕ್ಕಟ್ಟಿಗೆ ಸಿಲುಕಿದಾಗಲೆಲ್ಲಾ ಯಾವುದೋ ಎರಡು ರಾಷ್ಟ್ರಗಳ ನಡುವೆ ಘರ್ಷಣೆ ಸಂಭವಿಸುತ್ತದೆ. ಯುದ್ಧದ ಕಾರ್ಮೋಡಗಳು ಕವಿಯುತ್ತವೆ.
ಕೊಂಚ ಮಟ್ಟಿಗೆ ಕಾಳಗವೂ ನಡೆಯುತ್ತದೆ. ನಂತರ ಶಾಂತಿ ಪ್ರಕ್ರಿಯೆ ಜಾರಿಯಾಗುತ್ತದೆ. ಈ ನಡುವೆ ಕೋಟ್ಯಂತರ ರೂಗಳ ಶಸ್ತ್ರಾಸ್ತ್ರ ಖರೀದಿಯ ಭರಾಟೆ ಸದ್ದಿಲ್ಲದೆ ನಡೆದಿರುತ್ತದೆ. ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳು ಆರೋಗ್ಯ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ವಲಯಗಳಿಗಿಂತಲೂ ರಕ್ಷಣಾ ವಲಯಕ್ಕೇ ಹೆಚ್ಚಿನ ಹಣಕಾಸು ಒದಗಿಸುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕು.
ಇದೀಗ ಭಾರತ ಮತ್ತು ಚೀನಾದ ನಡುವೆ ಏರ್ಪಟ್ಟಿರುವ ಸಂಘರ್ಷದ ವಾತಾವರಣವೂ ಕೆಲವು ದಿನಗಳಲ್ಲಿ ತಿಳಿಯಾಗುತ್ತದೆ. ಏಕೆಂದರೆ ಬಂಡವಾಳ ವ್ಯವಸ್ಥೆಯ ಉಳಿವಿಗೆ ಯುದ್ಧ ಎಷ್ಟು ಅಗತ್ಯವೋ ಯುದ್ಧೋನ್ಮಾದವೂ ಅಷ್ಟೇ ಅಗತ್ಯ. ಕೊರೋನಾದಿಂದ ಉಂಟಾಗುತ್ತಿರುವ ಆತಂಕಕಾರಿ ವಿದ್ಯಮಾನಗಳನ್ನೂ ನಿರ್ಲಕ್ಷಿಸುವಷ್ಟು ಮಟ್ಟಿಗೆ ಯುದ್ಧೋನ್ಮಾದ ನಾಗರಿಕ ಸಮಾಜವನ್ನು ಆವರಿಸಿಬಿಡುತ್ತದೆ.
ಒಂದೆರಡು ಸಾವುಗಳು ನಮ್ಮನ್ನು ಜಾಗೃತಗೊಳಿಸುತ್ತವೆ, ಹುತಾತ್ಮ ಯೋಧರು ನಮ್ಮೊಳಗಿನ ಸುಪ್ತ ಕಳಕಳಿಯನ್ನು ಬಡಿದೆಬ್ಬಿಸುತ್ತಾರೆ. ಆಳುವ ವರ್ಗಗಳು ಸೃಷ್ಟಿಸುವ ದೇಶಪ್ರೇಮದ ಉನ್ಮಾದ ಸಮಸ್ತ ಜನತೆಯನ್ನು ಆವರಿಸುತ್ತದೆ. ಅಷ್ಟರೊಳಗೆ ಶಾಂತಿ ಮಾತುಕತೆಗಳು ಮುಗಿದು ಗಡಿಯಲ್ಲಿ ಯಥಾಸ್ಥಿತಿ ಮರಳುತ್ತದೆ.
ಹುತಾತ್ಮರಾದ ಯೋಧರು ಕೆಲವು ದಿನಗಳ ಬಳಿಕ ನಮ್ಮ ಸ್ಮರಣೆಯಿಂದ ದೂರವಾಗಿಬಿಡುತ್ತಾರೆ. ಭಾರತವೇ ಆಗಲೀ, ಚೀನಾ-ಪಾಕಿಸ್ತಾನ ಆಗಲೀ ಅಥವಾ ಇತರ ಯಾವುದೇ ದೇಶವಾಗಲೀ ಇಂತಹ ಲಕ್ಷಾಂತರ ಯೋಧರನ್ನು ಕಳೆದುಕೊಳ್ಳುತ್ತಲೇ ತಮ್ಮ ಭೌಗೋಳಿಕ ಅಸ್ಮಿತೆಯನ್ನು ರಕ್ಷಿಸಿಕೊಂಡುಬಂದಿವೆ. ಈ ಭೌಗೋಳಿಕ ಅಸ್ಮಿತೆಯ ರಕ್ಷಣೆಗೆ ದೇಶದ ಪ್ರತಿಯೊಬ್ಬ ನಾಗರಿಕರೂ ತಮ್ಮ ಕೊಡುಗೆ ಸಲ್ಲಿಸುತ್ತಲೇ ಇರುತ್ತಾರೆ.
ಒಂದು ದೇಶದ ರಕ್ಷಣೆಗೆ ಗಡಿಯಲ್ಲಿನ ಯೋಧರು ಶಸ್ತ್ರಾಸ್ತ್ರಗಳೊಡನೆ ಹೋರಾಡುತ್ತಾರೆ ಆಂತರಿಕವಾಗಿ ರೈತರು, ಕೃಷಿ ಕಾರ್ಮಿಕರು, ಶ್ರಮಜೀವಿಗಳು ತಮ್ಮ ಬಾಹುಗಳನ್ನು ಬಳಸಿ ನಿತ್ಯ ಹೋರಾಟದಲ್ಲಿ ತೊಡಗಿರುತ್ತಾರೆ. ಈ ಶ್ರಮಜೀವಿಗಳ ಬೆವರು ಗಡಿಯಲ್ಲಿನ ಯೋಧರ ಉಸಿರಾಗುತ್ತದೆ. ಯೋಧರ ಉಸಿರು ಶ್ರಮಜೀವಿಗಳ ಬದುಕಿಗೆ ನೆರಳಾಗುತ್ತದೆ.
ಒಂದು ಸಂವೇದನಾಶೀಲ ಸಮಾಜದಲ್ಲಿ ಈ ಶ್ರಮ, ಬೆವರು, ನೆತ್ತರು ಮತ್ತು ಪರಿಶ್ರಮದ ಮೌಲ್ಯಗಳನ್ನು ಮಾನವೀಯ ನೆಲೆಯಲ್ಲಿ ನೋಡಲಾಗುತ್ತದೆ. ಸಂವೇದನೆಯೇ ಇಲ್ಲದ ಸಮಾಜದಲ್ಲಿ ಭಾವನಾತ್ಮಕ ನೆಲೆಯಲ್ಲಿ ನೋಡಲಾಗುತ್ತದೆ. ಭಾರತ ಈ ವಿರೋಧಾಭಾಸವನ್ನು ಎದುರಿಸುತ್ತಿದೆ.
ರಾಷ್ಟ್ರೀಯತೆಯ ಉನ್ಮಾದಕ್ಕೆ ಬಲಿಯಾಗಿರುವ ಒಂದು ವರ್ಗ, ಒಂದು ಬೃಹತ್ ಸಮುದಾಯ ಮತ್ತು ಒಂದು ಪೀಳಿಗೆ ಇಂದು ರಾಷ್ಟ್ರದ ಪರಿಕಲ್ಪನೆಯೇ ಇಲ್ಲದೆ, ದೇಶ ಎಂದರೇನು ಎಂಬುದನ್ನೇ ತಿಳಿಯದೆ ಮುನ್ನಡೆಯುತ್ತಿದೆ. ಈ ಪ್ರಜೆಗಳಿಗೆ ಯುದ್ಧ ಎನ್ನುವುದು ರಾಷ್ಟ್ರೀಯ ಅಸ್ಮಿತೆಯ ಪ್ರಶ್ನೆಯಾಗಿ ಕಾಣುತ್ತದೆ. ಆದರೆ ವಿನಾಶದ ಮಾರ್ಗದಲ್ಲಿ ಅಸ್ಮಿತೆಗಳು ತಂತಾನೇ ಭಸ್ಮವಾಗಿಹೋಗುತ್ತವೆ ಎನ್ನುವ ಪ್ರಜ್ಞೆ ಇವರಲ್ಲಿ ಕಾಣುವುದಿಲ್ಲ.
ಹಾಗಾಗಿಯೇ ಕೊರೋನಾದಂತಹ ಮಾರಣಾಂತಿಕ ಪಿಡುಗಿನ ನಡುವೆಯೂ ಯುದ್ಧ ಬಯಸುವ ಮನಸುಗಳು ಮೆರೆದಾಡುತ್ತಿವೆ. ಯಾವುದೇ ಶಸ್ತ್ರಾಸ್ತ್ರ ಬಳಸದೆಯೇ ಲಕ್ಷಾಂತರ ಶ್ರಮಜೀವಿಗಳನ್ನು ಸಾವಿನ ಕೂಪಕ್ಕೆ ತಳ್ಳುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಕೊರೋನಾ ಭಾರತದ ಜನಸಾಮಾನ್ಯರ ಬದುಕಿನ ಅನಿಶ್ಚಿತತೆಯನ್ನು ಹೆಚ್ಚಿಸುತ್ತಿರುವ ಸಂದರ್ಭದಲ್ಲೇ ಬಂಡವಾಳ ವ್ಯವಸ್ಥೆಯ ನೀತಿಗಳು ಬದುಕಿನ ನಾಳೆಗಳ ಮುಂದೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ.
ಯಾವುದೇ ಶಸ್ತ್ರಾಸ್ತ್ರಗಳಿಲ್ಲದೆಯೇ ಕೋಟ್ಯಂತರ ಪ್ರಜೆಗಳ ಬದುಕು ವಿನಾಶದತ್ತ ಸಾಗುವ ಸಂದರ್ಭವನ್ನು ಎದುರು ನೋಡುತ್ತಿದ್ದೇವೆ. ಬದುಕಬೇಕಾದವರ ಸಾವು ನಮ್ಮನ್ನು ವಿಚಲಿತಗೊಳಿಸುತ್ತಿಲ್ಲ. ಸಾವಿನ ಹೊಸ್ತಿಲಲ್ಲಿರುವವರ ಬದುಕು ನಮ್ಮನ್ನು ಜಾಗೃತಗೊಳಿಸುತ್ತಿಲ್ಲ.
ಈ ವಿರೋಧಾಭಾಸಗಳ ನಡುವೆಯೇ, ವಿತಂಡವಾದಗಳ ನಡುವೆಯೇ ನಾವು ನವ ಉದಾರವಾದ ಮತ್ತು ಜಾಗತೀಕರಣವನ್ನು ಒಪ್ಪಿಕೊಂಡು ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಉನ್ಮಾದಕ್ಕೆ ಶರಣಾಗುತ್ತಿದ್ದೇವೆ. ಔದ್ಯಮಿಕ ಬಂಡವಾಳ ಪ್ರಧಾನವಾಗಿದ್ದ ಕಾಲದಲ್ಲಿ, ಭಾರತ ವಸಾಹತು ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಗಾಂಧಿ ಅನುಸರಿಸಿದ ಸ್ವದೇಶಿ ಮಾದರಿ ಇಂದಿನ ಡಿಜಿಟಲ್ ಯುಗದಲ್ಲಿ ಸಾಧ್ಯವಾಗುವುದಿಲ್ಲ ಎನ್ನುವುದನ್ನು ಅರ್ಥಶಾಸ್ತ್ರ ಬಲ್ಲವರಿಗೆ ಹೇಳಬೇಕಿಲ್ಲ.
ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವ ಶಪಥದ ಹಿಂದೆ ವಸ್ತುನಿಷ್ಠ ಅವಲೋಕನಕ್ಕಿಂತಲೂ ಕ್ಷಣಿಕ ಆಕ್ರೋಶ ಮತ್ತು ಉನ್ಮಾದವೇ ಹೆಚ್ಚಾಗಿರುವುದರಿಂದ ಬಹಿಷ್ಕೃತ ಉತ್ಪನ್ನಗಳು ಸಾಪೇಕ್ಷವಾಗಿಬಿಡುತ್ತವೆ. ಇಲ್ಲಿ ಜಾಗತಿಕ ಬಂಡವಾಳ ವ್ಯವಸ್ಥೆ ನಿರ್ವಹಿಸುವ ಪಾತ್ರವನ್ನು ಗಮನಿಸದೆ ಹೋದರೆ ಭಾರತದ ಶ್ರಮಜೀವಿಗಳು ಬಾಣಲೆಯಿಂದ ಬೆಂಕಿಗೆ ಬೀಳುವುದು ಶತಃಸಿದ್ಧ.
ಭಾರತ ಎನ್ನಲಾಗುವ ಭೌಗೋಳಿಕ ಪ್ರದೇಶ ಈ ದೇಶದ ಸಾರ್ವಭೌಮ ಪ್ರಜೆಗಳಿಗೆ ಸೇರಿದ ಸ್ವತ್ತು. ಈ ಭೂಪ್ರದೇಶದ ರಕ್ಷಣೆಗಾಗಿ ಯೋಧರು ಪ್ರಾಣ ತೆರುತ್ತಾರೆ, ಆಂತರಿಕವಾಗಿ ಕೋಟ್ಯಂತರ ಶ್ರಮಜೀವಿಗಳು ದೇಶದ ಮುನ್ನಡೆಗೆ ಬೆವರು ಸುರಿಸಿ ದುಡಿಯುತ್ತಾರೆ. ಬೆರಳೆಣಿಕೆಯಷ್ಟು ಜನರು ಈ ಶ್ರಮದ ಫಲಾನುಭವಿಗಳಾಗಿ ಅಭೇದ್ಯ ಕೋಟೆಗಳಲ್ಲಿ ಐಷಾರಾಮಿ ಬದುಕು ನಡೆಸುತ್ತಾರೆ.
ಬೆವರು ಸುರಿಸಿ ದುಡಿಯುವ ಜನತೆಗೆ ತಮ್ಮ ದೇಶದ ಮೇಲೆ ನಡೆಯುವ ಆಕ್ರಮಣದ ಬಗ್ಗೆ ಪೂರ್ಣ ಮಾಹಿತಿ ಪಡೆಯುವ ಹಕ್ಕು ಇರುತ್ತದೆ. ಇದು ಪ್ರಜಾತಂತ್ರದ ನಿಯಮ. ಭಾರತದ ಸುದ್ದಿಮನೆಗಳಿಗೆ, ಆಡಳಿತ ವ್ಯವಸ್ಥೆಗೆ ಈ ಸೂಕ್ಷ್ಮದ ಪರಿಜ್ಞಾನ ಇರಬೇಕಿತ್ತು. ಇಲ್ಲ ಎನ್ನುವುದು ಸ್ಪಷ್ಟ.
ಈ ಪರಿಜ್ಞಾನ ಇದ್ದಿದ್ದಲ್ಲಿ ಟಿವಿ ಪರದೆಯ ಮೇಲೆ ಉಭಯ ದೇಶಗಳ ಶಸ್ತ್ರಾಸ್ತ್ರಗಳ ಎಣಿಕೆ ಮಾಡುತ್ತಾ ಉರುಳಿದ ತಲೆಗಳನ್ನು ಎಣಿಸುತ್ತಿರಲಿಲ್ಲ. ಭಾರತೀಯ ಸೇನೆಯ ಶಕ್ತಿ ಸಾಮರ್ಥ್ಯವನ್ನು ಪರದೆಯ ಮೇಲೆ ಬಿಂಬಿಸುತ್ತಾ ತುಲನಾತ್ಮಕ ವಿಶ್ಲೇಷಣೆ ಮಾಡುವ ಸುದ್ದಿಮನೆಯ ಸಂಪಾದಕರಿಗೆ ಯುದ್ಧ ಎನ್ನುವುದು ಕೇವಲ ಗಡಿಯಲ್ಲಿ ನಡೆಯುವ ಕಸರತ್ತು ಅಲ್ಲ, ಮನುಕುಲವನ್ನು ವಿನಾಶದ ಅಂಚಿಗೆ ಕೊಂಡೊಯ್ಯುವ ಮಸಲತ್ತು ಎನ್ನುವ ಪರಿವೆ ಇರಬೇಕು.
ನಮ್ಮಲ್ಲಿ ಎಷ್ಟು ಅಣ್ವಸ್ತ್ರಗಳಿವೆ ಎಂದು ಯೋಚಿಸುವ ಮುನ್ನ ಒಂದು ಪರಮಾಣು ಬಾಂಬ್ ಇಡೀ ವಿಶ್ವವನ್ನೇ ನೆಲಸಮ ಮಾಡುತ್ತದೆ ಎನ್ನುವ ಅಲ್ಪ ಜ್ಞಾನವೂ ಸುದ್ದಿಮನೆಗಳ ಸಂಪಾದಕರಿಗೆ ಇರಬೇಕಲ್ಲವೇ ? ವಂದಿಮಾಗಧ ಪ್ರವೃತ್ತಿಗೂ ಒಂದು ಇತಿಮಿತಿ ಇರಬೇಕಲ್ಲವೇ ? ಸೇನಾ ಸಾಮರ್ಥ್ಯವನ್ನು ಬಹಿರಂಗವಾಗಿ ಬಿತ್ತರಿಸಲು ಸುದ್ದಿಮನೆಗಳಿಗೆ ಅನುಮತಿ ನೀಡಿದವರಾದರೂ ಯಾರು ? ಇದು ನಮ್ಮ ದೇಶದ ಗೋಪ್ಯತೆಯನ್ನು ಬಯಲು ಮಾಡಿದಂತಾಗುವುದಿಲ್ಲವೇ ?
ಪರದೆಯ ಮೇಲೆ ಬಿತ್ತರಿಸುವ ಹಾಲಿವುಡ್/ಬಾಲಿವುಡ್ ಚಿತ್ರಗಳ ದೃಶ್ಯಗಳು ವೀಕ್ಷಕರ ಮೈನವಿರೇಳಿಸುತ್ತವೆ. ಉನ್ಮಾದ ಹೆಚ್ಚಿಸುತ್ತವೆ. ಈ ಉನ್ಮಾದಕ್ಕೆ ಸುಲಭ ತುತ್ತಾಗುವ ಒಂದು ವರ್ಗ ಸಾವು ನೋವುಗಳನ್ನು ಅನಿವಾರ್ಯ ಕರ್ಮ ಎಂದು ಸ್ವೀಕರಿಸುವ ಮಟ್ಟಕ್ಕೆ ಯುದ್ಧೋನ್ಮಾದಕ್ಕೆ ಬಲಿಯಾಗಿಬಿಡುತ್ತದೆ. ಆದರೆ ಈ ಸಾವು ನೋವುಗಳೊಡನೆ ದೇಶ ನಲುಗಿಹೋಗುತ್ತದೆ.
ಯುದ್ಧ ಅನಿವಾರ್ಯವೇ ಆದರೆ ಸಂಭವಿಸಿಯೇ ತೀರುತ್ತದೆ ಏಕೆಂದರೆ ಆಳುವ ವರ್ಗಗಳಿಗೆ ಯುದ್ಧರಂಗದಿಂದಾಚೆಗಿನ ಪ್ರಪಂಚ ಕಾಣುವುದಿಲ್ಲ. ನಮಗೆ ಕಾಣುತ್ತದೆ. ಕಳೆದ ಒಂದು ಶತಮಾನದಲ್ಲಿ ಮಾನವ ಸಮಾಜ ಸಾಕಷ್ಟು ಯುದ್ಧಗಳನ್ನು, ಸಾವುನೋವುಗಳನ್ನು ಕಂಡಿದೆ. ಆದರೆ ಸ್ನೇಹದಿಂದಿರುವುದನ್ನು ಕಲಿತಿಲ್ಲ.
ಚೀನಾ, ರಷ್ಯಾ, ಅಮೆರಿಕ ಮತ್ತು ಇತರ ಬಂಡವಾಳಶಾಹಿ ಪಶ್ಚಿಮ ರಾಷ್ಟ್ರಗಳಿಗೆ ಯುದ್ಧಭೂಮಿಯೂ ಒಂದು ಮಾರುಕಟ್ಟೆ ಇದ್ದಂತೆ. ಈ ಮಾರುಕಟ್ಟೆಯಲ್ಲಿ ಬಿಕರಿಯಾಗುವ ಶವಗಳು ಜಾಗತಿಕ ಸಂತೆಯ ಕಚ್ಚಾವಸ್ತುಗಳಂತೆ ಕಾಣುತ್ತವೆ. ಇರಾನ್, ಇರಾಕ್, ಕೊಲ್ಲಿ ರಾಷ್ಟ್ರಗಳು, ಆಫ್ರಿಕಾದ ದೇಶಗಳು, ಭಾರತ ಪಾಕಿಸ್ತಾನ ಮುಂತಾದ ದೇಶಗಳು ಈ ಹರಾಜು ಮಾರುಕಟ್ಟೆಯಲ್ಲಿ ಬೆತ್ತಲಾಗಿಬಿಡುತ್ತವೆ.
ಆಧುನಿಕ ಯುದ್ಧ ಪರಂಪರೆಯಲ್ಲಿ ಶಸ್ತ್ರಾಸ್ತ್ರಗಳು ಕೆಲವು ಸಾವಿರ ಜೀವ ಹರಣ ಮಾಡಿದರೆ ಮಾರುಕಟ್ಟೆಯ ತಂತ್ರಗಳು ಕೋಟ್ಯಂತರ ಜನರ ಬದುಕನ್ನು ನಾಶಪಡಿಸುತ್ತವೆ. ಯುದ್ಧ ಮತ್ತು ಯುದ್ಧೋನ್ಮಾದ ಈ ಮಾರುಕಟ್ಟೆ ತಂತ್ರಗಳ ಒಂದು ಅವಿಭಾಜ್ಯ ಅಂಗ ಎನ್ನುವುದನ್ನು ನಾವು ಅರ್ಥಮಾಡಿಕೊಳ್ಳುವುದು ಕ್ಷೇಮ.
ಬಂಡವಾಳ ವ್ಯವಸ್ಥೆ ಮತ್ತು ಅಧಿಕಾರ ರಾಜಕಾರಣದ ವಕಾಲತ್ತು ವಹಿಸಿರುವ ಭಾರತದ ಸುದ್ದಿಮನೆಗಳಿಗೆ ಈ ಸೂಕ್ಷ್ಮಗಳ ಪರಿವೆ ಇಲ್ಲ ಎನ್ನುವುದು ಸ್ಪಷ್ಟ. ಇದ್ದರೂ ಅದೇ ಮಾರುಕಟ್ಟೆಯ ಅನಿವಾರ್ಯತೆಗಳು ಸುದ್ದಿಮನೆಗಳ ಪ್ರಜ್ಞೆಯನ್ನು ಕಲುಷಿತಗೊಳಿಸುತ್ತವೆ. ಆದರೆ ನಾಗರಿಕರಾದ ನಾವು ಜೀವ ಮತ್ತು ಸಾವಿನ ನಡುವೆ ಆಯ್ಕೆ ಮಾಡುವ ಅನಿವಾರ್ಯತೆಗೆ ಸಿಲುಕಿದ್ದೇವೆ.
ಈ ಸಂದಿಗ್ಧ ಪರಿಸ್ಥಿತಿಯಲ್ಲೇ ಸುದ್ದಿಮನೆಗಳು ಯುದ್ಧೋನ್ಮಾದ ಸೃಷ್ಟಿಸುತ್ತಿರುವುದು ಈ ದೇಶದ ದುರಂತ. ಆದರೆ ನಾಗರಿಕ ಪ್ರಜ್ಞೆ ಜಾಗೃತವಾದರೆ ಸ್ನೇಹಸೇತುವೆಗಳನ್ನು ನಿರ್ಮಿಸುವುದು ಕಷ್ಟವೇನಲ್ಲ. ದೇಶದಲ್ಲಿ ಸ್ನೇಹ ಭಾವ ಅಂತರ್ಗತವಾಗಿದ್ದರೆ ಸ್ನೇಹದಲ್ಲಿ ದೇಶಗಳು ಸಮ್ಮಿಳಿತಗೊಳ್ಳುತ್ತವೆ. ಇದು ಮಾನವತೆಯ ಪ್ರಶ್ನೆ.
ಸುದ್ದಿದಿನ.ಕಾಂ|ವಾಟ್ಸಾಪ್|9980346243