ದಿನದ ಸುದ್ದಿ
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ತೋರಿದ್ದರೂ ಲಿಂಗ ಅಸಮಾನತೆಯಂತಹ ಸವಾಲು ಇದೆ: ಜಿ.ಪಂ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ
ಸುದ್ದಿದಿನ,ದಾವಣಗೆರೆ : ಹೆಣ್ಣು ಇಂದು ಎಲ್ಲ ಕ್ಷೇತ್ರದಲ್ಲಿ ಸಂಭ್ರಮಿಸುವಂತಹ ಸಾಧನೆ ಮಾಡಿದ್ದರೂ ಲಿಂಗ ಅಸಮಾನತೆ ಮತ್ತು ಪಕ್ಷಪಾತವನ್ನು ತೊಡೆದು ಹಾಕುವ ಸವಾಲುಗಳನ್ನು ಹೊಂದಿದ್ದು, ಇದನ್ನೂ ಕೂಡ ದಿಟ್ಟವಾಗಿ ಮೆಟ್ಟಿ ನಿಲ್ಲುವ ಶಕ್ತಿ ತೋರ್ಪಡಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ದಾವಣಗೆರೆ ತಾಲ್ಲೂಕು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಜಿಲ್ಲಾ ಶಾಖೆ, ಒನ್ ಸ್ಟಾಪ್ ಸೆಂಟರ್(ಸಖಿ), ಮಹಿಳಾ ಶಕ್ತಿ ಕೇಂದ್ರ, ಸ್ತ್ರೀಶಕ್ತಿ ಒಕ್ಕೂಟ, ಮಹಿಳಾ ಸಹಾಯವಾಣಿ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2021 ನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ | ನಿರುದ್ಯೋಗಿ ಪುರುಷನಿರಬಹುದು ಆದರೆ, ನಿರುದ್ಯೋಗಿ ಮಹಿಳೆ ಇರುವುದಿಲ್ಲ : ಎಸ್ ಪಿ ಹನುಮಂತರಾಯ
ಮೊದಲೆಲ್ಲ ಮಹಿಳೆಯನ್ನು ಮಕ್ಕಳನ್ನು ಹೆರುವ ಯಂತ್ರದಂತೆ, ಆಳಿನಂತೆ ಕೀಳಾಗಿ ಕಾಣಲಾಗುತ್ತಿತ್ತು. ಆದರೆ ಇತ್ತೀಚಿಗೆ ಸ್ವಲ್ಪ ಬದಲಾವಣೆ ಕಾಣುತ್ತಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯಂತಹ ನಿರ್ಣಯಗಳು, ಸಂವಿಧಾನದ ಮೂಲಕ ಸಮಾನ ಅವಕಾಶ, ಶಿಕ್ಷಣದಿಂದಾಗಿ ಇಂದು ಹೆಣ್ಣು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯವಾಗಿ ಗುರುತಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದ್ದರೂ ಅನೇಕ ಸವಾಲುಗಳು ಹಾಗೂ ಜವಾಬ್ದಾರಿಗಳಿವೆ.
ಸರ್ಕಾರದ ಮುಖ್ಯ ಅಂಗಗಳಾದ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗಗಳಲ್ಲಿ ಮಹಿಳೆಯರು ಇಂದು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮಗೆ ಲಭಿಸಿದ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಂಡು, ಹೆಣ್ಣು ಅಬಲೆಯಲ್ಲ ಸಬಲೆ ಎಂದು ಸಾಬೀತುಪಡಿಸುತ್ತಿದ್ದಾಳೆ. ಭಾರತೀಯ ನೆಲೆಯಲ್ಲಿ ಹೆಣ್ಣಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಆಕೆ ನಮ್ಮ ಸಂಸ್ಕøತಿಯ ಪ್ರತೀಕವಾಗಿದ್ದಾಳೆ. ಆದ ಕಾರಣ ತನಗೆ ಸಿಕ್ಕಿರುವ ಸ್ವಾತಂತ್ರ್ಯವನ್ನು ಧನಾತ್ಮಕವಾಗಿ, ಸಂಸ್ಕøತಿಯ ನೆಲಗಟ್ಟಿನಲ್ಲಿ ಬಳಸಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.
ಸುದ್ದಿದಿನ.ಕಾಂ|ವಾಟ್ಸಾಪ್|9980346243