ಲೈಫ್ ಸ್ಟೈಲ್
ಎಳ್ಳು ಅಮವಾಸ್ಯೆಯ ಪ್ರಯುಕ್ತ, ಒಂದು ಸುತ್ತು ಹೊಲದತ್ತ
ಭಾರತ ದೇಶವು ಹಬ್ಬಗಳಿಗೆ ತವರೂರುರಾಗಿದೆ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇಲ್ಲಿ ಪ್ರತಿಯೊಂದು ಹಬ್ಬವು ವಿಶೇಷವಾಗಿದೆ. ಹೌದು ನಾನು ಈಗ ಎಳ್ಳು ಅಮವಾಸ್ಯೆಯ ಬಗ್ಗೆ ಮಾತನಾಡುತ್ತಿದ್ದೇನೆ.ನಾನು ಸುಮಾರು ನಾಲ್ಕು ವರ್ಷಗಳಿಂದ ಈ ಹಬ್ಬವನ್ನು ಆಚರಣೆ ಮಾಡಿರಲಿಲ್ಲ. ಹೊಲದಲ್ಲಿ ಬೆಳೆ ಸರಿಯಾದ ರೀತಿಯಲ್ಲಿ ಇಲ್ಲದ ಕಾರಣ, ಎಳ್ಳ ಅಮವಾಸ್ಯೆಗೂ ಮುಂಚೆನೆ ರಾಶಿಮಾಡುವುದು ಹೀಗೆ ಹಲವು ಸಮಸ್ಯೆಗಳಿಂದ ಬೇಸತ್ತು ಕುಟುಂಬದವರು ಎಲ್ಲರೂ ಸೇರಿ ಹೋಗಿರಲಿಲ್ಲ.
ಈ ವರ್ಷ ಮಳೆ ಬೆಳೆ ಎಲ್ಲವೂ ಚೆನ್ನಾಗಿದೆ ಹಾಗಾಗಿ ಕುಟುಂಬರು ಎಲ್ಲರೂ ಸೇರಿ ಹೊಲಕ್ಕೆ ಹೋಗಿ ಎಳ್ಳ ಅಮವಾಸ್ಯೆಯನ್ನು ಸಂಭ್ರಮದಿಂದ ಆಚರಿಸಿದೆವು.ನಮ್ಮ ಮನೆಯಲ್ಲಿ ಎಳ್ಳ ಅಮವಾಸ್ಯೆಗೆ ಒಂದು ವಾರ ಇರುವಾಗಲೆ ಅದ್ಧೂರಿಯಾಗಿ ತಯಾರಿ ನಡೆದಿತ್ತು. ಅಪ್ಪ-ಅಮ್ಮ ಇಬ್ಬರೂ ಸೇರಿ ಸೋದರ ಮಾವ-ಮಾಮಿಗೆ ಫೋನ್ ಮಾಡಿ ಬರಲು ಒತ್ತಾಯಿಸಿದರು. ನನ್ನ ಚಿಕ್ಕಪ್ಪ ಮಗಳು ನಿವೇದಿತಾಳ ಮದುವೆಯಾಗಿದೆ. ಅವಳು ವಿಜಯಪುರ ಜಿಲ್ಲೆಯ ಜಿಲ್ಲಾ ಆಸ್ಪತ್ರೆಯಲ್ಲಿ ನರ್ಸಿಂಗ್ ಓದುತ್ತಿದ್ದಾಳೆ. ತಂಗಿ ನಿವೇದಿತಾ ಮಾವನ ಜೊತೆಗೆ ಬಂದಿದ್ದಳು. ಮಾಮಾ-ಮಾಮಿ ಹಾಗೂ ಅವರ ಮುದ್ದಿನ ಮಗಳು ಮನಸ್ವಿಯನ್ನು ಜೊತೆಗೆ ಕರೆದುಕೊಂಡು ಬಂದಿದ್ದರು.
ಅಮವಾಸ್ಯೆಯ ಹಿಂದಿನ ದಿನ ಸುಮಾರು ರಾತ್ರಿ 12.30ರವರೆಗೂ ಹರಟೆ ಹೊಡೆದೆವು. ಅಮ್ಮ ಹಾಗೂ ಮಾಮಿ ಇಬ್ಬರು ಬೆಳಗ್ಗೆ ಬೇಗನೆ ಎದ್ದು ಮಡಿ ಉಟ್ಟು ಅಡಿಗೆಗೆ ತಯಾರಿ ನಡೆಸಿದರು. ಇಬ್ಬರು ಸೇರಿಕೊಂಡು ಪುಂಡಿಪಲ್ಯೆ, ಹಿಂಡಿಪಲ್ಯೆ, ಬದನೆಕಾಯಿ ಪಲ್ಯೆ, ಹಗಲಕಾಯಿಪಲ್ಯೆ, ಮೆಣಸಿನಕಾಯಿಪಲ್ಯೆ, ಸಜ್ಜಿರೊಟ್ಟಿ, ಸಜ್ಜಿಕಡುಬು, ಬೇಳೆಹೋಳಿಗೆ, ಚಪಾತಿ, ಅನ್ನ ಸಾರು, ಮೊಸರು, ಅಗಸಿಚಟ್ನಿ, ಹಾಗೂ ಊಟದಲ್ಲಿ ನೆಂಚಿಕೊಳ್ಳಲ್ಲು ಹಪ್ಪಳ ಮಾಡಿಕೊಂಡು ತಯಾರಾದರು. ಎಲ್ಲವನ್ನು ಬುತ್ತಿ ಕಟ್ಟಿಕೊಂಡು ಎಲ್ಲರೂ ಸೇರಿ ಹೊಲಕ್ಕೆ ಗಾಡಿಯಲ್ಲಿ ಹೊದೆವು.
ಅಲ್ಲಿ ಎಲ್ಲರೂ ಸೇರಿ ಹೊಲದಲ್ಲಿ ಲಕ್ಷ್ಮಿಗೆ ಪೂಜೆ ಮಾಡಿದೇವು. ನಂತರ ಹಿರಿಯರ ಸಮಾಧಿಗೆ ಪೂಜೆ ನೈವೇದ್ಯ ಮಾಡಿದೆವು. ಎಲ್ಲರೂ ಒಕ್ಕೊರಳಿನಿಂದ ‘ಸಜ್ಜಿರೊಟ್ಟಿ ಚವಳಿಕಾಯಿ ಚೆಂಗಬೋಲೋ’, ‘ಚಲಮುಲಿಗ್ಯೋ ಹುಲುಲಿಗ್ಯೋ’ ಎಂದು ಕೂಗುತ್ತಾ, ಮಾಡಿಕೊಂಡು ಹೊಗಿದ್ದ ಅಡುಗೆಯನ್ನು ಜಮಿನಿನಲ್ಲಿ ಭೂಮಿ ತಾಯಿ ಸಮರ್ಪಿಸಲಾಯಿತು.
ನಂತರ ಎಲ್ಲರೂ ಸೇರಿ ಜೊತೆಯಾಗಿ ಊಟ ಮಾಡಿದೆವು. ಊಟದ ನಂತರ ಪಾನ, ಸಿಹಿ ಪಾನ ತಿಂದೇವು. ನಂತರದಲ್ಲಿ ಎಲ್ಲರೂ ಸೇರಿ ಅಂತ್ಯಾಕ್ಷರಿ ಹಾಡಿ ಸ್ವಲ್ಪ ಸಮಯ ವಿಶ್ರಾಂತಿ ಮಾಡಿ ಮನೆಗೆ ಬಂದೇವು. ಇದರಲ್ಲಿ ನನ್ನ ತಂಗಿಯರಾದ ಕೀರ್ತಿ, ಭಾಗ್ಯ, ಚಿಕ್ಕಪ್ಪ ಇರಲಿಲ್ಲ. ಚಿಕ್ಕಪ್ಪ ಕೆಲಸಕ್ಕೆ ಹೋಗಿದ್ದರು. ಕೀರ್ತಿ ಹಾಗೂ ಭಾಗ್ಯ ವಿದ್ಯಾಭ್ಯಾಸದ ಕಾರಣದಿಂದಾಗಿ ಒಬ್ಬಳು ಧಾರವಾಡ ಮತ್ತು ಬೀದರದಲ್ಲಿದ್ದಾರೆ. ಈ ಮೂವರನ್ನೂ ತುಂಬಾ ಮಿಸ್ ಮಾಡಿಕೊಳ್ಳುತ್ತಾ ಇದ್ದವರ ಜೊತೆಗೆ ತುಂಬಾ ಸಂತೋಷದಿಂದ ಇಂದಿನ ದಿನವನ್ನು ಕಳೆದೆ.
–ಕಾಂಚನಾ. ಬಸವರಾಜ. ಪೂಜಾರಿ
3ನೇ ಸೇಮಿಸ್ಟರ್ ವಿದ್ಯಾರ್ಥಿನಿ
ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ
ಕರ್ನಾಟಕ ರಾಜ್ಯ ಅಕ್ಕಮಾಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ
ವಿಜಯಪುರ
ಸುದ್ದಿದಿನ.ಕಾಂ|ವಾಟ್ಸಾಪ್|9980346243