ನೆಲದನಿ

ಯಮುನೆಯ ಹಿಂಬಾಲಿಸುತ್ತಾ..!

Published

on

ನದಿಗಳ ಬೆನ್ನು ಹತ್ತಿ ಹೋದರೆ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಯಮುನಾ ನದಿಯು ಗಂಗಾ ನದಿಯ ಉಪನದಿ. ಯಮುನೋತ್ರಿಯಲ್ಲ ಹುಟ್ಟಿ, ದಕ್ಷಿಣಾಭಿಮುಖವಾಗಿ ಹರಿಯುವ ಈ ನದಿಯು ಆಗ್ರಾದ ಬಳಿ ಪೂರ್ವಾಭಿಮುಖವಾಗಿ ಹರಿದು ತೆಳ್ಳಗಾಗುತ್ತಾ ಹೋಗಿ ಕೊನೆಗೆ ಅಲಹಾಬಾದಿನಲ್ಲಿ ಗಂಗೆಯನ್ನು ಸೇರುತ್ತದೆ. ಈ ಎರಡೂ ನದಿಗಳನ್ನು ಅವಳಿ ನದಿಗಳೆಂದೇ ಭಾರತೀಯರು ಗುರುತಿಸುತ್ತಾರೆ. ಉತ್ತರ ಭಾರತದ ಉಳಿದೆಲ್ಲಾ ನದಿಗಳು ಹಿಮಾಲಯದ ತಪ್ಪಲಿನಲ್ಲಿ ಜನಿಸುತ್ತವೆ, ಆದರೆ ಈ ಎರಡು ನದಿಗಳು ಹಿಮಾಲಯದಲ್ಲಿಯೇ ಜನಿಸುತ್ತವೆ, ಕಾರಣ ಪವಿತ್ರ ನದಿಗಳೆಂದು ಪರಿಗಣಿತವಾದವು.

ಅವಳಿಗಳು ಸಾಮಾನ್ಯವಾಗಿ ಒಂದೇ ಥರ ಇರಬೇಕೆಂಬುದು ವಾಡಿಕೆ. ಆದರೆ ಗಂಗೆ – ಯಮುನೆಯರು ಗುಣ ಸ್ವಭಾವಗಳ ದೃಷ್ಟಿಯಿಂದ ತುಂಬಾ ಬೇರೆ ಬೇರೆ, ಮಾತ್ರವಲ್ಲ, ವಿರುದ್ಧ ಗುಣಗಳಿರುವ ನದಿಗಳೂ ಹೌದು. ಪೌರಾಣಿಕವಾಗಿ ನೋಡಿದರೆ, ಗಂಗಾ ನದಿಯು ಚಂದ್ರ ವಂಶಕ್ಕೆ ಸೇರಿದ ಸ್ಫಟಿಕದಂಥಾ ಬಣ್ಣದ ನದಿಯಾದರೆ, ಯಮುನೆಯು ಸೂರ್ಯವಂಶಕ್ಕೆ ಸೇರಿದ ನದಿಯಾಗಿದೆ. ಆಕೆ ವಿವಸ್ವತ ( ಸೂರ್ಯ) ನ ಮಗಳು. ಯಮನೂ ಸೂರ್ಯನ ಮಗನಾದ್ದರಿಂದ ಯಮುನಾಳು ಯಮನಿಗೆ ತಂಗಿಯಾಗಬೇಕು. ಹಾಗಾಗಿ ಆಕೆ ಕಾಳಿಂದಿ-ಕಪ್ಪು ಬಣ್ಣದವಳು.

ಈ ಅಣ್ಣ ತಂಗಿಯರ ನಡುವಣ ಸಂಬಂಧ ಮಾತ್ರ ಅತ್ಯಂತ ನಿಕಟವಾದುದು. ಯಮುನಾ ನದಿ ದಂಡೆಯಲ್ಲಿ ಪ್ರತಿವರ್ಷ ನಡೆಯುವ ಯಮುನೋತ್ಸವ ಎಂಬ ಆಚರಣೆಯೊಂದರಲ್ಲಿ ಯಮನು ಯಮುನೆಯನ್ನು ನೋಡಲು ಬರುತ್ತಾನೆ. ಅವನನ್ನು ಮೋಹದಿಂದ ಬರಮಾಡಿಕೊಳ್ಳುವ ಆಕೆ ಆತನನ್ನು ನಗ್ನಗೊಳಿಸುತ್ತಾಳೆ. ಯಮನ ತಂಗಿಯಾದ ಯಮುನಾಳು ಯಮನ ಹೆಂಡತಿಯೂ ಹೌದು. ಏನೇ ಇರಲಿ, ಯಮುನಾಳು ಸಾವಿಗೆ ಹತ್ತಿರ ( ಕೃಷ್ಣ ಕೊಂದ ಕಾಳಿಂಗ ಸರ್ಪ ಇದ್ದ ನದಿ) ಎಂಬ ಕತೆಯು ಯಮುನೆಯಲ್ಲಿ ಮಿಂದರೆ ಸಾವಿಲ್ಲ ಎಂಬ ನಂಬಿಕೆಯನ್ನು ಜನಪ್ರಿಯಗೊಳಿಸಿದೆ.

ಗಂಗೆಯ ಹಾಗೆ ಯಮುನೆಯ ಚರಿತ್ರೆಯೂ ಸುದೀರ್ಘವಾದುದು. ವೇದಗಳ ಆರಂಭಿಕ ಕಾಲಘಟ್ಟದಲ್ಲಿ ಸಿಂಧೂ ಮತ್ತು ಸರಸ್ವತಿಗಳೇ ಪ್ರಸಿದ್ಧವಾದ ನದಿಗಳು. ಗಂಗೆ ಆಗಿನ್ನೂ ಪ್ರಸಿದ್ಧಿಗೆ ಬಂದಿರಲಿಲ್ಲ. ಆದರೆ ನಿಧಾನವಾಗಿ ಸಿಂಧೂ ಸರಸ್ವತಿ ನದಿಗಳ ದಂಡೆಯಿಂದ ನಮ್ಮ ಪೂರ್ವಿಕರು ಗಂಗಾ ನದಿಯ ದಂಡೆಯಲ್ಲಿ ಪೂರ್ವಾಭಿಮುಖವಾಗಿ ಚಲಿಸಿದರು. ಆಗ ಅವರಿಗೆ ಜೀವ ಕೊಟ್ಟ ನದಿಗಳೆಂದರೆ ಗಂಗೆ ಯಮುನೆಯರು. ಆ ಹೊತ್ತಿಗೆ ಈ ನದಿಗಳು ಸಿಂಧೂ ಸರಸ್ವತಿಗಳನ್ನು ಹಿಂದಿಕ್ಕಿ ಪ್ರಾಚೀನ ನಿರೂಪಣೆಗಳಲ್ಲಿ ಸ್ಥಾನ ಪಡೆಯಲಾರಂಭಿಸಿದರು. ಅಥರ್ವ ವೇದ, ಐತರೇಯ ಬ್ರಾಹ್ಮಣ ಮತ್ತು ಶತಪಥ ಬ್ರಾಹಣಗಳಲ್ಲಿ ಯಮ ಮತ್ತು ಯಮುನೆರ ಬಗೆಗೆ ಅತೀವ ಪ್ರೀತಿ -ಉತ್ಸಾಹಗಳನ್ನು ತೋರಿಸಲಾಗಿದೆ ಎಂದು ಸಂಸ್ಕೃತ ವಿದ್ವಾಂಸರು ಹೇಳಿದ್ದಾರೆ.

ಪುರಾಣ ಮತ್ತು ಮಹಾಕಾವ್ಯಗಳಲ್ಲಿ ಯಮುನೆಯು ಗಂಗೆಯಷ್ಟು ಜನಪ್ರಿಯಳಲ್ಲ. ಮಹಾಭಾರತದಲ್ಲಿ ವಸುದೇವನು ಕೃಷ್ಣನ್ನು ಕಂಸನಿಂದ ಪಾರುಮಾಡಲು ರಾತ್ರಿಕಾಲದಲ್ಲಿ ಯಮುನೆಯನ್ನು ದಾಟಲು ಹೊರಟಾಗ, ಯಮುನೆಯು ತಾನೇ ಇಬ್ಭಾಗವಾಗಿ ಅವನಿಗೆ ಸಹಕರಿಸುತ್ತದೆ. ಮುಂದೆ ಬಾಲಕೃಷ್ಣನು ಯಮುನೆಯಲ್ಲಿ ತೊಂದರೆ ಕೊಡುತ್ತಿದ್ದ ಕಾಳಿಂಗ ಸರ್ಪವನ್ನು ಕೊಂದು, ದನಗಳನ್ನು ಸಂರಕ್ಷಿಸುತ್ತಾನೆ. ಯುವಕ ಕೃಷ್ಣನ ರಾಸ ಲೀಲೆಗೆ ಯಮುನೆಯೇ ಸಾಕ್ಷಿಯಾಗುತ್ತಾಳೆ. 16ನೇ ಶತಮಾನದಲ್ಲಿ ರಚಿತವಾಗಿದೆ ಎನ್ನಲಾದ ಪುಷ್ಟಿ ಮಾರ್ಗಕ್ಕೆ ಸೇರಿದ ವಲ್ಲಭಾಚಾರ್ಯನ ಯಮುನಾಷ್ಟಕಂ ಕೃತಿಯಲ್ಲಿ ಆಕೆ ಭಗವಾನ್ ಕೃಷ್ಣನನ್ನು ಪ್ರೇಮಿಸಿದ್ದಾಳೆ. ಇಷ್ಟಿದ್ದರೂ ಗಂಗೆಯು ಪುರಾಣಗಳಿಗೆ ಇಷ್ಟವಾದಷ್ಟು ಯಮುನೆಯು ಇಷ್ಟವಾದಂತಿಲ್ಲ.

ಗಂಗೆಯ ವಾಹನ ಮಕರವಾದರೆ, ಯಮುನೆಯ ವಾಹನ ಆಮೆ ( ಚಿತ್ರ ನೋಡಿ). ಸಮುದ್ರ ಮಥನ ಕಾಲದಲ್ಲಿ ಕಡಲಲ್ಲಿ ಮುಳುಗಿದ ಮಂದಾರ ಪರ್ವತವನ್ನು ಬೆನ್ನಲ್ಲಿ ಎತ್ತಿ ನಿಲ್ಲಿಸಿದ್ದು ಶಕ್ತಿಶಾಲಿ ಕೂರ್ಮ. ಕೆಲವು ಪುರಾಣಗಳ ಪ್ರಕಾರ ಭೂಮಿಯೂ ಆಮೆಯ ಮೇಲೆ ನಿಂತಿದೆಯಂತೆ. ಬ್ರಾಹ್ಮಣಕಗಳ ಕಾಲದಿಂದ ಆಮೆಯನ್ನು ಸೂರ್ಯನೊಂದಿಗೆ ಸಮೀಕರಿಸಲಾಗಿದೆ, ಹಾಗಾಗಿ ಆಮೆಯು ಕಾಲದ ಸಂಕೇತವೂ ಹೌದು. ಈ ನಿರೂಪಣೆಗಳು ಯಮುನೆಯು ಸುದೀರ್ಘವಾದ ಚರಿತ್ರೆಯೊಂದಿಗೆ ಹೊಂದಿದ ಗಾಢ ಸಂಬಂಧವನ್ನು ಸಂಕೇತಿಸುತ್ತದೆ. ಪುರಾಣಗಳಿಗೆ ಪ್ರಿಯವಾಗದ ಯಮುನೆಯು ಇತಿಹಾಸಕ್ಕೆ ಪ್ರಿಯವಾಗಲು ಕಾರಣ ಆಕೆ ಕನಸಿಗಿಂತ ವಾಸ್ತವದ ಕಡೆಗೇ ಹೆಚ್ಚು ವಾಲಿಕೊಂಡದ್ದು.

ಭೌಗೋಳಿಕವಾಗಿ ನೋಡಿದರೆ, ಗಂಗಾ ನದಿಯ ದಂಡೆಗಿಂತ ಯಮುನೆಯ ದಂಡೆಯೇ ಜನವಾಸಕ್ಕೆ ಮತ್ತು ಸಾಮ್ರಾಜ್ಯ ಸ್ಥಾಪನೆಗೆ ಹೆಚ್ಚು ಯೋಗ್ಯ. ಗಂಗಾ ನದಿಗೂ ಹಿಮಾಲಯ ಪರ್ವತಕ್ಕೂ ನಡುವೆ ಸಾಮ್ರಾಜ್ಯ ಸ್ಥಾಪನೆ ಮಾಡುವಷ್ಟು ವಿಸ್ತಾರವಾದ ಸ್ಥಳವೇನೂ ಇಲ್ಲ. ಆದರೆ ಗಂಗೆಯ ದಕ್ಷಿಣ ದಿಕ್ಕಿಗೆ ಯಮುನೆಯ ದಡದ ವರೆಗೂ, ಯಮುನೆಯ ದಡವನ್ನು ದಾಟಿದರೆ, ವಿಂಧ್ಯಾ ಪರ್ವತ ಶ್ರೇಣಿಗಳ ವರೆಗೂ ರಾಜ್ಯ ವಿಸ್ತರಣೆಗೆ ಅವಕಾಶವಿದೆ. ಹೀಗಾಗಿ ಗಂಗೆ ಉತ್ತರದ ಗಡಿಯಾಗಿಯಷ್ಟೇ ಉಳಿದರೆ, ಯಮುನೆಯು ಮಹಾ ನಗರಗಳ ಬೆಳವಣಿಗೆಗೆ ಕಾರಣವಾದ ಇತಿಹಾಸ ಪ್ರಸಿದ್ಧ ನದಿಯಾಗಿ ಬೆಳೆಯಿತು. ಭಾರತೀಯರಿಗೆ ಗಂಗೆ ಒಂದು ಸುಂದರ ಕನಸಾದರೆ ಯಮುನಾ ಕಟು ವಾಸ್ತವ.

ಒಂದು ಕಾಲಕ್ಕೆ ಗಂಗಾ – ಯಮುನೆಯರ ನಡುವಣ ಅತ್ಯಂತ ಫಲವತ್ತಾದ ಜಾಗವು ಮಧ್ಯ ದೇಶವೆಂದು ಪ್ರಸಿದ್ಧವಾಗಿತ್ತು. ಹರಪ್ಪಾ ಸಂಸ್ಕೃತಿ ಪತನಗೊಂಡ ಆನಂತರ ಸರಸ್ವತಿ ನದಿ ತೀರಕ್ಕೆ ಆಗಮಿಸಿದ ನಮ್ಮ ಹಿರಿಯರು, ಸರಸ್ವತಿ ನದಿ ಕಾಲನ ಗರ್ಭದಲ್ಲಿ ಮರೆಯಾದ ಆನಂತರ ಅಥವಾ ಪ್ರಖ್ಯಾತ ಮಹಾಭಾರತ ಯುದ್ಧದ ಆನಂತರ ( ಕ್ರಿಸ್ತಶಕ ಪೂರ್ವ ಸುಮಾರು 1200) ಯಮುನಾ ನದಿ ದಂಡೆಯ ಕಡೆಗೆ ವಲಸೆ ಬಂದರು. ಆ ಕಾಲದಲ್ಲಿ ಈ ಭೂಪ್ರದೇಶದಲ್ಲಿ ಪ್ರಸಿದ್ಧವಾಗಿದ್ದ ಒಂಬತ್ತು ಅರಣ್ಯಗಳ ವಿವರಗಳನ್ನು ದೇವಿಪುರಾಣವು ನೀಡುತ್ತದೆ. ಅನೇಕ ಪುರಾಣಗಳನ್ನು ಸೃಜಿಸಿದ ಮೇಧಾವಿಗಳು ಬದುಕಿದ್ದ ನೈಮಿಶಾರಣ್ಯ, ವಾಲ್ಮೀಕಿ ಮಹರ್ಷಿಗಳು ಬದುಕಿದ್ದ ಮತ್ತು ಸೀತೆ ಲವ ಕುಶರಿಗೆ ಜನ್ಮ ನೀಡಿದ್ದ ಉತ್ಪಲಾರಣ್ಯ – ಇವೆಲ್ಲ ಇದ್ದ ಮಹತ್ವದ ಸ್ಥಳವದು. ಮುಂದೆ ನಾಗರೀಕತೆ ಬೆಳೆದಂತೆ ಈ ಅರಣ್ಯಗಳು ನಾಶವಾದುವು.

ಕಾಡುಗಳನ್ನು ಬೆಂಕಿಯಲ್ಲಿ ಉರಿಸಿ, ನಾಶ ಮಾಡಿ ಹಸ್ತಿನಾಪುರ ಮತ್ತು ಇಂದ್ರಪ್ರಸ್ಥಗಳನ್ನು ಕಟ್ಟಲಾಯಿತು. ಮುಂದೆ ಯಮುನೆಯ ದಂಡೆಯಲ್ಲಿ ಕುರುಗಳು ಪ್ರಸಿದ್ಧರಾದರೆ ಅವರ ವಿರೋಧಿಗಳಾದ ಪಾಂಚಾಲರು ಪೂರ್ವ ಭಾಗದಲ್ಲಿ ರಾಜ್ಯ ಕಟ್ಟಿದರು. ಮಧ್ಯೆ ಅನೇಕ ಸಣ್ಣ ಪುಟ್ಟ ಜನಪದಗಳಿದ್ದರೂ ಕ್ರಿಸ್ತ ಶಕ ಪೂರ್ವ 6ನೇ ಶತಮಾನದಲ್ಲಿ ಅಸ್ತಿತ್ವಕ್ಕೆ ಬಂದ ಶಕ್ತಿಶಾಲೀ ಮಗಧ ಸಾಮ್ರಾಜ್ಯದಲ್ಲಿ ಇವೆಲ್ಲವೂ ಲೀನಗೊಂಡುವು. ಮುಂದೆ ಶುಂಗರು, ಮಿತ್ರರು, ಗುಪ್ತರು ಯಮುನೆಯ ದಡದಿಂದ ಆಳಿದರು. ಗುಪ್ತರ ಕಾಲದಲ್ಲಿಯೇ ಯಮುನೆಯನ್ನು ಶಿಲ್ಪಗಳಲ್ಲಿ ಕಂಡರಿಸುವ ಮತ್ತು ಪೂಜಿಸುವ ಪ್ರಕ್ರಿಯೆ ಆರಂಭವಾಯಿತು. ತಮ್ಮ ಸಂಪತ್ತಿಗೆ ಕಾರಣವಾದ ನದಿಯೊಂದನ್ನು ಅವರು ದೈವತ್ವಕ್ಕೆರಿಸಿದ್ದರಲ್ಲಿ ಅಚ್ಚರಿಯೇನೂ ಇಲ್ಲ. ಚರಿತ್ರೆಯಲ್ಲಿ ಪ್ರಸಿದ್ಧರಾಗಿರುವ ಹರ್ಷ, ಬಾಬರ, ಹುಮಾಯೂನ, ಅಕ್ಬರ, ಶಹಾಜಹಾನ ಮತ್ತಿರರು ಯಮುನೆಯ ದಡದಿಂದಲೇ ಆಳ್ವಿಕೆ ನಡೆಸಿದರು. ಅದರ ದಂಡೆಯಲ್ಲಿ ತಾಜಮಹಲು ತಲೆ ಎತ್ತಿದೆ. ಕರ್ನಾಟಕದ ಚಾಲುಕ್ಯ ಅರಸು ಮನೆತನದ ವಿಜಯಾದಿತ್ಯನು ಯಮುನೆಯ ನೀರನ್ನು ಕೆಲ ಕಾಲ ಕುಡಿದಿದ್ದಲ್ಲದೆ, ಗಂಗಾ ಯಮುನೆಯರ ವಿಗ್ರಹವನ್ನು ಉತ್ತರ ಭಾರತದ ದಿಗ್ವಿಜಯದ ದ್ಯೋತಕವಾಗಿ ಕರ್ನಾಟಕಕ್ಕೆ ತಂದದ್ದು ಕರ್ನಾಟಕ ಚರಿತ್ರೆಯ ಅಪೂರ್ವ ಘಟನೆಗಳಲ್ಲಿ ಒಂದು.

ಇಂದು ಯಮುನಾಳ ಗೋಳು ಹೇಳ ತೀರದು. ದೆಹಲಿಯ ಯಮುನಾ ಘಾಟ್ ನಲ್ಲಿ ಸುಡುವ ಹೆಣಗಳನ್ನು ನೋಡಿದರೆ, ಕಾರ್ಖಾನೆಗಳು ಆಕೆಯನ್ನು ಕಲುಷಿತಗೊಳಿಸುವ ರೀತಿಯನ್ನು ಗಮನಿಸಿದರೆ, ಸರಸ್ವತಿಯ ಹಾಗೆ ಯಮುನೆಯೂ ಕಳೆದು ಹೋದ ನದಿ ಅಂತ ಅನ್ನಿಅಹರ್ನಿಷ.

ಈ ಲೇಖನವು ನನ್ನ ಬರಲಿರುವ ಪುಸ್ತಕವೊಂದರ ( ಅಹರ್ನಿಶಿ ಪ್ರಕಾಶನ ) ಸುದೀರ್ಘ ಲೇಖನದ ಆಯ್ದ ಭಾಗ

ಪುರುಶೋತ್ತಮ ಬಿಳಿಮಲೆ

ಸುದ್ದಿದಿನ.ಕಾಂ|ವಾಟ್ಸಾಪ್|9980346243

Trending

Exit mobile version